Friday 1 August 2014

ಮೈಸೂರು -ಪ್ರಮುಖ ಸುದ್ದಿಗಳು- ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್.

   ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್ ಸೂಚನೆ

ಮೈಸೂರು,ಆ.1.ಹೊಸ ಯೋಜನೆ ರೂಪಿಸುವುದರ ಜೊತೆಗೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೃಷಿ ಹಾಗೂ ಜಲಾನಯನ ಇಲಾಖೆಗಳ ಪ್ರಗತಿ ಪರಿಶೀಲಿಸಿ, ಯೋಜನೆಗಳ ಮಾಹಿತಿ ಪಡೆದುಕೊಂಡ ಅವರು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದಷ್ಟೇ ಮುಖ್ಯ ಅಲ್ಲ, ಯಶಸ್ಸು ಸಾಧಿಸುವುದು ಕೂಡ ಅಷ್ಟೇ ಮುಖ್ಯ ಎಂದು ಹೇಳಿದರು.

ಕಳೆದ ಮಾರ್ಚ್‍ನಿಂದ ಸಾವಯವ ಭಾಗ್ಯ  ಯೋಜನೆ ಜಾರಿಗೊಳಿಸಿದ್ದು ಮೈಸೂರು ಜಿಲ್ಲೆಯ 26 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ತಾಲ್ಲೂಕಿಗೊಂದು ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಲಾಗಿದೆ. ಸಾವಯವ ಕೃಷಿಕರ ಸಂಘಗಳನ್ನು ಸ್ಥಾಪಿಸಲಾಗಿದೆ. ಎರೆಹುಳುಗೊಬ್ಬರ, ಹಸಿರೆಲೆಗೊಬ್ಬರದ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಹಾಂತೇಶಪ್ಪ ವಿವರ ನೀಡಿದರು.

ಈ ಹಿಂದೆ ಸಾವಯವ ಕೃಷಿ ಮಿಷನ್ ಮೂಲಕ ಅನುಷ್ಠಾನ ಗೊಳಿಸಲಾಗಿದ್ದ ಯೋಜನೆಗಳು ವಿಫಲವಾಗಿದ್ದು, ಸಾವಯವ ಭಾಗ್ಯ ಯೋಜನೆಯೂ ಅದೇ ಹಾದಿ ಹಿಡಿಯಬಾರದು, ಆದ್ದರಿಂದ ಯೋಜನೆಗಳನ್ನು ಅನುಷ್ಠಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹೇಳಿದರು.

ರಾಗಿ ಬೆಳೆ ಪ್ರೋತ್ಸಾಹಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ಸರ್ಕಾರ ರಾಗಿಗೆ ರೂ. 2000 ಬೆಂಬಲ ಬೆಲೆ ಘೋಷಿಸಿದ್ದು, ರಾಗಿಗೆ ಬೇಡಿಕೆ ಇದೆ ಎಂದು ಅಧಿಕಾರಿಗಳು ವಿವರಿಸಿದರು. ಅನ್ನಭಾಗ್ಯ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ರಾಗಿಯನ್ನು ಸಹ ವಿತರಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಇದರಿಂದ ರಾಗಿ ಬೆಳೆಗಾರರಿಗೆ ಪ್ರೋತ್ಸಾಹ ದೊರೆತು. ಮುಂದೊಂದು ದಿನ ರಾಗಿ ಮೂಲೆಗುಂಪಾಗುವುದು ತಪ್ಪುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

ಜಿಲ್ಲೆಯಲ್ಲಿ 39ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲು ಗುರಿ ಹೊಂದಲಾಗಿದ್ದು 10,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಉಪಾಧ್ಯಕ್ಷ ಮಾದಪ್ಪ ಅವರು ಮಾತನಾಡಿ ಅಧಿಕಾರಿಗಳು ನೀಡುವ ಅಂಕಿ ಅಂಶವೇ ಬೇರೆ ಇರುತ್ತದೆ ವಾಸ್ತವವೇ ಬೇರೆ ಇರುತ್ತದೆ ಕೆಳಮಟ್ಟದಲ್ಲಿ ಪರಿಸ್ಥಿತಿ ಅರಿತು ಹೋಬಳಿ  ಮಟ್ಟದಲ್ಲಿ ಪರ್ಯಾಯ ಬೆಳೆ  ಯೋಜನೆ  ರೂಪಿಸಬೇಕು. ಬೀಳು ಜಮೀನುಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ವಹಿಸಬೇಕು ಎಂದರು.

 ಜುಲೈನಲ್ಲಿ 123.8 ಮಿ.ಮೀ. ಮಳೆ ಆಗಬೇಕಿದ್ದು 113.9 ಮಿ.ಮೀ ಮಳೆ ಆಗಿದೆ. ವಾಡಿಕೆ ಮಳೆಯ ಶೇ. 92 ರಷ್ಟು ಮಳೆಯಾಗಿದೆ. ಜನವರಿಯಿಂದ ಜುಲೈವರೆಗೆ ಒಟ್ಟಾರೆ ಮಳೆ ಕೊರತೆ ಶೇ. 34 ರಷ್ಟು, ಮುಂಗಾರು ಹಂಗಾಮಿನ 419695 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 22,4150 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಒಟ್ಟಾರೆ ಶೇ. 53ರಷ್ಟು ಬಿತ್ತನೆಯಾಗಿದೆ. ಮಳೆ ಆಶ್ರಯದ ಪ್ರದೇಶದಲ್ಲಿ ಶೇ. 72 ರಷ್ಟು ನೀರಾವರಿ ಪ್ರದೇಶದಲ್ಲಿ ಶೇ. 7 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಈ ವರ್ಷ ಹೆಚ್.ಡಿ.ಕೋಟೆ ತಾಲ್ಲೂಕು ಗೆಂಡೆತ್ತೂರಿನಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಪ್ರಾತ್ಯಕ್ಷಿಕೆ ಮಾಡಲಾಗಿದೆ ಇದು ಯಶಸ್ವಿಯಾಗಿ ರೈತರು ಆಸಕ್ತಿ ತೋರಿಸಿದಲ್ಲಿ ಬೆಳೆ ವಿಸ್ತರಣೆಗೆ ಕ್ರಮ ವಹಿಸಲಾಗುವುದು ಎಂದರು.

ಕೃಷಿ ವಿಸ್ತರಣಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧ್ಯಕ್ಷರು ಸೂಚಿಸಿದರು. ಹೊಸ ಬೆಳೆಗಳ, ಬೆಳೆ ವಿಧಾನಗಳ ಮಾಹಿತಿಯನ್ನು ರೈತರಿಗೆ ಸಕಾಲದಲ್ಲಿ ತಲುಪಿಸಬೇಕು. ರೈತ ಸಂಪರ್ಕ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಗಳು ವಿಲೀನಗೊಳ್ಳುವುದರಿಂದ ಸಿಬ್ಬಂದಿ ಸಮಸ್ಯೆಯೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ 2000 ಇಸವಿಯಿಂದಲೂ ಜಲಾನಯನ ಪ್ರದೇಶ ಅಭಿವೃದ್ಧಿ ಕೈಗೊಳ್ಳಲಾಗಿದ್ದು, 1.43 ಲಕ್ಷ ಹೆಕ್ಟೇರ್ ಪ್ರದೇಶವನ್ನು ಉಪಚರಿಸಲಾಗಿದೆ 6.73 ಲಕ್ಷ ಹೆಕ್ಟೇರ್ ಪ್ರದೇಶ ಉಪಚಾರಕ್ಕೆ ಲಭ್ಯವಿತ್ತು ಎಂದು ಜಲಾನಯನ ಅಭಿವೃದ್ದಿ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ವಿವಿಧ ತಾಲ್ಲೂಕುಗಳ ಕೃಷಿ ಹಾಗೂ ಜಲಾನಯನ ಅಧಿಕಾರಿಗಳು ಭಾಗವಹಿಸಿದ್ದರು.

                                  

ಆಗಸ್ಟ್ 3 ರಂದು ಅರಿವು -ನೆರವು ಕಾರ್ಯಾಗಾರ

  

 ಮೈಸೂರು,ಆ.1.ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವುದು ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಈ ವಿಷಯಗಳ ಸಂಬಂಧವಾಗಿ ರಾಜ್ಯಾದ್ಯಂತ ಹಾಗೂ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ವತಿಯಿಂದ ಕಾರ್ಯಾಗಾರಗಳನ್ನು ವರ್ಷದಾದ್ಯಂತ ನಡೆಸಲು ನಿರ್ಧರಿಸಿದ್ದು, ಅದರಂತೆ ಮೈಸೂರಿನಲ್ಲಿ ಇದೇ 3 ರಂದು ಭಾನುವಾರ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.

     ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಮಾಧ್ಯಮಗೋಷ್ಠಿಯಲ್ಲಿಂದು ತಿಳಿಸಿದರು.

    ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಎನ್.ಕೆ. ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಅಧ್ಯಕ್ಷತೆ ವಹಿಸುವರು.

    ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣನವರ್, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ.ಎಸ್. ಮೂರ್ತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸಿ.ಎಂ. ಜಗದೀಶ್ ಹಾಗೀ ಸಿ. ಅಪ್ಪಾಜಿಗೌಡ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

     ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-15 ಗಂಟೆಯವರೆಗೆ ಮಕ್ಕಳಲ್ಲಿ ಅಪೌಷ್ಠಿಕತೆ, ಕಾರಣ ಮತ್ತು ಪರಿಹಾರ ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಮಾನಸ ಗಂಗೋತ್ರಿಯ ಆಹಾರ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ ಸರಸ್ವತಿ ಅವರು ಉಪನ್ಯಾಸ ನೀಡುವರು.

     ಮಧ್ಯಾಹ್ನ 12-30 ರಿಂದ ಮಕ್ಕಳು ಶಾಲೆ ಬಿಡಲು ಕಾರಣ ಮತ್ತು ಪರಿಹಾರ, ಇದನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಆರ್.ಐ.ಇ. ಪ್ರಾಧ್ಯಾಪಕ ಪ್ರೊ. ಸಿ.ಜಿ.ವೆಂಕಟೇಶ್‍ಮೂರ್ತಿ ಅವರು ಉಪನ್ಯಾಸ ನೀಡುವರು.  

ಅಪೌಷ್ಠಿಕ ಮಕ್ಕಳ ಸಂಖ್ಯೆ ಇಳಿಮುಖ:

    ಜಿಲ್ಲೆಯಲ್ಲಿ 9 ಶಿಶು ಅಭಿವೃದ್ಧಿ ಯೋಜನೆಗಳು ಕಾರ್ಯ ನಿರ್ವಹಿಸುತ್ತಿದ್ದು, 2827 ಅಂಗನವಾಡಿ ಕೇಂದ್ರಗಳಲ್ಲಿ 1,73,805 ಮಕ್ಕಳು ಪೂರಕ ಪೌಷ್ಠಿಕ ಆಹಾರದ ಸೌಲಭ್ಯ ಪಡೆಯುತ್ತಿದ್ದಾರೆ. ಜೂನ್ 2014ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಗುರ್ತಿಸಲಾಗಿರುವ ಅಪೌಷ್ಠಿಕ ಮಕ್ಕಳ ಸಂಖ್ಯೆ 737. ಹಿಂದಿನ ವರ್ಷದಲ್ಲಿ ಈ ಸಂಖ್ಯೆ 1241 ಆಗಿತ್ತು. ಅಪೌಷ್ಠಿಕತೆಯಿಂದ ನರಳುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್ ತಿಳಿಸಿದರು.

    ಅಪೌಷ್ಠಿಕ ಮಕ್ಕಳನ್ನು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ವಾರದಲ್ಲಿ 4 ದಿನ ಕೋಳಿಮೊಟ್ಟ ಹಾಗೂ 2 ದಿನ 200 ಮಿ.ಲೀ. ಹಾಲನ್ನು ನೀಡಲಾಗುತ್ತಿದೆ. ಬಾಲಸಂಜೀವಿನಿ ಯೋಜನೆಯಡಿಯಲ್ಲಿ ಪ್ರತಿ ಮಗುವಿಗೆ ರೂ. 750/- ವೆಚ್ಚದಲ್ಲಿ ಅಗತ್ಯವಿರುವ ಔಷಧೋಪಚಾರ ಮಾಡಿಸಲಾಗುತ್ತಿದೆ. ಹೆಚ್ಚುವರಿಯಾಗಿ ಶುಶ್ರೂಷೆ ಹಾಗೂ ಚಿಕಿತ್ಸೆ ಅಗತ್ಯವಿದ್ದಲ್ಲಿ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಅಗತ್ಯವಿರುವ ಶುಶ್ರೂಷೆ ಹಾಗೂ ಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದು ಅವರು ಹೇಳಿದರು.

   ಪ್ರತಿ ಮಗುವುಗೆ ಅಂಗನವಾಡಿ ಕೇಂದ್ರದಲ್ಲಿ  ರೂ. 9 ವೆಚ್ಚದಲ್ಲಿ ಪ್ರತಿ ದಿನವೂ ನಿಗಧಿಪಡಿಸಲಾಗಿರುವಂತೆ ಪೂರಕ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ. ಸಿ.ಎಫ್.ಟಿ.ಆರ್.ಐ. ಮೈಸೂರುರವರು  ಅಪೌಷ್ಠಿಕ ಮಕ್ಕಳ ಒಂದು ವಿಶೇಷ ಅಧ್ಯಯನ ಮತ್ತು ಮೌಲ್ಯಮಾಪನವನ್ನು ನಂಜನಗೂಡು ತಾಲ್ಲೂಕಿನ ಆಯ್ದ 6 ಅಂಗನವಾಡಿ ಕೇಂದ್ರಗಳಲ್ಲಿ ಕೈಗೆತ್ತಿಕೊಂಡಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿಯಲ್ಲಿಯೂ ಸಹ ಈ ಮಕ್ಕಳಿಗೆ ವಾರದಲ್ಲಿ 3 ದಿನ ಹಾಲು ನೀಡಲಾಗುತ್ತಿದೆ. ಇಂತಹ ಮಕ್ಕಳ ತಾಯಂದಿರಿಗೆ ಮತ್ತು ಪೋಷಕರಿಗೆ ವಿಶೇಷ ಸಭೆಗಳನ್ನು ನಡೆಸಿ ಹೆಚ್ಚಿನ ಗಮನ ಹಾಗೂ ಅಗತ್ಯ ಕ್ರಮ ವಹಿಸುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಎಲ್ಲ ಕ್ರಮಗಳಿಂದ ಅಪೌಷ್ಠಿಕ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ವಿಜಯ್ ವಿವರಿಸಿದರು.

ವಿಶೇಷ ವಾರ್ಡ್:

    ಅಪೌಷ್ಠಿಕ ಮಕ್ಕಳು ಹಾಗೂ ತಾಯಂದಿರಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ಪೌಷ್ಠಿಕತೆ ಪುನರ್ವಸತಿ ಕೇಂದ್ರಗಳೆಂದು ಈ ವಾರ್ಡ್‍ಗಳನ್ನು ಹೆಸರಿಸಿದ್ದು ಇಲ್ಲಿಗೆ ದಾಖಲಾಗುವ ತಾಯಂದಿರಿಗೆ ಪ್ರತಿ ದಿನಕ್ಕೆ ರೂ. 100 ಪರಿಹಾರಧನ ನೀಡಲಾಗುತ್ತದೆ. 10 ದಿನಗಳ ಕಾಲ ಆರೈಕೆ ನೀಡಿದ ನಂತರ ಪೌಷ್ಠಿಕತೆಯ ಮಟ್ಟ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮತ್ತೆ ಆರೈಕೆ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಟಿ. ಪುಟ್ಟಸ್ವಾಮಿ ತಿಳಿಸಿದರು.

    ಇತ್ತೀಚೆಗೆ ಸರಗೂರು ಹಾಗೂ ಬೈಲುಕುಪ್ಪೆಯಲ್ಲಿ ಬುಡಕಟ್ಟು ಜನರಿಗಾಗಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಏರ್ಪಡಿಸಲಾದ ಈ ಶಿಬಿರಗಳಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಜನರನ್ನು ಗುರುತಿಸಿ ತಜ್ಞ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ರೂ. 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರಗೂರಿನಲ್ಲಿ 458 ಜನರನ್ನು ಬೈಲುಕುಪ್ಪೆಯಲ್ಲಿ 360 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಳ?

   2013ರಲ್ಲಿ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 5921, ಆದರೆ 2010ರಲ್ಲಿ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಈ ಸಂಖ್ಯೆ 2530 ಆಗಿತ್ತು ಪೋಷಕರ ವಲಸೆ, ಸಣ್ಣಮಕ್ಕಳನ್ನು ದೊಡ್ಡಮಕ್ಕಳು ನೋಡಿಕೊಳ್ಳುವುದು ಇವೇ ಮೊದಲಾದುವುಗಳನ್ನು ಮಕ್ಕಳು ಶಾಲೆ ಬಿಡಲು ಕಾರಣ ಎಂದು ಗುರುತಿಸಲಾಗಿದೆ. ಇವರುಗಳನ್ನು ಮರಳಿ ಶಾಲೆಗೆ ಕರೆತರಲು ಚಿಣ್ಣರ ಅಂಗಳ, ಶಾಲಾಧಾರಿತ ತರಬೇತಿ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ 2153 ಮಕ್ಕಳು ಮುಖ್ಯ ವಾಹಿನಿಗೆ ಹಿಂದಿರುಗಿದ್ದು ಇನ್ನು 3768 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಬಸಪ್ಪ ತಿಳಿಸಿದರು.

    ಮೈಸೂರು ಉತ್ತರ ತಾಲ್ಲೂಕಿನಲ್ಲಿ ಈ ಸಂಖ್ಯೆ ಅತಿಹೆಚ್ಚು ಅಂದರೆ 1320 ಇದೆ. ಕೆ.ಆರ್.ನಗರದ ತಾಲ್ಲೂಕಿನಲ್ಲಿ ಅತಿ ಕಡಿಮೆ 297 ಇದೆ. ಶಾಲೆಬಿಟ್ಟವರ ಪೈಕಿ ಗಂಡು ಮಕ್ಕಳು ಹೆಚ್ಚಿದ್ದು ಈ ಸಂಖ್ಯೆ 3220 ಆಗಿದ್ದು 2701 ಹೆಣ್ಣು ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ಅವರು ಹೇಳಿದರು.

    ಶಾಲಾ ಲಭ್ಯತೆಯ ಕೊರತೆಯಿಂದ 114 ಮಕ್ಕಳು, ಮನೆಗೆಲಸ ಹಾಗೂ ಇತರೆ ಕೆಲಸಗಳಿಂದ 617 ಮಕ್ಕಳು, ಜೀವನ ಸಂಪಾದನೆಗಾಗಿ 264 ಮಕ್ಕಳು, ಮದುವೆ, ಪ್ರೌಢಾವಸ್ಥೆ ಕಾರಣಗಳಿಗಾಗಿ 475 ಹೆಣ್ಣು ಮಕ್ಕಳು, ಶಾಲಾ ವಾತಾವರಣದಿಂದ 25 ಮಕ್ಕಳು, ವಲಸೆಯಿಂದ 865 ಮಕ್ಕಳು, ಶಿಕ್ಷಕರ ಭಯದಿಂದ 5, ಮಕ್ಕಳು ಓಡಿಹೋಗಿದ್ದರಿಂದ 25 ಮಕ್ಕಳು, ಬೀದಿ ಮಕ್ಕಳು 2, ವಿಶೇಷ ಅಗತ್ಯವುಳ್ಳ ಮಕ್ಕಳು 216, ಇತರೆ ಕಾರಣಗಳಿಗಾಗಿ 3251 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ಅವರು ಹೇಳಿದರು.

   ಇದರಲ್ಲಿ 216 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿದ್ದು, ಇವರಿಗೆ ಗೃಹಾಧಾರಿತ ಶಿಕ್ಷಣ ಮತ್ತು ಶಾಲಾ ಸಿದ್ಧತಾ ಕಾರ್ಯಕ್ರಮದಡಿ ಮುಖ್ಯವಾಹಿನಿಗೆ ತರಲು ಯೋಜನೆ ಮಾಡಿದ್ದು, ಉಳಿದಂತೆ 857 ಮಕ್ಕಳಿಗೆ 3 ತಿಂಗಳ ವಸತಿ ಸಹಿತ ಚಿಣ್ಣರ ಅಂಗಳ 409 ಮಕ್ಕಳಿಗೆ 3 ತಿಂಗಳ ವಸತಿ ರಹಿತ ಚಿಣ್ಣರ ಅಂಗಳ, 101 ಮಕ್ಕಳಿಗೆ 12 ತಿಂಗಳ ವಸತಿ ಸಹಿತ ವಿಶೇಷ ತರಬೇತಿ, 270 ಮಕ್ಕಳಿಗೆ 12 ತಿಂಗಳ ಚಿಣ್ಣರ ತಂಗುಧಾಮ ವಸತಿ ಸಹಿತ ವಿಶೇಷ ತರಬೇತಿ, 53 ಮಕ್ಕಳಿಗೆ ಟೆಂಟ್ ಶಾಲೆ, 3260 ಮಕ್ಕಳಿಗೆ ಶಾಲಾಧಾರಿತ ತರಬೇತಿ, 455 ಹಾಸ್ಟೆಲ್ ಮೂಲಕ ಮುಖ್ಯವಾಹಿನಿಗೆ ತರಲು ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಬಸಪ್ಪ ತಿಳಿಸಿದರು.

ಸಿಎಲ್-7ಡಿ ಅಬಕಾರಿ ಸನ್ನದು ಮಂಜೂರಾತಿ ಅರ್ಜಿ ಆಹ್ವಾನ ಹಾಗೂ ಆ 4 ರಂದು ಸಭೆ

ಮೈಸೂರು,ಆ.1.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಉದ್ಯಮಿಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ ನಿಯಮ 1968ಕ್ಕೆ ಅಧಿಸೂಚನೆ ಸಂಖ್ಯೆ ಎಫ್‍ಡಿ/14/ಪಿಇಎಸ್/2013 ಬೆಂಗಳೂರು ದಿನಾಂಕ : 9.06.2014ಕ್ಕೆ ಸಿಎಲ್-7ಡಿ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಸನ್ನದು ಮಂಜೂರಾತಿಗಾಗಿ ಅವಕಾಶ ಕಲ್ಪಿಸಲಾಗಿದೆ.

          ಸಿಎಲ್-7ಡಿ ಸನ್ನದನ್ನು ಮಂಜೂರು ಮಾಡಲು ನಗರಪಾಲಿಕೆ ಪ್ರದೇಶದಲ್ಲಿರುವ ಕಟ್ಟಡದಲ್ಲಿ  ಕನಿಷ್ಟ 15 ಡಬಲ್ ಬೆಡ್ ರೂಂ ಹಾಗೂ ಇತರೆ ಪ್ರದೇಶಗಳಲ್ಲಿರುವ ಕಟ್ಟಡಗಳಲ್ಲಿ ಕನಿಷ್ಟ 10 ಡಬಲ್ ಬೆಡ್ ರೂಂಗಳ ವ್ಯವಸ್ಥೆ ಇರಬೇಕು.

          20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಸಿಟಿ ಮುನಿಸಿಪಲ್ ಕಾರ್ಪೋರೇಷನ್ ಪ್ರದೇಶಗಳಿಗೆ   ರೂ 6.60,000/- ಇತರೆ ಸಿಟಿ ಮುನಿಸಿಪಲ್ ಕಾರ್ಪೋರೇಷನ್ ಪ್ರದೇಶಗಳಿಗೆ ರೂ 5,80.000/-  ಸಿಟಿ ಮುನಿಸಿಪಲ್ ಕಾರ್ಪೋರೇಷನ್ ಪ್ರದೇಶಗಳಿಗೆ ರೂ 4,30,000/- ಟೌನ್ ಮುನಿಸಿಪಲ್ ಕೌನ್ಸಿಲ್ಸ್ / ಟೌನ್ ಪಂಚಾಯತ್ ಪ್ರದೇಶಗಳಿಗೆ ರೂ 3,64,000/-  ಹಾಗೂ ಇತರೆ ಪ್ರದೇಶಗಳಿಗೆ  ರೂ 2,80,000/- ಪ್ರತಿವರ್ಷ ಸನ್ನದು ಶುಲ್ಕವನ್ನು ನಿಗದಿ ಮಾಡಲಾಗಿದೆ.

ಸದರಿ ಕಟ್ಟಡವು ಕರ್ನಾಟಕ ಅಬಕಾರಿ ಸನ್ನದು ಸಾಮಾನ್ಯ ಷರತ್ತು ನಿಯಮಗಳು 1967ರ ನಿಯಮ 5ರಡಿ ತಿಳಿಸಿರುವ ಆಕÉ್ಷೀಪಣಾರ್ಹ ಸ್ಥಲಗಳೀಂದ ದೂರದಲ್ಲಿರಬೇಕು. ಧಾರ್ಮಿಕ / ಶೈಕ್ಷಣಿಕ/ ಆಸ್ಪತ್ರೆ/ ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರದ ಕಛೇರಿ / ಸ್ಥಳೀಯ ಸಂಸ್ಥೆಗಳ ಕಛೇರಿಯಿಂದ 100 ಮೀಟರ್‍ಗಳಿಗಿಂತ ಹೆಚ್ಚಿನ ದೂರದಲ್ಲಿರಬೇಕು ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಂದ 220 ಮೀಟರ್‍ಗಳಿಗಿಂತ ಹೆಚ್ಚಿನ ದೂರದಲ್ಲಿರಬೇಕು. ಬಹುಸಂಖ್ಯಾತ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ವಾಸಿಸುವ ಸ್ಥಳದಿಂದ 100 ಮೀಟರ್ ದೂರದಲ್ಲಿರಬೇಕು

ಆಸಕ್ತ  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ನಿಗಧಿತ ಶುಲ್ಕವನ್ನು ಪಾವತಿಸಿ ಸಂಬಂಧಿಸಿದ ಜಿಲ್ಲೆಯ ಅಬಕಾರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು.

          ಈ ವಿಷಯದ ಕುರಿತು ಚರ್ಚಿಸಲು ವ್ಯವಸ್ಥಾಪಕರು ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ , ವ್ಯವಸ್ಥಾಪಕರು, ವಾಲ್ಮೀಕಿ ಅಭಿವೃದ್ಧಿ ನಿಗಮ , ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಗಳ ಸಭೆಯನ್ನು ಆಗಸ್ಟ್ 4 ರಂದು ಮಧ್ಯಾಹ್ನ 3.30ಕ್ಕೆ ಕುವೆಂಪುನಗರದಲ್ಲಿರುವ ಅಬಕಾರಿ ಉಪ ಆಯುಕ್ತರ ಕಛೇರಿಯಲ್ಲಿ ಕರೆಯಲಾಗಿದೆ. ಸದರಿ ಜನಾಂಗದ ಆಸಕ್ತ ನಾಗರೀಕರು  ಸಭೆಯಲ್ಲಿ ಭಾಗವಹಿಸಬೇಕೆಂದು ಮೈಸೂರಿನ ಅಬಕಾರಿ ಇಲಾಖೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಶೈಕ್ಷಣಿಕ ಶುಲ್ಕ ಮರು ಪಾವತಿ

          ಮೈಸೂರು,ಆ.1.2014-15ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ವಿದ್ಯಾಭ್ಯಾಸದ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸಲು ಅರ್ಜಿ ಆಹ್ವಾನಿಸಿದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥಮ ಪಿ.ಯು.ಸಿ.ಯಿಂದ ವೃತ್ತಿಪರ ಕೋರ್ಸ್‍ಗಳನ್ನು ಒಳಗೊಂಡಂತೆ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕೇಂದ್ರ/ರಾಜ್ಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸಲಾಗುವುದು.

ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ನಿಗಧಿತ ನಮೂನೆಯ ಅರ್ಜಿಗಳನ್ನು ಪಡೆದು ದಿನಾಂಕ 10-09-2014 ರೊಳಗೆ ಸಲ್ಲಿಸುವುದು.

           ಅರ್ಹ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.

ಆಗಸ್ಟ್ 5ರಿಂದ ಪಡಿತರ  ವಿತರಣೆ

     ಮೈಸೂರು,ಆ.1.ಆಗಸ್ಟ್ 2014ನೇ ಮಾಹೆಯ ಪಡಿತರ ಸರಬರಾಜಿನಲ್ಲಾಗಿರುವ ಕೆಲವು ಅಡಚಣೆಗಳಿಂದ ಪಡಿತರ  ವಿತರಣೆಯನ್ನು ಆಗಸ್ಟ್ 1 ರ ಬದಲಾಗಿ ಆಗಸ್ಟ್ 5ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗುವುದು.    ನ್ಯಾಯಬೆಲೆ ಅಂಗಡಿಯ ವರ್ತಕರು ಆಗಸ್ಟ್ 5ರಿಂದ ಪಡಿತರ  ವಿತರಣೆಯನ್ನು ಪ್ರಾರಂಭಿಸುವುದು. ಈ ಬದಲಾವಣೆ 2014 ಆಗಸ್ಟ್ ಮಾಹೆಗೆÀ ಮಾತ್ರ ಅನ್ವಯಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಿಂದಲೇ ಪಡಿತರ ವಿತರಣೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

          ಮೈಸೂರು,ಆ.1.ಪ್ರಗತಿ ಪರ ರೈತರ ಸಾಧನೆಗಳನ್ನು ಗುರತಿಸಿ ಆತ್ಮ ಯೋಜನೆಯಡಿ ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲು ಆಸಕ್ತ ರೈತರಿಂದÀ ಅರ್ಜಿ ಆಹ್ವಾನಿಸಿದೆ.

ಕೃಷಿ ಕ್ಷೇತ್ರದಲ್ಲಿ ಗಮನಾರ್ಹ / ವಿಶಿಷ್ಟ ಸಾಧನೆಯನ್ನು  ಮಾಡಿರಬೇಕು. ಅವರ ಸಂಶೋಧನೆಗಳು , ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟು ಕೃಷಿ ಕ್ಷೇತ್ರದ ಏಳಿಗೆಗೆ ಪೂರಕವಾಗಿರಬೇಕು.

ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ ಸಾವಯವ ಕೃಷಿ. ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ , ಹೈನುಗಾರಿಕೆ , ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ , ಹೈಟೆಕ್ ಹಸಿರು ಮನೆ ಅಳವಡಿಕೆ ಕೃಷಿ ಸಂಸ್ಕರಣೆ , ಅರಣ್ಯ ಕೃಷಿ ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಅಳವಡಿಸಿಕೊಂಡಿರುವ ರೈತರು ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಜಂಟಿ ಕೃಷಿನಿರ್ದೇಶಕರ ಶಿಫಾರಸ್ಸಿನೊಂದಿಗೆ ವಿಸ್ತರಣಾ ನಿರ್ದೇಶಕರ ಹಾಗೂ ನಿರ್ದೇಶಕರು ಸಮೇತಿ  ದಕ್ಷಿಣ, ವಿಸ್ತರಣಾ ನಿರ್ದೇಶನಾಲಯ ಕೃಷಿ ವಿಶ್ವ ವಿದ್ಯಾನಿಲಯ,  ಹೆಬ್ಬಾಳ, ಬೆಂಗಳೂರು ಇಲ್ಲಿಗೆ ಆಗಸ್ಟ್ 20 ರೊಳಗಾಗಿ ಸಲ್ಲಿಸಬೇಕಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.

ಆಗಸ್ಟ್ 7 ರಂದು ವಿಶೇಷ ಕೌನ್ಸಿಲ್ ಹಾಗೂ ಸಾಮಾನ್ಯ ಸಭೆ

     ಮೈಸೂರು,ಆ.1. ಮೈಸೂರು ಮಹಾನಗರಪಾಲಿಕೆಯ ಸಾಮಾನ್ಯ ಹಾಗೂ ವಿಶೇಷ ಕೌನ್ಸಿಲ್ ಸಭೆಗಳು ದಿನಾಂಕ 30-06-2014 ರಂದು ಮುಂದೂಡಲಪಟ್ಟಿತ್ತು. ಸದರಿ ಸಭೆಗಳು ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಗಸ್ಟ್ 7 ರಂದು ಬೆಳಿಗ್ಗೆ 11 ಗಂಟೆಗೆ ವಿಶೇಷ ಕೌನ್ಸಿಲ್ ಸಭೆ ಹಾಗೂ ಮಧ್ಯಾಹ್ನ 12 ಗಂಟೆಗೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ. 

ಕೆ.ಜಿ. ರಮೇಶ್ ಅವರಿಗೆ ಪಿಎಚ್.ಡಿ. ಪದವಿ

    ಮೈಸೂರು,ಆ.1.ಮೈಸೂರು ವಿಶ್ವವಿದ್ಯಾಲಯವು ಕೆ.ಜಿ. ರಮೇಶ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಹೆಚ್.ಎಂ. ಮರಳುಸಿದ್ದಯಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Àಮಲೆಕುಡಿಯ ಬುಡಕಟ್ಟು ಸಮುದಾಯದ ಕಳೆದ ಆರು ದಶಕಗಳ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ.” ಕುರಿತು ಸಾದರಪಡಿಸಿದ ಅಂಥ್ರೋಪಾಲಜಿ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಕೆ.ಜಿ. ರಮೇಶ್ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಜಲಾಲ ಜಫಾರ್‍ಪೌರ್ ಬಿಜಾರ್‍ಬೊನ್ಹೆ ಅವರಿಗೆ ಪಿಎಚ್.ಡಿ. ಪದವಿ

    ಮೈಸೂರು,ಆ.1.ಮೈಸೂರು ವಿಶ್ವವಿದ್ಯಾಲಯವು ಜಲಾಲ ಜಾಫರ್ ಪೌರ್ ಬಿಜಾರ್‍ಬೋನ್ಹೆ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಹೆಚ್.ಎಂ. ಮರಳುಸಿದ್ದಯಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “ಖಿhe Soಛಿio-ಇಛಿoಟಿomiಛಿ Sಣuಜಥಿ ಚಿmoಟಿg ಣhe Shiಚಿ ಒusಟims iಟಿ ಒಥಿsoಡಿe ಅiಣಥಿ.” ಕುರಿತು ಸಾದರಪಡಿಸಿದ ಅಂಥ್ರೋಪಾಲಜಿ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಜಲಾಲ ಜಾಫರ್ ಪೌರ್ ಬಿಜಾರ್‍ಬೋನ್ಹೆ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ: ನೌಕರರ ಹಾಜರಾತಿ ಕಡ್ಡಾಯ- ಜಿಲ್ಲಾಧಿಕಾರಿ ಪಾಲಯ್ಯ ಸೂಚನೆ

      ಮೈಸೂರು.ಆ.1.ಮೈಸೂರು ನಗರದ ಓವೆಲ್ ಮೈದಾನದಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 9-00 ಗಂಟೆಗೆ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪಾಲಯ್ಯ ಸೂಚಿಸಿದ್ದಾರೆ.

    ಅಂದು ಬೆಳಿಗ್ಗೆ 8 ಗಂಟೆಗೆ ಅಧಿಕಾರಿಗಳು/ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣಾ ನಡೆಸಿ ನಂತರ ಬೆಳಿಗ್ಗೆ 9 ಗಂಟೆಗೆ ಓವಲ್ ಮೈದಾನದಲ್ಲಿ ನಡೆಯುವ ಮುಖ್ಯ ಸಮಾರಂಭಕ್ಕೆ ತಪ್ಪದೇ ಹಾಜರಾಗುವುದು.  ಸಮಾರಂಭ ನಡೆಯುವ ಸ್ಥಳದಲ್ಲಿ ಪ್ರವೇಶ ದ್ವಾರದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರ ತಾತ್ಕಾಲಿಕ ಕಚೇರಿಯನ್ನು ತೆರೆಯಲಾಗುತ್ತಿದ್ದು, ಅಧಿಕಾರಿಗಳು, ನೌಕರರು ಕಾರ್ಯಕ್ರಮಕ್ಕೆ ಹಾಜರಾದ ಬಗ್ಗೆ ಹಾಜರಾತಿಯಲ್ಲಿ ಸಹಿ ಮಾಡುವುದು.

     ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಕಚೇರಿ ಆದೇಶ ಹೊರಡಿಸಿ, ಅವರ ಹಾಜರಾತಿಯನ್ನು ಗಮನಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾದ ಸಿಬ್ಬಂದಿ ಸಹಿಯೊಂದಿಗೆ ಹಾಜರಾತಿ ಪಟ್ಟಿಯನ್ನು ಕಾರ್ಯಕ್ರಮ ಮುಗಿದ ಬಳಿಕ ಅಧ್ಯಕ್ಷರ ತಾತ್ಕಾಲಿಕ ಕಚೇರಿಗೆ ತಲುಪಿಸುವುದು.  ಗೈರು ಹಾಜರಾಗುವ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ

    ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಳಸುತ್ತದ್ದು, ಪ್ರದರ್ಶನ ಮತ್ತು ಹಾರಾಟ ಸೂಕ್ತ ರೀತಿಯಲ್ಲಿ ಬಳಸದೇ ಇರುವುದರಿಂದ ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪ್ಲಾಸ್ಟಿಕ್ /ಕಾಗದದ ರಾಷ್ಟ್ರಧ್ವಜವನ್ನು ಬಳಸದಂತೆ ಅಪರ ಜಿಲ್ಲಾಧಿಕಾರಿ ಅರ್ಚನಾ ಅವರು ತಿಳಿಸಿದ್ದಾರೆ.

 ವ್ಯಾಪಾರಸ್ಥರು ಸಹಾ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜ ಮಾರಾಟ ಮಾಡಬಾರದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

No comments:

Post a Comment