Sunday 24 August 2014

ಮೇಲುಕೋಟೆ ಸುದ್ದಿ.

ಮೇಲುಕೋಟೆ :  ಸಹಸ್ರಾರು ಭಕ್ತರು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಶ್ರೀಯೋಗನರಸಿಂಹಸ್ವಾಮಿಯ ದರ್ಶನ ಮಾಡಿ ಪುನೀತರಾಗುವುದರೊಂದಿಗೆ ಮೇಲುಕೋಟೆಯಲ್ಲಿ ಶ್ರಾವಣ ಶನಿವಾರಗಳ ಸಂಭ್ರಮ ಮುಕ್ತಾಯಗೊಂಡಿತು.
ನಾಲ್ಕೂ ಶ್ರಾವಣ ಶನಿವಾರ, ಭಾನುವಾರಗಳಂದು ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವರದರ್ಶನ ಪಡೆದಿದ್ದಾರೆ. ಶ್ರಾವಣ ಮಾಸದ ಶನಿವಾರಗಳಂದು ಬಂದ ಎಲ್ಲಾ ಭಕ್ತರೂ ಸಾವಕಾಶವಾಗಿ ದೇವರದರ್ಶನ ಮಾಡಲು ದೇವಾಲಯದ ಆಡಳಿತ ಮತ್ತು ಪೊಲೀಸ್ ಇಲಾಖೆವತಿಯಿಂದ   ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ದೇವರದರ್ಶನ ಮಾಡಲು ಅನೂಕೂಲವಾಗುವಂತೆ ಪ್ರತಿಶನಿವಾರ ಇಡೀದಿನ  ದೇವಾಲಯಗಳನ್ನು ತೆರೆದು ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇಂದು ಕೊನೆಯ ಶ್ರಾವಣಶನಿವಾರದ ಜೊತೆಗೆ  ಸರ್ಕಾರಿ ರಜೆಯೂ  ಸೇರಿದ ಪರಿಣಾಮ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ನೂರಾರು ಸಂಖ್ಯೆಯ ನವದಂಪತಿಗಳು ಮೇಲುಕೋಟೆಗೆ ಆಗಮಿಸಿ ದೇವರದರ್ಶನ ಪಡೆದರು, ಭಕ್ತರ ದಟ್ಟಣೆಯಿಂದಾಗಿ ದೇಗುಲ ಪ್ರವೇಶಿಸಲು ಸಾಧ್ಯವಾಗದ ಭಕ್ತರು ಬಾಗಿಲಲ್ಲೇ ತೆಂಗಿನಕಾಯಿ ಒಡೆದು, ಗಂದದಕಡ್ಡಿ ಕರ್ಪೂರ ಬೆಳಗಿ ದೇವರಿಗೆ ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತಿದ್ದ ದೃಶ್ಯ ಚೆಲುವನಾರಾಯಣಸ್ವಾಮಿ ದೇಗುಲದ ಮುಂಭಾಗ ಸಂಜೆಯವರೆಗೆ ನಿರಂತರವಾಗಿ ಕಂಡು ಬಂತು.  ಈ ಸಲವೂ ವಾಹನ ದಟ್ಟನೆ ನಿಯಂತ್ರಿಸುವ ಸಲುವಾಗಿ ಭಕ್ತರವಾಹನವನ್ನು ಮೇಲುಕೋಟೆಗೆ ಬಿಡದೆ ಪ್ರಾಥಮಿಕ ಆರೋಗ್ಯಕೇಂದ್ರದ ಮುಂಬಾಗದ ವಿಶಾಲ ಸ್ಥಳ ಮತ್ತು ಇತರಕಡೆ  ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ರಸ್ತೆಸಾರಿಗೆ ಸಂಸ್ಥೆ ಮಂಡ್ಯ ಘಟಕದ ವತಿಯಿಂದ ಮಂಡ್ಯದಿಂದ ಮೇಲುಕೋಟೆಗೆ ಪ್ರತಿ 15 ನಿಮಿಷಕ್ಕೊಮ್ಮೆ ಬಸ್ ಸೌಕರ್ಯ ಕಲ್ಪಿಸಿತ್ತು.
ಕಡ್ಲೆಪುರಿಗೆ ಬೇಡಿಕೆ : ಶ್ರಾವಣ ಶನಿವಾರಗಳಂದು ಬಹುತೇಕ ಗ್ರಾಮೀಣ ಭಕ್ತರೇ ಕುಟುಂಬ ಸಮೇತವಾಗಿ ಆಗಮಿಸಿ ಕಡಲೇಪುರಿ, ಬತಾಸು, ಜಿಲೇಬಿ, ಜಾಹಂಗೀರು ಮತ್ತಿತರ ತಿನಿಸುಗಳನ್ನು ಖರೀದಿಸಿದ ಕಾರಣ ಇಪ್ಪತ್ತೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಡಲೇಪುರಿ ವ್ಯಾಪಾರಿಗಳು ಜೋಬುತುಂಬಿಸಿಕೊಂಡರು. ಪುಳಿಯೋಗರೆ ಮತ್ತು ಆಟದ ಸಾಮಗ್ರಿಗಳನ್ನು ಮಾರಿದ ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರ ನಡೆಯಿತು.
ಪಾಂಡವಪುರ ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಮತ್ತು ಮೇಲುಕೋಟೆ ಎಸ್ ಐ ಚಂದ್ರಶೇಖರ್ ಭದ್ರತಾ ವ್ಯವಸ್ಥೆ ಮಾಡಿದ್ದರೆ ಪಾಂಡವಪುರ ತಹಶೀಲ್ದಾರ್ ಶಿವಕುಮಾರಸ್ವಾಮಿ, ಪಾರುಪತ್ತೇಗಾರ್ ನಾಗರಾಜ ಅಯ್ಯಂಗಾರ್  ಹಾಜರಿದ್ದು, ಭಕ್ತರು ಸುಗಮವಾಗಿ ದೇವರದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಮಾಡಿದ್ದರು.

No comments:

Post a Comment