Tuesday 17 March 2015

ಮೈಸೂರು ನಗರದಲ್ಲಿ ನ್ಯಾನೂ ಹಾಗೂ ಇತರೆ ಮೋಟಾರ್ ಕ್ಯಾಬ್ ಚಾಲಕರ ಕುಂದು ಕೊರತೆ ಸಭೆ,


ಮೈಸೂರು ನಗರದಲ್ಲಿ ನ್ಯಾನೂ ಹಾಗೂ ಇತರೆ ಮೋಟಾರ್ ಕ್ಯಾಬ್ ವಾಹನಗಳು  ಸಂಚರಿಸುತ್ತಿರುವುದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ (ರಿ) ಮೈಸೂರು ಹಾಗೂ ಮತ್ತಿತರ ಆಟೋ ಸಂಸ್ಥೆಗಳು ಸಲ್ಲಿಸಿರುವ ಮನವಿ ಸಂಬಂಧ ಕುಂದುಕೊರತೆಗಳ ಸಭೆಯನ್ನು ನಡೆಸಲಾಯಿತು.

ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ (ರಿ) ಮೈಸೂರು ಇವರ ಪರವಾಗಿ ಶ್ರೀ ಲಕ್ಷ್ಮಣ್ ಇವರು ಮಾತನಾಡುತ್ತಾ,  ನಗರದಲ್ಲಿ ನ್ಯಾನೊ ಮತ್ತಿತರ ವಾಹನಗಳು  ಕಂಟ್ರ್ಯಾಕ್ಟ್ ಕ್ಯಾರೇಜ್ ರಹದಾರಿಯನ್ನು ಪಡೆದು ನಗರದೊಳಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದರಿಂದ ನಗರದಲ್ಲಿರುವ ಸುಮಾರು 30,000 ಸಾವಿರ ಕುಟುಂಬಗಳು ಆಟೋರಿಕ್ಷಾ ಉದ್ಯಮವನ್ನೇ ಅವಲಂಭಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬದುಕುತ್ತಿರುವುದರಿಂದ ಸದರಿ ಕುಟುಂಬಗಳು ಆರ್ಥಿಕ ಕುಸಿತ ಕಂಡು ಬಂದಿದ್ದು, ಈ ಬಗ್ಗೆ ನಗರ ಪರಿಮಿತಿಯಲ್ಲಿ ಮೋಟಾರ್ ಕ್ಯಾಬ್‍ನ್ನು ನಿಷೇದಿಸುವಂತೆ ಕೋರಿದರು.

ಆಟೋರಿಕ್ಷಾ ಸಂಘಟನೆಗಳ ಪಧಾದಿಕಾರಿಗಳ ಮನವಿಯನ್ನು ಸುಧೀರ್ಘವಾಗಿ ಆಲಿಸಿದ ಮಾನ್ಯ ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಮೈಸೂರು ರವರು ಸಂಬಂಧಪಟ್ಟ ದಾಖಲಾತಿಗಳು ಮತ್ತು ನಿಯಮಗಳನ್ನು ಕೂಲಂಕಷವಾಗಿ ಪರಾಂಭರಿಸಿ, ಸೆಕ್ಷನ್ 2(7) ರಂತೆ ಪ್ರಯಾಣಿಕರನ್ನು ಎ ನಿಂದ ಬಿ ಗೆ ಅಂದರೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯಲು ಅವಕಾಶವಿರುತ್ತದೆ.  ಇದರಲ್ಲಿ ಕನಿಷ್ಠ ಮತ್ತು ಗರಿಷ್ಠ ಪ್ರಯಾಣದ ಅಂತರವನ್ನು ನಿಗದಿಪಡಿಸಿರುವುದಿಲ್ಲ. ಮೈಸೂರು ನಗರದಲ್ಲಿ ‘ಸಿಟಿ ಟ್ಯಾಕ್ಸಿ’ ಯೋಜನೆ ಜಾರಿಯಲ್ಲಿರುವುದಿಲ್ಲ, ಕೇವಲ ಕಾಂಟ್ರ್ಯಾಕ್ಟ್ ಕ್ಯಾರೇಜ್ ರಹದಾರಿಯನ್ನು ಪಡೆದು ಮೋಟಾರ್ ಕ್ಯಾಬ್ ಆಗಿ ಸಂಚರಿಸಲು ಮಾತ್ರ ಈಗಾಗಲೇ ರಹದಾರಿ ನೀಡಲಾಗಿರುತ್ತದೆ. ಅಲ್ಲದೆ ಸಾರ್ವಜನಿಕರಿಗೆ ಪ್ರಯಾಣಿಸಲು ಸೂಕ್ತ ಆಯ್ಕೆಯನ್ನು ಸಹ ಕಲ್ಪಿಸಬೇಕಿರುತ್ತದೆ.  ಹೀಗಿರುವಾಗ ಮೋಟಾರ್ ಕ್ಯಾಬ್‍ಗಳನ್ನು ನಗರದೊಳಗೆ ಸಂಚರಿಸದಂತೆ ನಿರ್ಬಂಧ ವಿಧಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.

ಆಟೋರಿಕ್ಷಾ ಪ್ರಯಾಣ ದರವನ್ನು ದಿನಾಂಕ: 07-01-2014 ರಂದು ನಿಗದಿಪಡಿಸಿದ್ದು ಕನಿಷ್ಟ ರೂ.25.00 ನಂತರದ ಪ್ರತಿ ಕಿಲೋಮೀಟರ್‍ಗೆ ರೂ.13.00 ಹಾಗೂ ಇದೇ ರೀತಿ ಮೋಟಾರ್ ಕ್ಯಾಬ್‍ಗಳಿಗೆ  ಸರ್ಕಾರದ ಅಧಿಸೂಚನೆ ಸಂಖ್ಯೆ:    
ಸಾರಿಇ 300 ಸಾಎಇಪಿಎ 2007, ದಿನಾಂಕ 08-07-2009 ರಲ್ಲಿ  ಎಸಿ ಟ್ಯಾಕ್ಸಿಗಳಿಗೆ ರೂ.40.00, ಎಸಿ ಅಲ್ಲದ ಟ್ಯಾಕ್ಸಿಗಳಿಗೆ ರೂ.35.00 ನ್ನು ನಂತರದ ಪ್ರತಿ ಕಿ.ಮೀ.ಗೆ ಕ್ರಮವಾಗಿ ರೂ.8.00 ಮತ್ತು ರೂ.7.00ನ್ನು ನಿಗದಿಪಡಿಸಲಾಗಿರುತ್ತದೆ, ಹಾಗೆಯೇ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಇ 56 ಸಾಇಪ 2013, ದಿನಾಂಕ:03-06-2013 ರಲ್ಲಿ ಸಿಟಿ ಟ್ಯಾಕ್ಸಿ (ಮೋಟಾರ್ ಕ್ಯಾಬ್) ಗಳಿಗೆ ಕನಿಷ್ಠ ರೂ.70.00 ಹಾಗೂ ನಂತರದ ಪ್ರತಿ ಕಿ.ಮೀ.ಗೆ ರೂ.14.50ನ್ನು ನಿಗದಿಪಡಿಸಲಾಗಿರುತ್ತದೆ.  ಅದರಂತೆ, ಆಟೋರಿಕ್ಷಾಗಳು, ಮೋಟಾರ್ ಕ್ಯಾಬ್‍ಗಳು ಮತ್ತು ಸಿಟಿ ಟ್ಯಾಕ್ಸಿಗಳ ಬಾಡಿಗೆ ದರದಲ್ಲಿ ಅಂತರ ಇರುವುದನ್ನು ಸಹ ಗಮನಿಸಿ ಆಯಾ ದರಗಳನ್ನು ಪಾವತಿಸಿ ಸಂಚರಿಸುವ ಪ್ರಯಾಣಿಕರುಗಳಿಗೆ ಅನುಗುಣವಾಗಿ ಸಾರ್ವಜನಿಕ ಸೇವಾ ವಾಹನವನ್ನು ನೀಡುವುದು ಪ್ರಾಧಿಕಾರದ ಪ್ರಥಮ ಕರ್ತವ್ಯವಾಗಿರುವುದನ್ನು ಮನಗಾಣಲಾಯಿತು. ಮುಂದುವರಿದು, ಮೋಟಾರ್ ಕ್ಯಾಬ್‍ಗಳಿಗೆ ನಿಗದಿಪಡಿಸಿದ ದರ 2009 ಹಳೆಯದಾಗಿದ್ದು ಪ್ರಸ್ತುತ ಮಾನದಂಡಗಳಿಗೆ ಅನುಗುಣವಾಗಿ ದರವನ್ನು ಪರಿಷ್ಕರಿಸಲು ಸಹ ಸರ್ಕಾರಕ್ಕೆ  ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ತಿಳಿಸಲಾಯಿತು.

ಮೈಸೂರು ನಗರ ಮತ್ತು ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟ (ರಿ) ಮೈಸೂರು ಇವರ ಪರವಾಗಿ ಶ್ರೀ ಲಕ್ಷ್ಮಣ್ ಇವರು ಮಾತನಾಡುತ್ತಾ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ ನಿಯಮ 221 ರಡಿ ಮಾನ್ಯ ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಮೈಸೂರು ಇವರು ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ.

ಶ್ರೀ ಸಿದ್ದಪ್ಪ ಹೆಚ್ ಕಲ್ಲೇರ್, ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮೈಸೂರು ಇವರು ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್ 115 ನ್ನು ಸಭೆಯ ಗಮನಕ್ಕೆ ತಂದರು.

ಸಾರ್ವಜನಿಕರ ಹಿತದೃಷ್ಠಿಯಿಂದ ಪ್ರಯಾಣಿಸಲು ಯಾವ ಸಾರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕಿರುತ್ತದೆ.  ಯಾವುದೇ ಸಾರ್ವಜನಿಕ ಹಿತಾಸಕ್ತಿನ್ನು ಮನಗಾಣದೆ ಕೇವಲ ಆಟೋರಿಕ್ಷಾ ಪ್ರವರ್ತಕರ ಹಿತದೃಷ್ಠಿಯಿಂದ ನಗರದಲ್ಲಿ ಸೇವೆ ನೀಡುವ ಮೋಟಾರ್ ಕ್ಯಾಬ್‍ಗಳ ಸೇವೆಯನ್ನು ನಿರ್ಬಂಧಿಸಿದಲ್ಲಿ ನಗರದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಒದಗಬಹುದಾದ ಮೋಟಾರ್ ಕ್ಯಾಬ್ ಸೇವೆಯಿಂದ ಸಾರ್ವಜನಿಕ ಪ್ರಯಾಣಿಕರನ್ನು ವಂಚಿಸಲ್ಪಟ್ಟಂತಾಗುತ್ತದೆ.  ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಇರುವ ವಿವಿದ ಪ್ರೇಕ್ಷಣೀಯ, ಧಾರ್ಮಿಕ ಇತ್ಯಾದಿ ಸ್ಥಳಗಳ ಸಂದರ್ಶನಕ್ಕೆ ಅವರಿಗೆ ಎಲ್ಲಾ ರೀತಿಯ ಸಾರಿಗೆ ಸೌಲಭ್ಯದ ವಂಚನೆಯಾಗಿ ಸಾರ್ವಜನಿಕ ಪ್ರಯಾಣಿಕ ವ್ಯವಸ್ಥೆಗೆ ವಿರುದ್ದವಾದಂತಾಗುತ್ತದೆ.

ಮೇಲ್ಕಂಡ ಹಿನ್ನೆಲೆಯಲ್ಲಿ, ಮೈಸೂರು ನಗರದಲ್ಲಿ ಮೋಟಾರ್ ಕ್ಯಾಬ್ ಆಗಿ ನೋಂದಣಿಯಾಗಿ ರಹದಾರಿ ಪಡೆದ ವಾಹನಗಳನ್ನು ನಿರ್ಬಂಧಿಸಲು ವಿವಿದ ಆಟೋ ಸಂಘಟನೆಗಳು ಮಾಡಿಕೊಂಡಿರುವ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲವೆಂದು ತೀರ್ಮಾನಿಸಲಾಯಿತು.  ಏನಾದರೂ ರಹದಾರಿ ಷರತ್ತುಗಳು ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಕಠಿಣವಾಗಿ ಕ್ರಮ ಜರುಗಿಸುವಂತೆ ಪೋಲೀಸ್ ಹಾಗೂ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಯಿತು.  ಮೋಟಾರ್ ಕ್ಯಾಬ್ ರಹದಾರಿದಾರರು ಕೇವಲ ತಮ್ಮ ವಾಹನಗಳನ್ನು ಬಸ್‍ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ ಇತ್ಯಾದಿ ಪ್ರದೇಶಗಳ ವ್ಯಾಪ್ತಿಗಳಲ್ಲಿ ನಿಲ್ಲಿಸದೆ ತಮ್ಮದೆ ನಿಲುಗಡೆ ಪ್ರದೇಶಗಳನ್ನು ಹೊಂದಿ ಪ್ರಯಾಣಿಕರು ದೂರವಾಣಿ ಕರೆ ಅಥವಾ ನೇರವಾಗಿ ಕ್ಯಾಬ್ ಸೌಲಭ್ಯ ಇಚ್ಚಿಸಿದಲ್ಲಿ ರಹದಾರಿ ಷರತ್ತುಗಳಿಗೆ ಅನುಗುಣವಾಗಿ ಸೇವೆ ಒದಗಿಸುವಂತೆ ಕಟ್ಟಪ್ಟಣೆ ಮಾಡಿ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪ್ರಕರಣವನ್ನು ದಾಖಲಿಸಲು ಸಹ ಸಂಬಂಧಿಸಿ ಇಲಾಖೆಗಳಿಗೆ ಸೂಚಿಸಲಾಯಿತು. ಈಗಾಗಲೇ ರೈಲ್ವೆ ನಿಲ್ದಾಣದಲ್ಲಿ ಸದರಿ ವಾಹನಗಳು ಬಾರದಂತೆ ನಿರ್ಬಂಧಿಸಿರುವುದನ್ನು ಸಭೆಯ ಗಮನಕ್ಕೆ ತಂದು ಸಭೆಯನ್ನು ಮುಕ್ತಾಯಗೊಳಿಸಲಾಯಿತು.


No comments:

Post a Comment