Monday 1 September 2014

 ಕೃಷ್ಣರಾಜಪೇಟೆ. ಕರ್ತವ್ಯದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ರೈತ ಪರವಾಗಿ ದಕ್ಷತೆಯಿಂದ ಕೆಲಸ ಮಾಡಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದಂತೆ ಸೇವೆಯಿಂದ ನಿವೃತ್ತರಾಗುತ್ತಿರುವ ಬಸವರಾಜಆರಾಧ್ಯ ಅವರ ಕಾರ್ಯವೈಖರಿಯು ಸರ್ಕಾರಿ ನೌಕರರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪನಿರ್ದೇಶಕಿ ಡಿ.ಆರ್.ಪುಷ್ಪ ಹೆಮ್ಮೆಯಿಂದ ಹೇಳಿದರು.
ಅವರು ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೈತರು ಮತ್ತು ವರ್ತಕರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಆರಾಧ್ಯ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸರ್ಕಾರಿ ನೌಕರರೆಂದರೆ ಕೇವಲ ಸರ್ಕಾರವು ನೀಡುವ ಸಂಬಳದ ಹಣಕ್ಕಾಗಿ ಕಾಟಾಚಾರಕ್ಕೆ ದುಡಿಯುವವರು ಎಂಬ ಅಪವಾದವಿದೆ. ಆದರೆ ಈ ಅಪವಾದವನ್ನು ಸುಳ್ಳು ಮಾಡಿದ ಆರಾಧ್ಯರು ರೈತರ ಪರವಾಗಿ ಕೆಲಸ ಮಾಡಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯು ಸಿಗುವಂತೆ ನೋಡಿಕೊಂಡರಲ್ಲದೇ ದಳ್ಳಾಳಿಗಳ ಹಾವಳಿಯನ್ನು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ನಿಯಂತ್ರಿಸಿ ವರ್ತಕರು ಮತ್ತು ರೈತ ಬಂಧುಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸರಳ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆರಾಧ್ಯರು ಮಾರುಕಟ್ಟೆಯ ದಿನಗಳಂದು 18ಗಂಟೆಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿ ಸರ್ಕಾರದ ತೆರಿಗೆ ಹಣವು ಸೋರಿಹೋಗದಂತೆ ಕರ್ತವ್ಯ ನಿರ್ವಹಿಸಿ ಮಾರುಕಟ್ಟೆಯ ಅಭಿವೃಧ್ಧಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಶ್ರೀಯುತರ ನಿವೃತ್ತಿ ಜೀವನವು ಸುಖಮಯವಾಗಿರಲಿ ದಯಾಮಯನಾದ ಭಗವಂತನು ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು.
ಎಪಿಎಂಸಿ ಅಧ್ಯಕ್ಷ ಆಲೇನಹಳ್ಳಿ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಸ್.ಎಸ್.ಶಂಕರನಾಯ್ಕ್, ನಿರ್ದೇಶಕರಾದ ವಿ.ಸಿ.ಚೆಲುವೇಗೌಡ, ಆನೆಗೊಳ ರಾಮೇಗೌಡ, ಚಂದ್ರೇಗೌಡ, ರಾಯಸಮುದ್ರ ಪಾಪೇಗೌಡ, ಮುಖಂಡರಾದ ಸೋಮೇನಹಳ್ಳಿ ಕೃಷ್ಣೇಗೌಡ, ಶಕೀಲ್‍ಅಹಮದ್, ರಾಜೇಗೌಡ, ತಮ್ಮಯ್ಯ, ವೇಣುಗೋಪಾಲ್, ಶಿವಣ್ಣ, ಮಂಜುನಾಥ, ಗಿರೀಗೌಡ, ಭಾಗ್ಯಮ್ಮ, ರವಿ ಮತ್ತಿತರರು ಭಾಗವಹಿಸಿದ್ದರು.
ಎಪಿಎಂಸಿ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ನವೀನ್ ಸ್ವಾಗತಿಸಿದರು, ಸತೀಶ್ ವಂದಿಸಿದರು. ಭಾಗ್ಯಲಕ್ಷ್ಮೀ ಮತ್ತು ಸತೀಶ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment