Thursday 2 October 2014



ಗಾಂಧಿರವರ ಕನಸನ್ನು ನನಸು ಮಾಡಲು ಸ್ವಚ್ಚ ಭಾರತ್‍ಗೆ ಚಾಲನೆ : ಸಿಎಸ್ಪಿ
ಮಂಡ್ಯ,ಸೆ.2- ರಾಷ್ಟ್ರಕ್ಕೆ ಸ್ವತಂತ್ರವನ್ನು ತಂದಂತಹ ಮಹಾತ್ಮಗಾಂಧಿರವರ ಕನಸನ್ನು ನನಸು ಮಾಡುವ ಸಲುವಾಗಿ ಸ್ವಚ್ಚ ಭಾರತ್‍ಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಪುಟ್ಟರಾಜು ತಿಳಿಸಿದರು.
ಗಾಂಧಿಜಯಂತಿ ಅಂಗವಾಗಿ ಇಂದು ನಗರದ ರೈಲ್ವೇ ನಿಲ್ದಾಣದಲ್ಲಿ ಅವರು ದೀಪ ಬೆಳಗಿ ಮಹಾತ್ಮ ಗಾಂಧಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ “ಸ್ವಚ್ಚ ಭಾರತ್”ಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಒಟ್ಟಿಗೆ ಸ್ವಚ್ಚಭಾರತ್‍ಗೆ ಚಾಲನೆಯನ್ನು ನೀಡಿದ್ದು, ನಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ಪಚ್ಚವಾಗಿಡುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರವನ್ನು ಶುಚಿಗೊಳಿಸಿ ಆರೋಗ್ಯವಂತರಾಗಿರಬೇಕೆಂದರು.
ದೇಶದಾಧ್ಯಂತ ಇರುವ ಎಲ್ಲಾ ರೈಲ್ವೆ ನಿಲ್ದಾಣಗಳನ್ನು ಶುಚಿಯಾಗಿಡುವುದು ಬಹು ಮುಖ್ಯವಾಗಿದೆ. ಆದ್ದರಿಂದಾಗಿಯೇ ನಗರದ ರೈಲ್ವೆ ನಿಲ್ದಾಣದಿಂದಲೆ ಈ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಲಿದೆ ಎಂದು ಅವರು ತಿಳಿಸಿದರು.
ನಗರದ ನಾಗರೀಕರು ಹಾಗೂ ಜಿಲ್ಲೆಯ ಎಲ್ಲಾ ಜನತೆ ಪ್ರಾಮಾಣಿಕವಾಗಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ, ಭಾರತವನ್ನು ಸ್ವಚ್ಚ ಭಾರತವನ್ನಾಗಿಸಬೇಕೆಂದು ಕರೆ ನೀಡಿದರು.
ಜಿಲ್ಲಾಧಿಕಾರಿಗಳು ಪ್ರತಿಜ್ಞಾವಿಧಿ ಭೋದಿಸಿ ವಾರದಲ್ಲಿ ಕನಿಷ್ಠ ಎರಡು ಗಂಟೆ, ವರ್ಷದಲ್ಲಿ 100 ಗಂಟೆಗಳಕಾಲ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಬೇಕು, ನಮ್ಮ ಪರಿಸರ, ಕುಟುಂಬ, ನಮ್ಮ ಕಛೇರಿಯನ್ನು ಸ್ವಚ್ಚ ಮಾಡಿಕೊಳ್ಳುವಂತೆ ಪ್ರತಿಜ್ಞೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ರೋಹಿಣಿ ಸಿಂಧೂರಿ, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್.ಜಿ.ಬೋರಸೆ, ನಗರಸಭಾಧ್ಯಕ್ಷ ಬಿ.ಸಿದ್ದರಾಜು, ಉಪಾಧ್ಯಕ್ಷೆ ಚಂದ್ರಕಲಾ ಶಿವರಾಮು, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಡಿ.ರಮೇಶ್, ಎಸ್.ಶ್ರೀನಿವಾಸ್ ಇದ್ದರು.

ಜಿ.ಪಂ. ವತಿಯಿಂದ ಗಾಂಧಿ ಜಂಯತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಜಿ.ಪಂ. ಕಾರ್ಯದರ್ಶಿ ಎನ್.ಡಿ. ಪ್ರಕಾಶ್ ಮಾತನಾಡಿ ಸ್ವಚ್ಚತಾ ಆಂದೋಲನ ಬರಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಸ್ವಚ್ಚ ಭಾರತ ನಿರ್ಮಾಣದ ಗುರಿಯಂತೆ ಪೂಜ್ಯ ಗಾಂಧಿರವರ ಕನಸನ್ನು ನನಸಾಗಿಸಲು ಆಧ್ಯತೆ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ನ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.


ಜಿ.ಪಂನ ಎಂಜಿನಿಯರಿಂಗ್ ವಿಭಾಗದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಪಾಲಕ ಅಭಿಯಂತರ ಚನ್ನಯ್ಯ, ಚಂದ್ರಹಾಸ್ ಹಾಗೂ ಇಂಜಿನಿಯರ್ ವಿಭಾಗದ ಸಿಬ್ಬಂಧಿಗಳು ಗಾಂಧಿ ಜಯಂತಿ ಆಚರಿಸಿದರು.

No comments:

Post a Comment