Thursday 23 October 2014

ನ.5 ರಂದು ಟಿ.ಚನ್ನಯ್ಯ ಶತಮಾನೋತ್ಸವ ಸಮಾರಂಭ
ಮೈಸೂರು: ಟಿ.ಚನ್ನಯ್ಯ ಜನ್ಮ ಶತಮಾನೋತ್ಸವ ಸಮಾರಂಭವನ್ನು ನ.5 ರಂದು ಏರ್ಪಡಿಸಲಾಗಿದೆ ಎಂದು ಟಿ.ಚನ್ನಯ್ಯ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು. ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವದ ಅಂಗವಾಗಿ ನ.5 ರಂದು ಬೆಳಗ್ಗೆ 9-30 ಕ್ಕೆ ಜನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆ ನಡೆಯಲಿದೆ. ಇದಕ್ಕೆ ಕೋಲಾರದ ಜಿಲ್ಲಾಧಿಕಾರಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಕ್ಕೆ ನಚಿಕೇತ ನಿಲಯದ ಆವರಣದಲ್ಲಿ ಟಿ.ಚನ್ನಯ್ಯ ವಸತಿ ಶಾಲೆಗೆ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅಡಿಗಲ್ಲು ಹಾಕಲಿದ್ದಾರೆ. ಮಧ್ಯಾಹ್ನ 1ಕ್ಕೆ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್, ರಾಂವಿಲಾಸ್ ಪಾಸ್ವಾನ್, ಸಾಂಸದರಾದ ರಾಂದಾಸ್ ಅಠವಳೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಹಾಗೂ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಸಚಿವೆ ಮೋಟಮ್ಮ, ಗೋವಿಂದ ಕಾರಜೋಳ ಮತ್ತಿತರರು ಆಗಮಿಸಲಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ನಚಿಕೇತ ಹೆಸರಿನ ಸ್ಮರಣ ಸಂಚಿಕೆ ಮತ್ತು ಚನ್ನಯ್ಯ ಕುರಿತು ಹಾಡಿನ ಸಿಡಿ ಬಿಡುಗಡೆ ಮಾಡಲಾಗುವುದು, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡರಿಗೆ ಟಿ.ಚನ್ನಯ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿವರಿಸಿದರು.
ಶತಮಾನೋತ್ಸವ ಅಂಗವಾಗಿ ಕೋಲಾರ ಜಿಲ್ಲೆಯ ಯುವ ಮುಖಂಡ ಆನಂದ್ ನೇತೃತ್ವದಲ್ಲಿ ಅ.29 ರಿಂದ ನ.5 ರ ತನಕ ಚನ್ನಯ್ಯನವರ ಜೀವನ ಮತ್ತು ಸಾಧನೆಗಳನ್ನು ಪ್ರಚಾರ ಪಡಿಸಲು ಕೋಲಾರ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಭೆ ನಡೆಸಲು ರಥಯಾತ್ರೆ ನಡೆಸಲಾಗುವುದೆಂದರು. ಗೋಷ್ಠಿಯಲ್ಲಿ ಮೈಸೂರು ವಿಭಾಗೀಯ ಅಧ್ಯಕ್ಷ ಪುರುಷೋತ್ತಮ ಉಪಸ್ಥಿತರಿದ್ದರು.

No comments:

Post a Comment