Tuesday 31 March 2015

ಮೈಸೂರು ಸುದ್ದಿಗಳು.

ಸೊಳ್ಳೆ ಉತ್ಪತ್ತಿ ತಡೆಗಟ್ಟಿ; ಡಾ: ಚಿದಂಬರ್ ಎಸ್
     ಮೈಸೂರು,ಮಾ.31.ಡೆಂಗ್ಯು, ಚಿಕುಂಗುನ್ಯ ಹರಡುವ ಈಡಿಸ್ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು ಸಾರ್ವಜನಿಕರು ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್‍ಗಳನ್ನು ಸದಾಕಾಲ ಮುಚ್ಚಿಡುವಂತೆ
     ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ :ಚಿದಂಬರ ಎಸ್. ಅವರು ಮನವಿ ಮಾಡಿದ್ದಾರೆ. ಮನೆಯ ಸುತ್ತಮುತ್ತ ಬಿಸಾಡಿದ ಹಳೆಯ ಟೈರು, ಎಳನೀರ ಚಿಪ್ಪು, ಇತರೆ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡಿ. ಸಾರ್ವಜನಿಕರು ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    
ಏಪ್ರಿಲ್ 1 ರಂದು ಸಾಮಾನ್ಯ ಸಭೆ
     ಮೈಸೂರು,ಮಾ.31.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 10 ರಂದು ಜಿ.ಪಂ. ವಿಶೇಷ ಸಭೆ
     ಮೈಸೂರು,ಮಾ.31-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2015-16ನೇ ಸಾಲಿನ ಆಯವ್ಯಯ (ಬಜೆಟ್) ಮಂಡನೆ ಕುರಿತಂತೆ ವಿಶೇಷ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಬು ಜಗಜೀವನ ರಾಂ ಅವರ 108ನೇ ಜನ್ಮ ದಿನಾಚರಣೆಗೆ ಸಿದ್ದತೆ
     ಮೈಸೂರು,ಮಾ.31.ಜಿಲ್ಲಾಡಳಿತದ ವತಿಯಿಂದ ಏಪ್ರಿಲ್ 5 ರಂದು ಹಸಿರು ಕ್ರಾಂತಿ ಹರಿಕಾರ, ಭಾರತ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ ರಾಂ ಅವರ 108ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು.
    ಅಂದು ಬೆಳಿಗ್ಗೆ 9-30 ಗಂಟೆಗೆ ರೈಲ್ವೆ ನಿಲ್ದಾಣದ ಬಳಿ ಇರುವ  ಡಾ|| ಬಾಬು ಜಗಜೀವನ ರಾಂ ಅವರ    ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ 10 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ ಅವರು ಮೆರವಣಿಗೆ ಚಾಲನೆ ನೀಡುವರು. ಮೆರವಣಿಗೆಯು ರೈಲ್ವೆ ನಿಲ್ದಾಣದಿಂದ ಹೊರಟು ಮೆಟ್ರೋಪೋಲ್ ವೃತ್ತದ ಮೂಲಕ ಹುಣಸೂರು ರಸ್ತೆ ಮಾರ್ಗವಾಗಿ ಕಲಾಮಂದಿರ ತಲುಪಲಿದೆ.
     ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.  ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ|| ಲಕ್ಷ್ಮಿನಾರಾಯಣ ಅರೋರಾ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
     ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್,  ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಸಿ.ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ಎಂ.ಕೆ. ಸೋಮಶೇಖರ್, ವಾಸು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಲೋಕಾಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.

ವಾರ್ತಾ ವಿಶೇಷ
ಬಿ.ಮಟಕೆರೆ ಗ್ರಾಮವಾಗಲಿದೆ ಆದರ್ಶ ಗ್ರಾಮ
     ಮೈಸೂರು ಜಿಲ್ಲೆಯಲ್ಲಿ ಸಂಸದ್ ಆದರ್ಶ ಗ್ರಾಮ ಯೋಜನೆಗೆ ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್ ಅವರ ವ್ಯಾಪ್ತಿಯಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆ ಗ್ರಾಮಪಂಚಾಯಿತಿ            ಆಯ್ಕೆಯಾಗಿದೆ. ಈ ಗ್ರಾಮವನ್ನು ಆದರ್ಶ ಗ್ರಾಮವಾಗಿ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಎಲ್ಲಾ ಇಲಾಖೆಗಳು ಈ ಗ್ರಾಮಗಳ ಪರಿಶೀಲನೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಿವೆ. ಒಟ್ಟಾರೆ ಈ  ಗ್ರಾಮ ಸಂಪೂರ್ಣವಾಗಿ  ಅಭಿವೃದ್ಧಿಗೊಂಡು ಆದರ್ಶ ಗ್ರಾಮವಾಗಲಿದೆ.
     ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 14.10 ಲಕ್ಷ ರೂ. ವೆಚ್ಚದಲ್ಲಿ 15,600 ಸಸಿಗಳನ್ನು ನೆಡಲು ಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಒಟ್ಟು 85.37 ಲಕ್ಷ ರೂ. ಗಳ ವೆಚ್ಚದಲ್ಲಿ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆ, ಎರೆಹುಳುಗೊಬ್ಬರ/ ಜೀವಸಾರ ಘಟಕ ತಯಾರಿಕಾ ಘಟಕ, ಹಸಿರು ಮನೆ ನಿರ್ಮಾಣ, ಕೃಷಿ ಉಪಕರಣಗಳಿಗೆ ಸಹಾಯಧನ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ, ಕೃಷಿ ಉಪಕರಣಗಳಿಗೆ ಸಹಾಯಧನ, ಅಂಗಾಂಶ ಕೃಷಿ ಬಾಳೆಗೆ ಹನಿ ನೀರಾವರಿ ಉಪಕರಣಗಳ ಅಳವಡಿಕೆಗೆ ಸಹಾಯಧನ, ನೀರಿನ ಕೊರತೆಯಿಂದ ಮತ್ತು ಕೀಟ/ ರೋಗಗಳಿಂದ ಹಾನಿಗೊಳಗಾದ ತೆಂಗಿನ ತೋಟಗಳ ಪುನಶ್ಚೇತನಕ್ಕೆ ಸಹಾಯಧನ, ಆಧುನಿಕ ಬೇಸಾಯ ಕ್ರಮಗಳನ್ನುಅಳವಡಿಸಿ ಅಂಗಾಂಶ ಕೃಷಿ ಬಾಳೆಯನ್ನು ಅಭಿವೃದ್ಧಿ ಪಡಿಸಲು ಸಹಾಯಧನ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮನೆಗಳ ಮುಂದೆ ಹಾಗೂ ಶೌಚಾಲಯದ ಸುತ್ತ ಗಿಡ ನೆಡಲು ಕ್ರಿಯಾ ಯೋಜನೆ ಸಿದ್ದವಾಗಿದೆ.
     ಸಮಗ್ರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಿಂದ ಬಾಕಿ ಇರುವ 62 ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗುವುದು. 32 ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ರೂ 5000 ದಂತೆ ಸುತ್ತು ನಿಧಿ ವಿತರಣೆ. ವಿಪರೀತ ತೂಕ ಕಡಿಮೆ ಇರುವ 7 ಮಕ್ಕಳಿಗೆ ಹಾಲು ಮೊಟ್ಟೆ ಔಷಧಿಯನ್ನು ನೀಡಲಾಗುತ್ತಿದೆ.
     ಪಂಚಾಯತ್ ರಾಜ್ ತಾಂತ್ರಿಕ ವಿಭಾಗ ಕೆ.ಆರ್.ನಗರ ಹಾಗೂ ಹೆಚ್.ಡಿ.ಕೋಟೆ ವತಿಯಿಂದ ನೀರು ಸರಬರಾಜು ಯೋಜನೆ ಹಾಗೂ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  778 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಗಳ ವಿವಿಧ ಭಾಗದ ಒಟ್ಟು 38900 ಮೀಟರ್ ಉದ್ದದ ಕಾಂಕ್ರೀಟ್ ಚರಂಡಿ ಹಾಗೂ 1561 ಲಕ್ಷ ರೂ.ಗಳಲ್ಲಿ ಗ್ರಾಮಗಳ ವಿವಿಧ ಭಾಗದ 22300 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಗಾಗಿ ಯೋಜನೆ ರೂಪಿಸಲಾಗಿದೆ.
     ಇಲಾಖೆ ವತಿಯಿಂದ ಈಗಾಗಲೇ ವಿವಿಧ ಲೆಕ್ಕ ಶೀರ್ಷಿಕೆ ಯೋಜನೆಯಡಿ 2014-15 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಜಿಲ್ಲಾ ಪಂಚಾಯತ್ ಕಾರ್ಯಕ್ರಮ, ಶಾಸಕರ ಹಾಗೂ ಸಂಸದ್ ಸದಸ್ಯರ ಅನುದಾನ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾಗೂ ತಾಲ್ಲೂಕು ಪಂಚಾಯಿತಿ ಯೋಜನೆಯಡಿ 55 ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು 140.83 ಲಕ್ಷ ರೂ. ವೆಚ್ಚಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಯೋಜನೆಯಡಿ 6.33 ಲಕ್ಷ ರೂ. ಗಿರಿಜನ ಉಪಯೋಜನೆಯಡಿ 17.50 ಲಕ್ಷ ರೂ., ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 30.27 ಲಕ್ಷ ರೂ., ವಿಧಾನ ಪರಿಷತ್ ಸದಸ್ಯರ ಯೋಜನೆಯಡಿ 8.66 ಲಕ್ಷ ರೂ., ಸ್ಥಳೀಯ ಲೋಕಸಭಾ ಸದಸ್ಯರ ಅನುದಾನದಲ್ಲಿ 11.50 ಲಕ್ಷರೂ., ತಾಲ್ಲೂಕು ಪಂಚಾಯಿತಿ  ಅನುದಾನದಲ್ಲಿ 16.14 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
     ಬಿ.ಮಟಕೆರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3137 ಪರಿಶಿಷ್ಟ ಜಾತಿ ಹಾಗೂ 2299 ಪರಿಶಿಷ್ಟ ವರ್ಗದ ಜನ ಸಂಖ್ಯೆ ಇದ್ದು, 2 ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ.
     441 ಜೇನು ಕುರುಬ, 188 ಕಾಡು ಕುರುಬ ಹಾಗೂ 63 ಸೋಲಿಗ ಕುಟುಂಬಗಳಿದ್ದು, ಇವರಿಗೆ 2014-15 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ನಾಡಹಾಡಿ ಹಾಗೂ ಕಬ್ಬೆಪುರ ಹಾಡಿಯ ರಸ್ತೆ ಸಂಪರ್ಕ, ಚರಂಡಿ ಹಾಗೂ ಕುಡಿಯವ ನೀರಿಗಾಗಿ ತಲಾ 15 ಲಕ್ಷ ರೂ. ನಿಗಧಿಪಡಿಸಲಾಗಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ.
     ಖಾದಿ ಗ್ರಾಮೋದ್ಯೋಗ ಇಲಾಖೆಯಿಂದ 2.50 ಲಕ್ಷ ರೂ. ಗಳಲ್ಲಿ ವೃತ್ತಿ ನಿರತ ಕುಶಲಕರ್ಮಿಗಳೀಗೆ ಉಪಕರಣಗಳ ಖರೀದಿ, 3 ಲಕ್ಷ ರೂ. ವೆಚ್ಚದಲ್ಲಿ ವೃತ್ತಿನಿರತ ಕುಶಲ ಕರ್ಮಿಗಳಿಗೆ ವೃತ್ತಿ ಮುಂದುರೆಸಲು ಯೋಜನಾ ವೆಚ್ಚದ ಮೇಲೆ ಶೇ 60 ರಷ್ಟು ಅಥವಾ ರೂ 10,000/- ಸಹಾಯಧನ, 15 ಲಕ್ಷ ರೂ. ವೆಚ್ಚದಲ್ಲಿ ಕೈಗಾರಿಕಾ ಸೇವಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 15 ಲಕ್ಷ ರೂ. ವೆಚ್ಚದಲ್ಲಿ ಸೇವಾ ಚಟುವಟಿಕೆ ಪ್ರೋತ್ಸಾಹ, ರೂ. 2.50 ಲಕ್ಷದಲ್ಲಿ ಆಧುನಿಕ/ ತಾಂತ್ರಿಕ ತರಬೇತಿ, ರೂ 45 ಲಕ್ಷದಲ್ಲಿ ಕುಶಲಕರ್ಮಿಗಳಿಗೆ ವಸತಿ ಕಾರ್ಯಗಾರ ಕೈಗೊಳ್ಳಲು ಯೋಜನೆ ರೂಪಿಸಿದೆ.
     ಪಶು ಸಂಗೋಪನಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಒಟ್ಟು 200 ಮಿಶ್ರತಳಿ ಹಸುಗಳನ್ನು ಒದಗಿಸಲಾಗುವುದು. ಘಟಕದ ಒಟ್ಟು ವೆಚ್ಚ 1.40 ಕೋಟಿ ರೂಗಳಾಗಿರುತ್ತದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ರೈತರಿಗೆ ಒಟ್ಟು 200 ಮಿಶ್ರ ತಳಿ ಹಸುಗಳನ್ನು ನೀಡುವುದು, ಘಟಕದ ಒಟ್ಟು ವೆಚ್ಚ 70 ಲಕ್ಷ ರೂಗಳಾಗಿರುತ್ತದೆ. 1 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಕುರಿ ಸಾಕಾಣಿಕೆಗೆ ನೆರವು, 50 ಲಕ್ಷ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗದ ರೈತರಿಗೆ ಕುರಿ ಸಾಕಾಣಿಕೆಗೆ ನೆರವು, 50 ಸಾವಿರ ರೂ ವೆಚ್ಚದಲ್ಲಿ ಗಿರಿರಾಜ ಕೋಳಿ ಸಾಕಾಣಿಕೆಗೆ ನೆರವು, 20 ಲಕ್ಷ ರೂ ವೆಚ್ಚದಲ್ಲಿ ಮೇವಿನ ತಾಕುಗಳ ನಿರ್ಮಾಣ ಹಾಗೂ 30 ಸಾವಿರ ರೂ. ವೆಚ್ಚದಲ್ಲಿ ಹೈನುಗಾರಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲು ವಿವಿಧ ಇಲಾಖೆಯೊಂದಿಗೆ ಯೋಜನೆ ರೂಪಿಸಿದೆ.
     ಇದೇ ರೀತಿ ಕೃಷಿ ಹಾಗೂ ಶಿಕ್ಷಣ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಬಿ.ಮಟಕೆರೆಯಾಗಲಿದೆ ಆದರ್ಶ ಗ್ರಾಮ.

                          

No comments:

Post a Comment