Thursday 16 October 2014


ದಕ್ಷತೆಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ಮೈಸೂರು, ಅ 16. ಸಾರ್ವಜನಿಕರಿಗೆ ಸರ್ಕಾರಿ ಆಡಳಿತ ವೈಖರಿಗಳ ಮೇಲೆ ನಂಬಿಕೆ ಹೋಗದಂತೆ ಶ್ರದ್ಧೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದರು. ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಹಾಗೂ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದ ಆಡಳಿತ ವೈಖರಿಯ ಮೇಲೆ ನಂಬಿಕೆ ಇಟ್ಟು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸುತ್ತಾರೆ. ಜನ ಸಮಾನ್ಯರ ದೂರು ಸ್ವೀಕರಿಸಿ ಪರಿಹಾರ ಕೊಡಿಸುವುದು ಈ ಫೋನ್-ಇನ್ ಕಾರ್ಯಕ್ರಮದಲ್ಲಿ ಮೂಲ ಉದ್ದೇಶ. ಆದರೆ ಸಮಸ್ಯೆಗಳು ಬಗೆಹರಿಯದಿರುವುರಿಂದ ಕೊಟ್ಟ ದೂರುಗಳೇ ಮತ್ತೆ ಮರುಕಳಿಸುತ್ತಿದೆ. ಇದು ಒಳ್ಳಯೆ ಬೆಳವಣಿಗೆಯಲ್ಲ. ಜನರ ನಂಬಿಕೆಯನ್ನು ಹುಸಿಗೊಳಿಸದೆ ಅಧಿಕಾರಿಗಳು ದೂರುಗಳಿಗೆ ಶೀಘ್ರ ಪರಿಹಾರಕೊಡಿಸಬೇಕು ಎಂದು ಸೂಚಿಸಿದರು. ಹೆಚ್ಚೆಂದರೆ ಮೂರ ರಿಂದ ನಾಲ್ಕು ದೂರುಗಳು ಒಂದು ಇಲಾಖೆಗೆ ಸಂಬಂಧಪಟ್ಟಿದ್ದಾಗಿರಬಹುದು. ಸಾರ್ವಜನಿಕರ ದೂರುಗಳಿಗೆ ನಿರ್ಲಕ್ಷ್ಯ ತೊರಿದರೆ, ಬಂದ ದೂರುಗಳು ಮತ್ತೆ ಮರುಕಳಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಕಚೇರಿಯಲ್ಲೇ ಕುಳಿತು ಕೆಲಸ ನಿರ್ವಹಿಸುವ ಬದಲು ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷೇತ್ರ ಪ್ರವಾಸ ಕೈಗೊಳ್ಳಬೇಕು. ಕ್ಷೇತ್ರ ಪ್ರವಾಸದಿಂದ ಸಮಸ್ಯೆಯ ಮೂಲವನ್ನು ನಿಖರವಾಗಿ ಅರಿಯಲು ಅನುಕೂಲ. ಕ್ಷೇತ್ರ ಪ್ರವಾಸ ಕೈಗೊಳ್ಳುವ ಮುನ್ನ ಅಧಿಕಾರಿಗಳು ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡಬೇಕು. ಯಾವುದೇ ಇಲಾಖೆಯ ಅಧಿಕಾರಿಯಾಗಿರಬಹುದು ಕ್ಷೇತ್ರ ಪ್ರವಾಸದ ವೇಳೆ ಕಡ್ಡಾಯವಾಗಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಬೇಕು ಹಾಗೂ ಅದರ ಸ್ಥಿತಿಗತಿಯ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೊಸ ರೀತಿಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಇಲಾಖೆಗಳು ಮುಂದೆ ಬಂದಲ್ಲಿ ಜಿಲ್ಲಾಡಳಿತಕ್ಕೆ ನೀಡಲಾಗಿರುವ ಜಿಲ್ಲಾ ನವೀನ ನಿಧಿಯಿಂದ ಅನುಧಾನವನ್ನು ನೀಡಲಾಗುವುದು. ಶನಿವಾರದೊಳಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹೊಸ ಕಾರ್ಯಕ್ರಮ ಹಾಗೂ ಅದಕ್ಕೆ ಬೇಕಾಗುವ ಅನುದಾನದ ವರದಿಯನ್ನು ಸಲ್ಲಿಸಿಬೇಕು ಎಂದು ಇದೇ ವೇಳೆ ಜಿಲ್ಲಾಧಿಕಾರಿ ಶಿಖಾ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮುಡಾ ಆಯುಕ್ತ ಪಾಲಯ್ಯ, ಅಪರ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಂಕರ್‍ರಾಜು, ಆಹಾರ ಇಲಾಖೆ ಉಪ ನಿರ್ದೇಶಕ ರಾಮೇಶ್ವರಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಲವು ದೂರುಗಳು ಸ್ವೀಕಾರÀ ಮೈಸೂರು ಅಕ್ಟೋಬರ್ 16. ಭೂಮಿ ಒತ್ತುವರಿ, ರಸ್ತೆ ದುರÀಸ್ತಿ, ಸ್ವಚ್ಛತೆ ಸಮಸ್ಯೆ, ಅಕ್ರಮ ಮರಳು ಮಾರಾಟ, ಖಾತೆ ಬದಲಾವಣೆ ವಿಳಂಬ ಸೇರಿದಂತೆ ಹಲವು ದೂರುಗಳು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ದಾಖಲಾದವು. ಟಿ.ನರಸೀಪುರ ತಾಲೂಕಿನ ಮೇಗಳಕೊಪ್ಪಲು ಗ್ರಾಮದಿಂದ ಮರಿಸ್ವಾಮಿ ಕರೆ ಮಾಡಿ ಗ್ರಾಮದ ಅಂಗನವಾಡಿ ಕಟ್ಟಡ ಕಿಟಕಿ ಬಾಗಿಲು ಇಲ್ಲದೆ, ಗಿಡ ಗಂಟೆಗಳು ಬೆಳೆದು ಹಾವು ಚೇಳು ಬರುತ್ತಿದೆ. ಕೇಂದ್ರದ ಕಡತಗಳನ್ನು ಇಡಲು ಇಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲ ಮತ್ತು ಕಾಂಪೌಂಡ್ ಸಹ ಕಟ್ಟಿಲ್ಲ. ಗ್ರಾಮದ ಬೀದಿ ದೀಪಗಳು ಕೆಟ್ಟು ಸೂಮಾರು ಸಮಯ ಕಳೆದಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ದೂರು ಕೇಳಿಬಂದಿರುವ ಗ್ರಾಮಕ್ಕೆ ಅಧಿಕಾರಿಗಳನ್ನು ಕಳುಹಿಸಿ ಅಂಗನವಾಡಿ ಕೇಂದ್ರವನ್ನು ದುರಸ್ತಿಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿಲಾಗುವುದು ಎಂದರು. ಹೆಚ್.ಡಿ.ಕೋಟೆಯಲ್ಲಿ ಮನೆ ಕಟ್ಟುವುದಕ್ಕೆ ಮರಳು ಸಿಗುತ್ತಿಲ್ಲ. ಮರಳು ಬ್ಲ್ಯಾಕ್‍ನಲ್ಲಿ ಮಾರಾಟವಾಗುತ್ತಿದೆ. ಸಿದ್ದಮೂರ್ತಿ ಎಂಬುವವರು ರೌಡಿಗಳ ಸಹಾಯದಿಂದ ಹೆಚ್ಚಿನ ಬೆಲೆಗೆ ಮರಳನ್ನು ಮಾರುತ್ತಿದ್ದಾರೆ ಎಂದು ಶ್ರೀನಿವಾಸ್ ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಮರಳನ್ನು ಬ್ಲ್ಯಾಕ್‍ನಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ. ಸ್ಥಳಕ್ಕೆ ತಹಸೀಲ್ದಾರ್ ತಕ್ಷಣವೇ ಭೇಟಿ ನೀಡಿ ಅಕ್ರಮ ಮರಳು ಮಾರಾಟ ನಿಲ್ಲಿಸಲು ಕ್ರಮ ವಹಿಸಲಿದ್ದಾರೆಂದು ತಿಳಿಸಿದರು. ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿ ಗ್ರಾಮದ ಮನೋಜ್ ಎಂಬುವವರು ನನಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಗ್ರಾಮದವರಿಗೆ ನಿವೇಶನವನ್ನು ಮಾರಾಟ ಮಾಡಿದ್ದಾರೆ. ಗ್ರಾಮ ಮಹಿಳಾ ಸಹಕಾರ ಸಂಘದ 75 ಸಾವಿರ ಹಣವು ದುರುಪಯೋಗವಾಗಿದೆ. ದೂರು ನೀಡಿದರು ಕ್ರಮವಹಿಸಿಲ್ಲ. ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿದ್ದೇನೆ. ಯಾವುದೇ ಕ್ರಮಕೈಗೊಂಡಿಲ್ಲ. ಪ್ರತಿ ವಾರ ಸಂಘದಲ್ಲಿ ಹಣ ಬಟವಾಡೆಯಾಗಬೇಕು, ಆದರೆ ಇಲ್ಲಿಯವರೆಗೂ ನಡೆದಿಲ್ಲ. ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಭೂಮಿ ಅಕ್ರಮವಾಗಿ ಒತ್ತಿವರಿಯಾಗಿರುವುದು ಕಂಡುಬಂದಲ್ಲಿ ತೆರವುಗೊಳಿಸಲಾಗುವುದು ಹಾಗೂ ಹಣದ ದುರುಪಯೋಗವಾಗಿದ್ದರೆ, ಗಂಭೀರ ಕ್ರಮ ತೆಗೆದುಕÉೂಳ್ಳಲಾಗುವುದು ಎಂದರು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಕಾಶಿ ಅವರು ಕರೆ ಮಾಡಿ ಈ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಪಿ.ಡಿ.ಓ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಭಾಗಿಯಾಗಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೇಳಿದರೂ ಮಾಹಿತಿ ನೀಡುತ್ತಿಲ್ಲ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆಸಲು ಆಗುವುದಿಲ್ಲ. ಒಂದು ವೇಳೆ ಅಕ್ರಮ ಕಂಡು ಬಂದಲ್ಲಿ ತನಿಖೆಯನ್ನು ನಡೆಸಿ ಕ್ರಮವಹಿಸಲಾಗುವುದು ಎಂದು ದೂರುದಾರರಿಗೆ ತಿಳಿಸಿದರು. ನಂಜನಗೂಡು ತಾಲೂಕಿನ ಯಲಚಗೆರೆಯಿಂದ ಯೋಗೇಂದ್ರ ಪ್ರಸಾದ್, ಮಹದೇವೆಗೌಡ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ದೇವರಾಜ ಅರಸ್ ಅಭಿವವೃದ್ಧಿ ನಿಗಮ ಕೊಳವೆ ಬಾವಿಯನ್ನು ಕೊರೆಸಲು ಅರ್ಜಿ ಸಲ್ಲಿಸಿ ಇಂದು ವರ್ಷ ಕಳೆದರೂ, ಕ್ರಮಕೈಗೊಂಡಿಲ್ಲ ಎಂದು ಹೇಳಿದರು. ಜಿಲ್ಲಾಧಿಕಾರಿಯವರು ದೂರಿಗೆ ಸ್ಪಂಧಿಸಿ ಅರ್ಜಿಯ ಸಂಪೂರ್ಣ ವಿವಿರವನ್ನು ಜಿಲ್ಲಾಡಳಿತಕ್ಕೆ ನೀಡಿದರೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿಯನ್ನು ಪರಿಶೀಲಿಸಿ ಕ್ರಮವಹಿಸಲು ನಿರ್ದೇಶಿಸಲಾಗುವುದು ಎಂದರು. ಹೆಚ್.ಡಿ.ಕೋಟೆ ಮತ್ತು ತಾರಕ ರಸ್ತೆ ಕೆಟ್ಟು ಹೋಗಿದೆ. ಜನ ಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ, ಪ್ರಯೋಜನವಾಗಿಲ್ಲ. ತಾಲೂಕು ಕಚೇರಿಗೂ ದೂರು ಸಲ್ಲಿಸಲಾಗಿದೆ ಕ್ರಮವಹಿಸಿಲ್ಲ. ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲ. ಶಾಲೆಗೆ ಸಂಚರಿಸಲು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಲಾಜರ್ ಮನವಿ ಮಾಡಿದರು. ಈ ಸಂಬಂಧ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಲಾಗುವುದೆಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಒಳಚರಂಡಿ, ಗ್ಯಾಸ್ ಸಿಲಿಂಡರ್ ಸರಬರಾಜು, ಪÀಡಿತರ ಚೀಟಿ ಗೊಂದಲ ಸೇರಿದಂತೆ ಹಲವು ದೂರುಗಳು ಕೇಳಿಬಂದವು. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಮೈಸೂರು, ಅ 16 ಮನುಷ್ಯನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಅತ್ಯಂತ ಮುಖ್ಯ. ಮಾನಸಿಕ ಆರೋಗ್ಯದಲ್ಲಿ ಸ್ವಲ್ಪ ತೊಂದರೆಯಾದರು ಸಹ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಲು ಇಂದು ಮೈಸೂರು ವೈದ್ಯಕೀಯ ಕಾಲೇಜಿನ ಮಾನಸಿಕ ರೋಗ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಗೆ ಮೈಸೂರು ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರಾದ ಡಾ|| ಬಿ.ಕೃಷ್ಣಮೂರ್ತಿ ಅವರು ಮೈಸೂರು ವೈದ್ಯಕೀಯ ಕಾಲೇಜಿನ ಮುಂಭಾಗದಿಂದ ಚಾಲನೆ ನೀಡಿದರು. ಜಾಥಾವು ಇರ್ವಿನ್ ರಸ್ತ, ಧÀನ್ವಂತ್ರಿ ರಸ್ತೆಯ ಮೂಲಕ ಸಾಗಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಸಮಾರೋಪಗೊಂಡಿತು. ಮಾನಸಿಕ ಆರೋಗ್ಯ ದಿನಾಚರಣೆಯನ್ನು ಕೆ.ಆರ್.ಆಸ್ಪತ್ರೆಯ ರೋಗಶಾಸ್ತ್ರ ಉಪನ್ಯಾಸ ಕೊಠಡಿಯಲ್ಲಿ ಉದ್ಘಾಟಿಸಿದ ನಂತರ ಮೈಸೂರು ವೈದ್ಯಕೀಯ ಕಾಲೇಜಿನ ಮನೋವೈದ್ಯ ವಿಭಾಗದ ಮುಖ್ಯಸ್ಥ ಡಾ ರವೀಶ್ ಅವರು ಮಾತನಾಡಿ ಆಧುನಿಕ ಜೀವನ ಶೈಲಿ ಹಾಗೂ ಒತ್ತಡದಿಂದ ಮಾನಸಿಕ ತೊಂದರೆಗಳು ಉಂಟಾಗುತ್ತಿದೆ. ಮಾನಸಿಕ ತೊಂದರೆ ಶ್ರೀಮಂತರು, ಬಡವರು, ವಯೋವೃದ್ದರು, ಚಿಕ್ಕ ಮಕ್ಕಳು ಯಾರಲ್ಲಿ ಬೇಕಾದರೂ ಕಂಡುಬರಬಹುದು. ಮಾನಸಿಕ ತೊಂದರೆಯನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯ ಎಂದರು. ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ: ಬಿ.ಜಿ ಸಾಗರ್ ಅವರು ಮಾತನಾಡಿ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯ ಉಂಟಾದರೆ ಮನುಷ್ಯ ದೈಹಿಕ ಆರೋಗ್ಯವನ್ನು ಸಹ ಕಳೆದುಕೊಳ್ಳುತ್ತಾನೆ ಕುಟುಂಬ ಹಾಗೂ ಸಮಾಜಕ್ಕೂ ಸಹ ತೊಂದರೆಯಾಗುತ್ತಾನೆ ಆದರಿಂದ ವiನಸಿಕ ಆರೋಗ್ಯಕ್ಕೆ ಮನುಷ್ಯ ಮೊದಲ ಆದ್ಯತೆ ನೀಡಬೇಕು ಎಂದರು. ಮೈಸೂರು ವೈದ್ಯಕೀಯ ಕಾಲೇಜಿನ ಮನೋವೈದ್ಯ ವಿಭಾಗದ ಡಾ ಅನಿಲ್ ಕುಮಾರ್ ಅವರು ಲಿವಿಂಗ್ ವಿಥ್ ಸ್ಕಿಜೋಫ್ರೇನಿಯಾ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸ್ಕಿಜೋಫ್ರೇನಿಯಾ ಎನ್ನುವುದು ತೀವ್ರವಾದ, ಗಂಭೀರವಾದ ಮತ್ತು ಮಾನಸಿಕ ವೈಕಲ್ಯದ ಸ್ಥಿತಿಯಾಗಿದೆ. ಇದು ಉಂಟಾದ ಸಂದರ್ಭದಲ್ಲಿ ವ್ಯಕ್ತಿಯ ಭಾವನೆಗಳಲ್ಲಿ ಏರು ಪೇರು ಉಂಟಾಗಿ ಸಮಾಜದಿಂದ ಬಹಿರ್ಮುಖರಾಗುತ್ತಾರೆ. ಸ್ಪಷ್ಟವಾಗಿ ಆಲೋಚಿಸಲು , ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಕರವಾಗಿ ಇತರರಿಗೂ ಸಂಬಂಧಿಸಿದಂತೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಾರೆ. ಸ್ಕಿಜೋಫ್ರೇನಿಯಾ ಜೈವಿಕ ಹಾಗೂ ವಂಶವಾಹಿ ಅಂಶಗಳ ಸಂಯೋಜನೆಯಿಂದ ಉಂಟಾಗುತ್ತದೆ. ಇದು ವಾತಾವರಣದ ಒತ್ತಡದ ಅಂಶದಿಂದ ಪ್ರೇರೇಪಿಸಲ್ಪಡುತ್ತದೆ. ಇದು ಸಾಂಕ್ರಾಮಿಕ ರೋಗವಲ್ಲ. ಇದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ಸ್ಕಿಜೋಫ್ರೇನಿಯಾ ಉಂಟಾದ ಸಂದರ್ಭದಲ್ಲಿ ಮೆದುಳಿನಲ್ಲಿ ರಚನಾತ್ಮಕ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುತ್ತದೆ. ವ್ಯಕ್ತಿಯು ವಾಸ್ತವ ಅಥವಾ ಸತ್ಯವಲ್ಲದ ವಿಷಯಗಳನ್ನು ನಂಬುವುದು, ವಾಸ್ತವವಲ್ಲದ ಅಥವಾ ಅಸ್ತಿತ್ವವಿಲ್ಲದ ವಸ್ತುಗಳನ್ನು ಕೇಳಿಸಿಕೊಳ್ಳುವುದು ಹಾಗೂ ನೋಡುವುದು, ಭಾವನಾತ್ಮಕತೆಯ ಕೊರತೆ, ಮಂಕುತನ, ದೈನಂದಿನ ಚಟುವಟಿಕೆಯಲ್ಲಿ ಆಸಕ್ತಿ ಅಥವಾ ಆನಂದದ ಕೊರತೆ ಸ್ಕಿಜೋಫ್ರೇನಿಯಾದ ಲಕ್ಷಣಗಳಾಗಿವೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕುಟುಂಬ ಸದಸ್ಯರು ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ಸ್ವಾತಂತ್ರವಾಗಿ ಕೆಲಸ ಮಾಡಲು ಪ್ರೋತ್ಸಹಿಸುವುದು, ಒತ್ತಡ ಕಡಿಮೆ ಮಾಡುವುದರಿಂದ ಸ್ಕಿಜೋಫ್ರೇನಿಯಾವನ್ನು ಗುಣಪಡಿಸಬಹುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ|| ಜಿ.ಎಸ್. ವೆಂಕಟೇಶ್, ಜಿಲ್ಲಾ ಶಸ್ತ್ರÀಚಿಕಿತ್ಸಕ ಡಾ|| ಜಿ.ಎಂ. ವಾಮದೇವ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ|| ಜಿ.ಎನ್. ನಾಗಲಕ್ಷ್ಮಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮೈಸೂರು ವಿಭಾಗದ ಅಧ್ಯಕ್ಷ ಡಾ|| ಎಂ.ಎಸ್. ಕಂಪೇಗೌಡ, ಕಾರ್ಯದರ್ಶಿ ಡಾ|| ಬಿ.ಎನ್. ಆನಂದರವಿ ಅವರು ಭಾಗವಹಿಸಿದ್ದರು.

No comments:

Post a Comment