Friday 10 October 2014

ಸ್ವಉದ್ಯೋಗದಿಂದ ನಿರುದ್ಯೋಗ ನಿವಾರಣೆ ಸಾಧ್ಯ-ಬಸವರಾಜು
         
      ಮಂಡ್ಯ : ಕಲಿತ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವುದಿಲ್ಲ.ಆದರೆ ಪ್ರತಿಯೊಬ್ಬರಿಗು ಉದ್ಯೋಗದ ಅಗತ್ಯ ಇದೆ.ನಿರುದ್ಯೋಗಿಗಳಾಗಿ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಿಲ್ಲ.ಈ ನಿಟ್ಟಿನಲ್ಲಿ ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬಹುದು ಎಂದು ವಿಜಯ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಬಸವರಾಜು ಅಭಿಪ್ರಾಯಪಟ್ಟರು.
    ಅವರು ಬಸರಾಳು ಸ.ಪ.ಪೂ.ಕಾಲೇಜು ವತಿಯಿಂದ ಸಿದ್ದೇಗೌಡನಕೊಪ್ಪಲಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ “ಸ್ವಾವಲಂಬನೆಗಾಗಿ ಸ್ವ ಉದ್ಯೋಗ” ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
   ಸರ್ಕಾರಿ ಕೆಲಸ ಪಡೆಯುವುದು ವಿದ್ಯೆ ಕಲಿತವರ ಗುರಿಯಾಗಿರುತ್ತದೆ.ಸರ್ಕಾರಿ ಕೆಲಸದಲ್ಲಿ ನಿಗದಿತ ಕಾಲದಲ್ಲಿ ನಿಗದಿತ ಸಂಬಳಕ್ಕಾಗಿ ಬೇರೆಯವರ ಮರ್ಜಿಯಲ್ಲಿ ಕೆಲಸ ಮಾಡಬೇಕಾಗಿದೆ.ಸರ್ಕಾರಿ ಕೆಲಸ ಎಂದರೆ ಭದ್ರತೆ,ಜೀವನಪೂರ್ತಿ ಸಂಬಳ ಎಂಬ ಮಾತು ಇಂದು ಹುಸಿಯಾಗುತ್ತಿದೆ.ಸ್ವ ಉದ್ಯೋಗ ಪ್ರಾರಂಭಿಸುವುದರಿಂದ ಆತ್ಮಸಂತೋಷದ ಜೊತೆಗೆ ನಮ್ಮ ಶ್ರಮಕ್ಕೆ ತಕ್ಕಂತೆ ನಾವು ನಮ್ಮ ಆದಾಯವನ್ನು ಗಳಿಸಬಹುದು.ಇಲ್ಲಿ ಯಾರದೇ ಹಿಡಿತವಿಲ್ಲದೇ ನಾವೇ ಆಸಕ್ತಿಯಿಂದ ಕೆಲಸ ಮಾಡಿದರೆ ನಾವು ಗಳಿಸುವುದರ ಜೊತೆಗೆ ಬೇರೆಯವರಿಗೂ ಉದ್ಯೋಗ ಕೊಡಬಹುದು.ಉದ್ಯಮಶೀಲತೆ ಇಂದು ಜಗತ್ತನ್ನು ಆಳುತ್ತಿದೆ.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ನಂತರ ಸರ್ಕಾರಿ ಕೆಲಸಕ್ಕಾಗಿ ಕಾಯದೇ, ತಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು ಸೂಕ್ತ ತರಬೇತಿ ಪಡೆದು ಬ್ಯಾಂಕ್‍ನಂತಹ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆದು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸಬೇಕೆಂದು ಕರೆ ನೀಡಿದರು.
     ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜ್ಞಾನಜ್ಯೋತಿ ಆರ್ಥಿಕ ಸೇರ್ಪಡೆ ಕೇಂದ್ರದ ಅಧಿಕಾರಿ ಸುರೇಶ್ ಆಚಾರ್ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ತಮ್ಮ ಭವಿಷ್ಯದ ಬದುಕು ರೂಪಿಸಿಕೊಳ್ಳಲು  ಬ್ಯಾಂಕುಗಳು ಈಗ ಶಿಕ್ಷಣ ಸಾಲವನ್ನು ನೀಡುತ್ತಿವೆ.ಗ್ರಾಮೀಣ ಪ್ರದೇಶದ  ಬಡ ವಿದ್ಯಾರ್ಥಿಗಳು ಈಗ ಶಿಕ್ಷಣದಿಂದ ವಂಚಿತವಾಗಬೇಕಿಲ್ಲ.ಜೊತೆಗೆ ಸ್ವ ಉದ್ಯೋಗಕ್ಕೂ ಸರ್ಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿವೆ.ಅವುಗಳ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೌಡ್ಲೆ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಜಿ.ವಿ.ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಅಭ್ಯಸಿಸಿದರೆ ಆಸಕ್ತಿ ಮೂಡುತ್ತದೆ.ಆ ಆಸಕ್ತಿಯೇ ಮುಂದೆ ನಿಮಗೆ ಬದುಕುವ ಶಕ್ತಿಯನ್ನು ನೀಡುತ್ತದೆ.ಬದುಕಿನ ದಾರಿಯನ್ನು ಹುಡುಕಿದಾಗ ದಾರಿ ತಾನಾಗೇ ಗೋಚರವಾಗುತ್ತದೆ.ಹುಡುಕಾಟ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.ಹೀಗಾಗಿ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಪ್ರವೃತ್ತಿ ಇರಬೇಕು ಎಂದರು.
    ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರಮೂರ್ತಿ,ಹಿರಿಯ ಉಪನ್ಯಾಸಕರಾದ ಕೆ.ಎನ್.ಮಲ್ಲೇಗೌಡ,ಉಪನ್ಯಾಸಕರಾದ ಹೊಳಲು ಶ್ರೀಧರ್, ಹೆಚ್.ಪುಟ್ಟಸ್ವಾಮಿ ಶಿಬಿರಾಧಿಕಾರಿ ಬಿ.ಮಂಜುನಾಥ್,ಸಹ ಶಿಬಿರಾಧಿಕಾರಿಗಳಾದ ವೈ.ಸುರೇಶ್,ವಿಶ್ವನಾಥ್ ಉಪಸ್ಥಿತರಿದ್ದರು.

No comments:

Post a Comment