Friday 27 March 2015


ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯಿಂದ  25,638 ವಿದ್ಯಾರ್ಥಿಗಳು
      ಮಂಡ್ಯ, ಮಾ. 27 ಜಿಲ್ಲೆಯಲ್ಲಿ ಮಾರ್ಚ್ 30 ರಿಂದ 13 ರವರಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು ಜಿಲ್ಲೆಯ 432 ಪ್ರೌಢಶಾಲೆಗಳಿಂದ 13462 ಗಂಡು ಮಕ್ಕಳು, 12176 ಹೆಣ್ಣು ಮಕ್ಕಳು, 595 ಪುನರಾವರ್ತಿತ  ವಿದ್ಯಾರ್ಥಿಗಳು 690 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 25,638  ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು  ತಿಳಿಸಿದ್ದಾರೆ.
      14181 ಸರ್ಕಾರಿ ಶಾಲೆ, 5839 ಅನುದಾನಿತ ಹಾಗೂ 5618 ಅನುದಾನ ರಹಿತ ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಕೆ.ಆರ್.ಪೇಟೆ – 11, ಮದ್ದೂರು – 19, ಮಳವಳ್ಳಿ – 15, ಮಂಡ್ಯ ಉತ್ತರ – 06, ಮಂಡ್ಯ ದಕ್ಷಿಣ – 18, ನಾಗಮಂಗಲ - 12, ಪಾಂಡವಪುರ – 07 ಹಾಗೂ ಶ್ರೀರಂಗಪಟ್ಟಣ – 08 ಒಟ್ಟು 96 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು,  ಅವುಗಳಲ್ಲಿ   ಸೆಂಟ್ ಜಾನ್ ಪ್ರೌಢಶಾಲೆ, ಮಂಡ್ಯ, ರೋಟರಿ ಪ್ರೌಢಶಾಲೆ, ಮಂಡ್ಯ ಹಾಗೂ ಅರ್ಕೇಶ್ವರನಗರದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಮೂರು ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ.
      ಮಾರ್ಚ್ 30 ರಂದು ಪ್ರಥಮ ಭಾಷೆ, ಏಪ್ರಿಲ್ 1 ರಂದು ವಿಜ್ಞಾನ, 6 ರಂದು ಗಣಿತ, 8 ರಂದು ದ್ವಿತೀಯ ಭಾಷೆ, 10 ರಂದು ತೃತೀಯ ಭಾಷೆ ಹಾಗೂ 13 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ಬೆಳಿಗ್ಗೆ 9-30 ಗಂಟೆಗೆ ಆರಂಭವಾಗಲಿದೆ.
      ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಸ್ಥಾನಿಕ ಜಾಗೃತ ದಳದ ಸದಸ್ಯರು ಪಾಳಿ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 89.10 ಫಲಿತಾಂಶ ಪಡೆದು 4ನೇ ಸ್ಥಾನ ಗಳಿಸಿದ್ದು, ಈ ಬಾರಿ ಪ್ರಥಮ ಸ್ಥಾನವನ್ನು ಪಡೆಯಲು ಶಾಲೆ, ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಹಲವಾರು ಶೈಕ್ಷಣಿಕ ಸಬಲೀಕರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ತಿಳಿಸಿದ್ದಾರೆ.

ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಲಿಖಿತ ಪರೀಕ್ಷೆ: ಮೊದಲನೇ
ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟ
ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ 150 ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್(ಪುರಷ) ಮತ್ತು 38 ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಮೇ 07 ರಿಂದ ಜೂನ್ 13 ರವರೆಗೆ ಸಹಿಷ್ಣುತೆ ಮತ್ತು ದೇಹಧಾಢ್ರ್ಯತೆ ಪರೀಕ್ಷೆಯನ್ನು ಮಂಡ್ಯ ಜಿಲ್ಲೆಯ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಸಲಾಗಿರುತ್ತದೆ. ಹಾಗೂ ಮಂಡ್ಯ ನಗರದ ವಿವಿಧ ಶಾಲಾ/ಕಾಲೇಜುಗಳಲ್ಲಿ ದಿನಾಂಕ: 18-01-2015 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಮೊದಲನೇ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ದಿನಾಂಕ: 26-03-2015 ರಂದು ಜಿಲ್ಲಾ ಪೊಲೀಸ್ ಕಚೇರಿ ಮಂಡ್ಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 29 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ
      ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ    2015-16ನೇ ಸಾಲಿನ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಯು ಮಾರ್ಚ್ 29 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ  ನಡೆಯಲಿದೆ.
ಮಂಡ್ಯ - ಸರ್ಕಾರಿ ಪದವಿಪೂರ್ವ ಕಾಲೇಜು, ಕಲ್ಲು ಕಟ್ಟಡ ಹಾಗೂ ಡಯಟ್, ಮಂಡ್ಯ,  ನಾಗಮಂಗಲ - ಸರ್ಕಾರಿ ಪದವಿಪೂರ್ವ ಕಾಲೇಜು, ನಾಗಮಂಗಲ, ಪಾಂಡವಪುರ – ವಿಜಯ ಪಿ.ಯು.ಕಾಲೇಜು, ಪಾಂಡವಪುರ, ಶ್ರೀರಂಗಪಟ್ಟಣ - ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣ, ಮಳವಳ್ಳಿ – ರೋಟರಿ ಪ್ರೌಢಶಾಲೆ, ತ್ಯಾಗರಾಜ ರಸ್ತೆ, ಕೋಟೆ, ಮಳವಳ್ಳಿ ಟೌನ್, ಕೆ.ಆರ್.ಪೇಟೆ - ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸಹೊಳಲು ರಸ್ತೆ ಮತ್ತು ಆರ್ಶೀವಾದ ಪ್ರೌಢಶಾಲೆ, ಕೋರ್ಟ್ ಪಕ್ಕ, ಕೆ.ಆರ್.ಪೇಟೆ ಹಾಗೂ ಮದ್ದೂರು - ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಆನ್ಸ್ ವಿದ್ಯಾ ಸಂಸ್ಥೆ, ಮದ್ದೂರು ಈ ತಾಲ್ಲೂಕು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಯು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ತಪ್ಪದೇ ಹಾಜರಾಗಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ
ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆಸೂಚನೆ

ಡಾ|| ಬಾಬು ಜಗಜೀವನರಾಂ ಜಯಂತಿ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ  ಡಾ|| ಬಾಬು ಜಗಜೀವನರಾಂ ಜಯಂತಿ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಜಯಂತಿಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು   ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ದಿನದಂದು ಮೆರವಣಿಗೆಯು ಜಿಲ್ಲಾ ಕಚೇರಿಯ ಮುಂಭಾಗದಲ್ಲಿರುವ  ಡಾ|| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾಗಿ  ಜಿಲ್ಲಾ ಕ್ರೀಡಾಂಗಣದಲ್ಲಿ ಹಬ್ಬದ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಂದು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸಿದ ವಾರ್ಡನ್ ಹಾಗೂ ಅಡುಗೆಯವರಿಗೆ ಸನ್ಮಾನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಣ್ಣೇಗೌಡ ಹಾಗೂ ಸಮುದಾಯದ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ವೆಂಕಟಗಿರಿಯಯ್ಯ ಹಾಗೂ ಮತ್ತಿತರರು ಭಾಗವಹಿಸಿದ್ದರು.
*******





         

No comments:

Post a Comment