Saturday 23 April 2016

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರಲು ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ:
ದಿನೇಶ್ ಹೆಗ್ಡೆ


      ಮೈಸೂರು,ಏ.23.ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಇಲಾಖೆಗಿಂತ ಹೆಚ್ಚಾಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ತಿಳಿದಿರುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲು ಪ್ರಾರಂಭವಾಗುವುದರಲ್ಲಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದರು.
     ಅವರು ಇಂದು ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ನನ್ನ ನಡೆ ಶಾಲೆ ಕಡೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2013 ರಲ್ಲಿ ಮಾಧ್ಯಮದಲ್ಲಿ 54,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯವು ಸರ್ಕಾರದ ಕಾರ್ಯದರ್ಶಿಗಳಿಗೆ ಮಕ್ಕಳು ಹಾಗೂ ಪೋಷಕರಿಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಿ ಜನವರಿ 2015 ರೊಳಗಾಗಿ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಶೂನ್ಯವಾಗಬೇಕು ಎಂದು ನಿರ್ದೇಶನ ನೀಡಿತು. ಆದರೂ ಈಗಲೂ ಕೂಡ ಶಾಲೆಯಿಂದ ಮಕ್ಕಳು ಹೊರಗುಳಿದಿರುವುದನ್ನು ನಾವು ನೋಡಬಹುದಾಗಿದೆ ಎಂದರು.
     ಶಿಕ್ಷಣ ಮಕ್ಕಳಿಗೆ ಜ್ಞಾನ, ಆತ್ಮವಿಶ್ವಾಸ, ದೇಶಪ್ರೇಮ ಮುಂತಾದ ಉತ್ತಮ ಗುಣಗಳನ್ನು ಬೆಳೆಸುತ್ತದೆ.  ಬಡತನ, ಕೆಲಸಕ್ಕಾಗಿ ಪೋಷಕರು ವಲಸೆ ಹೋಗುವುದು, ಅಲೆಮಾರಿಗಳು, ಪೋಷಕರಲ್ಲಿ ಮಾಹಿತಿ  ಹಾಗೂ ವಿದ್ಯಾಭ್ಯಾಸದ ಕೊರತೆ ಮತ್ತು ಇನ್ನಿತರ ಕಾರಣಗಳಿಂದ ಮಕ್ಕಳು ಶಾಲೆಯಿಮದ ಹೊರಗುಳಿಯುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲು ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಕಂಡುಬಂದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
     ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಬಗ್ಗೆ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಪೋಷಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅವರ ಮನ ಒಲಿಸಬೇಕು. ಶಿಕ್ಷಣ ಪಡೆಯದೇ ನಕಲಿ ಅಂಕಪಟ್ಟಿ ಹಾಗೂ ಪದವಿ ಪಡೆಯುತ್ತಿರುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಪ್ರಕರಣಗಳು ಮಕ್ಕಳ ಮನಸ್ಸಿನಲ್ಲಿ ವಾಮ ಮಾರ್ಗಗಳ ಮೂಲಕ ಪದವಿ ಪಡೆಯಬಹುದು ಎಂಬ ಭಾವನೆ ಬೆಳೆಸುತ್ತದೆ. ಇಂತಹ ಭಾವನೆಗಳು ಮಕ್ಕಳಲ್ಲಿ ಬೆಳೆಯದಂತೆ ಸಹ ಶಿಕ್ಷಕರು ನೋಡಿಕೊಳ್ಳಬೇಕಿದೆ ಎಂದರು.
      ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಸೌಲಭ್ಯಗಳ ಕೊರತೆ ಇತ್ತು ಪೋಷಕರಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಹಂಬಲ ಹೆಚ್ಚಿಗೆ ಇತ್ತು. ಆದರೆ ಇಂದು ಸರ್ಕಾರವೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ, ಬಿಸಿಯೂಟ, ಕ್ಷೀರ ಭಾಗ್ಯ, ವಿದ್ಯಾರ್ಥಿವೇತನ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿರುವಾಗ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು ಎಂದರು.
    ಮೈಸೂರು ಮಹಾನಗರ ಪಾಲಿಕೆ ಮೈಸೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಶ್ರಮಿಸುತ್ತಿದೆ. ಶಿಕ್ಷಕರು ಸಹ ಶಾಲೆಗಳಲ್ಲಿ ಮಕ್ಕಳಿಗೆ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ, ಕಾಗದದ ಚೀಲ ಬಳಸುವಂತೆ ತಿಳಿಸಬೇಕು ಎಂದರು.
    ಮಕ್ಕಳ ಕಲ್ಯಾಣ ಸಮಿತಿಯ ಶೀಲ ಖರೆ ಅವರು ಮಾತನಾಡಿ ಅಂತರರಾಷ್ಟ್ರಿಯ ಮಟ್ಟದಲ್ಲಿ ದೇಶಗಳು ಬಡತನ ನಿವಾರಣೆ, ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವುದು, ಲಿಂಗ ತಾರತಮ್ಯ ನಿವಾರಣೆ, 5 ವರ್ಷದೊಳಗಿನ ಮಕ್ಕಳ ಸಾವು ತಡೆಯುವುದು, ಸುರಕ್ಷಿತ ಹೆರಿಗೆ, ಮರಣಾಂತಿಕ ಖಾಯಿಲೆಗಳನ್ನು ತಡೆಗಟ್ಟುವುದು, ಪರಿಸರ ಸಂರಕ್ಷಣೆಯ ಅಭಿವೃದ್ಧಿ ಗುರಿಗಳನ್ನು ನಿಗಧಿಪಡಿಸಿಕೊಂಡಿದೆ. ಶಿಕ್ಷಕರು ಮಕ್ಕಳು ನಿರಂತರವಾಗಿ ಶಾಲೆಗೆ ಗೈರುಹಾಜರಾದಗ ಪೋಷಕರಲ್ಲಿ ಸರಿಯಾಗಿ ವಿಚಾರಿಸಿದರೆ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು, ಬಾಲ್ಯ ವಿವಾಹವಾಗುವುದನ್ನು ತಡೆಗಟ್ಟಬಹುದು ಎಂದರು.
    ಇದೇ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಶ್ರೀನಿವಾಸ ಎಂ, ಚೌಡಯ್ಯ, ಸುಶೀಲ, ಅಂಕಪ್ಪ ಎಂಬ 4 ಮಕ್ಕಳನ್ನು ಸಂಕೇತಿಕವಾಗಿ ಶಾಲೆಗೆ ದಾಖಲಿಸಿಕೊಂಡು ಮಕ್ಕಳಿಗೆ ಸಮವಸ್ತ್ರ, ಶೂ, ಪುಸ್ತಕ, ಬ್ಯಾಗ್ ನೀಡಲಾಯಿತು.
    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಪ್ಪ, ಸರ್ವ ಶಿಕ್ಷಣ ಅಭಿಯಾನದ ಯೋಜನಾಧೀಕಾರಿ ಚಂದ್ರ ಪಾಟೀಲ್, ಶಾರದ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರ್ಥಸಾರಥಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
     ಇದಕ್ಕೂ ಮುನ್ನ ನನ್ನ ನಡೆ ಶಾಲೆ ಕಡೆ ಎಂಬ ಮಕ್ಕಳ ಜಾಥಗೆ ಶಾರದ ವಿಲಾಸ ಶತಮಾನೋತ್ಸವ ಭವನದ ಮುಂಭಾಗದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಚಾಲನೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ಕಚೇರಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ


      ಮೈಸೂರು,ಏ.23.-ಪ್ಲಾಸ್ಟಿಕ್ ಮುಕ್ತ ಕಚೇರಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮೈಸೂರು ಉಪ ವಿಭಾಗಾಧಿಕಾರಿ ಆನಂದ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಚಿಕ್ಕನಂಜಯ್ಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ಪ್ಲಾಸ್ಟಿಕ್ ನಿಷೇಧ ಸಂದೇಶವಿರುವ ಭಿತ್ತಿಚಿತ್ರವನ್ನು ಜಿಲ್ಲಾಧಿಕಾರಿಯವರ ಕಚೇರಿ ಆವರಣದ ಕೊಡೆಗಳ ಮೇಲೆ ಅಂಟಿಸುವ ಮೂಲಕ ಇಂದು ಚಾಲನೆ ನೀಡಿದರು.
     ನಂತರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ತಮ್ಮ ಕಚೇರಿ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಸಭೆ ಕರೆದು ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರದ ಮೇಲಾಗುವ ಅಪಾಯ ಕುರಿತು ಮಾಹಿತಿ ನೀಡಿದ ಮಾತನಾಡಿ ಜಿಲ್ಲಾಧಿಕಾರಿ ಅವರು ಇಂದಿನಿಂದ ನಮ್ಮ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂರ್ಪೂವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೆ, ಕಾಗದ, ಬಟ್ಟೆ, ಗೋಣಿ ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದರು.
    ಕಚೇರಿಗೆ ಬರುವ ಸಾರ್ವಜನಿಕರಿಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಅರಿವು ಮೂಡಿಸಬೇಕು. ಜಿಲ್ಲಾಧಿಕಾರಿಯವರ ಕಚೇರಿ ಅವರಣದಲ್ಲಿ ನಡೆಯುವ ಯಾವುದೇ ಸಭೆ ಹಾಗೂ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಸಬಾರದು. ಹಿಂದೆ 40 ಮೈಕ್ರೊಂ ಇರುವ ಪ್ಲಾಸ್ಟಿಕ್ ಬಳಸಬಹುದಾಗಿತ್ತು, ಆದರೆ ಸರ್ಕಾರ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ನಿಷೇಧ ಹೇರಿದೆ. ಸಾರ್ವಜನಿಕರನ್ನು ಜಾಗೃತಗೊಳಿಸಲು ನಮ್ಮ ಕಚೇರಿಯಲ್ಲೇ ಮೊದಲು ಪ್ಲಾಸ್ಟಕ್ ವಸ್ತುಗಳನ್ನು ನಿಷೇಧಿಸುವ ಕೆಲಸವನ್ನು ಮಾಡಿದ್ದೇವೆ. ಇದಕ್ಕೆ ಎಲ್ಲರು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
    ಪ್ಲಾಸ್ಟಿಕ್ ಬಳಕೆಯಿಂದ ಸಮಾಜದಲ್ಲಿ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅತಿಯಾದ ಪ್ಲಾಸ್ಟಿಕ್ ಉಪಯೋಗದಿಂದ ಕುಡಿಯುವ ನೀರಿನಲ್ಲಿ ರಾಸಾಯನಿಕಗಳು ಸೇರುತ್ತಿದೆ. ಪ್ಲಾಸ್ಟಿಕ್ ನಿಷೇಧ ಮಾತ್ರ ಪರಿಸರವನ್ನು  ಅಪಾಯದಿಂದ ತಪ್ಪಿಸಲು ಹಾಗೂ ಸಂರÀಕ್ಷಿಸಲು ಸಾಧ್ಯ. ಏಪ್ರಿಲ್ 24 ರಂದು ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ಗ್ರಾಮ ಅಭಿಯಾನವನ್ನು ಜಿಲ್ಲಾಯಾದ್ಯಂತ ಸ್ಥಳೀಯ ಆಡಳಿತದ ನೆರವಿನೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.
    ಇದೇ ವೇಳೆ ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಪ್ಲಾಸ್ಟಿಕ್ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.


“ಸಾಮಥ್ರ್ಯ ವರ್ಧನೆ ತರಬೇತಿ”
     ಮೈಸೂರು,ಏ.23.ಮೈಸೂರು ಕೇಂದ್ರ ಕಾರಾಗೃಹ ಮತ್ತು ಇದರ ವ್ಯಾಪ್ತಿಗೊಳಪಡಿಸುವ ಜಿಲ್ಲಾ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷೇತ್ರದ ಕುರಿತ ಹೆಚ್ಚಿನ ತಿಳುವಳಿಕೆ ಮೂಡಿಸುವ ಸಲುವಾಗಿ “ವೃಕ್ಷಂ ಟ್ಯಾಲೆಂಟ್ ಗ್ರೂಪ್” ಬೆಂಗಳೂರು ಇವರ ವತಿಯಿಂದ ಎರಡು ದಿನಗಳ “ಸಾಮಥ್ರ್ಯ ವರ್ಧನೆ ತರಬೇತಿಯನ್ನು ದಿನಾಂಕ:15-04-2016 ರಿಂದ 22-04-2016ರವರೆಗೆ ಕಾರಾಗೃಹಗಳ ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಸಿಬ್ಬಂದಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ಎರಡು ದಿನಗಳ ತರಬೇತಿ ನೀಡಲಾಯಿತು. ಸದರಿ ತರಬೇತಿಯಲ್ಲಿ “ಒತ್ತಡ ನಿರ್ವಹಣೆ, ಮೌಲ್ಯಗಳು ಮತ್ತು ನೈತಿಕತೆಯ ಬಗ್ಗೆ, ವ್ಯಕ್ತಿತ್ವ ಬೆಳವಣಿಗೆ, ಪ್ರೇರಣೆ” ಹೀಗೆ ಹಲವಾರು ವಿಷಯಗಳ ಕುರಿತು ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಯಿತು.
    ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷೇತ್ರದ ಕುರಿತ ಹೆಚ್ಚಿನ ತಿಳುವಳಿಕೆ, ವ್ಯಕ್ತಿ ಬದುಕಿನಲ್ಲಿ ಅವರ ಉನ್ನತೀಕರಣಕ್ಕೆ ಅವರು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿ ವೈಯಕ್ತಿಕ ಹಾಗೂ ಇಲಾಖೆಯ ಏಳಿಗೆಗೆ ಸಮಷ್ಠಿಯಾಗಿ ಕೆಲಸ ಮಾಡುವಂತೆ ತರಬೇತಿಯಲ್ಲಿ ತಿಳಿಸಲಾಯಿತು.
    “ಸಾಮಥ್ರ್ಯ ವರ್ಧನೆ ತರಬೇತಿ” ಶಿಬಿರಕ್ಕೆ ಮೈಸೂರು ಕೇಂದ್ರ ಕಾರಾಗೃಹ ಮತ್ತು ಇದರ ವ್ಯಾಪ್ತಿಗೊಳಪಡಿಸುವ ಜಿಲ್ಲಾ ಕಾರಾಗೃಹಗಳಿಂದ ಒಟ್ಟಾರೆ 150 ಸಂಖ್ಯೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಾಗಿದ್ದರು ಎಂದು ಕಾರಾಗೃಹಗಳ ಸಿಬ್ಬಂದಿ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಕುರಿತು ಪ್ರಮಾಣ ವಚನ ಸ್ವೀಕಾರ
    ಮೈಸೂರು,ಏ.23.-ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮತ್ತು ಮೈಸೂರು ಉಪವಿಭಾಗ ಕಛೇರಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಇಂದು  ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪ್ರಮಾಣ ವಚನ ಸ್ವೀಕರಿಸಿದರು.
    ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಚೇರಿಯನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು /ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶ ಪರೀಕ್ಷೆ ಮುಂದೂಡಿಕೆ
     ಮೈಸೂರು,ಏ.23- ಜವಾಹರ ನವೋದಯ ವಿದ್ಯಾಲಯದ ವತಿಯಿಂದ ಏಪ್ರಿಲ್ 24 ರಂದು 9ನೇ ತರಗತಿಗೆ ನಡೆಯಬೇಕಾಗಿದ್ದ ಪ್ರವೇಶ ಪರೀಕ್ಷೆಯು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2970040 ನ್ನು ಸಂಪರ್ಕಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಏಪ್ರಿಲ್ 25 ರಂದು ತರಬೇತಿ ಕಾರ್ಯಕ್ರಮ
  ಮೈಸೂರು,ಏ.23- ಮೈಸೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಗಳ ಸಂಯಕ್ತಾಶ್ರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಏಪ್ರಿಲ್ 25 ರಂದು ಬೆಳಿಗ್ಗೆ 10-30 ಗಂಟೆಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.
     ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ ಅವರು ಅಧ್ಯಕ್ಷತೆ ವಹಿಸುವರು.
     ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತೆ ಎಂ.ವಿ. ಸಾವಿತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಬಿ. ಭೀಮಪ್ಪ, ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗಂಗಾಧರ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಏಪ್ರಿಲ್ 25 ರಿಂದ ಶ್ರೀ ಶ್ವೇತವರಾಹ ಸ್ವಾಮಿ ಬ್ರಹ್ಮೋತ್ಸವ
     ಮೈಸೂರು,ಏ.23.ಮೈಸೂರಿನ ಅರಮನೆ ಕೋಟೆ ಶ್ರೀ ಶ್ವೇತವರಾಹ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 25 ರಿಂದ ಮೇ 6ರ ವರೆಗೆ ಬ್ರಹ್ಮೋತ್ಸವ ನಡೆಯಲಿದೆ.
     ಏಪ್ರಿಲ್ 25 ರಂದು ರಾತ್ರಿ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, 26 ರಂದು ಸಂಜೆ ಅಧಿವಾಸರ, ರಕ್ಷಾಬಂಧನ, ಕಲ್ಯಾಣೋತ್ಸವ, 27 ರಂದು ಬೆಳಿಗ್ಗೆ ಧ್ವಜಾರೋಹಣ (ಬೆಳಿಗ್ಗೆ 9-07 ರಿಂದ 9-38 ರೊಳಗೆ ಶುಭ ಮಿಥುನ ಲಗ್ನದಲ್ಲಿ) 1ನೇ ತಿರುನಾಳ್, ರಾತ್ರಿ ಭೇರಿತಾಡನ, ತಿರುಪ್ಪರೈ, ಹಂಸವಾಹನ ಉತ್ಸವ, ಯಾಗಶಾಲಾ ಪ್ರವೇಶ, 28 ರಂದು 2ನೇ ತಿರುನಾಳ್, ರಾತ್ರಿ ಶೇಷವಾಹನ ಉತ್ಸವ, ಪಡಿಯೇತ್ರ, 29 ರಂದು 3ನೇ ತಿರುನಾಳ್, ರಾತ್ರಿ ನಾಗವಲ್ಲೀ ಮಹೋತ್ಸವ, ನರಾಂದೋಳಿಕಾರೋಹಣ, ಚಂದ್ರಮಂಡಲ ವಾಹನ ಪಡಿಯೇತ್ತ, 4ನೇ ತಿರುನಾಳ್, ಸಂಜೆ ವರಾಹ ಮುಡಿ ಉತ್ಸವ, ಪಡಿಯೇತ್ತ, ಮೇ 1 ರಂದು 5ನೇ ತಿರುನಾಳ್, ಸಂಜೆ ಪ್ರಹ್ಲಾದ ಪರಿಪಾಲನೆ, ಬೆಳ್ಳಿಗರುಡೋತ್ಸವ, ವಿಶೇಷ ಪಡಿಯೇತ್ತ, 2 ರಂದು 6ನೇ ತಿರುನಾಳ್, ಸಂಜೆ ಗಜೇಂದ್ರಮೋಕ್ಷ, ಆನೆ ವಸಂತ, ಆನೆ ವಾಹನ, ವಿಶೇಷ ಪಡಿಯೇತ್ತ, 3 ರಂದು 7ನೇ ತಿರುನಾಳ್, ಬೆಳಿಗ್ಗೆ ರಥಸ್ವಪನ್ನ, ರಥಬಲಿ, ಯಾತ್ರಾದಾನ ಪೂರ್ವಕ ಬೆ. 10-16 ರಿಂದ 11-46 ರೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಶ್ರೀಮತ್ ಮಹಾರಥೋತ್ಸವ. 4 ರಂದು 8ನೇ ತಿರುನಾಳ್, ರಾತ್ರಿ ತೆಪ್ಪೋತ್ಸವ, ಡೋಲೋತ್ಸವ, ಕುದುರೆ ವಾಹನ, ಕಳ್ಳರಸುಲಿಗೆ ಉತ್ಸವ, 5 ರಂದು 9ನೇ ತಿರುನಾಳ್, ಬೆಳಿಗ್ಗೆ ತೀರ್ಥಸ್ನಾನ, ಶ್ರೀ ವರಹಾ ಜಯಂತಿ, ನಗರ ಶೋಧನೆ, ಸಂಧಾನ ಸೇವೆ ಹಾಗೂ 6 ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪುಷ್ಪಯಾಗ, ದ್ವಾದತಾರಾಧನೆ, ಹನುಮಂತ ವಾಹನ, ಧ್ವಜಾವರೋಹಣ, ಉದ್ವಾಸನ ಪ್ರಬಂಧ ಮೂಕಬಲಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಅರಮನೆ ಮುಜರಾಯಿ ಸಂಸ್ಥೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕೇಂದ್ರ ಮುಖ್ಯ ಗ್ರಂಥಾಲಯದಿಂದ “ವಿಶ್ವ ಪುಸ್ತಕ ದಿನ” ಆಚರಣೆ
     ಮೈಸೂರು,ಏ.23. ಮೈಸೂರಿನ ನಗರ ಕೇಂದ್ರ ಮುಖ್ಯ ಶಾಖಾ ಗ್ರಂಥಾಲಯದಲ್ಲಿ ಇಂದು ನಡೆದ “ವಿಶ್ವ ಪುಸ್ತಕ ದಿನಾಚರಣೆ” ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಸಾ.ಪ. ವಸಂತ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
   ನಗರ ಕೇಂದ್ರ ಗ್ರಂಥಾಲಯದ ಅಧೀಕ್ಷಕರಾದ ಮನು ಎಂ. ಅವರು ಮಾತನಾಡಿ ಸಾರ್ವಜನಿಕ ಓದುಗರನ್ನು ಉದ್ದೇಶಿಸಿ ಪುಸ್ತಕ ಸಂಸ್ಕøತಿ ಹಾಗೂ ಸುಪ್ರಸಿದ್ದ ಸಾಹಿತಿಯಾದ ವಿಲಿಯಂ ಷೇಕ್ಸ್‍ಪೀಯರ್ ರವರ ಯಶಸ್ಸು, ಸಾಧನೆ ಮತ್ತು ಕೀರ್ತಿಯು ಸಾಹಿತ್ಯದ ಮೂಲಕ ಅಜರಾಮರವಾಗಿದೆ ಎಂದರು.
    ಗ್ರಂಥಾಲಯ ಸಹಾಯಕರಾದ ವಿಜಯ್ ನಾಗ್ ಜಿ. ಅವರು “ಪ್ಲಾಸ್ಟಿಕ್ ಮುಕ್ತ ದಿನ” ಅಂಗವಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಸಾರ್ವಜನಿಕರಿಗೆ ತಿಳಿಸಿದರು.
     ಕಾರ್ಯಕ್ರಮದಲ್ಲಿ ಗ್ರಂಥಾಲಯದ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಶಾಸಕರಿಂದ ಮಾರಟ ಮಳಿಗೆ ಉದ್ಘಾಟನೆ


    ಮೈಸೂರು,ಏ.23. ನಗರದ ಬನ್ನಿಮಂಟಪ ‘ಸಿ’ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಜಿಲ್ಲಾ ಹಾಪ್‍ಕಾಮ್ಸ್‍ನ ಹಣ್ಣು ತರಕಾರಿ ಮಾರಾಟ ಮಳಿಗೆಯನ್ನು ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಉದ್ಘಾಟಿಸಿದರು. ಹಾಪ್‍ಕಾಮ್ಸ್‍ನ ಅಧ್ಯಕ್ಷ ಬಿ.ಪಿ. ಬೋರೇಗೌಡ, ಉಪಾಧ್ಯಕ್ಷ ಆರ್. ಸರ್ವೇಶ್, ಕೆ.ಹೆಚ್.ಎಫ್‍ನ ಉಪಾಧ್ಯಕ್ಷ ರಾಜಶೇಖರ್, ಆಡಳಿತ ಮಂಡಳಿ ನಿರ್ದೇಶಕ ಸೂರ್ಯಕುಮಾರ್, ಹೊಸಹುಂಡಿ ರಘು, ಕೆ.ಎಸ್. ನಾಗರಾಜು ಹಾಗೂ ಮಹಾನಗರ ಪಾಲಿಕೆ ಸದಸ್ಯ ಎಂ.ಡಿ. ನಾಗರಾಜ್ ಅವರು ಹಾಜರಿದ್ದರು.                                
    ಏಪ್ರಿಲ್ 26 ರಂದು ವಿಶೇಷ ಕೌನ್ಸಿಲ್ ಸಭೆ
     ಮೈಸೂರು,ಏ.23. ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಏಪ್ರಿಲ್ 26 ರಂದು ಮಧ್ಯಾಹ್ನ 3 ಗಂಟೆಗೆ ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶ
ನವದೆಹಲಿಯ ವಿಜ್ಞಾನ ಭವನದಲ್ಲಿ ಇದೇ ಭಾನುವಾರ, ಎಪ್ರಿಲ್ 24, 2016ರಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳ ಜಂಟಿ ಸಮಾವೇಶ ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ,ನ್ಯಾಯಮೂರ್ತಿ, ಶ್ರೀ. ಟಿ.ಎಸ್ ಠಾಕೂರ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವರಾದ ಶ್ರೀ. ಡಿ.ವಿ ಸದಾನಂದ ಗೌಡ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಜಂಟಿ ಸಮಾವೇಶವನ್ನು ಪ್ರಧಾನ ಮಂತ್ರಿ, ಶ್ರೀ. ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 

ದೇಶದಲ್ಲಿ ಗುಣಮಟ್ಟದ ನ್ಯಾಯವನ್ನು ಸಮರ್ಪಕವಾಗಿ ಹಾಗೂ ಸರಿಯಾದ ಸಮಯದಲ್ಲಿ ನೀಡುವಲ್ಲಿನ ತಮ್ಮ ಬೆಂಬಲವನ್ನು ಪುರ್ನ ದೃಢೀಕರಿಸಲು ನ್ಯಾಯಾಂಗ ಮತ್ತು ಕಾರ್ಯಾಂಗಗಳಿಗೆ   ಜಂಟಿ ಸಮಾವೇಶ ಉತ್ತಮ ಅವಕಾಶವಾಗಿದೆ. 

ಸಮಾವೇಶದ ಕೊನೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಮತ್ತು ನ್ಯಾಯಂಗ ಅನುಕರಿಸುವಂತಹ ಉತ್ತಮ ನಿರ್ಣಯಗಳು ರೂಪುಗೊಳ್ಳುವ ವಿಶ್ವಾಸವಿದೆ. ಸಮಾವೇಶದ ಬಳಿಕ ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವರು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಧ್ಯಮದ ಜತೆ ಸಂವಾದ ನಡೆಸಲಿದ್ದಾರೆ. 

ದೇಶದಲ್ಲಿ ಕಾನೂನು ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ಪ್ರಮುಖ ವಿಚಾರಗಳ ಚರ್ಚೆಗಾಗಿ ಇಂತಹ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ. ಸಮಾವೇಶಕ್ಕಾಗಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರುಗಳನ್ನು ಆಹ್ವಾನಿಸಲಾಗಿದೆ. 

Friday 22 April 2016

ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ

ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ
ಮೈಸೂರು,ಏ.22: ರಾಜ್ಯ ಸಚಿವ ಸಂಪುಟ ಪುನರ್‍ರಚನೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಗಳಾಂತ್ಯದಲ್ಲಿ ಸಂಪುಟ ಪುನರ್‍ರಚನೆಗೆ ಮುಂದಾಗಿದ್ದೆ. ಆದರೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಹಾಗಾಗಿ ಸಂಪುಟ ಪುನರ್‍ರಚನೆ ಪ್ರಕ್ರಿಯೆಯನ್ನು ಮುಂದೂಡಿರುವುದಾಗಿ ಹೇಳಿದರು.
ಸದ್ಯಕ್ಕೆ ದೆಹಲಿ ಪ್ರವಾಸ ಕೈಗೊಳ್ಳುವ ಯಾವುದೇ ಯೋಜನೆ ಇಲ್ಲ. ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸುವುದಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ಬರ ಪರಿಹಾರ ಪೂರ್ಣಗೊಳ್ಳುವವರೆಗೂ ಸಂಪುಟ ಪುನರ್‍ರಚನೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹಾ. ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾಗಿದೆ. ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂಬುದು ವದಂತಿ ಎಂದರು.
ರಾಜ್ಯದಲ್ಲಿ ಈಗಾಗಲೇ ಏಳು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ಕಾರ್ಯ ನಡೆಸಲಾಗಿದೆ. ಏ.25, 26,27ರಂದು ಎರಡನೇ ಹಂತದ ಬರ ಪರಿಸ್ಥಿತಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುವುದು. ಬರ ಅಧ್ಯಯನ ನಂತರ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಬರ ಪರಿಸ್ಥಿತಿ ಕುರಿತು ಮೂರನೇ ಹಂತದ ಸಮೀಕ್ಷೆ ನಡೆಸಲು ಸಚಿವರ ಅಧ್ಯಕ್ಷತೆಯಲ್ಲಿ ನಾಲ್ಕು ಸಮಿತಿಗಳನ್ನು ನೇಮಕ ಮಾಡಲಾಗುವುದು. ಮೈಸೂರು ವಿಭಾಗಕ್ಕೆ ಸಚಿವ ಟಿ.ಬಿ.ಜಯಚಂದ್ರ, ರಾಯಚೂರು-ಎಚ್.ಕೆ.ಪಾಟೀಲ್, ಬೆಂಗಳೂರು-ಶ್ರೀನಿವಾಸ್ ಪ್ರಸಾದ್, ಬೆಳಗಾವಿ-ಗುಲ್ಬರ್ಗಾ ವಿಭಾಗಕ್ಕೆ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಮಿತಿ ಮೇ 2ರ ನಂತರ ಸಮೀಕ್ಷೆ ನಡೆಸಿ ವರದಿ ನೀಡಲಿವೆ ಎಂದರು.
ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ, ಪರಿಶೀಲನೆ ಕೈಗೊಂಡ ನಂತರ ಬರಹಾನಿ ಪರಿಹಾರವನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ ರಾಜ್ಯ ಸರ್ಕಾರ 350 ಕೋಟಿ ರೂ. ವೆಚ್ಚದಲ್ಲಿ ಬರಪರಿಹಾರ ಕೈಗೊಂಡಿದೆ. ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದಿಲ್ಲ, ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಲಾಗುವುದೆಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪ್ರಕರಣ ಕುರಿತು ಮೇಲ್ಮನವಿ ಸಲ್ಲಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು. ಅನಂತರ ಮೇಲ್ಮನೆಗೆ ಸಲ್ಲಿಸಲಾಗುವುದು. ಅವರು ಪಕ್ಷದ ಅಧ್ಯಕ್ಷರಾಗುವ ಮುನ್ನವೇ ಈ ಬಗ್ಗೆ ಚಿಂತನೆ ನಡೆದಿತ್ತು. ಈ ವಿಚಾರದಲ್ಲಿ ದೇಶದ ರಾಜಕಾರಣ ನಡೆಸುತ್ತಿಲ್ಲ. ಎಲ್ಲರಿಗೂ ಸಹ ಕಾನೂನು ಒಂದೇ ಎಂದರು.
ಲೋಕಾಯುಕ್ತ ಸಂಸ್ಥೆಯಲ್ಲಿ ರಚಿಸಲಾಗಿರುವ ಭ್ರಷ್ಠಾಚಾರ ನಿಗ್ರಹ ದಳಕ್ಕೆ ಅಗತ್ಯ ಸಿಬ್ಬಂದಿಯನ್ನು ಹಾಗೂ ಸವಲತ್ತುಗಳನ್ನು ಹಂತ ಹಂತವಾಗಿ ದೊರಕಿಸಿಕೊಡಲಾಗುವುದು. ಈಗಾಗಲೇ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ನಿರತರಾಗಿದ್ದಾರೆ ಎಂದು ಅವರು, ಮೈಸೂರು ಜಿಲ್ಲಾ ಪಂಚಾಯಿತಿ ಮೀಸಲು ಬದಲಾವಣೆ ವಿಚಾರದಲ್ಲಿ ಮಹಿಳೆಯರಿಗೆ ಅಧಿಕಾರ ದೊರಕಿಸಿಕೊಡುವುದು ತಪ್ಪೇ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಎದುರು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ. ಸಣ್ಣ ಪುಟ್ಟ ವಿಚಾರಕ್ಕೆ ರೈತರು ಆತ್ಮಹತ್ಯೆಗೆ ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.

Thursday 14 April 2016

ಉಪನ್ಯಾಸಕರ ಮೌಲ್ಯಮಾಪನ ಬಹಿಷ್ಕಾರ ಅರ್ಥಮಾಡಿಕೊಳ್ಳಿ -ಹೊಳಲು ಶ್ರೀಧರ್

ಉಪನ್ಯಾಸಕರ ಮೌಲ್ಯಮಾಪನ ಬಹಿಷ್ಕಾರ ಅರ್ಥಮಾಡಿಕೊಳ್ಳಿ
‘ಹಿರಿಯ ನಾನೆನಬೇಡ,ಗುರುವ ನಿಂದಿಸಬೇಡ,ಬರೆವವನ ಕೂಡ ಹಗೆ ಬೇಡ,ಬಂಗಾರದೆರವು ಬೇಡೆಂದ ಸರ್ವಜ್ಞ’ ಎಂಬುದು ಗುರುಗಳನ್ನು ನಿಂದಿಸುವವರಿಗೆ ಸರ್ವಜ್ಞ ಹೇಳಿರುವ ಮಾತುಗಳು.
  ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ,ಪರೀಕ್ಷೆ ನಡೆಸುತ್ತಾರೆ,ಮೌಲ್ಯಮಾಪನ ನಡೆಸುತ್ತಾರೆ. ಶಿಕ್ಷಕರು ಪಾಠ ಮಾಡ್ತಾರೆ ಸಂಬಳ ತೆಗೆದುಕೊಳ್ತಾರೆ  ಎಂಬುದು ಸಾಮಾನ್ಯ ಅಭಿಪ್ರಾಯ. ಶಿಕ್ಷಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುತ್ತಾನೆ.ಗುರು ಶಿಷ್ಯರ ಸಂಬಂಧ ಹೇಗಿರುತ್ತದೆ ಎಂಬುದನ್ನು ಅನುಭವಿಸಿದವರಿಗೇ ಗೊತ್ತು. ವಿದ್ಯಾರ್ಥಿಗಳೊಂದಿಗೆ ಸರಿಸುಮಾರು 7-8 ಗಂಟೆ ಕಾಲ ಕಳೆಯುವ ನಾವು ಅವರ ಆಟ-ಪಾಠ,ನೋವು-ನಲಿವು,ಆಸಕ್ತಿ-ಅನಾಸಕ್ತಿ,ಆರೋಗ್ಯ-ಅನಾರೋಗ್ಯ,ಸೋಲು –ಗೆಲುವು ಹೀಗೆ  ಪ್ರÀತಿ ಹಂತದಲ್ಲಿಯೂ ಶಿಕ್ಷಕನಾಗಿಯಷ್ಟೇ ಅಲ್ಲ ಒಡನಾಡಿಗಳಂತೆಯೇ ಇರುತ್ತೇವೆ.ಪೋಷಕರಿಗೂ ಇಲ್ಲದ ಕಾಳಜಿಯನ್ನು ನಾವು ಹೊಂದಿರುತ್ತೇವೆ.ಅವೆಲ್ಲವನ್ನು ಇಲ್ಲಿ ವಿವರಿಸಲು ನಿಲುಕದಷ್ಟಿವೆ.
    ಈ ರೀತಿಯ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಕನ ಸಾಮಾಜಿಕ,ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿರಬೇಕಾದುದನ್ನು ಎಲ್ಲರೂ ಒಪ್ಪಬೇಕು.ಸಾಮಾಜಿಕ ಗೌರವವೇನೋ ಸಾಕಷ್ಟಿಲ್ಲದಿದ್ದರೂ ತೃಪ್ತಿಕರವಾಗಿದೆ.ಶಿಕ್ಷಕರೂ ಮನೆ, ಮಠ, ಮಡದಿ, ಮಕ್ಕಳು, ಸಂಸಾರ, ಕಷ್ಟ ಸುಖಗಳನ್ನು ಹೊಂದಿರುವ ಸಾಮಾನ್ಯ ಪ್ರಜೆಯೂ ಹೌದು.ಆತನ ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದಾಗ ಮಾತ್ರ ಆತ ತರಗತಿಗಳಲ್ಲಿ ಉತ್ತಮವಾಗಿ ಸಂತೃಪ್ತಿಯಿಂದ ಕಾರ್ಯ ನಿರ್ವಹಿಸಬಲ್ಲ. ಶಿಕ್ಷಣ ಇಲಾಖೆ ‘ಅನುತ್ಪಾದಕ ಖಾತೆ’ ಎಂಬ ಧೋರಣೆ ಹೊಂದಿರುವ ಕೆಲವರು ಇತರ ಕೆಲವು ಇಲಾಖೆಗಳ ನೌಕರರಿಗೆ ಬೆಣ್ಣೆ,ಶಿಕ್ಷಕರಿಗೆ ಸುಣ್ಣ ಎಂಬ ನಿಲುವು ಹೊಂದಿವೆ.ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ಒಂದೇ ವೇತನ ಪಡೆಯುತ್ತಿದ್ದ ನಮ್ಮ ಜೊತೆಗಿದ್ದ ತಹಶೀಲ್ದಾರ್,ಪಶುವೈದ್ಯರು,ಕಿರಿಯ ಇಂಜಿನಿಯರ್,ಸಬ್ ಇನ್‍ಸ್ಪೆಕ್ಟರ್ ಎಲ್ಲರ ವೇತನವೂ ಒಂದೇ ಆಗಿತ್ತು ನಂತರ ಈ ಗುಂಪಿನ ನೌಕರರು ಯಾವುದೇ ಮುಷ್ಕರಗಳಿಲ್ಲದೇ(!) ತಮ್ಮ ವೇತನ ಹೆಚ್ಚಿಸಿಕೊಂಡು ನಮಗಿಂತ ಸಾಕಷ್ಟು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಅವರಿಗೂ ನಮಗೂ ಇರುವ ವೇತನ ತಾರತಮ್ಯ ಸರಿಪಡಿಸಿ ಎಂಬುದಷ್ಟೇ ನಮ್ಮ ಬೇಡಿಕೆ.ಸಂಬಳ ಹೆಚ್ಚು ಮಾಡಿ ಎಂಬುದಲ್ಲ.ತಾರತಮ್ಯ ಸರಿಪಡಿಸಲು ಸರ್ಕಾರವೇ ನೇಮಿಸಿದ ಧಿಕಾರಿ ಕುಮಾರ್ ನಾಯಕ್ ಸಮಿತಿ ಸಾಕಷ್ಟು ಅಧ್ಯಯನ ನಡೆಸಿ ತಾರತಮ್ಯ ಒಪ್ಪಿಕೊಂಡು ಸರಿಪಡಿಸಲು ಶಿಫಾರಸು ವರದಿ ಮಾಡಿ ಐದಾರು ವರ್ಷಗಳೇ ಕಳೆದಿವೆ.ನಾಲ್ಕು ಇಕ್ರಿಮೆಂಟ್ ಗಳನ್ನು ಮೂಲವೇತನದಲ್ಲಿ ವಿಲೀನ ಮಾಡಲು ತಿಳಿಸಿದೆ.ಇದರ ಜೊತೆಗೆ ಬೇರೆ ಶಿಫಾರಸುಗಳೂ ಇವೆ.ಅದೆಲ್ಲವನ್ನೂ ಬಿಟ್ಟು ಕೇವಲ ವೇತನ ತಾರತಮ್ಯವನ್ನು ಯಥಾವತ್ ಜಾರಿಗೆ ತನ್ನಿ ಎಂಬುದಾಗಿತ್ತು.ಈ ಸಂಘರ್ಷದ ನಡುವೆ ಸಂಘ ಸ್ವಲ್ಪ ಹಿಂದೆ ಸರಿದು ಪೂರ್ತಿಯಲ್ಲದಿದ್ದರೂ ಅದನ್ನು ಸ್ವಲ್ಪವಾದರೂ ಸರಿಪಡಿಸುವಂತೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿ ಅನುಷ್ಟಾನಗೊಳಿಸಿ ಎಂದು ಒತ್ತಾಯಿಸುತ್ತಿದ್ದೇವೆ.ಒಟ್ಟಿನಲ್ಲಿ ನಮ್ಮ ಹೋರಾಟ ವೇತನ ತಾರತಮ್ಯಕ್ಕಾಗಿ ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ!
 ಶಿಕ್ಷಕರು ಪ್ರತಿ ವರ್ಷ ಮೌಲ್ಯಮಾಪನ ಬಹಿಷ್ಕಾರ ಮಾಡುತ್ತಾರೆ ಎಂಬುದರಲ್ಲಿಯೂ ಹುರುಳಿಲ್ಲ.ಹಿಂದಿನ ವರ್ಷಗಳಲ್ಲಿ ತರಗತಿ ಬಹಿಷ್ಕರಿಸಿದ್ದೇವೆ,ಧರಣಿ ಮಾಡಿದ್ದೇವೆ,ಉಪವಾಸ ಕುಳಿತಿದ್ದೇವೆ,ಕಪ್ಪುಪಟ್ಟಿ ಧರಿಸಿ ಪರೀಕ್ಷೆ ನಡೆಸಿದ್ದೇವೆ,ನೂರಾರು ಮನವಿ ಕೊಟ್ಟಿದ್ದೇವೆ.ಆ ಸಂದರ್ಭದಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ.ಆ ಕಾರಣಕ್ಕಾಗಿ ಮಧ್ಯೆ ಮಧ್ಯೆ ಮಾತ್ರ ಮೌಲ್ಯಮಾಪನ ಬಹಿಷ್ಕಾರ ನಡೆಸಿಯೂ ವಿಫಲರಾಗಿದ್ದೇವೆ!ಪ್ರತಿ ಸಂದರ್ಭದಲ್ಲಿಯೂ ಸರ್ಕಾರಗಳ ಭರವಸೆ ನಂಬಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆದಿದ್ದೇವೆ.ಕಳೆದ ವರ್ಷ ಒಂದೇ ಒಂದು ದಿನ ಬಹಿಷ್ಕಾರ ನಡೆಸಿ ಮುಖ್ಯಮಂತ್ರಿಗಳ ಭರವಸೆ ನಂಬಿ ಹಿಂದೆ ಸರಿದಿದ್ದೇವೆ. ಅವುಗಳೆಲ್ಲವೂ ಜನರ ಮನಸ್ಸಿನಿಂದ ಮಾಸಿ ಹೋಗಿ ಆಯಾ ವರ್ಷಗಳ ಮೌಲ್ಯಮಾಪನ ಬಹಿಷ್ಕಾರ ಎಂದಾಗ ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಹತ್ತಿಪ್ಪತ್ತು ವರ್ಷಗಳ ನ್ಯಾಯಯುತ ಹೋರಾಟ ಫಲ ನೀಡುತ್ತಿಲ್ಲ ಎಂದರೆ ಶಿಕ್ಷಕರ ಸಹನೆ ಸ್ಫೋಟಗೊಳ್ಳುವುದಿಲ್ಲವೇ?ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೋಷಕರು ನಮ್ಮ ಬಗ್ಗೆ ಅನುಕಂಪ ಮಾತ್ರ ವ್ಯಕ್ತಪಡಿಸದೇ ಖಳನಾಯಕರನ್ನಾಗಿಯೇ ನೋಡುವುದೇಕೆ?ಆದರೆ ಈ ವರ್ಷ ಸಾರ್ವಜನಿಕರ ಬೆಂಬಲ,ಅನುಕಂಪದ ನುಡಿಗಳು ಕೇಳಿಬರುತ್ತಿವೆ.ಮಾಧ್ಯಮಗಳೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ನಾವಾಗಿಯೇ ಈಡೇರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಈ ವರ್ಷದ ಬಹಿಷ್ಕಾರ ಹೆಚ್ಚು ದಿನ ಮುಂದುವರೆದುಕೊಂಡು ಬಂದು ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ನಿಲುವು ನಾಯಕರುಗಳಲ್ಲಿ ಮತ್ತು ಶಿಕ್ಷಕ ವರ್ಗದಲ್ಲಿ ಅನಿವಾರ್ಯವಾಗಿ ಎಡೆಯೆತ್ತಿದೆ.ಇದಕ್ಕೆ ವ್ಯವಸ್ಥೆ ಕಾರಣವೇ ಹೊರತು ಶಿಕ್ಷಕರದಲ್ಲ ಎಂಬ ಅಂಶವನ್ನು ಎಲ್ಲರೂ ಮನಗಾಣಬೇಕಿದೆ.
  ವರ್ಷಪೂರ್ತಿ ವಿದ್ಯಾರ್ಥಿಗಳ ಬಗೆಗಿನ ಎಲ್ಲಾ ಕಾಳಜಿಗಳನ್ನು ಹೊರುವ ನಾವು ಅವರನ್ನು ಮುಂದಿಟ್ಟುಕೊಂಡು ಚೆಲ್ಲಾಟವಾಡಲು ಹೊರಟಿಲ್ಲ.ಅವರಿದ್ದರೆ ನಾವು ಎಂಬ ಅರಿವಿದೆ.ಶಿಕ್ಷಕರಿಗೆ ವಿದ್ಯಾರ್ಥಿಗಳ  ಬಗ್ಗೆ ಕಾಳಜಿ ಇಲ್ಲ ಎಂಬುದರಲ್ಲಿ ಯಾವ ಹುರುಳೂ ಇಲ್ಲ.ಅದನ್ನು ಬೇರೆಯವರಿಂದ  ಹೇಳಿಸಿಕೊಳ್ಳುವಷ್ಟು ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ.ನಮ್ಮ ಜವಾಬ್ದಾರಿಯ ಅರಿವು ನಮಗೆ ಸ್ಪಷ್ಟವಾಗಿ ಇದೆ.ಆದರೂ ಮುಷ್ಕರದ ಅನಿವಾರ್ಯತೆ ಉಂಟಾಗಿದೆ.
   ಸಮಾನ ಕೆಲಸಕ್ಕೆ ಸಮಾನ ವೇತನ,ವೇತನ ತಾರತಮ್ಯ ನಿವಾರಣೆಯಾಗಲಿ ಎಂಬ ನಮ್ಮ ಪ್ರಯತ್ನದಲ್ಲಿ ತಪ್ಪು ಹುಡುಕುವುದು ಬೇಡ.ಈ ಬೇಡಿಕೆ ಈಗ ಈಡೇರದಿದ್ದರೆ ಮುಂದಿನ ವರ್ಷ ರಚನೆಯಾಗುವ ಏಳನೇ ವೇತನ ಆಯೋಗದಲ್ಲಿ ಈ ತಾರತಮ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂಬ ಮನೋಭಾವ ಬಂದಿರುವುದರಿಂದ ಹೋರಾಟ ತೀವ್ರವಾಗಿದೆ.ಇದು ನ್ಯಾಯಯುತ ಬೇಡಿಕೆ ಎಂಬುದು ಮುಖ್ಯಮಂತ್ರಿಗಳಿಗೆ,ಶಿಕ್ಷಣ ಸಚಿವರಿಗೆ,ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಮನವರಿಕೆಯಾಗಿದೆ, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.ಬೇಡಿಕೆ ಈಡೇರುವ ನಿರೀಕ್ಷೆ ಇದೆ.ನಿರ್ದಿಷ್ಟ ಸಮಯಕ್ಕೆ ಫಲಿತಾಂಶವೂಬರುತ್ತದೆ.ವಿದ್ಯಾರ್ಥಿಗಳು,ಸಾರ್ವಜನಿಕರು,ಮಾಧ್ಯಮಗಳು,ಸಂಘಸಂಸ್ಥೆಗಳು  ನಮ್ಮ ಬಗ್ಗೆ ತಪ್ಪು ತಿಳುವಳಿಕೆ ಹೊಂದುವುದು
 ಬೇಡ ಅರ್ಥಮಾಡಿಕೊಳ್ಳಿ ಎಂಬುದಷ್ಟೇ ಶಿಕ್ಷಕರ ಮನವಿ.


                                                                     -ಹೊಳಲು ಶ್ರೀಧರ್
                                                                   

 
 

     
   






 
 














Sunday 10 April 2016

ಭೇರ್ಯ,ಏ,10- ಗಂಧನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಿಂದ 1.25 ಕೋಟಿ ಹಣ ಬಿಡುಗಡೆ ಮಾಡಿದ್ದು ಅತಿಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ತಾ.ಪಂ.ಮಾಜಿಸದಸ್ಯ ಗಾಂಧಿಶಿವಣ್ಣ ಮತ್ತು ಡೈರಿಮಹದೇವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ 1.25 ಕೋಟಿ ಹಣ ವೆಚ್ಚದ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರ ದಿನೇಶ್‍ಕಾರ್ಲೆ ಎಂಬುವರಿಗೆ ಟೆಂಡರ್ ನಿಗದಿಯಾಗಿದೆ ಎಂದ ಅವರು ದಿ|| ಮಂಚನಹಳ್ಳಿ ಮಹದೇವ್ ಮತ್ತು ದಿ|| ಜಿ.ಕೆ.ಕೃಷ್ಣ ಅವರ ಬಹುದಿನಗಳ ಕನಸ್ಸು ಇಂದು ನನಸ್ಸಾಗುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ 1.25 ಕೋಟಿ ಹಣ ಬಿಡುಗಡೆ ಮಾಡಲು ಸಹಕರಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಆರೋಗ್ಯ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ಸಂಸದ ಅಡಗೂರು ವಿಶ್ವನಾಥ್, ತಾಲ್ಲೂಕಿನ ಮಾನ್ಯ ಶಾಸಕರಾದ ಸಾ.ರಾ.ಮಹೇಶ್, ಕಾಂಗ್ರೆಸ್ ಹಿರಿಯ ಮುಖಂಡ ದೊಡ್ಡಸ್ವಾಮೀಗೌಡ ಇವರುಗಳಿಗೆ ಗಂಧನಹಳ್ಳಿ ಗ್ರಾಮಸ್ಥರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

Saturday 9 April 2016

 ಮಹಿಳಾ ಆಯೋಗದಿಂದ ಏಪ್ರಿಲ್ 22 ಹಾಗೂ 23 ರಂದು ಕಾರ್ಯಾಗಾರ
ಮೈಸೂರು, ಏಪ್ರಿಲ್ 7. ರಾಜ್ಯ ಮಹಿಳಾ ಆಯೋಗ, ಮೈಸೂರು ಜಿಲ್ಲಾಡಳಿತ ಹಾಗೂ ಮೈಸುರು ವಿಶ್ವ ವಿದ್ಯಾನಿಲಯದ ಸಂಯುಕ್ತಾಶ್ರಯಲ್ಲಿ ಏಪ್ರಿಲ್ 22 ಹಾಗೂ 23 ರಂದು ಮೈಸೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ಸೆನೆಟ್ ಭವನದಲ್ಲಿ “ಮಾನಕ ಹಕ್ಕುಗಳ ನೆಲೆಯಲ್ಲಿ ಮಹಿಳೆ ಮತ್ತು ಮಹಿಳಾ ಕಾನೂನು” ಹೆಸರಿನಡಿ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
  ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಆಯೋಗ ಅಧ್ಯಕ್ಷರಾದ ಮಂಜುಳ ಮಾನಸ ಅವರು ರಾಜ್ಯ ಮಹಿಳಾ ಆಯೋಗವು ರಾಜ್ಯದ ಎಲ್ಲಾ ಕಂದಾಯ ವಿಭಾಗ ಹಾಗೂ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಜವಾಬ್ದಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈಗಾಗಲೇ ಸಾಕಷ್ಟು ಕಾರ್ಯಾಗಾರವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯಶಸ್ವಿವಾಗಿ ನಡೆಸಿದೆ ಎಂದರು.
 “ಮಾನಕ ಹಕ್ಕುಗಳ ನೆಲೆಯಲ್ಲಿ ಮಹಿಳೆ ಮತ್ತು ಮಹಿಳಾ ಕಾನೂನು” ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಾಯ ಅಗತ್ಯ. ಈ ಸಂಬಂಧ 4 ಸಮಿತಿಗಳನ್ನು ಶೀಘ್ರ ರಚಿಸುವ ಮೂಲಕ ಸದಸ್ಯರನ್ನು ನೇಮಕ ಮಾಡಿ ಜವಾಬ್ದಾರಿ ನೀಡಬೇಕಿದೆ. ಮಹಿಳೆಯರ ಮೇಲೆ ಇಂದಿಗೂ ಶೋಷಣೆ ಮತ್ತು ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಕೇವಲ ರಾಜ್ಯ ಮಹಿಳಾ ಆಯೋಗದಿಂದ ಸಾಧ್ಯವಿಲ್ಲ. ಸಂಬಂಧಪಟ್ಟ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳೆಯರ ಸಂಘ ಸಂಸ್ಥೆಗಳೊಂದಿಗೆ ಎಲ್ಲರೂ ಕೈಜೋಡಿಸಿಬೇಕು ಎಂದು ಹೇಳಿದರು.
 ಜಿಲ್ಲಾಧಿಕಾರಿ ಸಿ.ಶಿಖಾ ಮಾತನಾಡಿ ಮಹಿಳೆ ಮತ್ತು ಮಹಿಳಾ ಕಾನೂನುನಿಗೆ ಸಂಬಂಧಿಸಿದಂತೆ ಎರಡು ದಿನಗಳು ವಿಷಯ ತಜ್ಞರನ್ನು ಆಹ್ವಾನಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಕಾನೂನಿ ಬಗ್ಗೆ ಜಾಗೃತಿಗೊಳಿಸಬೇಕಿದೆ. ರಾಜ್ಯ ಮಹಿಳಾ ಆಯೋಗವು ಉತ್ತಮ ಸಂದೇಶ ಸಾರುವ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ಆಯೋಜಿಸಲು ಮುಂದೆ ಬಂದಿರುವು ಒಳ್ಳೆಯ ಬೆಳವಣಿಗೆ. ಸಾಕಷ್ಟು ಸಮಯವಿರುವುದರಿಂದ ಈ ಎರಡು ದಿನಗಳ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಬಹುದು ಎಂದು ಹೇಳಿದರು.
  ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಹಿಂದೆ ಬಹಳಷ್ಟು ಕಾರ್ಯಕ್ರಮಗಳನ್ನು ಸಂಘಟಿತವಾಗಿ ನಿರ್ವಹಿಸಿದ್ದಾರೆ. ಈ ಕಾರ್ಯಾಗಾರ ಕುರಿತು ಯೋಜನೆಗಳನ್ನು ರೂಪಿಸಿ ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಮಹಿಳಾ ಕಾನೂನುಗಳ ಬಗ್ಗೆ ಸಾಕಷ್ಟು ಮಹಿಳೆಯರಲ್ಲಿ ಮಾಹಿತಿಯಿಲ್ಲ. ಈ ಕೊರತೆಯಿಂದಾಗಿ ಸಮಾಜದಲ್ಲಿ ಇಂದಿಗೂ ಮಹಿಳೆಯರು ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಗಾದರೂ ಯಾವುದೂ ಬೆಳಕೆಗೆ ಬರುತ್ತಿಲ್ಲ. ಮೊದಲು ಮಹಿಳೆಯರು ಮಹಿಳಾ ಕಾನೂನು ಹಾಗೂ ಇತರೆ ವಿಷಯಗಳ ಬಗ್ಗೆ ಜಾಗೃತಗೊಳಿಸಬೇಕು ಎಂದು ತಿಳಿಸಿದರು.
  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ರಾಧಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಲಾ ಮಠಪತಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.    
ಜಿ.ಪಂ. ಅಧಿಕಾರ ಚುಕ್ಕಾಣಿಗಾಗಿ ಸಚಿವ ಪ್ರಸಾದ್ ನೇತೃತ್ವದಲ್ಲಿ ರಹಸ್ಯ ಸಭೆ
ಮೈಸೂರು,ಏ.9- ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಅಧ್ಯಕ್ಷರು ಉಪಾಧ್ಯಕ್ಷರುಗಳ ಹುದ್ದೇಗಾಗಿ ಈಗಾಗಲೇ ಮೀಸಲಾತಿ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ  ಬಹುಮತ ಬಾರದೆ ಅತಂತ್ರಸ್ಥಿತಿಯಲ್ಲಿರುವ  ಜಿಲ್ಲೆ, ತಾಲ್ಲೂಕುಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ, ಜೆಡಿಎಸ್.ಅಧಿಕಾರದ ಚುಕ್ಕಾಣಿ ಹಿಡಿಯುವುದು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಮೈಸೂರು ಜಿಲ್ಲಾ ಪಂಚಾಯಿತಿಯ ಅಧಿಕಾರ ಹಿಡಿಯಲು ಕಾಂಗ್ರೆಸ್ ರಣತಂತ್ರ ನಡೆಸುತ್ತಿದ್ದು, ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ರವರು ಇಂದು ನಗರದ ಖಾಸಗಿ ಹೊಟೆಲ್ ವೊಂದರಲ್ಲಿ ಪಕ್ಷದ ಮುಖಂಡರು, ಶಾಸಕರುಗಳು, ಸದಸ್ಯರುಗಳೊಂದಿಗೆ  ರಹಸ್ಯ ಮಾತುಕತೆ ನಡೆಸಿದ್ದಾರೆ.
 ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನ  ಬಿಸಿಎಂ-ಎ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ  ಮೀಸಲಿರುವುದರಿಂದ ಜೆಡಿಎಸ್, ಬಿಜೆಪಿ ಪಕ್ಷದಲ್ಲಿ ಬಿಸಿಎಂ-ಎ ಗೆ ಸೇರಿದ ಸದಸ್ಯರು ಯಾರು ಇಲ್ಲ. ಇದನ್ನೇ ಉಪಯೋಗಿಸಿಕೊಂಡ ಕಾಂಗ್ರೆಸ್ ಮೈಸೂರು ಜಿಪಂನ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ನಡೆಸುತ್ತಿದೆ,
 ಮೈ.ಜಿ.ಪಂನ ಅಧಿಕಾರ ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಒಲಿಯುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ, ಸಚಿವರ ನೇತೃತ್ವದಲ್ಲಿ ಇಂದು ಧೀರ್ಘಕಾಲ ಚರ್ಚೆನಡೆಸಿ, ಬಹುಮತ ಸಾಭಿತು ಪಡಿಸಲು ಯಾವ ಪಕ್ಷ ದವರನ್ನು ಬೆಂಬಲಕ್ಕೆ  ಆಹ್ವಾನಿಸಬೇಕು, ಅಥವಾ ಆಪರೇಷನ್ ಕಾಂಗ್ರೆಸ್ ಮಾಡಬೇಕೇ ಎಂಬ ಬಗ್ಗೆ ಮಾತುಕತೆಗಳು ನಡೆದವು. ಮುಂದೆ ಏನಾಗುವುದು ಎಂಬುದನ್ನು ಕಾದು ನೊಡೋಣ.
 ಇಂದಿನ ಸಭೆಯಲ್ಲಿ ಶಾಸಕರುಗಳಾದ ವಾಸು, ಎಂ.ಕೆ. ಸೋಮಶೇಖರ್, ತನ್ವೀರ್‍ಸೇಠ್, ಎಂ.ಎಲ್.ಸಿ ಧರ್ಮಸೇನಾ ಹಾಗೂ ಇತರ ಮುಖಂಡರು, ಜಿ.ಪಂ ಸದಸ್ಯರುಗಳು, ಹಾಜರಿದ್ದರು.