Wednesday 3 September 2014

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಂದ ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಣೆ
ಮಂಡ್ಯ,ಸೆ.3-ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀನಿವಾಸನ್ ಮತ್ತು ಎನ್.ಬಿ.ಬಳಿಗಾರ್‍ರವರು ಇಂದು ನಗರದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀನಿವಾಸನ್ ಮಾತನಾಡಿ, ಉತ್ತಮ ರೀತಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗೆ ಅಗತ್ಯವಿರು ಹಣ ಮತ್ತು ಆಡಳಿತ ಅನುಮೋದನೆಯನ್ನು ಜಿಲ್ಲಾ ವರದಿ ಬಂದ ನಂತರ ಸಮಾಜ ಕಲ್ಯಾಣ ಸಚಿವರು ಹಾಗೂ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮನವರಿಕೆ ಮಾಡುತ್ತೇವೆ ಎಂದರು.
ಅಲ್ಲದೆ, ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳಲು ನಮ್ಮ ಇಲಾಖೆಯಿಂದ ಆಗಬೇಕಾಗಿರುವ ಕೆಲಸಕಾರ್ಯಗಳನ್ನು ಜರೂರಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕರಾದಸಂಸ ರಾಜ್ಯ ಸಂಘಟನಾ ಸಂಚಾಲಯಕಾರದ ಎಂ.ಬಿ.ಶ್ರೀನಿವಾಸ್‍ರವರು ವೀಕ್ಷಣೆಗೆ ಆಗಮಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ನಮ್ಮ ಹಿರಿಕರ ಹೋರಾಟದ ಪ್ರತಿಫಲವಾಗಿ ಅಂಬೇಡ್ಕರ್‍ಭವನ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಬೇಕಾಗಿರುವ ಹಣವನ್ನು ಸಮಾಜ ಕಲ್ಯಾಣ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದು ಅಗತ್ಯ ಅನುದಾನ ಬಿಡುಗಡೆ ಮಾಡಿಸಿಕೊಟ್ಟು, ಆಡಳಿತಾತ್ಮಕ ಅನುಮೋದನೆಯನ್ನು ನೀಡುವುದರ ಮೂಲಕ ಅಂಬೇಡ್ಕರ್‍ಭವನ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕ ನಾಗೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಲತಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಚಂದ್ರು, ನಿರ್ಮಿತಿ ಕೇಂದ್ರದ ಇಂಜಿನಿಯರ್ ಡಿ.ಎಂ.ಕುಮಾರ್, ನಗರಸಭಾ ಸದಸ್ಯ ಮಹೇಶ್‍ಕೃಷ್ಣ, ಎಸ್.ಸಂತೋಷ್, ಕೃಷ್ಣ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

No comments:

Post a Comment