Friday 12 September 2014

ಕೃಷ್ಣರಾಜಪೇಟೆ. ಪಟ್ಟಣದ ಜನತೆಗೆ ಶುದ್ಧವಾದ ಕುಡಿಯುವ ನೀರು ಮತ್ತು ಸ್ವಚ್ಛತೆಯನ್ನು ಒದಗಿಸಿಕೊಡುವುದು ಪುರಸಭೆಯ ಆದ್ಯ ಕರ್ತವ್ಯವಾಗಿದ್ದರೂ ತಮ್ಮ ಶಾಸಕರ ಪ್ರದೇಶಾಭಿವೃಧ್ಧಿ ನಿಧಿಯಿಂದ ಕೆ.ಆರ್.ಪೇಟೆ-ಹೊಸಹೊಳಲು ಅವಳಿ ಪಟ್ಟಣಗಳ ಎಲ್ಲಾ 23 ವಾರ್ಡುಗಳಲ್ಲಿಯೂ ಕಿರು ನೀರು ಸರಬರಾಜು ಘಟಕಗಳನ್ನು ಸ್ಥಾಪಿಸಿ ಕುಡಿಯುವ ನೀರು ಕೊಡಲು ಮುಂದಾಗಿರುವುದಾಗಿ ಶಾಸಕ ನಾರಾಯಣಗೌಡ ಹೇಳಿದರು.
ಅವರು ಇಂದು ಪಟ್ಟಣದ ಪುರಸಭೆ ವ್ಯಾಪ್ತಿಯ 9ನೇ ವಾರ್ಡಿನ ಬಸವನಗುಡಿಯ ಹಿಂಭಾಗದ ಬೀದಿಯಲ್ಲಿ ತಮ್ಮ ಶಾಸಕರ ಅನುದಾನದಿಂದ ನಿರ್ಮಿಸಿರುವ ಕಿರು ನೀರು ಸರಬರಾಜು ಘಟಕವನ್ನು ಉದ್ಘಾಟಿಸಿ ನಾಗರಿಕರನ್ನು ಉದ್ಧೇಶಿಸಿ ಮಾತನಾಡಿದರು.
ಕೆ.ಆರ್.ಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಪಟ್ಟಣವು ಬೆಳೆದಂತೆ ನಗರವಾಸಿಗಳಿಗೆ ಶುದ್ಧವಾದ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳು ಹಾಗೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿ ಜನತೆಗೆ ಅನುಕೂಲ ಮಾಡಿಕೊಡುವುದು ಪುರಸಭೆಯ ಆದ್ಯ ಕರ್ತವ್ಯವಾಗಿದೆ. ಆದರೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಒಬ್ಬ ಸೇವಕನಂತೆ ಕೆಲಸ ಮಾಡುತ್ತಿರುವ ತಾವು ಕೆ.ಆರ್.ಪೇಟೆಯಿಂದ ಹೇಮಗಿರಿಗೆ ನೂತನವಾಗಿ ಎಕ್ಸ್‍ಪ್ರೆಸ್ ವಿದ್ಯುತ್ ಲೈನನ್ನು ನಿರ್ಮಿಸಿಕೊಟ್ಟು ಪಟ್ಟಣಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಸರಬರಾಜು ಮಾಡುವ ಪಂಪ್‍ಹೌಸಿಗೆ ವಿದ್ಯುತ್ ತೊಂದರೆಯಾಗದಂತೆ ಮಾಡಿರುವುದರಿಂದ ಪಟ್ಟಣದ ಜನತೆಗೆ ವ್ಯವಸ್ಥಿತವಾಗಿ ಕುಡಿಯುವ ನೀರು ಸರಬರಾಜಾಗುತ್ತಿದೆ. ವಿದ್ಯುತ್ ಸಮಸ್ಯೆಯು ಉಲ್ಭಣಿಸಿದ ಸಮಯದಲ್ಲಿ ಪಟ್ಟಣ ವಾಸಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿರುವ ತಾವು ಎಲ್ಲಾ ವಾರ್ಡುಗಳಲ್ಲಿಯೂ ಶುದ್ಧವಾದ ನೀರು ಸರಬರಾಜಿಗೆ ಅನುಕೂಲವಾಗುವಂತೆ ಕಿರು ನೀರು ಸರಬರಾಜು ಘಟಕಗಳನ್ನು ಸ್ಥಾಪಿಸಲು ತಮ್ಮ ಅನುದಾನವನ್ನು ಸದ್ಭಳಕೆ ಮಾಡುತ್ತಿರುವುದಾಗಿ ಹೇಳಿದರು.
ಕೃಷ್ಣರಾಜಪೇಟೆ ಪಟ್ಟಣದ ಜನತೆಗೆ ಅತೀ ಮುಖ್ಯವಾಗಿ ಬೇಕಾಗಿರುವ ಒಳಚರಂಡಿ ಯೋಜನೆ ಕಾಮಗಾರಿಯು ನೆನಗುದಿಗೆ ಬಿದ್ದು ಕುಂಟುತ್ತಾ ಸಾಗಿತ್ತು. ಒಳಚರಂಡಿ ಯೋಜನೆಯ ಪೈಪುಗಳಿಗೆ ಅನಧಿಕೃತವಾಗಿ ಪಟ್ಟಣ ವಾಸಿಗಳು ಸಂಪರ್ಕ ನೀಡಿರುವುದರಿಂದ ಕೆಲವು ಸ್ಥಳಗಳಲ್ಲಿ ಮಲಯುಕ್ತವಾಗಿರುವ ಮಲಿನ ನೀರು ಒಳಚರಂಡಿ ಯೋಜನೆಯ ಗುಂಡಿಯಿಂದ ಹೊರಬಂದು ಪಟ್ಟಣ ವಾಸಿಗಳಿಗೆ ಗಬ್ಬು ನಾತ ಹೊಡೆಯುತ್ತಿದೆಯಲ್ಲದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವಾಗ ಮೂಗು ಮುಚ್ಚಿಕೊಂಡು ತಿರುಗಬೇಕಾಗಿದೆ. ಆದ್ದರಿಂದ ಹೊಸಹೊಳಲು ಗ್ರಾಮದ ಹರಿಜನ ಕಾಲೋನಿಯ ಜನತೆಯ ಮನವೊಲಿಸಿ ಸೆಪ್ಟಿಕ್ ಟ್ಯಾಂಕಿನ ನಿರ್ಮಾಣಕ್ಕೆ ಚಾಲನೆ ನೀಡಿಸಿದ್ದೇನೆ. ಕತ್ತರಘಟ್ಟದ ನಿರ್ಜನ ಪ್ರದೇಶದಲ್ಲಿ ಮಲ ಸಂಸ್ಕರಣ ಘಟಕವನ್ನು ಆರಂಬಿಸಲು ಸ್ಥಳ ಗುರುತಿಸುವ ಕಾರ್ಯವು ಭರದಿಂದ ಸಾಗಿದೆ. ಜನತೆಯಿಂದ ಮತ ಪಡೆದು ಆಯ್ಕೆಯಾಗಿರುವ ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಮರೆಯದೇ ಜವಾಬ್ಧಾರಿಯನ್ನು ಅರಿತು ಜನಪರವಾಗಿ ಕೆಲಸ ಮಾಡಬೇಕು. ಬಡಜನತೆಗೆ ಸಕಾರವು ನೀಡುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಿ ಬಡಜನರ ಬಾಳು ಸುಂದರವಾಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದ ಶಾಸಕ ನಾರಾಯಣಗೌಡ ಪುರಸಭೆಯು ಕಳೆದ 15 ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನಿವೇಶನವನ್ನು ನೀಡುವ ಕೆಲಸವನ್ನೇ ಮಾಡಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿ ವಿತರಿಸದೇ ಉಳಿದಿರುವ ಟಿಬಿ ಬಡಾವಣೆಯ 300 ನಿವೇಶನಗಳು, ಹೊಸಹೊಳಲಿನ ಚೌಡೇನಹಳ್ಳಿ ರಸ್ತೆಯಲ್ಲಿರುವ 350 ನಿವೇಶನಗಳು ಮತ್ತು ಸಾಧುಗೋನಹಳ್ಳಿ ಬಳಿ ಸರ್ವೇ ನಂ.287ರಲ್ಲಿನ 1ಸಾವಿರ ನಿವೇಶನಗಳನ್ನು ಇನ್ನಾರು ತಿಂಗಳೊಳಗಾಗಿ ವಿತರಿಸಲು ತಾವು ಸಂಕಲ್ಪ ಮಾಡಿರುವುದಾಗಿ ಘೋಷಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ, ಪಿಎಲ್‍ಡಿ ಬ್ಯಾಂಕಿನ ಮಾಜಿಅಧ್ಯಕ್ಷ ರಾಮಕೃಷ್ಣೇಗೌಡ, ಪುರಸಭೆ ಮಾಜಿಅಧ್ಯಕ್ಷ ಕೆ.ಹೆಚ್.ರಾಮಕೃಷ್ಣ, ಸದಸ್ಯ ಕೆ.ಆರ್.ಹೇಮಂತಕುಮಾರ್, ಮಾಜಿಸದಸ್ಯರಾದ, ಜಯಮ್ಮ, ಕೆ.ಆರ್.ನೀಲಕಂಠ, ಶಹರೀ ರೋಜ್‍ಗಾರ್ ಯೋಜನಾ ಸಮಿತಿಯ ಅಧ್ಯಕ್ಷೆ ಚಂದ್ರಕಲಾರಮೇಶ್, ಹರಿಹರಪುರ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಬೊಮ್ಮೇನಹಳ್ಳಿ ಹರ್ಷ ಮತ್ತಿತರರು ಉಪಸ್ಥಿತರಿದ್ದರು. ಪುರಸಭೆಯ ಮುಖ್ಯಾಧಿಕಾರಿ ಸಿ.ಎಸ್.ಬಸವರಾಜು ಸ್ವಾಗತಿಸಿದರು, ಆರೋಗ್ಯ ಪರಿವೀಕ್ಷಕರಾದ ಬಿ.ಎಸ್.ಕೆಂಪೇಗೌಡ ವಂದಿಸಿದರು.

No comments:

Post a Comment