Sunday 17 August 2014

ಮೇಲು ಕೋಟೆ-mlc ರಾಮಕೃಷ್ಣ.

ಪ್ರಮುಖ ಸುದ್ದಿ
ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ಲಕ್ಷಾಂತರ ರೂ ಬೆಲೆಬಾಳುವ ಅಮೂಲ್ಯವಾದ ಶಂಖ.ಚಕ್ರ,ಕಿರೀಟ, ಗದಾಂಗಿ ನಾಪತ್ತೆಯಾಗಿರುವ ಪ್ರಕರಣದ ಸಂಬಂಧ ಆರೋಪಿ ಅರ್ಚಕರ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ವಿಧಾನಪರಿಷತ್ ಸದಸ್ಯ ರಾಮಕೃಷ್ಣ ಒತ್ತಾಯಿಸಿದರು. ಅವರು ಶನಿವಾರ ದೇವರದರ್ಶನ ಪಡೆದ ನಂತರ ಪ್ರವಾಸಿಮಂದಿರದಲ್ಲಿ ದೂರುದಾರರಿಂದ ಮಾಹಿತಿ ಪಡೆದ ನಂತರ  ಪತ್ರಕರ್ತರೊಂದಿಗೆ ಮಾತನಾಡಿದರು.
ಮೇಲುಕೋಟೆ ದೇಗುಲದ ಅಮೂಲ್ಯವಾದ ಒಡವೆಗಳು ಕಾಣೆಯಾಗಿರುವ ಬಗ್ಗೆ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿಗಳು ಖಚಿತಪಡಿಸಿ ಜಿಲ್ಲಾಧಿಕಾರಿಗಳಿಗೆ ವರದಿಸಲ್ಲಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಸಂಬಂಧಪಟ್ಟ ಅರ್ಚಕರುಗಳ ವಿರುದ್ಧ ತಕ್ಷಣ ಕ್ರಮ ಜರುಗಿಸಿ ವರದಿ ನೀಡುವಂತೆ ಧಾರ್ಮಿಕದತ್ತಿ ಆಯುಕ್ತರು ಆದೇಶ ನೀಡಿ ಒಂದು ವರ್ಷಕಳೆದಿದ್ದರೂ ಸಹ ಪಾಂಡವಪುರ ಉಪವಿಭಾಗಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದಿರುವ ಶಾಸಕರು ಉಪವಿಭಾಗಾಧಿಕಾರಿಗಳು ಹೈಕೋರ್ಟ ಆದೇಶಕ್ಕೆ ವಿರುದ್ಧವಾಗಿ ಆರೋಪಿಯಿಂದ ತೆರವಾದ ಹುದ್ದೆಗೆ ಸಹೋದರನನ್ನೇ ನೇಮಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಇವುಗಳ ಬಗ್ಗೆ ಜಿಲ್ಲಾಧಿಕಾರಿಗಳು  ತಕ್ಷಣ ಕ್ರಮ ಜರುಗಿಸಬೇಕು ಎಂದರು.
ವಜ್ರಾಂಗಿ ಅವ್ಯವಹಾರ :  ಇನ್ನು ಶ್ರೀಚೆಲುವನಾರಾಯಣಸ್ವಾಮಿಯವರ ವಜ್ರಾಂಗಿ ಆಭರಣ ಅವ್ಯವಹಾರ, 800ಗ್ರಾಂ ಚಿನ್ನದ ವ್ಯತ್ಯಾಸ ಕುರಿತಂತೆ  ಪಾಂಡವಪುರ ಜೆ.ಎಂ.ಎಫ್ ಸಿ ನ್ಯಾಯಾಲಯ ಶ್ರೀನಿವಾಸ್ ಎಂಬ ಭಕ್ತರ ಅರ್ಜಿ ವಿಚಾರಣೆ ನಡೆಸಿ ಮತ್ತೆ ತನಿಖೆ ಮಾಡುವಂತೆ ಶ್ರೀರಂಗಪಟ್ಟಣ ಡಿ.ವೈ.ಎಸ್.ಪಿಗೆ  ಆದೇಶದ ನೀಡಿದೆ.  ಪೊಲೀಸರು ಈ ಹಿಂದೆ ಮಾಡಿದಂತೆ ಕಾಟಾಚಾರಕ್ಕೆ ತನಿಖೆ ನಡೆಸದೆ, ಈ ಸಲವಾದರೂ  ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಹೇಳಿದ ಎಲ್ಲಾ ಕಾನೂನುವಿರೋಧಿ ಅಂಶಗಳನ್ನು ಪರಿಶೀಲಿಸಿ ಪ್ರಾಮಾಣಿಕ ತನಿಖೆ ನಡೆಸಿ ತಪ್ಪತಸ್ಥ ಅರ್ಚಕರಿಗೆ ಶಿಕ್ಷೆ ಕೊಡಿಸುವ ಮೂಲಕ ಮೇಲುಕೋಟೆ ದೇಗುಲದ ಪಾವಿತ್ರತೆಯನ್ನು ಕಾಪಾಡಬೇಕು ಎಂದರು.
ಸಿ.ಎಂಗೆ ಪತ್ರ : ಮೇಲುಕೋಟೆ ದೇವಾಲಯದಲ್ಲಿ ನಡೆದಿರುವ ವಜ್ರಾಂಗಿ ಅವ್ಯವಹಾರ ಮತ್ತು ಬೆಲೆಬಾಳುವ ಕಿರೀಟ, ಶಂಖ,ಚಕ್ರ,ಗದಾಂಗಿ ನಾಪತ್ತೆಯಾಗಿದ್ದರೂ ಕ್ರಮ ಕೈಗೊಳ್ಳದ ಪ್ರಕರಣದ ಸಂಪೂರ್ಣ ದಾಖಲೆಯನ್ನು ಮುಖ್ಯಮಂತ್ರಿಸಿಧ್ದರಾಮಯ್ಯರಿಗೆ ನೀಡಿ ಈ ವಿಚಾರದಲ್ಲಿ ಪೋಲೀಸರು ಮತ್ತು ಉಪವಿಭಾಗಾಧಿಕಾರಿಗಳು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಾಹಿತಿ ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಸಹ ಆಗ್ರಹಿಸುತ್ತೇನೆ ಜೊತೆಗೆ ಮೇಲ್ಮನೆಯಲ್ಲೂ ವಿಷಯ ಪ್ರಸ್ತಾಪಿಸಿ ದೇಗುಲಕ್ಕೆ ಆಭರಣಗಳನ್ನು ಮರಳಿಕೊಡಿಸುವ  ಮತ್ತು ಕ್ಷೇತ್ರದ ಪಾವಿತ್ರತೆ ಕಾಪಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಶೌಚಾಲಯ ನಿರ್ಮಾಣ;  ಚೆಲುವನಾರಾಯಣಸ್ವಾಮಿ ಕ್ಷೇತ್ರವಾದ ಮೇಲುಕೋಟೆಗೆ ಬರುವ ಭಕ್ತರ ಅನುಕೂಲಕ್ಕಾಗಿ ವಿವಿಧ ಪ್ರಮುಖ ಸ್ಥಳಗಳಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ ರಾಮಕೃಷ್ಣ ಮೇಲುಕೋಟೆಯಲ್ಲಿ ಭಕ್ತರಿಗೆ ಶೌಚಾಲಯದ ಅಗತ್ಯವಿದೆ ಇದ್ದಕ್ಕಾಗಿ ನನ್ನ ಅನುದಾನ ಮತ್ತು ಸಂಸದರ ನಿಧಿ ಜೊತೆಗೆ ಜಿಲ್ಲಾಪಂಚಾಯತ್ ವತಿಯಿಂದಲೂ ಅನುದಾನ ಹೊಂದಿಸಿ  ಬರುವ ವೈರಮುಡಿ ಜಾತ್ರಾ ಮಹೋತ್ಸವದ ವೇಳೆಗೆ ಹೈಟೆಕ್ ಶೌಚಾಲಯಗಳ ನಿರ್ಮಾಣ ಮತ್ತು ಶುದ್ಧ ಕಡಿಯುವ ನೀರಿನ ಸೌಕರ್ಯ ಕಲ್ಪಿಸುವ ಕಾರ್ಯಪೂರ್ಣಗೊಳಿಸಲಾಗುತ್ತದೆ ಎಂದರು.
ಇದೇ ವೇಳೆ ತಾವು ಮೇಲುಕೋಟೆ ಅಭಿವೃದ್ಧಿಯ ಸಂಬಂಧ ಮೇಲ್ಮನೆಯಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಮುಖ್ಯಮಂತ್ರಿ ನೀಡಿರುವ ಉತ್ತರ ಪ್ರತಿಗಳನ್ನು ಮಾಧ್ಯಮಪ್ರತಿನಿಧಿಗಳಿಗೆ ನೀಡಿದ ಅವರು ಯೋಗನರಸಿಂಹಸ್ವಾಮಿ ಬೆಟ್ಟದ ರಸ್ತೆ ಅಗಲೀಕರಣವಾಗಬೇಕು, ಕಲ್ಯಾಣಿಯಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು ಮಹಿಳೆಯರು ಬಟ್ಟೆಬದಲಾಯಿಸಲು ಪ್ರತ್ಯೇಕ ವ್ಯವಸ್ಥೆಮಾಡಬೇಕು, ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಮುಖ್ಯವಾಗಿ ಶೌಚಾಲಯಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮೇಲ್ಮನೆಯಲ್ಲಿ ಪ್ರಶ್ನೆಮಾಡಿದ್ದೆ. ಅದಕ್ಕೆ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಈಗಷ್ಟೆ ತಹಶೀಲ್ದಾರ್ ರಿಂದ ಈ ಸಂಬಂಧ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳು ನೀಡುವ ಉತ್ತರಕ್ಕೂ ಮೇಲುಕೋಟೆಯಲ್ಲಿನ ವಾಸ್ತವ ಸಂಗತಿಗೂ ಸಾಕಷ್ಟು ವ್ಯತ್ಯಾಸವಿದೆ.  ಹೀಗಾಗಿ ಸರ್ಕಾರದಿಂದ ಸಂಪೂರ್ಣ ಮಾಹಿತಿ ಬಂದ ನಂತರ  ಸಂಸದ ಸಿ.ಎಸ್.ಪುಟ್ಟರಾಜುರೊಂದಿಗೆ ಮೇಲುಕೋಟೆಗೆ ಬಂದು ಪರಿಶೀಲಿಸಲಾಗುತ್ತದೆ.  ಮೇಲುಕೋಟೆ ಅಭಿವೃದ್ಧಿಯ ಸಂಬಂಧ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡಹೇರಲಾಗುತ್ತದೆ ಎಂದರು.

No comments:

Post a Comment