Friday 20 March 2015

ಯುಗಾದಿ ಹಬ್ಬದ ಶುಭಾಶಯ
ಮೈಸೂರು , ಮಾರ್ಚ್ 20. ಕನ್ನಡ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನೋವನ್ನು ಎದರಿಸುವ ಚೈತನ್ಯ ನಮ್ಮಲ್ಲಿರಲಿ. ಸುಖದ ಅಮೃತವರ್ಷಕ್ಕೆ ದುಃಖಗಳು ಕೊಚ್ಚಿ ಹೋಗಲಿ ಹಾಗೂ ಸುಖವು ತಮ್ಮೆಲ್ಲರ ಬಳಿ ಹರಿದು ಬರಲಿ ಎಂದು ಯುಗಾದಿ ಹಬ್ಬದ ಸಂದರ್ಭದಲ್ಲಿ  ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ಶುಭ ಹಾರೈಸಿದ್ದಾರೆ.
  ಎಲ್ಲರ ಜೀವನದಲ್ಲಿ ಹೊಸ ವರ್ಷ ಹೊಸ ಹರುಷ ತರುವುದರ ಜೊತೆಯಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ತರಲೆಂದು ಭಗವಂತನÀಲ್ಲಿ ಪ್ರಾರ್ಥಿಸುತ್ತೇನೆಂದು ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.  

ಕೃಷಿ ಭಾಗ್ಯ ಯೋಜನೆ ಫಲಾನುಭವಿಗಳು ಬದು ಹಾಗೂ ಕೃಷಿ ಹೊಂಡ ನಿರ್ಮಿಸಿಕೊಳ್ಳಿ
       ಮೈಸೂರು,ಮಾ.20- ಮೈಸೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ರೈತರು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ತಮ್ಮ ಹೊಲದಲ್ಲಿ ನೀರು ಸಂಗ್ರಹಿಸುವ ಬದುಗಳು ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುವುದು ಎಂದು ಮೈಸೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
       ಹೊಲದಲ್ಲಿ ಬದುಗಳು ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುವ ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೆ. 90 ರಷ್ಟು ಸಹಾಯಧನವನ್ನು ಇಲಾಖೆಯಿಂದ ನೀಡಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯಡಿ ಸವಲತ್ತುಗಳನ್ನು ಪಡೆದುಕೊಳ್ಳಲು ಅವಕಾಶವಿದ್ದು ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 25 ರಂದು ಜಿ.ಪಂ. ಸಾಮಾನ್ಯ ಸಭೆ
     ಮೈಸೂರು,ಮಾ.20.ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ
ಅಧ್ಯಕ್ಷತೆಯಲ್ಲಿ  ಮಾರ್ಚ್ 25 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಶಿಕ್ಷಣ ಮಂಡಳಿ ಸಾಮಾನ್ಯ ಸಭೆ
      ಮೈಸೂರು,ಮಾ.20-ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ನಾಲ್ಕನೇ ಸಾಮಾನ್ಯ ಸಭೆಯನ್ನು ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಫರ್ಡ್‍ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಪ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 24 ರಂದು ವಿಶ್ವ ಕ್ಷಯರೋಗ ದಿನಾಚರಣೆ
      ಮೈಸೂರು,ಮಾ.20.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಸಂಘ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಮಾರ್ಚ್ 24 ರಂದು ಬೆಳಿಗ್ಗೆ 11 ಗಂಟೆಗೆ ನಜರ್‍ಬಾದ್‍ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ  ವೈದ್ಯರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.                                    
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸುವರು.     ಪಿ.ಕೆ.ಟಿ.ಬಿ ಮತ್ತು ಸಿ.ಡಿ. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ|| ಹೆಚ್.ಎಂ. ವಿರೂಪಾಕ್ಷ ಅವರು ಕ್ಷಯ ರೋಗದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

     ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯಗಳು ಜಿ.ಟಿ.ದೇವೇಗೌಡ, ಕೆ. ವೆಂಕಟೇಶ್, ಎಂ.ಕೆ.ಸೋಮಶೇಖರ್, ವಾಸು, ಹೆಚ್.ಪಿ. ಮಂಜುನಾಥ್, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ ಮಧುಸೂದನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನುಭಾನು, ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಯ್ಯ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಮಣಿ ಹಾಗೂ ಇನ್ನಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು.
      ಅಂದು ಬೆಳಿಗ್ಗೆ 9-30 ಗಂಟೆಗೆ  ಜಾಥಾ ನಡೆಯಲಿದ್ದು, ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಿಂದ ಚಾಲನೆ ನೀಡಲಾಗುವುದು. ಜಾಥಾವು ಎಸ್.ಪಿ. ಕಚೇರಿ ವೃತ್ತ, ತಿಯೋಬಾಲ್ಡ್‍ರಸ್ತೆ, ಫೀರ್ ಖಾನ್ ರಸ್ತೆ, ಚಾಮುಂಡಿ ವಿಹಾರ್ ಕ್ರೀಡಾಂಗಣ ರಸ್ತೆ, ಗೋಪಾಲಗೌಡ ಆಸ್ಪತ್ರೆ ರಸ್ತೆ, ಸಾಹುಕಾರ್ ಚೆನ್ನಯ್ಯ ವೃತ್ತದಿಂದ ಶಾಲಿವಾಹನ ರಸ್ತೆಯ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ  ತಲುಪಲಿದೆ.

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಸ್ಮಾರ್ಟ್ ಕಾರ್ಡ್ ವಿತರಣೆ
       ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ವತಿಯಿಂದ  ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು  ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಅರ್ಹ ಫಲಾನುಭವಿಗಳ ಹೆಸರು ನೊಂದಾಣಿ ಹಾಗೂ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.
           ಪ್ರಸ್ತುತ ಬಿಪಿಎಲ್ ಕಾರ್ಮಿಕ ಕುಟುಂಬದವರು, ಎಮ್‍ಜಿಎನ್‍ಆರ್‍ಇಜಿಎ (ಹಿಂದಿನ ಆರ್ಥಿಕ ವರ್ಷದಲ್ಲಿ ಕನಿಷ್ಠ 15 ದಿನ ಕೆಲಸ ನಿರ್ವಹಿಸಿದವರು), ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು, ರೈಲ್ವೇ ಇಲಾಖೆಯ ಪರವಾನಗಿ ಪಡೆದ ವೆಂಡರ್ಸ್-ಪೋರ್ಟರ್ಸ್-ಹಾಕರ್ಸ್, ಬೀದಿ ಬದಿ ವ್ಯಾಪಾರಿಗಳು, ನಿರ್ಮಾಣ ಕಾರ್ಮಿಕರು, ಅಂಚೆ ಪೇದೆಗಳು, ಆಟೋ ರಿಕ್ಷಾ ಚಾಲಕರು, ಸೈಕಲ್ ರಿಕ್ಷಾ ತಳ್ಳುವವರು, ಚಿಂದಿ ಆಯುವವರು, ಗಣಿ ಕಾರ್ಮಿಕರು, ಸಫಾಯಿ ಕರ್ಮಾಚಾರಿಗಳು, ನೇಕಾರರು ಮತ್ತು ಕುಶಲಕರ್ಮಿಗಳ ಕುಟುಂಬದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
       ಜಿಲ್ಲೆಯಲ್ಲಿ 602768 ಕುಟುಂಬಗಳು ಗುರುತಿಸಲ್ಪಟ್ಟಿದ್ದು ಅವರಲ್ಲಿ ಇದುವರೆಗೆ 323591 ಫಲಾನುಭವಿ ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ.  ಮೈಸೂರು ನಗರಾದ್ಯಂತ ಎಲ್ಲಾ 65 ವಾರ್ಡ್‍ಗಳಲ್ಲೂ ಅರ್ಹ ಫಲಾನುಭವಿಗಳಿಗೆ ಸ್ಮಾರ್ಟ್‍ಕಾರ್ಡ್‍ಗಳನ್ನು ವಿತರಿಸಲಾಗಿದ್ದು, ಸ್ಮಾರ್ಟ್‍ಕಾರ್ಡ್ ಪಡೆಯದ ಅರ್ಹ ಫಲಾನುಭವಿಗಳು  ಬಿಪಿಎಲ್ ಕಾರ್ಡ್‍ನೊಂದಿಗೆ ದಿನಾಂಕ 31-03-2015 ರೊಳಗೆ ಕುವೆಂಪುನಗರದಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲಿರುವ ನೊಂದಣಿ ಕೇಂದ್ರದಲ್ಲಿ ಹೆಸರು ನೊಂದಾಯಿಸಿ ಸ್ಮಾರ್ಟ್‍ಕಾರ್ಡ್ ಪಡೆಯಬಹುದಾಗಿರುತ್ತದೆ.
        ಒಟ್ಟು ಪ್ರೀಮಿಯಂ ಮೊತ್ತದಲ್ಲಿ ಕೇಂದ್ರ ಸರ್ಕಾರವು ಶೇ.75 ಹಾಗೂ ರಾಜ್ಯ ಸರ್ಕಾರವು ಶೇ.25ರಷ್ಟನ್ನು ಪಾವತಿಸುತ್ತದೆ. ಇದಕ್ಕಾಗಿ ಫಲಾನುಭವಿಗಳು ನೊಂದಣಿ ಶುಲ್ಕವಾಗಿ ರೂ:-30/- ಹೊರತುಪಡಿಸಿ ಬೇರೆ ಯಾವುದೇ ವೆಚ್ಚವನ್ನು ಭರಿಸಬೇಕಾಗಿರುವುದಿಲ್ಲ.  ಫಲಾನುಭವಿಗಳಿಗೆ, ತಮ್ಮ ಬೆರಳ ಗುರುತು ಹಾಗೂ ಛಾಯಾಚಿತ್ರವುಳ್ಳ ಬಯೋಮೆಟ್ರಿಕ್ ‘ಸ್ಮಾರ್ಟ್‍ಕಾರ್ಡ್’ಗಳನ್ನು ವಿತರಿಸಲಾಗುತ್ತದೆ.   ಈ ಕಾರ್ಡ್‍ಗಳನ್ನು ಬಳಸಿ ಫಲಾನುಭವಿ ಕುಟುಂಬದವರು ಒಂದು ವರ್ಷಕ್ಕೆ ರೂ:-30,000/- ದಷ್ಟು ಗರಿಷ್ಠ ಮೊತ್ತದ ಚಿಕಿತ್ಸಾ ವೆಚ್ಚಕ್ಕೆ ಸೀಮಿತಗೊಳಿಸಿ ನಿಗದಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.  ಹೆಚ್ಚಿನ ವಿವರಗಳಿಗೆ ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯನ್ನು ಸಂಪರ್ಕಿಸುವುದು ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ಮೀನಾ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸಂತ ಋತು ವಮನ ಚಿಕಿತ್ಸಾ ಶಿಬಿರ: ಹೆಸರು ನೊಂದಣಿ
     ಮೈಸೂರು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ  ಮತು ಆಸ್ಪತ್ರೆಯಲ್ಲಿ ಚೈತ್ರ-ವೈಶಾಖದ ವಸಂತ ಋತು ವಮನ ಚಿಕಿತ್ಸಾ ಶಿಬಿರ ಏರ್ಪಡಿಸಲಿದ್ದು,  ಆಸಕ್ತ ಸಾರ್ವಜನಿಕರು ವಸಂತ ವಮನ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಶಿಬಿರವು ಕೇವಲ ರೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸ್ವಸ್ಥರೂ ಸಹ ತಮ್ಮ ಸ್ವಾಸ್ಥ್ಯವೃದ್ಧಿಗೆ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ಆಸಕ್ತರು ದಿನಾಂಕ 23/03/2015 ರಿಂದ 28/03/2015. ರವರೆಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
      ಚರ್ಮದ ಅಲರ್ಜಿ, ಮೊಡವೆಗೆ ಸಂಬಂಧಿಸಿದಂತೆ ಡಾ||ಸುನಂದಮ್ಮ.ಎನ್.ಎಂ. ಮೊಬೈಲ್ ಸಂಖ್ಯೆ -8971472059, ದಮ್ಮು ರೋಗ, ಹಳೆಯ ಕೆಮ್ಮು ಉಸಿರಾಟದ ತೊಂದರೆಗೆ ಸಂಬಂಧಿಸಿದಂತೆ ಡಾ||ಶೋಭಾಹೆಬ್ಬಾರ್ 9449274083, ಮುಟ್ಟಿನ ತೊಂದರೆ , ಬಂಜೆತನಕ್ಕೆ ಸಂಬಂಧಿಸಿದಂತೆ ಡಾ||ಲತಾ 9845231964, ಚರ್ಮವ್ಯಾಧಿ, ಸೋರಿಯಾಸಿಸ್, ಬಿಳಿ ತೊನ್ನಿಗೆ ಸಂಬಂಧಿಸಿದಂತೆ ಡಾ|| ಆರ್.ಸಿ.ಮೈತ್ರೇಯಿ 9480441974, ಕಣ್ಣಿನ ತೊಂದರೆ,  ತುಂಬಾ ದಿನದಿಂದ ಇರುವ ನೆಗಡಿ, ತಲೆನೋವಿಗೆ ಸಂಬಂಧಿಸಿದಂತೆ ಡಾ|| ಮೋಹನಕುಮಾರಿ-9448804744, ಸ್ಥೌಲ್ಯ, ಹೆಚ್ಚಿನ ಕೊಬ್ಬಿನಾಂಶದ ತೊಂದರೆ,  ಮತ್ತು ಥೈರಾಯಿಡ್ ತೊಂದರೆಗೆ ಸಂಬಂಧಿಸಿದಂತೆ ಡಾ||ರಾಧಾಕೃಷ್ಣ ರಾಮರಾವ್-9886241005 ಆಮ್ಲಪಿತ್ತ, ಜಠರÀ ತೊಂದರೆ , ಹೊಸದಾಗಿರುವ ಸಕ್ಕರೆ ಖಾಯಿಲೆಗೆ ಸಂಬಂಧಿಸಿದಂತೆ ಡಾ||ಆದರ್ಶ 9886378333,  ಹಾಗೂ ಆರೋಗ್ಯವಂತರು  ಡಾ||ವಿಜಯಲಕ್ಷ್ಮಿ .ಜಿ.ಹೆಚ್. 9886540929  ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳುವುದು.

ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
        2015ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ, ಅಂತರರಾಷ್ಟ್ರೀಯ, ಜೀವನ ಪರ್ಯಂತ ಸಾಧನೆ ಮಾಡಿದ ಹಾಗೂ ಅತ್ಯುತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಧ್ಯಾನ್‍ಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲು ಜಿಲ್ಲೆಯಲ್ಲಿ ಅರ್ಹ ಕ್ರೀಡಾಪಟು /ತರಬೇತುದಾರರಿಂದ  ಅರ್ಜಿ ಆಹ್ವಾನಿಸಿದೆ.
         ಅರ್ಜಿ ನಮೂನೆಯನ್ನು ವೆಬ್‍ಸೈಟ್ ತಿತಿತಿ.ಥಿಚಿs.ಟಿiಛಿ.iಟಿ. ನಲ್ಲಿ ಪಡೆದು ದಿನಾಂಕ 10-04-2015 ರ ಒಳಗಾಗಿ ಸಲ್ಲಿಸುವುದು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.

ವಾರ್ತಾ ವಿಶೇಷ
   
ಕ್ಷಯ ರೋಗದ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಮೈಸೂರು ಜಿಲ್ಲೆಯಲ್ಲಿ ಮಾರ್ಚ್ 24 ರಂದು ಕ್ಷಯ ರೋಗವನ್ನು ನಿಯಂತ್ರಿಸಲು ಜನಸಾಮಾನ್ಯರಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕ್ಷಯ ರೋಗವು ರೋಗಿ ಕೆಮ್ಮಿದಾಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಅಪಾಯಕಾರಿ ಹಾಗೂ ಪುರಾತನ ರೋಗವಾಗಿದ್ದು, ಮುನ್ನಚ್ಚರಿಕಾ ಕ್ರಮಗಳನ್ನು ವಹಿಸಿ ಕ್ಷಯ ರೋಗವನ್ನು ಪೂರ್ಣವಾಗಿ ತಡೆಗಟ್ಟಿ ಸ್ವಚ್ಛಭಾರತ, ಸ್ವಸ್ಥಭಾರತ ಮತ್ತು ಕ್ಷಯ ಮುಕ್ತ ಭಾರತ ಸಂದೇಶವನ್ನು ಎಲ್ಲಡೆ ನೀಡಬೇಕಿದೆ.
ಕ್ಷಯ ರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‍ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾವನ್ನು 24 ಮಾರ್ಚ್ 1882 ರಲ್ಲಿ ಡಾ|| ರಾಬರ್ಟ್ ಹುಕ್ ಪತ್ತೆಹಚ್ಚಿದರು. ಸಂಕೇತಿಕವಾಗಿ ವಿಶ್ವಾದಾದ್ಯಂತ ಈ ದಿನದಂದು ವಿಶ್ವ ಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದೆ.
ಭಾರತದಲ್ಲಿ ಪ್ರತಿದಿನ 40,000 ಕ್ಕೂ ಹೆಚ್ಚು ಜನರಿಗೆ ಕ್ಷಯರೋಗದ ಸೋಂಕು ತಗಲುತ್ತದೆ. 5,000 ಕ್ಕಿಂತ ಹೆಚ್ಚಿನ ಜನ ಕ್ಷಯ ರೋಗ ಪೀಡಿತರಾಗುತ್ತಾರೆ ಹಾಗೂ 1,000 ಕ್ಕೂ ಹೆಚ್ಚಿನ ಜನ ಕ್ಷಯ ರೋಗದಿಂದ ಮರಣ ಹೊಂದುತ್ತಾರೆ. ಪ್ರತಿ ವರ್ಷ 18 ಲಕ್ಷ ಹೊಸ ಕ್ಷಯರೋಗಿಗಳು ಸೇರ್ಪಡೆಯಾಗುತ್ತಾರೆ ಇವರಲ್ಲಿ 8 ಲಕ್ಷ ಜನದ ಕಫದಲ್ಲಿ ರೋಗ ಹರಡುವ ರೋಗಾಣುವಿದ್ದು, ಸೋಂಕನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಾರೆ.
ಈ ರೋಗ ಸಾಮಾಜಿಕವಾಗಿಯೊ ಪರಿಣಾಮ ಬೀರುತ್ತದೆ. 3 ಲಕ್ಷಕ್ಕೂ ಹೆಚ್ಚು ಮಕ್ಕಳು ಅವರು ತಂದೆ ತಾಯಂದಿರು ಕ್ಷಯರೋಗದ ಪೀಡಿತರು ಎಂಬ ಕಾರಣಕ್ಕೆ ಶಾಲೆಯನ್ನು ಮಧ್ಯದಲ್ಲೇ ಬಿಟ್ಟು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಒಂದು ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಕುಟುಂಬದಿಂದ ತಿರಸ್ಕøತರಾಗುತ್ತಾರೆ. ವರ್ಷದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಅಂದಾಜು 203 ಕ್ಷಯ ರೋಗಿಗಳಿರುತ್ತಾರೆ.
ಕ್ಷಯ ರೋಗದಲ್ಲಿ ಎರಡು ವಿಧ. ಶ್ವಾಸಕೋಶದ ಕ್ಷಯ ಹಾಗೂ ಶ್ವಾಸಕೋಶೇತರ ಕ್ಷಯ. ಕ್ಷಯ ರೋಗವು ದೇಹದ ಯಾವುದೇ ಭಾಗಕ್ಕೆ ಬೇಕಾದರೂ ತಗುಲಬಹುದು. ಶ್ವಾಸಕೋಶದ ಕ್ಷಯ ಅದರಲ್ಲೂ ಕಫದಲ್ಲಿ ಕ್ರಿಮಿ ಕಂಡುಬರುವ ಕ್ಷಯ ಒಬ್ಬರಿಂದ ಇನ್ನೊಬ್ಬರಿಗೆ ಹರುಡುತ್ತದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುವುದು  ಅತ್ಯಂತ ಮುಖ್ಯ.
ಎರಡು ವಾರಗಳಿಗಿಂತ ಹೆಚ್ಚಿನ ಅವಧಿಯ ಸತತ ಕೆಮ್ಮು ಜೊತೆಗೆ ಕಫ, ಸಂಜೆ ವೇಳೆ ಜ್ವರ, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಲಕ್ಷಣಗಳು. ಪ್ರಾರಂಭದ ಹಂತದಲ್ಲೇ ಎರಡು ಬಾರಿ ಕಫ ಪರೀಕ್ಷೆ ಮಾಡಿಸುವ ಮುಖಾಂತರ ರೋಗ ಇರುವಿಕೆ ಬಗ್ಗೆ ಖಚಿತವಾಗಿ ತಿಳಿಯಬಹುದು. 6-8 ತಿಂಗಳ ಕಾಲ ತಪ್ಪದೆ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು. ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ.
ಹೆಚ್.ಐ.ವಿ ಸೋಂಕುಳ್ಳ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಬೇಗನೇ ಕ್ಷಯ ರೋಗಕ್ಕೆ ತುತ್ತಾಗುತ್ತಾರೆ. ಹೆಚ್.ಐ.ವಿ ಸೋಂಕು ಇರುವವರಲ್ಲಿ ಕ್ಷಯರೋಗ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸಲುವಾಗಿ ಏಪ್ರಿಲ್ 2015 ರಿಂದ ಕೆ.ಆರ್.ಆಸ್ಪತ್ರೆಯಲ್ಲಿ ಸಿಬಿಎನ್‍ಎಎಟಿ ಸೈಟ್ ಕಾರ್ಯನಿರ್ವಹಿಸಲಿದೆ.
ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣಾ ಕಾರ್ಯಕ್ರಮ ಜನವರಿ 2003 ರಿಂದ ಜಾರಿಯಲ್ಲಿದ್ದು ಜನವರಿ 2003 ರಿಂದ ಫೆಬ್ರವರಿ 2015 ರವರೆಗೆ 3,46,858 ಸಂಶಯಸ್ಪದ ರೋಗಿಗಳ ಕಫ ಪರೀಕ್ಷೆಗೆ ಒಳಪಡಿಸಿದ್ದು, ಒಟ್ಟು 33,689 ಕ್ಷಯ ರೋಗಿಗಳು ಪತ್ತೆಯಾಗಿರುತ್ತಾರೆ. 18852 ರೋಗಿಗಳ ಕಫದಲ್ಲಿ ಕ್ರಿಮಿಗಳು ಕಂಡುಬಂದಿರುತ್ತದೆ. 9715 ರೋಗಿಗಳ ಕಫದಲ್ಲಿ ಕ್ರಿಮಿ ಇರುವುದಿಲ್ಲ ಹಾಗೂ 9761 ಶ್ವಾಸಕೋಶೇತರ  ಕ್ಷಯರೋಗಿಗಳು ಕಂಡುಬಂದಿರುತ್ತದೆ. ಈ ರೋಗಿಗಳು ಚಿಕಿತ್ಸೆ ಪಡೆದು ಶೇ 80 ರಷ್ಟು ರೋಗಿಗಳು ಗುಣಮುಖರಾಗಿರುತ್ತಾರೆ.
ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಶಂಕಿತ ರೋಗಿಗಳ ಕಫ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕ್ಷಯ ರೋಗಿಗಳಿಗೆ ಹೆಚ್.ಐ.ವಿ ಹಾಗೂ ಮಧುಮೇಹ ಪರೀಕ್ಷೆಯನ್ನು ಸಹ ಮಾಡಲಾಗುತ್ತಿದೆ. ಕ್ಷಯ ರೋಗಿಗಳಿಗೆ ಹತ್ತಿರದ ಆಸ್ಪತ್ರೆ, ಅಂಗನವಾಡಿ ಕೇಂದ್ರದ ಮುಖಾಂತರ ಡಾಟ್ಸ್ ಚಿಕಿತ್ಸೆ ನೀಡಲಾಗುತ್ತಿದೆ. ಡಾಟ್ಸ್ ಚಿಕಿತ್ಸೆ ನೀಡಿ ಕ್ಷಯರೋಗಿಗಳನ್ನು ಗುಣಪಡಿಸುವ ಡಾಟ್ಸ್ ಪ್ರೊವೈಡರ್ ಗಳಿಗೆ ಗೌರವಧನ ನೀಡಲಾಗುವುದು.
ಕ್ಷಯ ರೋಗಿಗಳನ್ನು ಪತ್ತೆಮಾಡಿದ ನಂತರ ಅವರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಸಂಪರ್ಕದಲ್ಲಿರುವವರನ್ನು ಸಹ ತಪಾಸಣೆಗೆ ಒಳಪಡಿಸಿ  ಆರೋಗ್ಯ ಶಿಕ್ಷಣ ಸಹ ನೀಡಲಾಗುತ್ತಿದೆ.
ಕ್ಷಯ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿ ಕ್ಷಯ ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.









No comments:

Post a Comment