Saturday 30 August 2014

ಕೆ.ಆರ್.ಪೇಟೆ-ಸುದ್ದಿಗಳು.

 ಕೃಷ್ಣರಾಜಪೇಟೆ. ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಕನಕ ಗುರು ಪೀಠವು ತನ್ನ ಚಟುವಟಿಕೆಗಳನ್ನು ನಡೆಸಲು 2ಗುಂಟೆ ನಿವೇಶನವನ್ನು ನೀಡಬೇಕೆಂದು ಮನವಿ ಸಲ್ಲಿಕೆಯು ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ಇಂದು ಪುರಸಭೆಯ ಅಧ್ಯಕ್ಷ ಕೆ.ಗೌಸ್‍ಖಾನ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯು ಆರಂಭವಾಗಿ ಆಯವ್ಯಯವನ್ನು ಮಂಡಿಸಿದ ನಂತರ ನಡೆದ ಇತರೆ ವಿಚಾರಗಳ ಚರ್ಚೆಯಲ್ಲಿ ಕನಕಗುರು ಪೀಠದ ಶಾಖಾ ಕಛೇರಿ ಮತ್ತು ಶಾಲೆಯನ್ನು ಆರಂಬಿಸಲು ಪುರಸಭೆಯು ನಿವೇಶನವನ್ನು ನೀಡಬೇಕೆಂಬ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರಾದ ಕೆ.ಎಸ್.ಸಂತೋಷ್, ಚೆಲುವರಾಜು, ಹೆಚ್.ಆರ್.ಲೋಕೇಶ್, ನಾಗರಾಜು ಮತ್ತು ಕೆ.ಆರ್.ಹೇಮಂತಕುಮಾರ್ ಮೊದಲು ಈ ಹಿಂದೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಮಹಿಳಾ ಸಾಮಥ್ರ್ಯ ಸೌಧ, ಪತ್ರಕರ್ತರ ಸಂಘ, ಸಾರ್ವಜನಿಕ ಗ್ರಂಥಾಲಯ, ಡಾ.ಅಂಬೇಡ್ಕರ್ ಭವನಗಳಿಗೆ ನಿವೇಶನ ನೀಡುವ ವಿಚಾರವು ಎಲ್ಲಿಯವರೆಗೆ ಬಂದು ಕನಕಗುರು ಪೀಠದ ಶಾಖೆಗೆ ನಿವೇಶನ ನೀಡಿ ಹಾಗೆಯೇ ಸಾರ್ವಜನಿಕ ಸಂಘ-ಸಂಸ್ಥೆಗಳಿಗೂ ನಿವೇಶನ ನೀಡಲು ಕ್ರಮಕೈಗೊಳ್ಳಿ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಣದ ಹೇಮಾವಚತಿ ಬಡಾವಣೆಯ ಪಾರ್ಕಿನಲ್ಲಿ ನಡೆಯುತ್ತಿರುವ ಶಾಲೆಗೆ ಸ್ವಂತ ಕಟ್ಟಡವಿಲ್ಲದೇ ಮಕ್ಕಳು ಮರಗಳ ಕೆಳಗೆ ಕುಳಿತು ಪಾಠ-ಪ್ರಚಚನವನ್ನು ಕೇಳುತ್ತಿದ್ದಾರೆ. ಈಬಗ್ಗೆ ಹಲವಾರು ದಿನಪತ್ರಿಕೆಗಳು ಮತ್ತು ವಾಹಿನಿಗಳಲ್ಲಿ ಮಕ್ಕಳಗೋಳಿನ ಬಗ್ಗೆ ಪ್ರಸಾರವಾಗಿದೆ, ಮಾನ್ಯ ಶಾಸಕರೂ ಕೂಡ ಮೊದಲ ಆಧ್ಯತೆಯಲ್ಲಿ ಶಾಲೆಯು ಸ್ವಂತ ಕಟ್ಟಡವನ್ನು ಹೊಂದಲು ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಪುರಸಭೆಯ ಆಡಳಿತ ಮಂಡಳಿಯು ಪಕ್ಷಾತೀತವಾಗಿ ಜನಪರವಾದ ಆಡಳಿತವನ್ನು ನೀಡಲು ಮುಂದಾಗಬೇಕು ಎಂದು ಸಂತೋಷ್ ಮನವಿ ಮಾಡಿದರು.
ಪಟ್ಟಣದ ಶಹರೀ ರೋಜ್‍ಗಾರ್ ಯೋಜನೆಯ ಸಹಾಯಕಿ ಭಾರತಿಅನಂತಶಯನ ಅವರು ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಲಂಚದ ಹಣಕ್ಕಾಗಿ ಒತ್ತಾಯಿಸಿ ಲಂಚಪಡೆದು ಸಿಕ್ಕಿಬಿದ್ದು ಕರ್ತವ್ಯ ಲೋಪವೆಸಗಿರುವುದು ಈಗಾಗಲೇ ಹಲವಾರು ಭಾರಿ ಸಾಭೀತಾಗಿದೆ. ಭಾರತಿ ಅವರ ಸೇವೆಯು ನಮ್ಮ ಪುರಸಭೆಗೆ ಬೇಕಾಗಿಲ್ಲ, ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ ಜಿಲ್ಲಾ ನಗರಾಭಿವೃಧ್ಧಿಕೋಶಕ್ಕೆ ವಾಪಸ್ ಕಳಿಸುವ ಬಗ್ಗೆ ಪುರಸಭೆ ಉಪಾಧ್ಯಕ್ಷ ಅಶೋಕ್ ಅವರು ನೀಡಿದ ಸಲಹೆಗೆ ಸರ್ವ ಸದಸ್ಯರೂ ಒಪ್ಪಿಗೆ ನೀಡಿದರು. ಪಟ್ಟಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ, ಹಂದಿಗಳ ಹಾವಳಿಯು ಮಿತಿಮೀರಿದೆ. ಕೋಳಿಯ ತ್ಯಾಜ್ಯವನ್ನು ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಸುರಿದು ಮಲಿನ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಜನರಿಗೆ ಗಬ್ಬುವಾಸನೆಯನ್ನು ಸಹಿಸಲು ಆಗುತ್ತಿಲ್ಲ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ರತ್ನಮ್ಮ ಮತ್ತು ಕೆ.ವಿನೋದ್ ಆಗ್ರಹಿಸಿದಾಗ ಮಧ್ಯಪ್ರವೇಶಿಸಿ ಮಾತನಾಡಿದ ಆರೋಗ್ಯ ಪರಿವೀಕ್ಷಕ ಕೆಂಪೇಗೌಡ ಮಾತನಾಡಿ ಇದುವರೆಗೆ 425 ಬೀದಿ ನಾಯಿಗಳನ್ನು ಹಿಡಿಯಲಾಗಿದೆ, ಸಧ್ಯದಲ್ಲಿಯೇ ಕಾರ್ಯಾಚರಣೆ ನಡೆಸಿ ಉಳಿದ ನಾಯಿಗಳನ್ನು ಹಿಡಿಯಲು ಕ್ರಮಕೈಗೊಳ್ಳುತ್ತೇವೆ. ಪುರಸಭೆಗೆ ಹೊಸದಾಗಿ ನೈರ್ಮಲ್ಯ ವಿಭಾಗಕ್ಕೆ ಪರಿಸರಎಂಜಿನಿಯರ್ ರಕ್ಷಿತ್ ಅವರು ಬಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರ ನೇತೃತ್ವದಲ್ಲಿ ಹಂದಿಯನ್ನು ಸಾಕಾಣಿಕೆ ಮಾಡಿರುವ ಚಿಕ್ಕೋಸಹಳ್ಳಿಯ ಪ.ಕಾಳೇಗೌಡರ ಮಗ ಸುರೇಶ್ ಅವರು ಪರಿಸರ ಮಾಲಿನ್ಯ ಮಾಡಲು ಹೊರಟು ಸಾರ್ವಜನಿಕರ ನೆಮ್ಮದಿಗೆ ಭಂಗ ತಂದಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಬರುವ ಸೋಮವಾರ ಕೋಳಿ ಅಂಗಡಿ ವ್ಯಾಪಾರಿಗಳ ಸಭೆ ಕರೆದು ಕೆರೆಗೆ ಕೋಳಿ ತ್ಯಾಜ್ಯವನ್ನು ಸುರಿಯದಂತೆ ನಿರ್ದೇಶನ ನೀಡುತ್ತೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯರಿಗೆ ಅಭಿನಂದನೆ: ದಕ್ಷಿಣ ಪದವೀಧರ ಕ್ಷೇತ್ರದ ಸದಸ್ಯರಾದ ಗೋ.ಮಧುಸೂಧನ್ ಅವರು ಶವಸಂಸ್ಕಾರ ವಾಹನವನ್ನು ಪುರಸಭೆಗೆ ತಮ್ಮ ಶಾಸಕರ ಅನುಧಾನದಿಂದ ಕೊಡುಗೆಯಾಗಿ ನೀಡಿದ್ದು ವಾಹನದ ಕೀಯನ್ನು ಹಸ್ತಾಂತರಿಸಲು ಇಂದಿನ ಸಾಮನ್ಯ ಸಭೆಯಲ್ಲಿ ಭಾಗವಹಿಸಿದ್ದರು, ಪುರಸಭೆಯ ವತಿಯಿಂದ ಗೋ.ಮಧುಸೂಧನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಾರುತಿಓಮ್ನಿ ಶವ ಸಾಗಾಣಿಕೆಯ ಚಿರಶಾಂತಿ ವಾಹನವನ್ನು ಪುರಸಭೆಯ ವಶಕ್ಕೆ ಪಡೆಯಲಾಯಿತು.
ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ: ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯ ಕೆ.ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಯಾದರು. ಸ್ಥಾಯಿ ಸಮಿತಿ ಸದಸ್ಯರಾಗಿ ಡಿ.ಪ್ರೇಮಕುಮಾರ್, ಕೆ.ಬಿ.ನಂದೀಶ್, ಕೆ.ವಿನೋದ್, ತಂಜೀಮಾಕೌಸರ್, ಚೆಲುವರಾಜು, ನಂಜುಂಡಯ್ಯ, ಚಕ್ರಪಾಣಿ ಅವರ ಹೆಸರನ್ನು ಅಧ್ಯಕ್ಷ ಕೆ.ಗೌಸ್‍ಖಾನ್ ಪ್ರಕಟಿಸಿದರು. ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕೆ.ಪುರುಷೋತ್ತಮ್ ಅವರ ಹೆಸರನ್ನು ಸೂಚಿಸಿದರೆ ಕೆ.ಬಿ.ನಂದೀಶ್ ಅನುಮೋದಿಸಿದರು.
ಈವರೆಗೆ ಪಟ್ಟಣವನ್ನು ಪುರಸಭೆಯ ಅಧ್ಯಕ್ಷರು-ಉಪಾಧ್ಯಕ್ಷರು ಮುನ್ನಡೆಸುತ್ತಿದ್ದರು ಇದೀಗ ಇವರಿಬ್ಬರ ಜೊತೆಗೆ ನನ್ನನ್ನು ಸ್ಥಾಯಿ ಸಮಿತಿಯ ಅಧ್ಯಕ್ಷನನ್ನಾಗಿ ಸದಸ್ಯರು ಆಯ್ಕೆ ಮಾಡಿ ಹೆಚ್ಚಿನ ಜವಾಬ್ಧಾರಿ ನೀಡಿದ್ದಾರೆ. ಪಟ್ಟಣ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳನ್ನೂ ಸಮನಾಗಿ ಕಂಡು ಪಕ್ಷಾತೀತವಾಗಿ ಕೆಲಸ ಮಾಡಿ ಪಟ್ಟಣವನ್ನು ಮಾದರಿಯಾಗಿ ಅಭಿವೃಧ್ಧಿಪಡಿಸಲು ದುಡಿಯುತ್ತೇನೆ ಎಂದು ಪುರುಷೋತ್ತಮ್ ಭರವಸೆ ನೀಡಿದರು.
ಪಟ್ಟಣದ ಬೀದಿ ದೀಪಗಳ ನಿರ್ವಹಣೆಯ ಟೆಂಡರ್ ಅನ್ನು ಹಿತೇಷ್ ಎಲೆಕ್ಟ್ರಿಕಲ್ಸ್ ಅವರಿಗೇ ನೀಡಿ ಮುಂದುವರೆಸುವುದು, ತಾಲೂಕು ಕಛೇರಿ ಆವರಣ ಮತ್ತು ಪಟ್ಟಣದ ಡಿಸಿಸಿ ಬ್ಯಾಂಕಿನ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು ಮೆ. ಸನಿಹ ಇಂಟರ್‍ನ್ಯಾಷನಲ್ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಸಭೆಯು ನಿರ್ಧರಿಸಿತು.
ಪುರಸಭೆ ಸದಸ್ಯರಾದ ಮಹಾದೇವಿ, ನಂಜುಂಡ, ಕೆ.ಆರ್.ಹೇಮಂತ್‍ಕುಮಾರ್, ಲೋಕೇಶ್, ಚಂದ್ರಕಲಾ, ಜಯಮ್ಮ, ಪ್ರೇಮಕುಮಾರ್, ಚಕ್ರಪಾಣಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸಿ.ಎಸ್.ಬಸವರಾಜು ಸರ್ವ ಸದಸ್ಯರನ್ನೂ ಸ್ವಾಗತಿಸಿದರು. ಪ್ರಥಮದರ್ಜೆ ಸಹಾಯಕ ಹೆಚ್.ಪಿ.ನಾಗರಾಜ್ ವಂದಿಸಿದರು.


No comments:

Post a Comment