Friday 1 August 2014

ಮೈಸೂರು-ಆಗಸ್ಟ್ 3 ರಂದು ಅರಿವು -ನೆರವು ಕಾರ್ಯಾಗಾರ

ಆಗಸ್ಟ್ 3 ರಂದು ಅರಿವು -ನೆರವು ಕಾರ್ಯಾಗಾರ.
     ಮೈಸೂರು,ಆ.1.ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವುದು ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಈ ವಿಷಯಗಳ ಸಂಬಂಧವಾಗಿ ರಾಜ್ಯಾದ್ಯಂತ ಹಾಗೂ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ವತಿಯಿಂದ ಕಾರ್ಯಾಗಾರಗಳನ್ನು ವರ್ಷದಾದ್ಯಂತ ನಡೆಸಲು ನಿರ್ಧರಿಸಿದ್ದು, ಅದರಂತೆ ಮೈಸೂರಿನಲ್ಲಿ ಇದೇ 3 ರಂದು ಭಾನುವಾರ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.
     ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಮಾಧ್ಯಮಗೋಷ್ಠಿಯಲ್ಲಿಂದು ತಿಳಿಸಿದರು.
    ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಎನ್.ಕೆ. ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಅಧ್ಯಕ್ಷತೆ ವಹಿಸುವರು.
    ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣನವರ್, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ.ಎಸ್. ಮೂರ್ತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸಿ.ಎಂ. ಜಗದೀಶ್ ಹಾಗೀ ಸಿ. ಅಪ್ಪಾಜಿಗೌಡ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-15 ಗಂಟೆಯವರೆಗೆ ಮಕ್ಕಳಲ್ಲಿ ಅಪೌಷ್ಠಿಕತೆ, ಕಾರಣ ಮತ್ತು ಪರಿಹಾರ ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಮಾನಸ ಗಂಗೋತ್ರಿಯ ಆಹಾರ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ ಸರಸ್ವತಿ ಅವರು ಉಪನ್ಯಾಸ ನೀಡುವರು.
     ಮಧ್ಯಾಹ್ನ 12-30 ರಿಂದ ಮಕ್ಕಳು ಶಾಲೆ ಬಿಡಲು ಕಾರಣ ಮತ್ತು ಪರಿಹಾರ, ಇದನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಆರ್.ಐ.ಇ. ಪ್ರಾಧ್ಯಾಪಕ ಪ್ರೊ. ಸಿ.ಜಿ.ವೆಂಕಟೇಶ್‍ಮೂರ್ತಿ ಅವರು ಉಪನ್ಯಾಸ ನೀಡುವರು.    



ಅಪೌಷ್ಠಿಕ ಮಕ್ಕಳ ಸಂಖ್ಯೆ ಇಳಿಮುಖ:
    ಜಿಲ್ಲೆಯಲ್ಲಿ 9 ಶಿಶು ಅಭಿವೃದ್ಧಿ ಯೋಜನೆಗಳು ಕಾರ್ಯ ನಿರ್ವಹಿಸುತ್ತಿದ್ದು, 2827 ಅಂಗನವಾಡಿ ಕೇಂದ್ರಗಳಲ್ಲಿ 1,73,805 ಮಕ್ಕಳು ಪೂರಕ ಪೌಷ್ಠಿಕ ಆಹಾರದ ಸೌಲಭ್ಯ ಪಡೆಯುತ್ತಿದ್ದಾರೆ. ಜೂನ್ 2014ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಗುರ್ತಿಸಲಾಗಿರುವ ಅಪೌಷ್ಠಿಕ ಮಕ್ಕಳ ಸಂಖ್ಯೆ 737. ಹಿಂದಿನ ವರ್ಷದಲ್ಲಿ ಈ ಸಂಖ್ಯೆ 1241 ಆಗಿತ್ತು. ಅಪೌಷ್ಠಿಕತೆಯಿಂದ ನರಳುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್ ತಿಳಿಸಿದರು.
    ಅಪೌಷ್ಠಿಕ ಮಕ್ಕಳನ್ನು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ವಾರದಲ್ಲಿ 4 ದಿನ ಕೋಳಿಮೊಟ್ಟ ಹಾಗೂ 2 ದಿನ 200 ಮಿ.ಲೀ. ಹಾಲನ್ನು ನೀಡಲಾಗುತ್ತಿದೆ. ಬಾಲಸಂಜೀವಿನಿ ಯೋಜನೆಯಡಿಯಲ್ಲಿ ಪ್ರತಿ ಮಗುವಿಗೆ ರೂ. 750/- ವೆಚ್ಚದಲ್ಲಿ ಅಗತ್ಯವಿರುವ ಔಷಧೋಪಚಾರ ಮಾಡಿಸಲಾಗುತ್ತಿದೆ. ಹೆಚ್ಚುವರಿಯಾಗಿ ಶುಶ್ರೂಷೆ ಹಾಗೂ ಚಿಕಿತ್ಸೆ ಅಗತ್ಯವಿದ್ದಲ್ಲಿ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಅಗತ್ಯವಿರುವ ಶುಶ್ರೂಷೆ ಹಾಗೂ ಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದು ಅವರು ಹೇಳಿದರು.
   ಪ್ರತಿ ಮಗುವುಗೆ ಅಂಗನವಾಡಿ ಕೇಂದ್ರದಲ್ಲಿ  ರೂ. 9 ವೆಚ್ಚದಲ್ಲಿ ಪ್ರತಿ ದಿನವೂ ನಿಗಧಿಪಡಿಸಲಾಗಿರುವಂತೆ ಪೂರಕ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ. ಸಿ.ಎಫ್.ಟಿ.ಆರ್.ಐ. ಮೈಸೂರುರವರು  ಅಪೌಷ್ಠಿಕ ಮಕ್ಕಳ ಒಂದು ವಿಶೇಷ ಅಧ್ಯಯನ ಮತ್ತು ಮೌಲ್ಯಮಾಪನವನ್ನು ನಂಜನಗೂಡು ತಾಲ್ಲೂಕಿನ ಆಯ್ದ 6 ಅಂಗನವಾಡಿ ಕೇಂದ್ರಗಳಲ್ಲಿ ಕೈಗೆತ್ತಿಕೊಂಡಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿಯಲ್ಲಿಯೂ ಸಹ ಈ ಮಕ್ಕಳಿಗೆ ವಾರದಲ್ಲಿ 3 ದಿನ ಹಾಲು ನೀಡಲಾಗುತ್ತಿದೆ. ಇಂತಹ ಮಕ್ಕಳ ತಾಯಂದಿರಿಗೆ ಮತ್ತು ಪೋಷಕರಿಗೆ ವಿಶೇಷ ಸಭೆಗಳನ್ನು ನಡೆಸಿ ಹೆಚ್ಚಿನ ಗಮನ ಹಾಗೂ ಅಗತ್ಯ ಕ್ರಮ ವಹಿಸುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಎಲ್ಲ ಕ್ರಮಗಳಿಂದ ಅಪೌಷ್ಠಿಕ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ವಿಜಯ್ ವಿವರಿಸಿದರು.
ವಿಶೇಷ ವಾರ್ಡ್:
    ಅಪೌಷ್ಠಿಕ ಮಕ್ಕಳು ಹಾಗೂ ತಾಯಂದಿರಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ಪೌಷ್ಠಿಕತೆ ಪುನರ್ವಸತಿ ಕೇಂದ್ರಗಳೆಂದು ಈ ವಾರ್ಡ್‍ಗಳನ್ನು ಹೆಸರಿಸಿದ್ದು ಇಲ್ಲಿಗೆ ದಾಖಲಾಗುವ ತಾಯಂದಿರಿಗೆ ಪ್ರತಿ ದಿನಕ್ಕೆ ರೂ. 100 ಪರಿಹಾರಧನ ನೀಡಲಾಗುತ್ತದೆ. 10 ದಿನಗಳ ಕಾಲ ಆರೈಕೆ ನೀಡಿದ ನಂತರ ಪೌಷ್ಠಿಕತೆಯ ಮಟ್ಟ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮತ್ತೆ ಆರೈಕೆ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಟಿ. ಪುಟ್ಟಸ್ವಾಮಿ ತಿಳಿಸಿದರು.
    ಇತ್ತೀಚೆಗೆ ಸರಗೂರು ಹಾಗೂ ಬೈಲುಕುಪ್ಪೆಯಲ್ಲಿ ಬುಡಕಟ್ಟು ಜನರಿಗಾಗಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಏರ್ಪಡಿಸಲಾದ ಈ ಶಿಬಿರಗಳಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಜನರನ್ನು ಗುರುತಿಸಿ ತಜ್ಞ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ರೂ. 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರಗೂರಿನಲ್ಲಿ 458 ಜನರನ್ನು ಬೈಲುಕುಪ್ಪೆಯಲ್ಲಿ 360 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು. 

ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಳ?
   2013ರಲ್ಲಿ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 5921, ಆದರೆ 2010ರಲ್ಲಿ ನಡೆಸಿದ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಈ ಸಂಖ್ಯೆ 2530 ಆಗಿತ್ತು ಪೋಷಕರ ವಲಸೆ, ಸಣ್ಣಮಕ್ಕಳನ್ನು ದೊಡ್ಡಮಕ್ಕಳು ನೋಡಿಕೊಳ್ಳುವುದು ಇವೇ ಮೊದಲಾದುವುಗಳನ್ನು ಮಕ್ಕಳು ಶಾಲೆ ಬಿಡಲು ಕಾರಣ ಎಂದು ಗುರುತಿಸಲಾಗಿದೆ. ಇವರುಗಳನ್ನು ಮರಳಿ ಶಾಲೆಗೆ ಕರೆತರಲು ಚಿಣ್ಣರ ಅಂಗಳ, ಶಾಲಾಧಾರಿತ ತರಬೇತಿ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ 2153 ಮಕ್ಕಳು ಮುಖ್ಯ ವಾಹಿನಿಗೆ ಹಿಂದಿರುಗಿದ್ದು ಇನ್ನು 3768 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಬಸಪ್ಪ ತಿಳಿಸಿದರು.
    ಮೈಸೂರು ಉತ್ತರ ತಾಲ್ಲೂಕಿನಲ್ಲಿ ಈ ಸಂಖ್ಯೆ ಅತಿಹೆಚ್ಚು ಅಂದರೆ 1320 ಇದೆ. ಕೆ.ಆರ್.ನಗರದ ತಾಲ್ಲೂಕಿನಲ್ಲಿ ಅತಿ ಕಡಿಮೆ 297 ಇದೆ. ಶಾಲೆಬಿಟ್ಟವರ ಪೈಕಿ ಗಂಡು ಮಕ್ಕಳು ಹೆಚ್ಚಿದ್ದು ಈ ಸಂಖ್ಯೆ 3220 ಆಗಿದ್ದು 2701 ಹೆಣ್ಣು ಮಕ್ಕಳು ಶಾಲೆ ತೊರೆದಿದ್ದಾರೆ ಎಂದು ಅವರು ಹೇಳಿದರು.
    ಶಾಲಾ ಲಭ್ಯತೆಯ ಕೊರತೆಯಿಂದ 114 ಮಕ್ಕಳು, ಮನೆಗೆಲಸ ಹಾಗೂ ಇತರೆ ಕೆಲಸಗಳಿಂದ 617 ಮಕ್ಕಳು, ಜೀವನ ಸಂಪಾದನೆಗಾಗಿ 264 ಮಕ್ಕಳು, ಮದುವೆ, ಪ್ರೌಢಾವಸ್ಥೆ ಕಾರಣಗಳಿಗಾಗಿ 475 ಹೆಣ್ಣು ಮಕ್ಕಳು, ಶಾಲಾ ವಾತಾವರಣದಿಂದ 25 ಮಕ್ಕಳು, ವಲಸೆಯಿಂದ 865 ಮಕ್ಕಳು, ಶಿಕ್ಷಕರ ಭಯದಿಂದ 5, ಮಕ್ಕಳು ಓಡಿಹೋಗಿದ್ದರಿಂದ 25 ಮಕ್ಕಳು, ಬೀದಿ ಮಕ್ಕಳು 2, ವಿಶೇಷ ಅಗತ್ಯವುಳ್ಳ ಮಕ್ಕಳು 216, ಇತರೆ ಕಾರಣಗಳಿಗಾಗಿ 3251 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ಅವರು ಹೇಳಿದರು.
   ಇದರಲ್ಲಿ 216 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿದ್ದು, ಇವರಿಗೆ ಗೃಹಾಧಾರಿತ ಶಿಕ್ಷಣ ಮತ್ತು ಶಾಲಾ ಸಿದ್ಧತಾ ಕಾರ್ಯಕ್ರಮದಡಿ ಮುಖ್ಯವಾಹಿನಿಗೆ ತರಲು ಯೋಜನೆ ಮಾಡಿದ್ದು, ಉಳಿದಂತೆ 857 ಮಕ್ಕಳಿಗೆ 3 ತಿಂಗಳ ವಸತಿ ಸಹಿತ ಚಿಣ್ಣರ ಅಂಗಳ 409 ಮಕ್ಕಳಿಗೆ 3 ತಿಂಗಳ ವಸತಿ ರಹಿತ ಚಿಣ್ಣರ ಅಂಗಳ, 101 ಮಕ್ಕಳಿಗೆ 12 ತಿಂಗಳ ವಸತಿ ಸಹಿತ ವಿಶೇಷ ತರಬೇತಿ, 270 ಮಕ್ಕಳಿಗೆ 12 ತಿಂಗಳ ಚಿಣ್ಣರ ತಂಗುಧಾಮ ವಸತಿ ಸಹಿತ ವಿಶೇಷ ತರಬೇತಿ, 53 ಮಕ್ಕಳಿಗೆ ಟೆಂಟ್ ಶಾಲೆ, 3260 ಮಕ್ಕಳಿಗೆ ಶಾಲಾಧಾರಿತ ತರಬೇತಿ, 455 ಹಾಸ್ಟೆಲ್ ಮೂಲಕ ಮುಖ್ಯವಾಹಿನಿಗೆ ತರಲು ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ಬಸಪ್ಪ ತಿಳಿಸಿದರು.

No comments:

Post a Comment