Thursday 16 October 2014

ವರದಿ: ಆರ್.ಶ್ರೀನಿವಾಸ್, ಕೆ.ಆರ್.ಪೇಟೆ. ಕೆ.ಆರ್.ಪೇಟೆ,ಅ.16- ಆಯುರ್ವೇದ ವೈಧ್ಯನೆಂದು ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿರುವ ದೇವಮ್ಮ- ಬೋರಲಿಂಗೇಗೌಡ ಕಲ್ಯಾಣ ಮಂಟಪದ ವಾಣಿಜ್ಯ ಕಟ್ಟಡದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವ್ಯಕ್ತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಮತ್ತು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ತಾಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಅವರ ನೇತೃತ್ವದ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಇಂದು ಬಂಧಿಸಿದೆ. ಕಳೆದ 10ವರ್ಷಗಳಿಂದಲೂ ಪಟ್ಟಣದಲ್ಲಿ ನಾಗಮಾತಾ ಕ್ಲಿನಿಕ್ ನಡೆಸುತ್ತಿದ್ದ ಕೊಲ್ಕತ್ತಾ ಮೂಲದ ಬಿಸ್ವಾಸ್ (34) ಎಂಬಾತನೇ ಬಂಧಿತ ನಕಲಿ ವೈಧ್ಯನಾಗಿದ್ದಾನೆ. ಕೇವಲ ಪಿ.ಯು.ಸಿ ವಿದ್ಯಾಭ್ಯಾಸ ಮಾಡಿರುವ ಬಿಸ್ವಾಸ್ ನಾನು ಆಯುರ್ವೇದ ವೈಧ್ಯನೆಂದು ಜನರಿಗೆ ವಂಚಿಸುತ್ತಾ ಒಬ್ಬ ರೋಗಿಯಿಂದ ಕನಿಷ್ಠ 3ಸಾವಿರದಿಂದ 10ಸಾವಿರದವರೆಗೆ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಕ್ಲಿನಿಕ್ ನಲ್ಲಿ ಈತ ಮೊಳೆ ರೋಗಕ್ಕೆ ಸಂಬಂಧಿತ ಕಾಯಿಲೆಗಳಾದ ಪೈಲ್ಸ್, ಪಿಶರ್, ಫಿಸ್ತುಲಾ, ಸೈನೆಸ್ ಮುಂತಾದ ಕಾಯಿಲೆಗಳಿಗೆ ತಜ್ಞ ವೈದ್ಯನೆಂಬ ನಾಮಫಲಕ ಹಾಕಿಕೊಂಡು ಚಿಕಿತ್ಸೆ ನೀಡುತ್ತಾ ಗ್ರಾಮೀಣ ಪ್ರದೇಶದ ಮುಗ್ದ ಜನರನ್ನು ವಂಚಿಸುತ್ತಾ ಬಂದಿದ್ದನು. ಜಿಲ್ಲೆಯಾದ್ಯಂತ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿದ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಇಂದು ಪಟ್ಟಣದಲ್ಲಿ ಈ ದಿಢೀರ್ ದಾಳಿ ನಡೆಸಿತು. ಶ್ರವಣಬೆಳಗೊಳ ರಸ್ತೆಯಲ್ಲಿಯೂ ಡಾ.ಲೀಲಾ ಎನ್ನುವ ಹೆಸರಿನಲ್ಲಿ ಒಬ್ಬರು ನಕಲಿ ವೈದ್ಯರಿರುವ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಕ್ಲಿನಿಕ್ ಮೇಲೂ ದಾಳಿ ನಡೆಸಿದರು. ಆದರೆ ಆಕೆ ಸುಳಿವು ಅರಿತು ಪರಾರಿಯಾಗಿದ್ದಳು. ಮುಂದಿನ ದಿನಗಳಲ್ಲಿ ನಕಲಿ ವೈದ್ಯರು ಕ್ಲಿನಿಕ್ ತೆರೆದು ಜಿಲ್ಲೆಯಾದ್ಯಂತ ಸಾರ್ವಜನಿಕರನ್ನು ವಂಚಿಸುತ್ತಿರುವ ಇರುವ ನಕಲಿ ವೈದ್ಯರ ಮೇಲೆ ದಾಳಿ ನಡೆಸಿ ಕ್ಲಿನಿಕ್ ಮುಚ್ಚಿಸಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಮಂಚೇಗೌಡ ಮತ್ತು ಡಾ.ಸೀತಾಲಕ್ಷ್ಮೀ ತಿಳಿಸಿದ್ದಾರೆ. ಪಟ್ಟಣ ಠಾಣೆಯ ಎಎಸ್‍ಐ ಸಿದ್ದೇಗೌಡ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಿಸ್ವಾಸ್‍ನನ್ನು ಬಂಧಿಸಿ ಕ್ಲಿನಿಕ್ ಬಾಗಿಲು ಬಂದ್ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೆಕ್ಷಣಾಧಿಕಾರಿ ಡಾ.ಮಾರುತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ದಾಳಿಯಲ್ಲಿ ಭಾಗವಹಿಸಿದ್ದರು.

No comments:

Post a Comment