Friday 31 October 2014

ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ರವರ ಪ್ರವಾಸ ಕಾರ್ಯಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ರವರ ಪ್ರವಾಸ ಕಾರ್ಯಕ್ರಮ.


     ಮಂಡ್ಯ, ಅ.31-ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ನವೆಂಬರ್ 1, 2 ಹಾಗೂ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.   ನವೆಂಬರ್ 1 ರಂದು ಬೆಳಿಗ್ಗೆ 9.00 ಕ್ಕೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 59 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.30ಕ್ಕೆ ಗಿರಿಜಾ ಚಲನಚಿತ್ರ ಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಕುರಿತ ಕನ್ನಡ ಚಲನಚಿತ್ರ “ಗಾಂಧೀಜಿ ಕನಸು” ಪ್ರದರ್ಶನಕ್ಕೆ ಚಾಲನೆ ನೀಡುವರು. ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
      ನವೆಂಬರ್ 2 ರಂದು ಮಧ್ಯಾಹ್ನ 1.00 ಗಂಟೆಗೆ ಕೆರಗೋಡು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30 ಗಂಟೆಗೆ ಕೆರಗೋಡು ಹೋಬಳಿಯ ಕೆ.ಗೌಡಗೆರೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಧ್ಯಾಹ್ನ 2.00 ಗಂಟೆಗೆ ಪಿ.ಎಂ.ಜಿ.ಎಸ್.ವೈ. ಕಾಮಗಾರಿಯ ವೀಕ್ಷಣೆ, ಮಧ್ಯಾಹ್ನ 2.30ಕ್ಕೆ ಕೆರಗೋಡು ಹೋಬಳಿಯ ಹೊನಗಾನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ,  ಮಧ್ಯಾಹ್ನ 3.00 ಗಂಟೆಗೆ ಕೆರಗೋಡು ಹೋಬಳಿಯ ಸಾತನೂರಿನಲ್ಲಿ ಸಮುದಾಯ ಭವನ ಕಟ್ಟಡದ ಉದ್ಘಾಟನೆ, ಸಂಜೆ 4.00 ಗಂಟೆಗೆ ಮಂಡ್ಯದಲ್ಲಿ ಸಾರ್ವಜನಿಕರ ಭೇಟಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು.
       ನವೆಂಬರ್ 3 ರಂದು ಬೆಳಿಗ್ಗೆ 11.00 ಗಂಟೆಗೆ ಬಸರಾಳು ಹೋಬಳಿಯ ಗುಡಿಗೇನಹಳ್ಳಿಯಲ್ಲಿ ಪಿ.ಎಂ.ಜಿ.ಎಸ್.ವೈ ಕಾಮಗಾರಿಗಳ ಪರಿವೀಕ್ಷಣೆ, ಮಧ್ಯಾಹ್ನ 12.00 ಕ್ಕೆ ದೊಡ್ಡಗರುಡನಹಳ್ಳಿಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ, ಮಧ್ಯಾಹ್ನ 1.00 ಕ್ಕೆ ಹುನಗನಹಳ್ಳಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ, ಮಧ್ಯಾಹ್ನ 1.30ಕ್ಕೆ ಬಸರಾಳು ಐ.ಟಿ.ಐ. ಹಾಗೂ ಕಾಲೇಜುಗಳ ಕಟ್ಟಡಗಳ ಪರಿವೀಕ್ಷಣೆ, ಮಧ್ಯಾಹ್ನ 2.00 ಕ್ಕೆ ಚಂದಗಾಲು ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟನೆ, ಮಧ್ಯಾಹ್ನ 2.30ಕ್ಕೆ ಚಿಕ್ಕಬಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.   
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
     ಜಿಲ್ಲಾಡಳಿತದ ವತಿಯಿಂದ ನವೆಂಬರ್ 1 ರಂದು ಬೆಳಿಗ್ಗೆ 9.00 ಕ್ಕೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 59 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು. ವಸತಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಂದೇಶವನ್ನು ನೀಡಲಿದ್ದಾರೆ.
     ಸಂಜೆ 4.00 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ವಹಿಸುವರು. ಖ್ಯಾತ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.
 ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಮಂಜಳಾ ಪರಮೇಶ್, ಖಾನ್,  ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು, ರಾಜ್ಯಸಭಾ ಸದಸ್ಯರಾದ ಕೆ. ರೆಹಮಾನ್ ವಿಧಾನಸಭೆಯ ಶಾಸಕರುಗಳಾದ ಕೆ.ಎಸ್. ಪುಟ್ಟಣ್ಣಯ್ಯ, ಎನ್.ಚೆಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡೀಸಿದ್ದೇಗೌಡ ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಮರಿತಿಬ್ಬೇಗೌಡ, ಅಶ್ವಥ್ ನಾರಾಯಣ್, ಡಿ.ಎಸ್.ವೀರಯ್ಯ, ಬಿ. ರಾಮಕೃಷ್ಣ, ಗೋ.ಮಧುಸೂದನ್,  ನಗರಸಭೆಯ ಅಧ್ಯಕ್ಷರಾದ ಸಿದ್ದರಾಜು, ಮಂಡ್ಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾದ ಟಿ.ಸಿ.ಶಂಕರಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಡಾ|| ಅಜಯ್ ನಾಗಭೂಷಣ್ ಅವರು ತಿಳಿಸಿರುತ್ತಾರೆ.
ಮುಂದಿನ ಮಾರ್ಚ್ ಒಳಗೆ ಎಲ್ಲಾ ಪೋಡಿ, ಪಹಣಿ ಪ್ರಕರಣಗಳು ಇತ್ಯರ್ಥ
ಎಲ್ಲಾ ಗ್ರಾಮಗಳಲ್ಲಿ ಕಂದಾಯ ಅದಾಲತ್‍ಗಳನ್ನು ಏರ್ಪಡಿಸಿ ಸ್ಥಳದಲ್ಲಿಯೇ ದೋಷರಹಿತ ಪೋಡಿ ಮತ್ತು ಪಹಣಿಗಳನ್ನು ಹಳೇ ಕ್ರಯಪತ್ರಗಳಂತೆ ಖಾತೆ ಮಾಡುವ ಮೂಲಕ ಪ್ರಕರಣಗಳನ್ನು ಮುಂದಿನ ಮಾರ್ಚ್ ವೇಳೆಗೆ ಇತ್ಯರ್ಥಗೊಳಿಸಲಾಗುವುದು ಎಂದು ಕಂದಾಯ ಸಚಿವರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ತಿಳಿಸಿದರು.
       ಅವರು ಶುಕ್ರವಾರ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಮಂಡ್ಯ ಜಿಲ್ಲಾಡಳಿತ ಆಯೋಜಿಸಿದ್ದ  ಬೃಹತ್ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
      1995 ರಿಂದ 2001 ರವರೆಗೆ ಕೈ ಬರವಣಿಗೆ ಪಹಣಿಯಿಂದ ಹಾಗೂ ಮಾಹಿತಿಯನ್ನು ಗಣಕೀಕರಣಗೊಳಿಸುವಾಗ ಪಹಣಿಯಲ್ಲಿ ಹಲವಾರು ಲೋಪದೋಷಗಳು ಉಂಟಾಗಿದ್ದು, ಇದರಿಂದ ರೈತರಿಗೆ ತಮ್ಮ ಪಹಣಿಗಳ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಅಲೆದಾಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಲು ಎಲ್ಲಾ ಗ್ರಾಮಗಳಲ್ಲಿ ಪೈಲೆಟ್ ಪ್ರಾಜೆಕ್ಟ್ ಮೂಲಕ ಕಂದಾಯ ಅದಾಲತ್‍ಗಳನ್ನು ಏರ್ಪಡಿಸಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
      ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ರುದ್ರಭೂಮಿಗೆ ಭೂಮಿ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ರುದ್ರಭೂಮಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಸಚಿವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತಮ ಸಂಬಂಧ ಹೊಂದುವುದರಿಂದ ಸರ್ಕಾರದ ಜನಪರ ಯೋಜನೆಗಳು ಫಲಪ್ರದವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
       ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ರೈತರು ಬೃಹತ್ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಲು ಮುಂದಾಗಬೇಕು. ಕಚೇರಿಗಳಲ್ಲಿ ಯಾವುದೇ ತಮ್ಮ ಕೆಲಸ ಕಾರ್ಯಗಳಿಗೆ ದುಡ್ಡು ನೀಡುವುದನ್ನು ನಿಲ್ಲಿಸಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್ ಅವರು ಮಾತನಾಡಿ ಪಾಂಡವಪುರ ಉಪ ವಿಭಾಗದ ಪಾಂಡವಪುರ ತಾಲ್ಲೂಕಿನಲ್ಲಿ 2348 ಪ್ರಕರಣಗಳು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 731 ಪ್ರಕರಣಗಳು, ನಾಗಮಂಗಲ ತಾಲ್ಲೂಕಿನಲ್ಲಿ 5701 ಪ್ರಕರಣಗಳು, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 16,755 ಪ್ರಕರಣಗಳು ಬಾಕಿ ಇದ್ದು, ಮುಂದಿನ ಮಾರ್ಚ್‍ರೊಳಗಾಗಿ ಪ್ರತಿ ಗ್ರಾಮ, ಹೋಬಳಿಗಳಲ್ಲಿಯೂ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ  ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
      ಈ ಕಾರ್ಯಕ್ರಮದಲ್ಲಿ  ಕೆ.ಆರ್.ಪೇಟೆಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಸಿ.ನಾರಾಯಣಗೌಡ, ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಡಾ|| ಹೆಚ್.ಎಲ್.ನಾಗರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವಮಂಗಳ ವೆಂಕಟೇಶ್, ಬೂಕನಕೆರೆ ತಾಲ್ಲೂಕು ಪಂಚಾಯತ್ ಸದಸ್ಯರಾದ ಯಳವೇಗೌಡ, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಿ ಬೋಳೇಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.


ರಾಷ್ಟ್ರೀಯ ಸಂಕಲ್ಪ ದಿನ ಹಾಗೂ ರಾಷ್ಟ್ರೀಯ  ಏಕತಾ ದಿನ ಆಚರಣೆ
     ದಿವಂಗತ ಇಂದಿರಾಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ರಾಷ್ಟ್ರೀಯ ಸಂಕಲ್ಪ ದಿನ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.
     ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಜಿ.ಟಿ.ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ. ಬೊರಸೆ ಅವರು ಈ ಮಹನೀಯರುಗಳ ಬಗ್ಗೆ ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ, ಭಜನೆ, ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು.                        ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ
      ಅಂಗವಿಕಲರ ಕಲ್ಯಾಣ ಇಲಾಖೆಯು ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ / ಸಲ್ಲಿಸಿರುವ ಶಿಕ್ಷಕರಿಗೆ 2014ನೇ ಸಾಲಿನಲ್ಲಿ ರಾಜ್ಯಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.  ಅಂಗವಿಕಲರ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಿಕ್ಷಕರು ನಿಗದಿತ  ಅರ್ಜಿ ನಮೂನೆಯನ್ನ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 7 ರೊಳಗಾಗಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ತಾಲ್ಲೂಕು ಕಚೇರಿ ಆವರಣ ಇವರಿಗೆ ಹಿಂದಿರುಗಿಸುವಂತೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯುತ್ ವ್ಯತ್ಯಯ
 ದಿನಾಂಕ 05.11.2014 ರಂದು  ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ ಗುತ್ತಲು ಫೀಡರ್‍ನಲ್ಲಿ  ವ್ಯಾಪ್ತಿಗೆ ಬರುವಂತಹ ನಗರ ಪ್ರದೇಶಗಳಾದ ಗುತ್ತಲು ರೋಡ್, ಸ್ವರ್ಣಸಂದ್ರ, ಸಾಹುಕಾರ್ ಚನ್ನಯ್ಯ ಬಡಾವಣೆ, ಇಂದಿರಾ ಕಾಲೋನಿ, ಹಳೆಗುತ್ತಲು, ಅರಕ್ಷೇಶ್ವರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಾದ ಚನ್ನಪ್ಪನದೊಡ್ಡಿ, ಯತ್ತಗದಹಳ್ಳಿ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ರಸ್ತೆ ಅಗಲೀಕರಣ ಕೆಲಸದ ನಿಮಿತ್ತ ವಿದ್ಯುತ್‍ನಲ್ಲಿ ಅಡಚಣೆ ಉಂಟಾಗುತ್ತದೆ. ಗ್ರಾಹಕರು ಹಾಗೂ ಸಾರ್ವಜಿನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಮಂಡ್ಯ ವಿಭಾಗದ ಸೆಸ್ಕ್‍ನ ಕಾರ್ಯನಿರ್ವಾಹಕ ಅಭಿಯಂತರ ಎ.ಎನ್.ರವಿಶಂಕರ್ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಅಯೋಡಿನ್ ಕೊರತೆಯಿಂದ ಕಲಿಕೆ ಕುಂಠಿತ :  ಪಿ.ಶಿವಾನಂದ
      ಅಯೋಡಿನ್ ಥೈರಾಯಿಡ್ ಗ್ರಂಥಿಯ ಸಮರ್ಪಕ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದ್ದು ಇದರಿಂದ ಬಿಡುಗಡೆಯಾಗುವ ಥೈರಾಕ್ಸಿನ್ ಹಾರ್ಮೋನ್ ಮೆದುಳಿನ ಉತ್ತಮ ಬೆಳವಣಿಗೆಗೆ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ  ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಪಿ.ಶಿವಾನಂದ ರವರು ತಿಳಿಸಿದರು.
      ಅವರು “ವಿಶ್ವ ಅಯೋಡಿನ್ ದಿನಾಚರಣೆಯ ಸಪ್ತಾಹ”ದ ಅಂಗವಾಗಿ ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠ, ಕುವೆಂಪು ಪ್ರೌಢಶಾಲೆ, ಕುಂತಿಬೆಟ್ಟ,  ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಅಯೋಡಿನ್ ಕೊರತೆಯಿಂದ ಶಾಲಾಮಕ್ಕಳ ಕಲಿಕೆಯ ಪ್ರಗತಿಯಲ್ಲಿ ಕುಂಠಿತವಾಗುವುದಲ್ಲದೇ  ಬುದ್ದಿಮಾಂದ್ಯತೆ, ಸರಿಪಡಿಸಲಾಗಾದ ದೈಹಿಕ ಹಾಗೂ ಮಾನಸಿಕ ವಿಕಲತೆ, ಕಿವುಡು ಹಾಗೂ ಮೂಕತನ,  ಮೆಳ್ಳಗಣ್ಣು, ಕುಬ್ಜ್ಜತನ, ಅಂಗವಿಕಲತೆ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ ಎಂದು ತಿಳಿಸಿದ ಅವರು ಶಾಲಾ ವಯಸ್ಸಿನ ಮಕ್ಕಳಿಗೆ ದಿನವೊಂದಕ್ಕೆ 120ಮೈಕ್ರೋಗ್ರಾಂ ಅಯೋಡಿನ್ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯದ ಆಹಾರದಲ್ಲಿ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಬೇಕು ಹಾಗೂ ಅಯೋಡಿನ್‍ಯುಕ್ತ ಆಹಾರ ಪದಾರ್ಥಗಳಾದ ಸಮುದ್ರದ ಮೀನು, ಸೀಗಡಿ ಹಾಗೂ ಕ್ಯಾರೆಟ್‍ನ ಬಳಕೆಯಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದಾಗಿದೆ  ಎಂದು ಅವರು ತಿಳಿಸಿದರು.
ಅಲ್ಲದೇ ಸಾಮಾನ್ಯ ಉಪ್ಪಿನೊಂದಿಗೆ “ಪೊಟಾಷಿಯಂ-ಅಯೋಡೇಟ್” ಹಾಗು ಕಬ್ಬಿಣಾಂಶವನ್ನು ಮಿಶ್ರಣಗೊಳಿಸಿರುವ ಡಬಲ್‍ಫೋರ್ಟಿಫೈಡ್” ಉಪ್ಪನ್ನು ಇತ್ತೀಚಿಗೆ ತಯಾರಿಸಲಾಗಿದ್ದು ಸೂರ್ಯ ಗುರುತಿನ ಚಿಹ್ನೆಯನ್ನು ಮುದ್ರಿಸಲಾಗಿರುವ  ಪ್ಯಾಕೇಟ್ ಉಪ್ಪನ್ನು  ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 
       ಶ್ರೀ ಶ್ರೀ ಆದಿತ್ಯನಾಥಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ವೆಂಕಟೇಶ್, ಶಿಕ್ಷಕರಾದ ರಮ್ಯ,  ಪವಿತ್ರಮ್ಮ  ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಯೋಡಿನ್ ಕೊರತೆ ರೋಗಗಳ ನಿಯಂತ್ರಣದ ಬಗ್ಗೆ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.
ನ. 1 ರಂದು ಮಂಡ್ಯ  ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಪ್ರಾರಂಭ
    ದೌರ್ಜನಕ್ಕೆ ಒಳಗಾದ ಮಹಿಳೆಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ, ರಕ್ಷಣೆ, ಕಾನೂನು ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನವೆಂಬರ್ 1 ರಂದು ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 07 ಮತ್ತು 08 ರಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುತ್ತಿದ್ದು ಈ ಘಟಕವು ದಿನದ 24 ಘಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ ಅವರು ತಿಳಿಸಿದ್ದಾರೆ.
      ಈ ಘಟಕವು ಇಬ್ಬರು ವೈದ್ಯಾಧಿಕಾರಿಗಳು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ, ನಾಲ್ವರು ನರ್ಸ್‍ಗಳು, ಓರ್ವ ಆಪ್ತ ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು, ಮೂವರು ಸಮಾಜ ಸೇವಾ ಕಾರ್ಯಕರ್ತರು ಹಾಗೂ ಇಬ್ಬರು ಸ್ವಚ್ಛತಗಾರರನ್ನು ಹೊಂದಿದ್ದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ, ಮಹಿಳಾ ಸಹಾಯವಾಣಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಈ ಘಟಕದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
    ಮಹಿಳಾ ವಿಶೇಷ ಚಿಕಿತ್ಸಾ ಘಟಕವು 181 ರ ದೂರವಾಣಿ ಸಂಖ್ಯೆಯ ಉಚಿತ ಸಹಾಯವಾಣಿ ಸೌಲಭ್ಯವನ್ನು ಹೊಂದಿರುತ್ತದೆ. ಈ ಘಟಕದಲ್ಲಿ ವೈದ್ಯರು, ಕಾನೂನು ಸಲಹೆಗಾರರು, ಮಹಿಳಾ ಪೊಲೀಸ್ ಅಧಿಕಾರಿ, ಸಮಾಲೋಚಕರು, ಸಮಾಜ ಸೇವಾ ಕಾರ್ಯಕರ್ತರು ಲಭ್ಯರಿರುತ್ತಾರೆ.
    ಮಹಿಳಾ ವಿಶೇಷ ಚಿಕಿತ್ಸಾ ಘಟಕವು ಒಂದು ಸಮಗ್ರವಾದ ಸೇವೆಯನ್ನು ಒದಗಿಸುವ ಹಾಗೂ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯನ್ನು ಸಂಪರ್ಕಿಸಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುತ್ತದೆ. ಲೈಂಗಿಕ ಮತ್ತು ಕೌಟುಂಬಿಕ ದೌರ್ಜನಕ್ಕೆ ಒಳಗಾದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾದ ಪರಿಸರ ಮತ್ತು ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಮಾನ ರೀತಿಯ ಸೇವೆಯನ್ನು ಒದಗಿಸಲಾಗುವುದು.
        ಅಲ್ಲದೇ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ವಿವರ, ವೈದ್ಯಕೀಯ ಮಾದರಿಗಳು ಮತ್ತು ದಾಖಲಾತಿಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಲಾಗುವುದು.ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ದಿನದ 24 ಘಂಟೆಗಳೂ ಕಾರ್ಯ ನಿರ್ವಹಿಸುವಂತಹ ಮಹಿಳಾ ಹೆಲ್ಪ್ ಡೆಸ್ಕನ್ನು ಸ್ಥಾಪಿಸಲಾಗುವುದು. ಈ ಘಟಕದಲ್ಲಿ ಕಾರ್ಯನಿರ್ವಹಿಸುವ ಸಮಾಲೋಚಕರು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೌಕರ್ಯ ಒದಗಿಸುವ (ಈeಛಿiಟiಣಚಿಣoಡಿ) ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ.
     ಜಿಲ್ಲಾ ವಿಶೇಷ ಮಹಿಳಾ ಚಿಕಿತ್ಸಾ ಘಟಕವನ್ನು ದಿನಾಂಕ :01-11-2014ರಂದು ಮಾನ್ಯ ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಅಂಬರೀಶ್, ಕರ್ನಾಟಕ ಸರ್ಕಾರ ರವರು ಉದ್ಘಾಟಿಸಲಿದ್ದು, ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದಂತಹ ಶ್ರೀಮತಿ ಮಂಜುಳಾ ಪರಮೇಶ್ವರ್ ರವರು ಹಾಗೂ ಮಾನ್ಯ ಸಂಸತ್ ಸದಸ್ಯರಾದ ಶ್ರೀ ಸಿ.ಎಸ್. ಪುಟ್ಟರಾಜು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀ ಸಿದ್ದರಾಜುರವರು ಹಾಗೂ ಇತರ ಗಣ್ಯರು ಸದರಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                                                        

No comments:

Post a Comment