Tuesday 2 September 2014

ಕೆ.ಆರ್.ಪೇಟೆ,ಸೆ.02,(ಶ್ರೀನಿವಾಸ್)- ನಿಂತಿದ್ದ ಟ್ರಾಕ್ಟರ್‍ವೊಂದು ಆಕಸ್ಮಿಕವಾಗಿ ಚಾಲನೆಗೊಂಡು ಮುಂದೆ ಚಲಿಸಿದ ಪರಿಣಾಮ ರಸ್ತೆಯಲ್ಲಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆಯು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಡವನಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 10ಗಂಟೆ ಸಮಯದಲ್ಲಿ ನಡೆದಿದೆ.
ಹಡವನಹಳ್ಳಿ ಗ್ರಾಮದ ಮಂಜುನಾಥ್ ಅವರ ಪತ್ನಿ ಪಾರ್ವತಮ್ಮ(35) ಎಂಬುವವರೇ ಮೃತಪಟ್ಟ ದುರ್ದೈವಿ ರೈತ ಮಹಿಳೆಯಾಗಿದ್ದಾರೆ.
ಘಟನೆಯ ವಿವರ: ಇಂದು ಬೆಳಿಗ್ಗೆ ಟ್ರಾಕ್ಟರ್ ಡ್ರೈವರ್ ಗೌಡಗೆರೆ ಮಂಜುನಾಥ ಎಂಬಾತನು ಹಡವನಹಳ್ಳಿ ಗ್ರಾಮದ ಮೃತಪಟ್ಟ ಪಾರ್ವತಮ್ಮಮಂಜುನಾಥ್ ಎಂಬುವವರ ಜಮೀನು ಉಳುಮೆ ಮಾಡಲು ಟ್ರಾಕ್ಟರ್‍ಅನ್ನು ತಂದು ಗ್ರಾಮದ ಪುಟ್ಟೇಗೌಡರ ಜಮೀನಿನ ಬಳಿ ನಿಲ್ಲಿಸಿದ್ದನು. ಈ ಸಂದರ್ಭದಲ್ಲಿ ಟ್ರಾಕ್ಟರ್ ಅನ್ನು ಚಾಲನೆ ಮಾಡಲು ಬ್ಯಾಟರಿಯನ್ನು ಸರಿಪಡಿಸಿಕೊಳ್ಳುತ್ತಿರುವಾಗ ಟ್ರಾಕ್ಟರ್ ಆಕಸ್ಮಿಕವಾಗಿ ಚಾಲನೆಗೊಂಡು ಮುಂದೆ ಚಲಿಸಿತು. ಈ ಸಂದರ್ಭದಲ್ಲಿ  ಮುಂದೆ ಮನೆ ಕಡೆಗೆ ನಡೆದು ಹೋಗುತ್ತಿದ್ದ ಪಾರ್ವತಮ್ಮ ಅವರಿಗೆ ಟ್ರಾಕ್ಟರ್ ವೇಗವಾಗಿ ಡಿಕ್ಕಿಹೊಡೆದ ಪರಿಣಾಮ ಆಕೆಯು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಘಟನೆ ಕುರಿತು ಕೆ.ಆರ್.ಪೇಟೆ ನಗರ ಪೋಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವದ ವೈಧ್ಯಕೀಯ ಪರೀಕ್ಷೆಯನ್ನು ಶ್ರವಣಬೆಳಗೊಳ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ವಾರಸುದಾರರಿಗೆ ನೀಡಲಾಯಿತು.
=========================
ಕೆ.ಆರ್.ಪೇಟೆ,ಸೆ.02,(ಶ್ರೀನಿವಾಸ್)-ತಾಲೂಕಿನ  ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯಲ್ಲಿ ವಿವಿಧ ಸೌಲಭ್ಯಗಳಿಗಾಗಿ ಕೊಟ್ಟ ಅರ್ಜಿಗಳು ಸಿಬ್ಬಂಧಿ ವರ್ಗದವರ ನಿರ್ಲಕ್ಷ್ಯದಿಂದ ಕಚೇರಿಯಿಂದಲೇ ನಾಪತ್ತೆಯಾಗುತ್ತಿವೆ ಇದರಿಂದ ಅರ್ಜಿದಾರರು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ವಿದ್ಯಾಭ್ಯಾಸಕ್ಕೆ ಪ್ರಮಾಣ ಪತ್ರ ಪಡೆಯಲು ತೀವ್ರ ತೊಂದರೆಯಾಗಿದೆ ಅವರ ಭವಿಷ್ಯಕ್ಕೆ ಕಲ್ಲು ಬೀಳುತ್ತಿದೆ ಎಂದು ಅಕ್ಕಿಹೆಬ್ಬಾಳು ಹೋಬಳಿ ಘಟಕದ ಜೆಡಿಎಸ್ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್ ದೂರಿದ್ದಾರೆ.
ನಾಡಕಚೇರಿಯ ಲೋಪದೋಷಗಳ ಬಗ್ಗೆ  ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು ನಾಡಕಚೇರಿಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಅರ್ಜಿದಾರರ ಮೊಬೈಲ್‍ಗೆ ನಿಮ್ಮ ರೇಕಾರ್ಡ್‍ನ ರೆಡಿಯಾಗಿದೆ ಬಂದು ಪಡೆದುಕೊಳ್ಳಿ ಎಂಬ ಸಂದೇಶ ಹೋಗುತ್ತದೆ ಆದರೆ ಕಚೇರಿಗೆ  ಬಂದು ಕೇಳಿದರೆ ನಿಮ್ಮ ಅರ್ಜಿ ಮತ್ತು ದಾಖಲೆಗಳು ಕಳೆದುಹೋಗಿವೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ನಾಡಕಚೇರಿಯ ಸಿಬ್ಬಂಧಿಗಳು ಸಬೂಬು ಹೇಳುತ್ತಿದ್ದಾರೆ ಇದರಿಂದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದ್ದ ಹಲವು ಅಭ್ಯರ್ಥಿಗಳಿಗೆ ಇದರಿಂದ ತೊಂದರೆಯುಂಟಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ತಾಲೂಕು ತಹಶೀಲ್ದಾರ್ ಅವರು ಕೂಡಲೇ ಗಮನಹರಿಸಿ ನಾಡಕಚೇರಿಗೆ ಬೇಟಿ ನೀಡಿ ನಾಡಕಚೇರಿಯಲ್ಲಿ ಅರ್ಜಿಗಳು ಕಳೆದು ಹೋಗುತ್ತಿರುವ ಬಗ್ಗೆ  ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಸಿಬ್ಬಂಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಾಡಕಚೇರಿಯಲ್ಲಿ ಆದ ಲೋಪಕ್ಕೆ ಹೋಬಳಿಯ ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ತೊಂದರೆಯುಂಟಾಗಿದೆ. ಅಲ್ಲದೇ ಸರ್ಕಾರದ ವಿವಿಧ ಸೌಲತ್ತುಗಳು ಅರ್ಜಿ ಸಲ್ಲಿಸಲು ಸಹ ಅನೇಕ ಫಲಾನುಭವಿಗಳಿಗೆ ತೋವ್ರ ತೊಂದರೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ತೊಂದರೆಯುಂಟಾಗದಂತೆ ಕ್ರಮವಹಿಸಬೇಕು ಎಂದು ಸುರೇಶ್ ಅವರು ತಹಶೀಲ್ದಾರ್ ಅವರನ್ನು ಒತ್ತಾಯ ಮಾಡಿದ್ದಾರೆ. ಇಲ್ಲದಿದ್ದರೆ ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸುರೇಶ್ ಎಚ್ಚರಿಕೆ ನೀಡಿದ್ದಾರೆ.

 ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್.
========================
ಕೆ.ಆರ್.ಪೇಟೆ.ಸೆ,02,(ಶ್ರೀನಿವಾಸ್)-ಮುಂದಿನ ಆರು ತಿಂಗಳ ಒಳಗಾಗಿ ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಜನತೆಗೆ ಒಳಚರಂಡಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಬಸವರಾಜು ತಿಳಿಸಿದರು.
ಅವರು ಇಂದು ಹೊಸಹೊಳಲುವಿನಲ್ಲಿ ನಡೆಯುತ್ತಿರುವ ತೇವಬಾವಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದರು.
ಸುಮಾರು ಐದು ವರ್ಷಗಳ ಹಿಂದೆಯೇ ಪಟ್ಟಣಕ್ಕೆ  ಐದು ಕೋಟಿ ರೂಪಾಯಿವೆಚ್ಚದಲ್ಲಿ ಒಳಚರಂಡಿ ನರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿ ಪಟ್ಟಣ ವಿವಿಧ ಬಡಾವಣೆಗಳ ಎಲ್ಲಾ ರಸ್ತೆಗಳಲ್ಲಿಯೂ ಪೈಪ್‍ಲೈನ್‍ಗಳನ್ನು ಅಳವಡಿಸಲಾಗಿದೆ. ಆದರೇ ತೇವಬಾವಿ ಮತ್ತು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಜಾಗದ ಸಮಸ್ಯೆಯಿಂದ ಕಾಮಗಾರಿಯೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ಈಗಾಗಲೇ ಮೈಸೂರು ರಸ್ತೆಯಲ್ಲಿ ತೇವಬಾವಿಯನ್ನು ನಿರ್ಮಾಣಮಾಡಲಾಗಿದೆ, ಈಗ ಹೊಸಹೊಳಲುವಿನಲ್ಲಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಬಾವಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಸರ್ಕಾರವು ಒಳಚರಂಡಿ ನೀರಿನ ಶುದ್ಧೀಕರಣ ಘಟಕ ಮತ್ತು ಘನತ್ಯಾಜ್ಯ ಘಟಕ ನಿರ್ಮಾಣ ಮಾಡುಲು ಕತ್ತರಘಟ್ಟ ಗ್ರಾಮದ ಸಮೀಪ 16 ಎಕ್ಕರೆ ಜಮೀನನ್ನು ಮಜೂರುಮಾಡಿತ್ತು. ಆದರೇ ರೈತರು ನ್ಯಾಯಾಲಯದಲ್ಲಿ ಪರಿಹಾರ ಕೋರಿ ಪ್ರಕರಣ ದಾಖಲು ಮಾಡಿರುವುದರಿಂದ ನಮಗೆ ಶುದ್ಧೀಕರಣ ಘಟಕ ಸ್ಥಾಪನೆ ಮಾಡಲು ತೊಂದರೆ ಯಾಗಿದೆ. ಈ ಬಗ್ಗೆ ಮಾನ್ಯ ಉಪವಿಭಾಗಾಧಿಕಾರಿಗಳಿಗೆ ಮಾಹಿತಿನೀಡಲಾಗಿದ್ದು ತಕ್ಷಣ ಬೇರೆಡೆಯಲ್ಲಿ ಸ್ಥಳಾವಾಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಸ್ಥಳದ ಸಮಸ್ಯೆ ಪರಿಹಾರವಾದ ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಒಳ ಚರಂಡಿಯನ್ನು ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಇನ್ನು ನಿರ್ಮಾಣ ಹಂತದಲ್ಲಿದ್ದರೂ ಕೆಲವರು ಈಗಾಗಲೇ ಮನೆಗಳ ಶೌಚಾಯಗಳ ಸಂಪರ್ಕಗಳನ್ನು ಅಕ್ರಮವಾಗಿ ಒಳಚರಂಡಿಗೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದೆ. ಒಳಚರಂಡಿ ಕಾಂಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳದಿರುವುದರಿಂದ ನೀರು ಹೊರಹೊಗಲು ಸಾಧ್ಯವಿಲ್ಲ. ಪರಿಣಾಮ ಪಟ್ಟಣದ ಕೆಲವೆಡೆ ಒಳಚರಂಡಿಯ ಪೈಪುಗಳು ತುಂಬಿ ಮಲೀನಮಿಶ್ರಿತ ನೀರು ರಸ್ತೆಗಳಉಕ್ಕಿ ಹರಿಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಪಟ್ಟದ ಜನತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸಾರ್ವಜನಿಕರು ಕಾಮಗಾರಿ ಪೂರ್ಣ ಗೊಳ್ಳುವವರೆವಿಗೆ  ಯಾವುದೇ ಕಾರಣಕ್ಕೂ ಒಳಚರಂಡಿಗೆ ಸಂಪರ್ಕ ನೀಡಬಾಋದು ಎಂದು ಮನವಿ ಮಾಡಿದರು. ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್, ಆರ್.ಓ.ವೆಂಕಟೇಶ್‍ಮೂರ್ತಿ, ಗುತ್ತಿಗೆದಾರ ಕೆ.ಎನ್.ಲೀಲಾಶಂಕರ್, ತೋಪುಪರಮೇಶ್ ಮತ್ತಿತರರು ಹಾಜರಿದ್ದರು.

No comments:

Post a Comment