Saturday 30 August 2014

ಮಾನಸಿಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಗುರಿ:ಡಾ|| ಅಶೋಕ್ ಪೈ

ಮಾನಸಿಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಗುರಿ:ಡಾ|| ಅಶೋಕ್ ಪೈ
     ಮನೋಶಿಕ್ಷಣದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸಿ ಮಾನಸಿಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಕರ್ನಾಟಕ ರಾಜ್ಯ ಆರೋಗ್ಯ ಕಾರ್ಯಪಡೆಯ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ|| ಅಶೋಕ್ ಪೈ ಅವರು ತಿಳಿಸಿದರು.
     ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗÀಳೊಂದಿಗೆ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜನಸಂಖ್ಯೆಯ ಶೇ 14 ರಷ್ಟು ಜನರಿಗೆ ಮಾನಸಿಕ ಆರೋಗ್ಯದ ಚಿಕಿತ್ಸೆಯ ಅವಶ್ಯಕತೆ ಇದೆ ಎಂದರು.
     ಪ್ರತಿ 1,10,000 ಜನಸಂಖ್ಯೆಗೆ ಒಬ್ಬ ಮನೋವೈದ್ಯ, ಒಬ್ಬ ಮನೋವಿಜ್ಞಾನಿ, ಒಬ್ಬ ಮನೋಸಾಮಾಜಿಕ ಕಾರ್ಯಕರ್ತ, ಒಬ್ಬ ಮನೋರೋಗಿ ಶುಶ್ರೂಷಕಿಯರ ಅವಶ್ಯಕತೆ ಇರುತ್ತದೆ. ಭಾರತದಲ್ಲಿ ಈಗ ಸುಮಾರು 4000 ಮನೋವೈದ್ಯರು, 2000 ಮನೋಚಿಕಿತ್ಸಕರು ಹಾಗೂ 2000 ಮಾನಸಿಕ ಸಮಾಜ ಕಾರ್ಯಕರ್ತರಿದ್ದಾರೆ. ಕನಾಟಕದಲ್ಲಿ ಸುಮಾರು 40 ಮನೋವೈದ್ಯರನ್ನು ತರಬೇತಿಗೊಳಿಸಿದರೆ ಅದರಲ್ಲಿ ಶೇಕಡ 50 ಕ್ಕೂ ಹೆಚ್ಚು ಜನರು ವಿದೇಶಕ್ಕೆ ವಲಸೆ ಹೋಗುತ್ತಾರೆ. ಮನೋವೈದ್ಯರ ಸಮಸ್ಯೆಯನ್ನು ಸರಿಪಡಿಸಲು ಮಾನಸಿಕ ಆರೋಗ್ಯ ಪಡೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
     ದಿನದಿಂದ ದಿನಕ್ಕೆ ಆತ್ಮಹತ್ಯೆ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿದೆ. ಆತ್ಮಹತ್ಯೆಗೆ ಕೆಲವರಲ್ಲಿ ಖಿನ್ನತೆ ಕೂಡ ಒಂದು ಕಾರಣ. ಇದಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾನಸಿಕ ಚಿಕಿತ್ಸೆ ನೀಡಿದರೆ ಆತ್ಮಹತ್ಯಾ ಪ್ರಕರಣ ಸಂಖ್ಯೆಯನ್ನು ಕಡಿಮೆ ಮಾಡಬಹುದು, ಇದಕ್ಕಾಗಿ ಆತ್ಮಹತ್ಯೆ ನಿರೋಧಕ ಪಡೆ ಹಾಗೂ ಸಹಾಯವಾಣಿ ಪ್ರಾರಂಭಿಸಲು ಯೋಜಿಸಲಾಗುತ್ತಿದೆ ಎಂದರು.
     ಮಾನಸಿಕ ಅರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ದೃಷ್ಠಿಯಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ 10 ಹಾಸಿಗೆಗಳನ್ನು ಮಾನಸಿಕ ರೋಗಿಗಳಿಗೆ ಮೀಸಲಿಡಲಾಗಿದೆ. ವಾರದಲ್ಲಿ ಒಂದು ದಿವಸ ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
     ಮಾನಸಿಕ ಚಿಕಿತ್ಸೆ ಕೇಂದ್ರಗಳನ್ನು  ಸ್ವಯಂ ಸೇವಾ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಖಾಸಗಿರವರು ಅಗತ್ಯ ಸೌಲಭ್ಯಗಳನ್ನು ಹೊಂದಿದ್ದರೆ ಮಾನಸಿಕ ಚಿಕಿತ್ಸ ಕೇಂದ್ರಗಳನ್ನು ಪ್ರಾರಂಭಿಸಬಹುದಾಗಿದ್ದು, ಚಿಕಿತ್ಸಾ ಕೇಂದ್ರಗಳಿಗೆ ಸರ್ಕಾರದಿಂದ ಸಹಾಯ ಧನÀ ನೀಡಲಾಗುವುದು ಎಂದರು.
     ಮೈಸೂರಿನಲ್ಲಿ ಕರುಣಾ ಟ್ರಸ್ಟ್ ಮಾನಸಿಕ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದು, ಚಂದ್ರಕಲಾ ಆಸ್ಪತ್ರೆ, ಪ್ರೇರಣಾ ಆಸ್ಪತ್ರೆ, ಮಿಷಿನ್ ಆಸ್ಪತ್ರೆ, ಆಶ್ರಿತ ಸಂಸ್ಥೆಗಳಿಗೆ ಮಾನಸಿಕ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಟಿ ಪುಟ್ಟಸ್ವಾಮಿ ಅವರು ತಿಳಿಸಿದರು.
     ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಮಾನಸ ಮಾನಸಿಕ ಆರೋಗ್ಯ ಎಜುಕೇಷನಲ್ ಫೌಂಡೇಷನ್ ನಿರ್ದೇಶಕರರಾದ ಡಾ|| ರಜಿನಿ ಪೈ, ಮೈಸೂರು ವೈದ್ಯಕೀಯ ಕಾಲೇಜಿನ ಡಾ|| ರವೀಶ್, ಕರುಣಾ ಟ್ರಸ್ಟ್‍ನ ಡಾ|| ಕಾಂತರಾಜು ಉಪಸ್ಥಿತರಿದ್ದರು.

No comments:

Post a Comment