Monday 30 March 2015

ಕೃಷ್ಣರಾಜಪೇಟೆ. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರವು ನಿರ್ಣಾಯಕವಾಗಿದೆ. ಸಾಮಾಜಿಕ ಅಪರಾಧೀಕರಣವನ್ನು ತಡೆಯಲು, ಜನಸಾಮಾನ್ಯರಲ್ಲಿ ಅರಿವಿನ ಜಾಗೃತಿಯ ಹಣತೆಯನ್ನು ಬೆಳಗಲು ಮಾಧ್ಯಮಗಳು ಮತ್ತು ಪತ್ರಿಕೆಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿವೆ. ಯುವ ಪತ್ರಕರ್ತರು ಸಮಾಜಮುಖಿ ಕಾಳಜಿಯನ್ನು ಇಟ್ಟುಕೊಂಡು ಸಮಸ್ಯೆಗಳ ಅನಾವರಣಕ್ಕೆ ಕೆಲಸ ಮಾಡಿ ಪತ್ರಿಕಾ ಧರ್ಮವನ್ನು ಎತ್ತಿಹಿಡಿಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅಪರಾಧಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಆನಂದ್ ಹೇಳಿದರು.
ಅವರು ಇಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸಿಪಿಜೆ) ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆಗೆ ಮಾನಸಿಕ ಅರಿವು ಪ್ರಚಾರಕ್ಕೆ ಮಾಧ್ಯಮಗಳ ಪಾತ್ರ ಕುರಿತು ಆಯೋಜಿಸಿದ್ದ ವಿಭಾಗ ಮಟ್ಟದ ವಿಚಾರಸಂಕಿರಣದಲ್ಲಿ ತಮಗೆ ನೀಡಿದ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾ ಪ್ರಪಂಚದ ಜಾಗತಿಕ ಜಗತ್ತಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪತ್ರಿಕೋದ್ಯಮವು ಮಾತ್ರ ತನ್ನ ಗಟ್ಟಿತನವನ್ನು ಬಿಟ್ಟುಕೊಟ್ಟಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನರು ಪತ್ರಿಕೆಗಳನ್ನು ಓದಿ ವಿಧ್ಯಮಾನಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ತಮ್ಮ ದಿನಚರಿಯೇ ಆರಂಭವಾಗುವುದಿಲ್ಲ. ಪತ್ರಿಕೆಗಳು ಸಮಸ್ಯೆಗಳ ಮೇಲೆ ಬೆಳಕನ್ನು ಚೆಲ್ಲಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಹಾಗೂ ಸರ್ಕಾರದ ಯೋಜನೆಗಳ ಫಲವು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ ನ್ಯಾಯದ ಪರವಾಗಿ ಕೆಲಸ ಮಾಡುತ್ತಿವೆ. ಯುವ ಪತ್ರಕರ್ತರು ಸಮಾಜಮುಖಿಯಾಗಿ ಹೆಜ್ಜೆಯನ್ನು ಹಾಕಿ, ಪತ್ರಿಕಾಧರ್ಮವನ್ನು ಉಳಿಸಿ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ನಡೆಸಲು ಸಿದ್ಧರಾಗಬೇಕು. ಲೇಖಲಿಯು ಖಡ್ಗಕ್ಕಿಂತಲೂ ಹರಿತ ಎಂಬ ಹಿರಿಯರ ಮಾತನ್ನು ಸತ್ಯವನ್ನಾಗಿಸುವ ನಿಟ್ಟಿನಲ್ಲಿ ವೃತ್ತಿಧರ್ಮವನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದ ಆನಂದ್ ಇಂದಿನ ದಿನಮಾನದಲ್ಲಿ ಅಪರಾಧಗಳನ್ನು ನಿಯಂತ್ರಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಮಾನಸಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಭಾವಶಾಲಿಯಾಗಿವೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ ಸರಿ-ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನ್ಯಾಯ, ನೀತಿ ಹಾಗೂ ಧರ್ಮದ ಹಾದಿಯಲ್ಲಿ ಸಾಗಿ ಆರೋಗ್ಯವಂತ ಸಮಾಜವನ್ನು  ಸಧೃಡವಾಗಿ ಕಟ್ಟುವ ದಾರಿಯಲ್ಲಿ ಸಾಗಲು ಯುವಜನಾಂಗವನ್ನು ಮಾಧ್ಯಮಗಳು ಹಾಗೂ ಪತ್ರಿಕೆಗಳು ದಾರಿ ದೀಪವಾಗಿವೆ ಎಂದು ಆನಂದ್ ಅಭಿಮಾನದಿಂದ ಹೇಳಿದರು.
ಇಂದಿನ ಯುವಜನಾಂಗವು ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ದಿಕ್ಕು ತಪ್ಪುತ್ತಿದೆ. ಹಾದಿ ತಪ್ಪುತ್ತಿರುವ ಯುವಜನಾಂಗವನ್ನು ಸರಿದಾರಿಯಲ್ಲಿ ಮುನ್ನಡೆಸಲು, ಸರಿ-ತಪ್ಪುಗಳನ್ನು ಮಾನಸಿಕವಾಗಿ ವಿಮರ್ಷೆ ಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲು ಸಮೂಹ ಮಾಧ್ಯಮಗಳು ಕೈಮಾರವಾಗಿವೆ. ಯುವಜನಾಂಗವು ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಗಳನ್ನು ಉಳಿಸಿ, ನ್ಯಾಯವನ್ನು ಕಾಪಾಡಲು ಪಣತೊಡಬೇಕು. ಗುರು-ಹಿರಿಯರಲ್ಲಿ ಭಕ್ತಿಭಾವವನ್ನು ಪ್ರದರ್ಶಿಸಬೇಕು. ನುಡಿದಂತೆ ನಡೆಯಬೇಕು, ನಡೆ-ನುಡಿಗಳೆರಡೂ ಒಂದೇ ಆಗಿರಬೇಕು. ನುಡಿದಂತೆ ನಡೆಯುವುದನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಗತಿಯ ದಕ್ಕಿನತ್ತ ಸಾಗಬೇಕು. ಸೋಲಿಗೆ ಹೆದರದೇ ಆತ್ಮವಿಶ್ವಾಸದಿಂದ ಮುನ್ನಡೆದು ಗೆಲುವು ಸಾಧಿಸಬೇಕು ಎಂದು ಆನಂದ್ ಕರೆ ನೀಡಿದರು.
ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಬಿ.ಆರ್.ಪಲ್ಲವಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಂತರೀಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಗಾಯಿತ್ರಮ್ಮ,  ಮತ್ತು ಕಾಲೇಜಿನ ಅಧೀಕ್ಷಕ ಬಿ.ಎ.ಮಂಜುನಾಥ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಗ್ನಿಶಾಮಕ ಠಾಣೆಯ ಅಧಿಕಾರಿ ನಿಂಗೇಗೌಡ, ಹಿರಿಯ ಪ್ರಾಧ್ಯಾಪಕರಾದ ಡಾ.ಟಿ.ಎಂ.ದೇವರಾಜು, ಗ್ರಂಥಪಾಲಕಿ ಪ್ರಮೋದಿನಿ, ಉಪನ್ಯಾಸಕರಾದ ಎನ್.ಪ್ರಕಾಶ್, ನಂಜುಂಡಯ್ಯ.ಡಿ,  ಕೆ.ರಾಘವೇಂದ್ರಗೌಡ, ಎಂ.ಆರ್.ಬಸವಲಿಂಗಪ್ಪ, ವಿಜಯಕುಮಾರ್, ಸಿಂಧೂಶ್ರೀ ಭಾಗವಹಿಸಿದ್ದರು.
ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಎಸ್.ನರೇಂದ್ರಪ್ರಸಾದ್ ಸ್ವಾಗತಿಸಿದರು, ಉಪನ್ಯಾಸಕರಾದ ಮಂಟ್ಯಾಸ್ವಾಮಿ ವಂದಿಸಿದರು, ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು.

No comments:

Post a Comment