Monday 25 August 2014

ಕೆ.ಆರ್.ಪೇಟೆ ಸುದ್ದಿ.

ಕೃಷ್ಣರಾಜಪೇಟೆ. ಪುರಸಭೆಯ ವ್ಯಾಪ್ತಿಯಲ್ಲಿ ಹೇಮಾವತಿ ಬಡಾವಣೆಯಲ್ಲಿ ಕಾನೂನುಬಾಹಿರವಾಗಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಅಕ್ರಮ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೇ ನೆಲಸಮ ಮಾಡಲಾಗುವುದು. ಈ ಸಂಬಂಧ ಮುಖ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‍ಪಿ ಪಿ.ಗಿರಿಜೇಶ್ ಎಚ್ಚರಿಕೆ ನೀಡಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಲೋಕಾಯುಕ್ತರ ಇಂದಿನ ಸಭೆಗೆ ಬಹುತೇಕ ಅಧಿಕಾರಿಗಳು ಭಾಗವಹಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಗಿರಿಜೇಶ್ ನಾವು ಆಟವಾಡಿಕೊಂಡು ಜನರ ಮುಂದೆ ನಾಟಕ ಮಾಡಿಕೊಂಡು ಹೋಗಲು ಬಂದಿಲ್ಲ, ಇಂದಿನ ಸಭೆಗೆ ಗೈರು ಹಾಜರಾಗಿರುವ ವಿವಿಧ ಇಲಾಖೆಗಳ ಮುಖ್ಯಸ್ಥರುಗಳಿಗೆ ಶೋಕಾಸ್ ನೋಟೀಸ್ ನೀಡಿ ಮುಂದಿನ ಸಭೆಗೂ ಗೈರು ಹಾಜರಾದರೆ ಏನುಮಾಡಬೇಕೆಂಬುದು ಗೊತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಉಪತಹಶೀಲ್ದಾರ್ ಗೋಪಾಲ್ ಅವರಿಗೆ ನಿರ್ದೇಶನ ನೀಡಿದರು. ಪುರಸಭೆಯಲ್ಲಿ ವ್ಯಾಪಕವಾದ ಭ್ರಷ್ಠಾಚಾರಗಳು ನಡೆಯುತ್ತಿರುವ ಬಗ್ಗೆ ಸದಸ್ಯರು ದೂರು ನೀಡಿದ್ದಾರೆ, ಹೊಸಹೊಳಲು ಚಿಕ್ಕಕೆರೆಯ ಅಭಿವೃಧ್ಧಿ ಮತ್ತು ತಡೆಗೋಡೆ ನಿರ್ಮಾಣ ಕೆಲಸ ಸಂಪೂರ್ಣಗೊಳ್ಳದಿದ್ದರೂ 10ಲಕ್ಷರೂ ಬಿಲ್ ಪಾವತಿಸಲಾಗಿದೆ, ಪಟ್ಟಣದ ಕೋಳಿ ಮಾಂಸದ ಅಂಗಡಿ ಮತ್ತು ಮಾಂಸದ ಅಂಗಡಿಯ ಹರಾಜಿನಲ್ಲಿ ಲಕ್ಷಾಂತರ ರೂ ಲಂಚ ಪಡೆಯಲಾಗಿದೆ ಎಂದು ಸದಸ್ಯರಾದ ಹೆಚ್.ಆರ್.ಲೋಕೇಶ್, ಚೆಲುವರಾಜು, ನಾಗರಾಜು ಮತ್ತು ಕೆ.ಆರ್.ಹೇಮಂತಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ನೀವೇನು ಮಾಡುತ್ತಿದ್ದೀರಿ, ದಕ್ಷ ಹಾಗೂ ಪಾರದರ್ಶಕ ಆಡಳಿತ ನಡೆಸಿ ಜನರ ಪ್ರೀತಿವಿಶ್ವಾಸಕ್ಕೆ ಪಾತ್ರರಾಗಿ ಎಂದು ಸಭೆಯಲ್ಲಿದ್ದ ಅಧ್ಯಕ್ಷ ಕೆ.ಗೌಸ್‍ಖಾನ್ ಅವರಿಗೆ ಕಿವಿಮಾತು ಹೇಳಿದರು.
ಕಳೆದ 15 ವರ್ಷಗಳಿಂದ ಪುರಸಭೆ ಮತ್ತು ತಾಲೂಕು ಪಂಚಾಯಿತಿ ಒಡೆತನದ ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಿಲ್ಲ, 500ರೂ ಬಾಡಿಗೆಯನ್ನು ಪುರಸಭೆಗೆ ಪಾವತಿಸುತ್ತಿರುವ ಬಾಡಿಗೆದಾರರು ಐದಾರು ಸಾವಿರ ರೂಗಳಿಗೆ ವಾಣಿಜ್ಯ ಮಳಿಗೆಗಳನ್ನು ಸಬ್ ಲೀಸ್ ಮಾಡಿದ್ದಾರೆ, ಇದರಿಂದಾಗಿ ವಾರ್ಷಿಕ ಪುರಸಭೆಗೆ ಕೋಟ್ಯಾಂತರ ರೂ ನಷ್ಠವಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಂಡು ಮಳಿಗೆಗಳನ್ನು ಮತ್ತೆ ಬಹಿರಂಗ ಹರಾಜುಮಾಡಿಸಿ ಎಂದು ಆಗ್ರಹಿಸಿ ವಕೀಲ ಧನಂಜಯ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು. ಮಾದಾಪುರಕೊಪ್ಪಲು ಗ್ರಾಮದಲ್ಲಿ ತಾನು ಬೇಸಾಯ ಮಾಡಲು ತನ್ನ ಒಡಹುಟ್ಟಿದ ತಮ್ಮನೇ ತೊಂದರೆ ನೀಡುತ್ತಿದ್ದಾನೆ. ಪೋಲಿಸರು ನನಗೆ ರಕ್ಷಣೆ ನೀಡುತ್ತಿಲ್ಲ, ನ್ಯಾಯಾಲಯಗಳಲ್ಲಿ ನನ್ನಂತೆ ಡಿಕ್ರಿಯಾಗಿದೆ, ದಯಮಾಡಿ ನನ್ನ ಜಮೀನಿನಲ್ಲಿ ಬೇಸಾಯ ಮಾಡಿ ನನ್ನ ಹೊಟ್ಟೆಯ ಜೀವನ ನಡೆಸಲು ಅನುವು ಮಾಡಿಸಿಕೊಡಿ ಎಂದು ವಯೋವೃಧ್ಧೆ ಲಕ್ಷ್ಮಮ್ಮ ಮನವಿ ಸಲ್ಲಿಸಿದರು.
ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಾಂತ್ವನ ಹೇಳಿದ ಲೋಕಾಯುಕ್ತರು ಸರ್ಕಾರಿ ನೌಕರರನ್ನು ಉದ್ಧೇಶಿಸಿ ಮಾತನಾಡಿ ಸರ್ಕಾರವು ನೀಡುವ ಸಾರ್ವಜನಿಕರ ತೆರಿಗೆ ಹಣದಿಂದ ಜೀವನ ನಡೆಸುತ್ತಿರುವ ನೌಕರರಾದ ನಾವುಗಳು ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಕೆಲಸದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಕಾಪಾಢಿಕೊಂಡು ವೃತ್ತಿಗೌರವವನ್ನು ಎತ್ತಿಹಿಡಿಯಲು ಪ್ರಯತ್ನ ಮಾಡಬೇಕೇಹೊರತು ಸಣ್ಣ-ಪುಟ್ಟ ಕೆಲಸ ಕಾರ್ಯಗಳಿಗೆ ಸಾರ್ವಜನಿಕರನ್ನು ಓಡಾಡಿಸಿ ತೊಂದರೆ ಕೊಡಬಾರದು, ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಶಾಶ್ವತವಾಗಿ ಹತ್ತಾರು ವರ್ಷಗಳ ಕಾಲ ಉಳಿಯುವಂತಹ ಕೆಲಸವನ್ನು ಮಾಡಬೇಕು ಎಂದು ಗಿರಿಜೇಶ್ ಕಿವಿಮಾತು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಹೆಚ್.ಎಲ್.ಶಿವರಾಂ, ಲೋಕೋಪಯೋಗಿ ಇಲಾಖೆಯ ಎಇಇ ರಂಗನಾಥ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಮೂರ್ತಿ, ಕೃಷಿ ಇಲಾಖೆಯ ಅಧಿಕಾರಿ ಚೆನ್ನಯ್ಯ, ಪಟ್ಟಣಠಾಣೆಯ ಎಸ್‍ಐ ಶಿವಕುಮಾರ್, ತಾ.ಪಂ ಇಓ ಕೆಂಚಪ್ಪ, ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಬಿಸಿಎಂ ಅಧಿಕಾರಿ ನಂದಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

No comments:

Post a Comment