Friday 1 August 2014

ಕೆ.ಅರ್.ಪೇಟೆ-ಶಾಸಕ ಕೆ.ಸಿ.ನಾರಾಯಣಗೌಡ.

ಕೃಷ್ಣರಾಜಪೇಟೆ. ಸುಭದ್ರವಾದ ರಾಷ್ಟ್ರದ ನಿರ್ಮಾಣದಲ್ಲಿ ಎಂಜಿನಿಯರುಗಳ ಪಾತ್ರವು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಭವಿಷ್ಯದ ಭಾರತದ ನಿರ್ಮಾತೃಗಳಾದ ಯುವ ಎಂಜಿನಿಯರುಗಳು ಸರ್ ಎಂ.ವಿಶ್ವೇಶ್ವರಯ್ಯನವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಖ್ಯಾತಿವಂತರಾಗಿ ಶ್ರೇಷ್ಠ ಎಂಜಿನಿಯರುಗಳಾಗಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಬೇಕು ಎಂದು ಶಾಸಕ ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿಇ ಡಿಗ್ರಿಯ ತರಗತಿಗಳ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಇಂದು ಗ್ರಾಮೀಣ ಪ್ರದೇಶದಲ್ಲಿರುವ ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಯಾವುದೇ ಪಟ್ಟಣದ ಖ್ಯಾತ ಎಂಜಿನಿಯರಿಂಗ್ ಕಾಲೇಜಿಗೆ ಕಡಿಯಿಲ್ಲದಂತೆ ಮುನ್ನಡೆಯುತ್ತಿದೆ. 1200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಕಳೆದ ಸಾಲಿನಲ್ಲಿ ಕಾಲೇಜು ಶೇ.92ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ಕಾಲೇಜಿಗೆ ಅಗತ್ಯವಾದ ಬೇಕಾದ ಲ್ಯಾಬ್‍ಗಳು, ಕಂಪ್ಯೂಟರ್‍ಗಳು, ಹಾಸ್ಟೆಲ್ ಕಟ್ಟಡ, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರವು 6ಕೋಟಿ ರೂ ಹಣದಲ್ಲಿ ಮೊದಲ ಕಂತಾಗಿ 2ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಪಟ್ಟಣದ ಕಾಲೇಜುಗಳಲ್ಲಿ ಸಿಗುವಂತಹ ಸೌಲಭ್ಯಗಳನ್ನು ನಮ್ಮ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿಯೂ ದೊರಕಿಸಿಕೊಡಲು ನಾನು ಬದ್ಧನಾಗಿದ್ದು ತಾವುಗಳು ಅತ್ಯುನ್ನತ ಶ್ರೇಣಿ ಹಾಗೂ ರ್ಯಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಬೆಳಗಿ ತಮ್ಮ ಬದುಕಿಗೊಂದು ಉತ್ತಮವಾದ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.
ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಹಾರ್ಡ್‍ವೇರ್, ಸಾಫ್ಟ್‍ವೇರ್, ಸಿವಿಲ್, ಮೆಕ್ಯಾನಿಕಲ್ ಸೇರಿದಂತೆ ಯಾವುದೇ ವಿಷಯಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ವಿಶ್ವಮಾನ್ಯರಾದ ಎಂಜಿನಿಯರುಗಳು ಮತ್ತು ವಿಜ್ಞಾನಿಗಳನ್ನು ನೀಡಿರುವ ಕೀರ್ತಿಯು ನಮ್ಮ ಭಾರತ ದೇಶಕ್ಕಿರುವಾಗ, ಯುವ ಎಂಜಿನಿಯರುಗಳು ನಿತ್ಯವೂ ಹೊಸ-ಹೊಸ ವಿಚಾರಗಳನ್ನು ಅಭ್ಯಾಸ ಮಾಡಿ ವೈಜ್ಞಾನಿಕ ಆವಿಷ್ಕಾರ ಮಾಡುವ ಮೂಲಕ ಖ್ಯಾತಿವಂತರಾಗಲು ಪ್ರಯತ್ನ ಮಾಡಬೇಕು. ನಮ್ಮ ರಾಜ್ಯ ಹಾಗೂ ದೇಶದ ಪ್ರತಿಭೆಗಳು ಹಣದಾಸೆಗಾಗಿ ವಿದೇಶದ ಪಾಲಾಗದೇ ಪ್ರತಿಭೆಗಳು ನಮ್ಮ ದೇಶದ ಉನ್ನತಿಗಾಗಿ ಸದ್ಭಳಕೆಯಾಗಬೇಕು ಎಂದು ಮನವಿ ಮಾಡಿದ ಶಾಸಕ ನಾರಾಯಣಗೌಡ ತಾಲೂಕಿನ ತೆಂಡೇಕೆರೆ ಪಕ್ಕದ ಐಚನಹಳ್ಳಿ ಗ್ರಾಮದಲ್ಲಿ 300 ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ವಶಪಡಿಸಿಕೊಂಡು ಬೃಹತ್ ಕೈಗಾರಿಕೆಗಳು, ಹಣ್ಣು ತರಕಾರಿಗಳ ಸಂಸ್ಕರಣಾ ಘಟಕಗಳು ಹಾಗೂ ಗಾರ್ಮೆಂಟ್ಸ್ ಯೂನಿಟ್‍ಗಳು ಸ್ಥಾಪನೆಯಾಗುತ್ತಿವೆ. ಕನಿಷ್ಠ 20ಸಾವಿರ ಮಂದಿ ಯುವಜನರಿಗೆ ಉದ್ಯೋಗಾವಕಾಶಗಳು ದೊರೆಯುವುದರಿಂದ ಯುವ ಎಂಜಿನಿಯರುಗಳು ತಮ್ಮಲ್ಲಿನ ಸಾಮಥ್ರ್ಯವನ್ನು ಹೊರ ಚೆಲ್ಲಲು ಮುಕ್ತವಾದ ಅವಕಾಶಗಳಿವೆ. ಈ ಸದವಕಾಶವನ್ನು ನಮ್ಮ ತಾಲೂಕಿನ ಯುವ ಪ್ರತಿಭೆಗಳು ಸದ್ಭಳಕೆ ಮಾಡಿಕೊಂಡು ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಮಾತನಾಡಿ ತಾಲೂಕಿನ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗಿ ದುಡಿಯುತ್ತಿರುವ ಶಾಸಕ ನಾರಾಯಣಗೌಡರು ಕಾಲೇಜಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕೊಡಿಸಿಕೊಡಲು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಎಂ.ಟೆಕ್ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲು ಅನುಕೂಲವಾಗುವಂತೆ ಸುಸಜ್ಜಿತವಾದ ಜಾಗ ಹಾಗೂ  ಸೌಲಭ್ಯಗಳನ್ನು ದೊರಕಿಸಿಕೊಟ್ಟರೆ ಪ್ರಸ್ತುತ ಫಲಿತಾಂಶ ಮತ್ತು ಗುಣಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ಕಾಲೇಜು ಮುಂದಿನ ದಿನಗಳಲ್ಲಿ ಶೇ.100ರಷ್ಟು ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆಯನ್ನು ನಿರ್ಮಿಸಲಿದೆ. ಕಾಲೇಜಿನಲ್ಲಿ ಅತ್ಯುತ್ತಮವಾದ ಅಧ್ಯಾಪಕ ವೃಂದ ಹಾಗೂ ಸುಸಜ್ಜಿತವಾದ ಕಟ್ಟಡದವಿದೆ. ಇದರ ಜೊತೆಗೆ ಲ್ಯಾಬ್, ಕಂಪ್ಯೂಟರ್‍ಗಳನ್ನು ಕೊಡಿಸಿಕೊಟ್ಟು ಹಾಸ್ಟೆಲ್ ಕಟ್ಟಡದ ನಿರ್ಮಾಣಕ್ಕೆ ಸ್ಥಳಾವಕಾಶವನ್ನು ದೊರಕಿಸಿಕೊಡುವಂತೆ ಮನವಿ ಮಾಡಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಕೆ.ರವೀಂದ್ರ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಡಿ.ಮಧು, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಜಿ.ವಸಂತ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎನ್.ರಮೇಶ್ ಸಭೆಯಲ್ಲಿ ಮಾತನಾಡಿ ತಮ್ಮ ವಿಭಾಗಗಳ ಸಾಧನೆ ಮತ್ತು ಅಧ್ಯಾಪಕರ ತಂಡವನ್ನು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಮಧು ಸ್ವಾಗತಿಸಿದರು, ಕಾಲೇಜಿನ ಸಹಪ್ರಾಧ್ಯಾಪಕರಾದ ಕೆ.ರವೀಂದ್ರ ವಂದಿಸಿದರು. ರುದ್ರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
Áಂಡವಪುರ; ಗ್ರಾಮೀಣ ಪ್ರದೇಶದ ಮಕ್ಕಳು ಸದೃಡ ಮನಸ್ಸಿನಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತ್ ಅಧ್ಯಕ್ಷೆ ಮಂಜುಳಾ ಪರಮೇಶ್ ಕರೆ ನೀಡಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೀರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವತಿಯಿಂದ ಆಯೋಜಿಸಿದ್ದ ಟೌನ್ ಹೋಬಳಿ ಮಟ್ಟದ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಕೇವಲ ವ್ಯವಸಾಯಕ್ಕೆ ಸೀಮಿತವಾಗಬಾರದು, ತಮ್ಮ ಶಾಲಾ ಮಟ್ಟದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ ಅಂತರಾಷ್ಟ್ರ ಮಟ್ಟ ಕ್ರೀಡಾಜೂಟಗಳಲ್ಲಿ ಭಾಗವಹಿಸುವ ಮೂಲಕ ಕೀರ್ತಿ ಪತಾಕೆಯನ್ನು ಆರಿಸಬೇಕೆಂದು ತಿಳಿಸಿದರು.
ನಂತರ ತಾ.ಪಂ. ಪ್ರಭಾರ ಅಧ್ಯಕ್ಷ ಯಶ್ವಂತ್ ಮಲ್ಲಿಗೆರೆ ಮಾತನಾಡಿ, ಕ್ರೀಡೆ ಮನುಷ್ಯ ಮಾನಸಿಕವಾಗಿ ಹಾಗೂ ದೈಹಿಕನಾಗಿರಲು ಸಹಕಾರಿಯಾಗಿದೆ. ಯಾಒಬ್ಬ ಮನುಷ್ಯ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನು ತಾನು ತೊಡಗಿಸುಕೊಳ್ಳುತ್ತಾನೋ ಆ ಮನುಷ್ಯ ಸದಾ ಆರೋಗ್ಯವಂತನಾಗಿರುತ್ತಾನೆ ಎಂದು ತಿಳಿಸಿದರು.
ಅಷ್ಟೇ ಅಲ್ಲಿದೆ ಕ್ರೀಡೆಯು ಮನುಷ್ಯರಿಂದ ಜಾತ್ಯಾತೀತ ಭಾವನೆಗಳನ್ನು ಹೋಗಲಾಡಿಸುತ್ತದೆ. ಆದ್ದರಿಂದ ಪ್ರತಿ ತಾಲ್ಲೂಕು ಮಟ್ಟದಲ್ಲಿ ಒಂದು ಕ್ರೀಡಾ ಶಾಲೆಯನ್ನು ತೆರೆಯಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಸಮನ್ವಯಾಧಿಕಾರಿ ಧನಂಜಯ್, ಮನ್‍ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ, ಬೀರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಮಕೃಷ್ಣೇಗೌಡ, ಸಹ ಶಿಕ್ಷಕ ಯೋಗೇಶ್,ಯ. ಸಿದ್ದೇಗೌಡ, ಕುಮಾರ್, ಹೊನ್ನೇಗೌಡ,ಲವಕುಮಾರ್, ಗಂಗಾಧರ್, ಚಿಕ್ಕಬೋರೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೀರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆವತಿಯಿಂದ ಆಯೋಜಿಸಿದ್ದ ಟೌನ್ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾ.ಪಂ. ಪ್ರಭಾರ ಅಧ್ಯಕ್ಷ ಯಶ್ವಂತ್ ಮಲ್ಲಿಗೆರೆಯವರು ಕ್ರೀಡಾಪಟುಗಳನ್ನು ಪರಿಚಯ ಮಾಡಿಕೊಳ್ಳುತ್ತಿರುವುದು.
=========

1 comment: