Tuesday 2 September 2014


ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ, ಪಶುಪಾಲನೆ ಮತ್ತು ಸೇವಾ ಇಲಾಖೆ, ಸಾತನೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಾತನೂರು ಗ್ರಾಮದಲ್ಲಿ  7ನೇ ಸುತ್ತಿನ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮನ್‍ಮುಲ್ ನಿರ್ದೇಶಕ ಎಸ್.ಪಿ.ಮಹೇಶ್ ಮಾತನಾಡಿ, ರೈತರು ಮುನ್ನೆಚ್ಚರಿಕೆ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು. ಜಾನುವಾರಿಗಳಿಗೆ ಕಾಲುಬಾಯಿ ರೋಗ ಹರಡುವ ಮುನ್ನವೇ ರೋಗ ನಿರೋಧಕ ಲಸಿಕೆ ಹಾಕಿಸುವ ಮೂಲಕ ರೋಗ ನಿಯಂತ್ರಿಸಬಹುದು ಎಂದು ಹೇಳಿದರು.
ರೋಗದ ಲಕ್ಷಣ ಕಂಡುಬಂದ ಕೂಡಲೇ ರೈತರು ಎಚ್ಚರಿಕೆ ವಹಿಸಬೇಕು. ಸ್ಥಳೀಯ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಮುನ್ನೆಚ್ಚರಿಕೆ ವಹಿಸಿ ರಾಸುಗಳ ರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು.
ಮನ್‍ಮುಲ್ ನಿರ್ದೇಶಕ ಬಿ.ಚಂದ್ರು, ಕೆಎಂಎಫ್ ನಿರ್ದೇಶಕ ಎಚ್.ಜೆ.ಚಂದ್ರು, ಮನ್‍ಮುಲ್ ಶೇಖರಣಾ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ವಿ.ಎಂ.ರಾಜು, ಉಪ ವ್ಯವಸ್ಥಾಪಕ ಡಾ.ಮೋಹನ್‍ಕುಮಾರ್, ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ಸುರೇಶ್, ವಿಸ್ತರಣಾಧಿಕಾರಿ ಎನ್.ಆರ್.ಮರಿರಾಚಯ್ಯ, ಶಿವಣ್ಣ, ನರಸಪ್ಪ ಇತರರು ಭಾಗವಹಿಸಿದ್ದರು.

ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಡಿ.ದೇವರಾಜ ಅರಸು ನಿಗಮದ ವತಿಯಿಂದ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಚೆಕ್‍ಗಳನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿತರಿಸಿದರು.
ನಂತರ ಅವರು ಮಾತನಾಡಿ, ಫಲಾನುಭವಿಗಳು ಪಡೆದಿರುವ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾಲ ಮರುಪಾವತಿಗೆ ಮುಂದಾಗಬೇಕು. ಆ ಮೂಲಕ ಇತರರಿಗೂ ಸೌಲಭ್ಯ ದೊರಕಲು ಸಹಕಾರ ನೀಡಬೇಕು ಎಂದರು.
ಜಿಲ್ಲಾ ವ್ಯವಸ್ಥಾಪಕ ಮರಿಸಿದ್ದಯ್ಯ ಇತರರು ಭಾಗವಹಿಸಿದ್ದರು.


ಮಂಡ್ಯ: ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಮಂಡ್ಯ ಉತ್ತರ ವಲಯ ಶಿಕ್ಷಕರ ಕ್ರೀಡಾಕೂಟವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಸಿ.ರವಿಶಂಕರ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ 100 ಮೀ. ಓಟ, 200 ಮೀ. ಓಟ, ಕಬಡ್ಡಿ, ಭಾವಗೀತೆ, ಜನಪದ ಗೀತೆ, ಥ್ರೋಬಾಲ್ ಇನ್ನಿತರ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಸಹ ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ರಾಜಶೇಖರ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ರಮೇಶ್, ಸುಜಾತ, ಪರಮೇಶ್ ಇತರರು ಭಾಗವಹಿಸಿದ್ದರು.

No comments:

Post a Comment