Sunday 12 October 2014

ಕೃಷ್ಣರಾಜಪೇಟೆ. ಪಟ್ಟಣದ ಚನ್ನರಾಯಪಟ್ಟಣ ರಸ್ತೆಯಲ್ಲಿನ ಶಿವಶಂಕರ ರೈಸ್ ಮಿಲ್ ಆವರಣದಲ್ಲಿರುವ ಭರತ್ ಪೈಪ್ಸ್ ಪಿವಿಸಿ ಪ್ಲಾಸ್ಟಿಕ್ ಪೈಪುಗಳ ತಯಾರಿಕಾ ಘಟಕಕ್ಕೆ ಕಿಡಿಗೇಡಿಗಳು ನಿನ್ನೆ ರಾತ್ರಿ ಪ್ಲಾಸ್ಟಿಕ್ ಪೈಪುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಪರಿಣಾಮ ಇಡೀ ಘಟಕವೇ ಸುಟ್ಟು ಭಸ್ಮವಾಗಿದ್ದು 25ಲಕ್ಷರೂ ಪಾಯಿಗಳಿಗೂ ಹೆಚ್ಚಿನ ನಷ್ಠ ಸಂಭವಿಸಿದೆ.
ಭರತ್ ಪೈಪ್ಸ್ ಫ್ಯಾಕ್ಟ್ರಿಯ ಒಳಗೆ ಮಲಗಿದ್ದ ಕೆಲಸಗಾರ ಮಂಜು ಮತ್ತು ಆತನ ಪತ್ನಿ ಪ್ರೇಮ ಅವರು ಬೆಂಕಿಯ ಜ್ವಾಲೆಯ ಕಾವಿಗೆ ಬೆಚ್ಚಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿವಿಸಿ ಪೈಪುಗಳ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದಿರುವ ಸುದ್ದಿಯನ್ನು ತಿಳಿದ ಪಟ್ಟಣದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ.ಪಿ.ಗುರುರಾಜ್ ತಮ್ಮ ಸಿಬ್ಬಂಧಿಗಳೊಂದಿಗೆ ಆಗಮಿಸಿ ಭಾರೀ ಸಾಹಸದಿಂದ ಅಗ್ನಿ ನಂಧಿಸಲು ಪ್ರಯತ್ನಿಸಿದರೂ ಅಗ್ನಿಯ ಜ್ವಾಲೆಯು ಕಡಿಮೆಯಾಗಲಿಲ್ಲ. ಕೂಡಲೇ ನೆರೆಯ ಚನ್ನರಾಯಪಟ್ಟಣ ತಾಲೂಕಿನ ಅಗ್ನಿಶಾಮಕ ಠಾಣೆಯಿಂದ ಹೆಚ್ಚುವರಿಯಾಗಿಒ ಎರಡು ವಾಹನಗಳು ತರಿಸಿ ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂಧಿಸಿದರು. ಮಧ್ಯಾಹ್ನ 12.30ಕ್ಕೆ ಆರಂಭವಾದ ಬೆಂಕಿ ನಂದಿಸುವ ಪ್ರಕ್ರಿಯೆಯು ಬೆಳಿಗ್ಗೆ ಆರು ಗಂಟೆಯವರೆಗೂ ನಡೆಯಿತು.
ಪಟ್ಟಣದ ಶಿವಶಂಕರ ರೈಸ್ ಮಿಲ್ ಆವರಣದಲ್ಲಿ ಕಳೆದ 8 ವರ್ಷಗಳಿಂದಲೂ ಪಿವಿಸಿ ಪ್ಲಾಸ್ಟಿಕ್ ಪೈಪು ಘಟಕವನ್ನು ಆರಂಬಿಸಿ ಉಧ್ಯಮವನ್ನು ನಡೆಸಿ ರೈತರ ಬೇಸಾಯ ಚಟುವಟಿಕೆಗಳಿಗೆ ಪೂರಕವಾಗಿ ಗುಣಮಟ್ಟದ ಪೈಪುಗಳನ್ನು ತಯಾರಿಸಿ ಕೊಟ್ಟು ರೈತರ ಮೆಚ್ಚುಗೆಗೆ ಪಾತ್ರವಾಗಿದ್ದ ಚನ್ನರಾಯಪಟ್ಟಣದ ಉದ್ಯಮಿ ಪ್ರವೀಣ್ ಅವರ ಏಳ್ಗೆಯನ್ನು ಸಹಿಸದ ಕಿಡಿಗೇಡಿಗಳು ನಿನ್ನೆ ಮಧ್ಯರಾತ್ರಿ 12.30ರ ಸಮಯದಲ್ಲಿ ಪೈಪುಗಳ ಗೋಧಾಮು ಮತ್ತು ಘಟಕಕ್ಕೆ ಪೆಟ್ರೊಲ್ ಸುರಿದು ಬೆಂಕಿಯನ್ನು ಹಚ್ಚಿರುವ ಕಾರಣ ಇಡೀ ಘಟಕವೇ ಸುಟ್ಟು ಕರಕಲಾಗಿದೆ. ಪ್ಲಾಸ್ಟಿಕ್ ಪೈಪುಗಳು ಬೆಂಕಿಯ ಜ್ವಾಲೆಗೆ ಕರಗಿ ನೀರಾಗಿ ಹರಿದು ಹೋಗಿವೆ. ರೈಸ್ ಮಿಲ್ ಆವರಣದಲ್ಲಿ ದಾಸ್ತಾನು ಮಾಡಲಾಗಿದ್ದ ಹುಲ್ಲಿನ ಮೆದೆಯೂ ಬೆಂಕಿ ಅವಘಡದಲ್ಲಿ ಸುಟ್ಟುಹೋಗಿದೆ. ಘಟನೆಯ ಬಗ್ಗೆ ಘಟಕದ ವ್ಯವಸ್ಥಾಪಕರಾದ ಶಿವಯೋಗಿ ಮತ್ತು ಮಾಲೀಕ ಪ್ರವೀಣ್ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ಕಿಡಿಗೇಡಿಗಳ ಬಂಧನಕ್ಕೆ ಪಟ್ಟಣ ಠಾಣೆಯ ಪಿಎಸ್‍ಐ ಎಂ.ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ. ಪೋಲಿಸ್ ವೃತ್ತನಿರೀಕ್ಷಕ ಕೆ.ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ.ಪಿ.ಗುರುರಾಜ್ ಅವರು ಪ್ರಾಣದ ಹಂಗನ್ನು ತೊರೆದು ಪ್ಲಾಸ್ಟಿಕ್ ಪೈಪುಗಳಿಂದ ಬರುತ್ತಿದ್ದ ಬೆಂಕಿಯ ಜ್ವಾಲೆಯನ್ನು ನಂದಿಸಲು ಹರಸಾಹಸ ಮಾಡಿ ಅಕ್ಕಪಕ್ಕದ ಮನೆಗಳಿಗೆ ಹಾಗೂ ರೈಸ್‍ಮಿಲ್‍ಗೆ ಆಗುವ ಹೆಚ್ಚಿನ ಹಾನಿಯನ್ನು ತಪ್ಪಿಸಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದರು.
ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಕಳೆದ  ವರ್ಷಗಳಿಂದಲೂ ಭರತ್ ಪೈಪ್ಸ್ ಹೆಸರಿನಲ್ಲಿ ಪಿವಿಸಿ ಪ್ಲಾಸ್ಟಿಕ್ ಪೈಪಿನ ಘಟಕವನ್ನು ಆರಂಭಿಸಿ ತಾಲೂಕಿನ ರೈತಬಂಧುಗಳಿಗೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಪೈಪ್ ಘಟಕದ ಮಾಲೀಕರಾದ ಪ್ರವೀಣ್ ಅವರ ಏಳ್ಗೆಯನ್ನು ಸಹಿಸಿದ ಕಿಡಿಗೇಡಿಗಳು ಪೆಟ್ರೊಲ್ ಸುರಿದು ಇಡೀ ಘಟಕವನ್ನೇ ನಾಶಪಡಿಸಿದ್ದಾರೆ. ಪೋಲಿಸರು ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಶಾಸಕ ನಾರಾಯಣಗೌಡ ಆಗ್ರಹಿಸಿದ್ದಾರೆ. ಅವರು ಇಂದು ಮಧ್ಯಾಹ್ನ ಸುಟ್ಟುಹೋಗಿರುವ ಪೈಪ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಆರ್.ಹೇಮಂತ್‍ಕುಮಾರ್, ಸೌಭಾಗ್ಯ ಅಶೋಕ್, ಮಾಜಿ ಸದಸ್ಯರಾದ ಕೆ.ಸಿ.ಮಂಜುನಾಥ್, ಕೆ.ಎಸ್.ಹರಪ್ರಸಾದ್, ಕೆ.ಆರ್.ನೀಲಕಂಠ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಪಿಎಲ್‍ಡಿ ಬ್ಯಾಂಕಿನ ಮಾಜಿಅಧ್ಯಕ್ಷ ಕೆ.ಎಸ್.ರಾಮೇಗೌಡ, ಮಾಲೀಕ ಪ್ರವೀಣ್, ಘಟಕದ ಮ್ಯಾನೇಜರ್ ಶಿವಯೋಗಿ, ಆಪರೇಟರ್ ಶಿವಶಂಕರ್, ನೌಕರ ಮಂಜು ಮತ್ತಿತರರು ಉಪಸ್ಥಿತರಿದ್ದರು.


No comments:

Post a Comment