Monday 1 September 2014

ಕೃಷ್ಣರಾಜಪೇಟೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ದಳ್ಳಾಳಿಗಳ ಹಾವಳಿಯಿಂದ ಮುಕ್ತಗೊಳಸಿ ಪಾರದರ್ಶಕ ಆಡಳಿತವನ್ನು ನೀಡುತ್ತಿರುವ ಎಪಿಎಂಸಿ ಆಡಳಿತ ಮಂಡಳಿಯು ತೆಂಗಿನಕಾಯಿ ವಹಿವಾಟನ್ನು ಮುಂದಿನ ವಾರದ ಕಾಯಿ ಸಂತೆಯಿಂದ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಿಸಿಕೊಟ್ಟು ರೈತರಿಗೆ ಹೆಚ್ಚಿನ ಬೆಳೆಯನ್ನು ಕೊಡಿಸಿ ಕೊಡಲು ತೀರ್ಮಾನಿಸಿತು.
ಎಪಿಎಂಸಿಯ ಅಧ್ಯಕ್ಷರಾದ ಆಲೇನಹಳ್ಳೀ ಮಹೇಶ್ ಅವರ ಕಛೇರಿಯಲ್ಲಿ ನಡೆದ ವರ್ತಕರ ಸಭೆಯಲ್ಲಿ ಸಾಧಕ-ಬಾಧಕಗಳು ಹಾಗೂ ಆಗು-ಹೋಗುಗಳನ್ನು ಗಮದಲ್ಲಿಟ್ಟುಕೊಂಡು ಲಕ್ಷಗಟ್ಟಲೆ ವಹಿವಾಟು ನಡೆಯುವ ತೆಂಗಿನಕಾಯಿ ವ್ಯಾಪಾರವನ್ನು ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಶಂಕರನಾಯ್ಕ್, ನಿರ್ದೇಶಕರಾದ ಆನೆಗೊಳ ರಾಮೇಗೌಡ, ವಿಠಲಾಪುರ ಚೆಲುವೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮಾವಿನಕೆರೆ ರಾಮಸ್ವಾಮಿ, ಶಿವಣ್ಣ ಸರ್ಕಾರತದ ನಿರ್ದೇಶನದಂತೆ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದರೆ ಸಭೆಯಲ್ಲಿ ಹಾಜರಿದ್ದ ತಾಲೂಕು ಮತ್ತು ಪಕ್ಕದ ತಾಲೂಕುಗಳ ವರ್ತಕರು ಒಲ್ಲದ ಮನಸ್ಸಿನಲ್ಲಿಯೇ ಒಪ್ಪಿಗೆ ನೀಡಿದರು.
ಪ್ರಸ್ತುತ ನೂರು ವರ್ತಕರು ಎಪಿಎಂಸಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ ಕಾಯಿ ಸಂತೆಯೊಳಗೆ ಕಾಲಿಡಲು ಜಾಗವಿಲ್ಲದಷ್ಟು ದಳ್ಳಾಳಿಗಳೇ ತುಂಬಿದ್ದು ರೈತರಿಗೆ ನ್ಯಾಯಯುತವಾದ ಬೆಲೆಯನ್ನು ದೊರಕಿಸಿಕೊಡದೇ ರೈತರ ಉತ್ಪನ್ನಗಳನ್ನು ಮಾರಾಟ ಮಾಡಿ ಸ್ಥಳದಲ್ಲಿಯೇ ಸಾವಿರಾರು ರೂ ಹಣವನ್ನು ಕಮಿಷನ್ ಪಡೆಯುವ ಮೂಲಕ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕೆ.ಜಿ ತೆಂಗಿನಕಾಯನ್ನು 25ರೂಗಳಿಗೆ ಖರೀದಿಸಿ 28ರೂಗಳಿಗೆ ಇಂದಿನ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ ರೈತರಿಗೆ ಕಣ್ಣ ಮುಂದೆಯೇ ಪ್ರತೀ ಕೆಜಿ ತೆಂಗಿನಕಾಯಿಗೆ 3ರೂ ನಷ್ಠವಾಗಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸಾಧಕ-ಭಾಧಕಗಳನ್ನು ಅವಲೋಕಿಸಿ ಇನ್ನು ಮುಂದಿನ ದಿನಗಳಲ್ಲಿ ತೆಂಗಿನಕಾಯಿಯ ವ್ಯಾಪಾರವನ್ನು ಬಹಿರಂಗ ಹರಾಜು ಮೂಲಕವೇ ಇತ್ಯರ್ಥ ಮಾಡಲು ಸರ್ವ ಸಮ್ಮತವಾಗಿ ನಿರ್ಧರಿಸಲಾಯಿತು. ರೈತ ಬಂಧುಗಳು ಇನ್ನುಮುಂದೆ ದಳ್ಳಾಳಿಗಳಿಗೆ ತಮ್ಮ ಕೃಷಿ ಪದಾರ್ಥಗಳನ್ನು ನೀಡದೇ ಬಹಿರಂಗ ಹರಾಜಿನಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಸರ್ಕಾರವು ಜಾರಿಗೆ ತಂದಿರುವ ರೈತ ಪರವಾದ ನಿರ್ಣಯಕ್ಕೆ ಬೆಂಬಲ ನೀಡಬೇಕು ಎಂದು ಎಪಿಎಂಸಿ ಅಧ್ಯಕ್ಷ ಆಲೇನಹಳ್ಳಿ ಮಹೇಶ್ ಮನವಿ ಮಾಡಿದರು.
ಎಲೆಕ್ಟ್ರಾನಿಕ್ ವೇಬ್ರಿಡ್ಜ್: ರೈತರು ಸಂತೆಗೆ ಮಾರಾಟ ಮಾಡಲು ತರುವ ವಸ್ತುಗಳ ತೂಕದಲ್ಲಿ ಮೋಸವಾಗದಂತೆ ತಡೆಯಲು 25ಲಕ್ಷರೂಗಳ ವೆಚ್ಚದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಭಾಗವಹಿಸುವ ವರ್ತಕರುಗಳಿಂದ ರೈತ ಬಂಧುಗಳಿಗೆ ಮೋಸವಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ ಮಹೇಶ್ ಕೃಷ್ಣರಾಜಪೇಟೆ ಎಪಿಎಂಸಿಯ ಎಳನೀರು ವಹಿವಾಟು ಹೊಸ ದಾಖಲೆಯನ್ನು ನಿರ್ಮಿಸಿದೆ. ನಮ್ಮ ತಾಲೂಕಿನ ಎಳನೀರು ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿಯೂ ಬೇಡಿಕೆಯನ್ನು ಹೊಂದಿದೆ. ಬಲ್ಲೇನಹಳ್ಳಿಯಲ್ಲಿನ ಸೇವಂತಿಗೆ ಹೂವಿನ ಮಾರುಕಟ್ಟೆಗೆ ಹೈಟೆಕ್ ರೂಪನೀಡಿ ರೈತರಿಗೆ ಅನುಕೂಲ ಮಾಡಿಕೊಡಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನ ರೈತರು ಯಾವುದೇ ದಳ್ಳಾಳಿ ಹಾಗೂ ವರ್ತಕರಿಂದ ತಮಗೆ ಹಣಕಾಸಿನ ವ್ಯವಹಾರ, ಇಲ್ಲವೇ ತೂಕದಲ್ಲಿ ವಂಚನೆ ಮಾಡಿದರೆ ಲಿಖಿತ ದೂರು ನೀಡಿದರೆ ಅಂತಹ ವರ್ತಕರ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಶಂಕರನಾಯ್ಕ್, ನಿರ್ದೇಶಕರಾದ ಆನೆಗೊಳ ರಾಮೇಗೌಡ, ವಿಠಲಾಪುರ ಚೆಲುವೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮಾವಿನಕೆರೆ ರಾಮಸ್ವಾಮಿ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment