Saturday 20 September 2014

ಮೈಸೂರು-ದಸರಾ ಭದ್ರತೆಗಾಗಿ 5021 ಪೊಲೀಸ್ ರ ನೇಮಕ

ದಸರಾ ಭದ್ರತೆಗಾಗಿ 5021 ಪೊಲೀಸ್ ರ ನೇಮಕ 
ಮೈಸೂರು: ಈ ಬಾರಿಯ ದಸರಾ ಭದ್ರತೆಗೆ 5021 ಪೊಲೀಸರುನ್ನು ನೇಮಕ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಸಲೀಂ ತಿಳಿಸಿದರು.
ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯಲಿರುವ ದಸರಾ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು 1200 ಹೋಂ ಗಾಡ್ಸ್ ್, 2 ತುಕುಡಿ ಆರ್ ಎ ಎಫ್, 26 ತುಕುಡಿ ಕೆಎಸ್ ಆರ್ ಪಿ, 12 ತುಕುಡಿ ಡಿಎಆರ್, 12 ತುಕುಡಿ ಸಿಎಆರ್, 2 ತುಕುಡಿ ಮೈಸೂರು ಸಿಟಿ ಕ್ಯೂ ಆರ್ ಪಿ, 1 ತುಕುಡಿ ಆತಂರಿಕ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಗಳು ನಡೆಯುವ ಅರಮನೆ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನ, ಪಂಜಿನ ಕವಾಯಿತು ನಡೆಯುವ ಬನ್ನಿ ಮಂಟಪ, ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನ, ಆಹಾರ ಮೇಳ ಹಾಗೂ ಜನದಟ್ಟಣೆಯ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ ಎಂದು ತಿಳಿಸಿದರು. ಮೈಸೂರು ನಗರದಲ್ಲಿ ಸೆ.24 ರಿಂದ ಕ್ಷೀಪ್ರ ಕಾರ್ಯಚರಣೆ ಪಡೆ ಕಾವಲು ನಡೆಸಲಿದೆ. ದಸರಾದ ಕೊನೆ ದಿನವಾದ ಜಂಬೂ ಸವಾರಿ ಮಾರ್ಗದಲ್ಲಿ ಎರಡು ಮಾನವ ರಹಿತ ವೈಮಾನಿಕ ವಾಹನ ಹಾಗೂ ವಿದ್ವಂಸ ಕೃತ್ಯಗಳ ನಿಗ್ರಹಕ್ಕಾಗಿ ಆತಂರಿಕ ಭದ್ರತಾ ವಿಭಾಗದಿಂದ ಕಮಾಂಡೋ ಪಡೆಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ರಾಜ್ಯ ಗುಪ್ತ ದಳದ ನುರಿತ ಬಾಂಬ್ ನಿಷ್ಕ್ರೀಯ ದಳವು ಈಗಾಗಲೇ ಮೈಸೂರಿನಲ್ಲಿ ಬೀಡು ಬಿಟ್ಟಿದೆ, ಅಪರಾಧ ನಡೆಯುವುದನ್ನು ತಡೆಯುವ ಸಂಬಂಧ ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದ ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಏಕ ಮುಖ ವಾಹನ ಸಂಚಾರ: ನಗರದ ಕೆಲವಡೆ ಏಕ ಮುಖ ಸಂಚಾರ ಜಾರಿಗೊಳಿಸಲಾಗುವುದು, ದಸರಾ ಕಾರ್ಯಕ್ರಮಗಳ ಸ್ಥಳಗಳ ರಸ್ತೆಗಳಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 9 ರ ತನಕ ಏಕ ಮುಖ ಸಂಚಾರ ವ್ಯವಸ್ಥೆ , ಆಯ್ದ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಮಹಾರಾಣಿಗೆ ಅಪಮಾನ :ಇತಿಹಾಸ ತಜ್ಞ ನಂಜೇರಾಜ ಅರಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ
ಮೈಸೂರು: ದಸರಾ ಆಚರಣೆ ವಿಚಾರವಾಗಿ ಮಹಾರಾಣಿ ಪ್ರಮೋದಾ ದೇವಿ ಅವರ ವಿರುದ್ಧ ಏಕ ವಚನ ಪ್ರಯೋಗಿಸಿ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಅಪಮಾನ ಮಾಡಿರುವ ಇತಿಹಾಸ ತಜ್ಞ ಪ್ರೊ. ನಂಜೇರಾಜ ಅರಸ್ ಭಾವ ಚಿತ್ರವನ್ನು ದಹಿಸಿದ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಭಿಮಾನ ಬಳಗದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.
ಶನಿವಾರ ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪ್ರೋ. ನಂಜೇರಾಜ ಅರಸ್ ರ ಭಾವ ಚಿತ್ರಕ್ಕೆ ಚಪ್ಪಲಿ ಸೇವೆ ನಡೆಸಿದರು. ಬಳಿಕ ಬೆಂಕಿ ಹಚ್ಚಿ ದಹಿಸಿ ಹಾಕುವ ಮೂಲಕ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸ ತಜ್ಞ ಎಂದು ಹೇಳಿಕೊಳ್ಳುತ್ತಿರುವ ಪ್ರೊ. ನಂಜೇರಾಜ ಅರಸ್ ಅವರು ಮೈಸೂರಿನ ಅರಮನೆ ಹಾಗೂ ರಾಜಮಾತೆಯ ವಿರುದ್ಧ ಅವಹೇಳನಕಾರಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಸರ್ಕಾರ ಹಾಗೂ ರಾಜ ಮನೆತನದ ನಡುವೆ ಭಿನ್ನಾಭಿಪ್ರಾಯಗಳು ಮೂಡುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಆ ಮೂಲಕ ವಿಶ್ವ ವಿಖ್ಯಾತ ದಸರಾಗೆ ಧಕ್ಕೆಯನ್ನುಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇವರು ಇಲ್ಲಿಯ ತನೆ ರಾಜ ಮನೆತನದ ನೆರಳಿನಲ್ಲಿಯೇ ಬೆಳೆದು, ಆ ರಾಜ ಮನೆತನದ ವಿರುದ್ಧವಾಗಿಯೇ ಹಾಗೂ ಭೂಗಳ್ಳರ ಜೊತೆ ಶಾಮೀಲಾಗಿ ಅವರಿಗೆ ನೆರವು ನೀಡುತ್ತಾ ಬಂದಿದ್ದಾರೆ. ಸದಾ ಪ್ರಚಾರಕ್ಕಾಗಿ ಹಂಬಲಿಸುವ ಇವರು ರಾಜ ಮನೆತನದ ಬಗ್ಗೆ ಸಾರ್ವಜನಿಕರಲ್ಲಿ ಕೀಳು ಅಭಿಪ್ರಾಯ ಬರುವಂತೆ ಮಾಡುತ್ತಿದ್ದಾರೆ, ಆದ ಕಾರಣ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ತರುತ್ತಿರುವ ಇವರ ವಿರುದ್ಧ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಿ, ದಸರಾ ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಯುವಂತೆ ಮಾಡಬೇಕು, ದಸರಾ ಮುಗಿಯುವ ತನಕ ನಂಜೇರಾಜ ಅರಸ್ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಬಳಗ ಅಧ್ಯಕ್ಷ ಲೋಕೇಶ್ , ಉಪಾಧ್ಯಕ್ಷ ಗುರುಗೌಡ, ಪ್ರಧಾನ ಕಾರ್ಯದರ್ಶಿ ರಾಘು ಚರಣ್ ವಹಿಸಿದ್ದರು. ಖಜಾಂಚಿ ರಂಗನಾಥ್. ಸದಸ್ಯರಾದ ರವಿಕುಮಾರ್, ಹರೀಶ್ ಪ್ರಭು, ಗಣೇಶ್, ಸತೀಶ್, ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.



No comments:

Post a Comment