Thursday 9 July 2015

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ-ಜಿಲ್ಲಾ ಪಂಚಾಯತ್ ಸಿಇಒ.ರೋಹಿಣಿ

 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ

ಮಂಡ್ಯ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿಗಾಗಿ ರೂಪಿಸಿರುವ 15 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಯಶಸ್ವಿಯಾಗಿದ್ದು ಗಮನ ಸೆಳೆದಿದೆ.
`ಜನಸ್ನೇಹಿ’ ಪರಿಕಲ್ಪನೆಯ ವ್ಯಕ್ತಿಗತ ಕಾಮಗಾರಿಗಳು, ಕುರಿ/ದನದ ದೊಡ್ಡಿ, ರೈತರ ಒಕ್ಕಣೆ ಕಣ, ನಮ್ಮ ಹೊಲ-ನಮ್ಮ ದಾರಿ, ಆಟದ ಮೈದಾನ, ಮನೆಗೊಂದು ಶೌಚಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿ `ಪ್ರಗತಿ ಪಥ’ದಲ್ಲಿ ಮುನ್ನಡೆದಿದೆ.
2014-15ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಡಿ ಜಾರಿ ಮಾಡಿದ ಅಭಿವೃದ್ಧಿ ಕಾಮಗಾರಿಗಳು ಹಾಗೂ ರೈತರ ಒಕ್ಕಣೆ ಕಣ, ಮನೆಗೊಂದು ಶೌಚಾಲಯ ಮತ್ತು ಕುಡಿಯುವ ನೀರಿನ ಮರುಪೂರಣ ಘಟಕಗಳ ನಿರ್ಮಾಣದಲ್ಲಿ `ಗುರಿ ಮೀರಿದ ಸಾಧನೆ’ ಆಗಿದೆ. ಕುರಿ/ದನದ ದೊಡ್ಡಿ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ರಾಜೀವ್‍ಗಾಂಧಿ ಸೇವಾ ಕೇಂದ್ರ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲೂ ಗಮನಾರ್ಹ ಪ್ರಗತಿ ಸಾಧಿsಸಲಾಗಿದೆ.
69,842 ಕುಟುಂಬಗಳಿಗೆ ಉದ್ಯೋಗ
ಜಿಲ್ಲೆಯಲ್ಲಿ, 2015ರ ಮಾರ್ಚ್ ತಿಂಗಳಾಂತ್ಯದವರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2,29,208 ಜಾಬ್‍ಕಾರ್ಡ್‍ಗಳನ್ನು ವಿತರಿಸಿದ್ದು, 69,842 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 14.64 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ.
2013-14ನೇ ಸಾಲಿನಲ್ಲಿ ಇದೇ ಯೋಜನೆಗಳಡಿ (15 ಅಂಶಗಳ ಕಾರ್ಯಕ್ರಮ) 17,299 ಕಾಮಗಾರಿಗಳನ್ನು ಕೈಗೊಂಡು 664.95 ಲಕ್ಷ ರೂಪಾಯಿ ವ್ಯಯಿಸಲಾಗಿತ್ತು. ಆದರೆ, 2014-15 ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳ ಸಂಖ್ಯೆ 46,164ಕ್ಕೆ ಏರಿಕೆಯಾಗಿದ್ದು, ರೂ. 1,553.31 ಲಕ್ಷ ವೆಚ್ಚ ಮಾಡಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ತೆಂಗು (303 ಹೆಕ್ಟೇರ್), ನುಗ್ಗೆ (4.4 ಹೆಕ್ಟೇರ್), ಮಾವು (12 ಹೆಕ್ಟೇರ್) ಹಾಗೂ ಸಪೋಟಾ (0.4 ಹೆಕ್ಟೇರ್) ಬೆಳೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 899 ಕಾಮಗಾರಿಗಳು ಪೂರ್ಣಗೊಂಡಿದ್ದು 194 ಲಕ್ಷ ರೂ. ವ್ಯಯಿಸಲಾಗಿದೆ. 23 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ರೇಷ್ಮೆ ಇಲಾಖೆಯಿಂದ ಹಿಪ್ಪನೇರಳೆ, ನರ್ಸರಿ ಮತ್ತು ಇಂಗು ಗುಂಡಿ ನಿರ್ಮಾಣದ 93 ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, 32.35 ಲಕ್ಷ ರೂ. ಖರ್ಚು ಮಾಡಲಾಗಿದೆ. ಅರಣ್ಯ ಇಲಾಖೆಯು 4,195 ಕಾಮಗಾರಿಗಳನ್ನು ಕೈಗೊಂಡು, 522.07 ಲಕ್ಷ ರೂ. ವೆಚ್ಚ ಮಾಡಿದೆ. ಇದರಲ್ಲಿ 60 ಕಿ.ಮೀ ರಸ್ತೆ ಬದಿ, ರೈತರ ಜಮೀನು, ಶಾಲೆ, ಸರ್ಕಾರಿ ಕಚೇರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಆವರಣದಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಒತ್ತು ನೀಡಿದ್ದು ಹಸಿರುಕರಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

1 ಲಕ್ಷ ಶೌಚಾಲಯ ನಿರ್ಮಾಣ
ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಆಂದೋಲನ ಪ್ರಾರಂಭವಾದ ಒಂದು ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಶೌಚಾಲಯ ನಿರ್ಮಿಸಲಾಗಿದೆ. ನಿರ್ಮಲ ಭಾರತ ಅಭಿಯಾನ ಮತ್ತು ಉದ್ಯೋಗ ಖಾತ್ರಿ ಯೋಜನೆ ಒಗ್ಗೂಡಿಸುವಿಕೆಯಲ್ಲಿ 38,658 ಶೌಚಾಲಯಗಳನ್ನು (2014ರ ಅ. 1ರವರೆಗೆ) ನಿರ್ಮಿಸಲಾಗಿದೆ.
ಹಾಗೇ, 930 ಕುರಿ/ದನದ ದೊಡ್ಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, 28 ಪ್ರಗತಿ ಹಂತದಲ್ಲಿವೆ. ಇದಕ್ಕಾಗಿ 22.20 ಲಕ್ಷ ರೂ. ವ್ಯಯಿಸಲಾಗಿದೆ. 88 ರೈತರ ಒಕ್ಕಣೆ ಕಣ ನಿರ್ಮಾಣಕ್ಕಾಗಿ 20 ಲಕ್ಷ ರೂ. ಖರ್ಚು ಮಾಡಲಾಗಿದೆ. 413 ಆಟದ ಮೈದಾನಗಳು ಪೂರ್ಣಗೊಂಡಿದ್ದು, 10 ಪ್ರಗತಿ ಹಂತದಲ್ಲಿವೆ. ಒಟ್ಟು 26.30 ಲಕ್ಷ ರೂ. ವೆಚ್ಚ ಮಾಡಲಾಗಿದೆ. 213 ಸ್ಮಶಾನಗಳನ್ನು ಅಭಿವೃದ್ಧಿಯಾಗಿದ್ದು, 12 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಒಟ್ಟು 11.35 ಲಕ್ಷ ರೂ ಭರಿಸಲಾಗಿದೆ. 17 ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಕಾಮಗಾರಿ ಪೂರ್ಣವಾಗಿದ್ದು, 18 ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 55.45 ಲಕ್ಷ ರೂ. ವ್ಯಯಿಸಲಾಗಿದೆ.
ಪ್ರಗತಿಯ `ಹಾದಿ’ಯಲ್ಲಿ...!
ರೈತರ ಹೊಲ, ಗದ್ದೆ, ತೋಟ-ಮನೆಗಳನ್ನು ಬೆಸೆಯುವ `ನಮ್ಮ ಗ್ರಾಮ-ನಮ್ಮ ದಾರಿ’ ಯೋಜನೆಯಡಿ 28 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 28.63 ಲಕ್ಷ ರೂ. ಬಳಸಲಾಗಿದೆ. `ನಮ್ಮೂರ ಕೆರೆ’ ಯೋಜನೆಯಡಿ 64 ಕೆರೆಗಳನ್ನು ಪುನಶ್ಚೇತನ ಮಾಡಲಾಗಿದೆ. ಎಸ್‍ಸಿ/ಎಸ್‍ಟಿ, ಸಣ್ಣ/ಅತಿಸಣ್ಣ ಹಿಡುವಳಿದಾರರು ಹಾಗೂ ಇತರೆ ಅರ್ಹ ವೈಯಕ್ತಿಕ ಫಲಾನುಭವಿಗಳ ಜಮೀನಿನಲ್ಲಿ 41 ಭೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು 32.78 ಲಕ್ಷ ರೂ. ವ್ಯಯಿಸಲಾಗಿದೆ.
ಹಸಿರು `ಅಭಿವೃದ್ಧಿ’ ಪಥ
ಜಿಲ್ಲೆಯ ಒಣಭೂಮಿ ಪ್ರದೇಶದ ಬರೋಬ್ಬರಿ 60 ಕಿ.ಮೀ. ಉದ್ದದ ರಸ್ತೆ ಇಕ್ಕೆಲಗಳಲ್ಲಿ ತೇಗ, ಸಿಲ್ವರ್, ಹೆಬ್ಬೇವು, ರಕ್ತಚಂದನ, ಬೇವು, ಆಲ, ಶ್ರೀಗಂಧ ಸೇರಿದಂತೆ ನಾನಾ ಜಾತಿಯ ಗಿಡಗಳನ್ನು ನೆಡುವ ಮೂಲಕ ಹಸಿರುಕರಣಕ್ಕೂ ಒತ್ತು ನೀಡಲಾಗಿದೆ. ಪ್ರತಿ ಕಿ.ಮೀ. ಉದ್ದದಲ್ಲಿ ಸುಮಾರು 200 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಒಟ್ಟು 8,293 ಮಾನವ ಉದ್ಯೋಗ ದಿನಗಳು ಸೃಜನೆ ಆಗಿದೆ.
ಐಇಸಿ ಚಟುವಟಿಕೆಗಳು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪಕ ಪ್ರಚಾರಕ್ಕಾಗಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ವಿಭಾಗದಿಂದ ಒಟ್ಟು 10.37 ಲಕ್ಷ ರೂ. ವ್ಯಯಿಸಲಾಗಿದೆ. ಯೋಜನೆ ಕುರಿತ ಮಾಹಿತಿ, ಉದ್ಯೋಗ ಪಡೆದ ಫಲಾನುಭವಿಗಳ ವಿವರ, ರೋಜ್‍ಗಾರ್ ದಿವಸಗಳ ಮಾಹಿತಿಗಾಗಿ ಇಷ್ಟೂ ಹಣವನ್ನು ಗೋಡೆ ಬರಹಕ್ಕಾಗಿ ಬಳಸಲಾಗಿದೆ.
ಗ್ರಾಮೀಣಾಭಿವೃದ್ಧಿಗಾಗಿ ರೂಪಿಸಿರುವ 21 ಅಂಶಗಳ ಕಾರ್ಯಕ್ರಮಗಳನ್ನು (2015-16ನೇ ಸಾಲಿನಿಂದ ಹೊಸದಾಗಿ 6 ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದೆ) 2015-16ನೇ ಸಾಲಿನಲ್ಲೂ ಯಶಸ್ಸಿಯಾಗಿ ಜಾರಿಗೊಳಿಸಲು ಮಂಡ್ಯ ಜಿಲ್ಲಾ ಪಂಚಾಯತ್ ಗುರಿ ನಿಗದಿಪಡಿಸಿಕೊಂಡಿದ್ದು, ಮುನ್ನಡೆದಿದೆ.

“2015-16ನೇ ಸಾಲಿನಲ್ಲೂ 21 ಅಂಶಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. 50 ಸಾವಿರ ಕುರಿ/ದನದ ದೊಡ್ಡಿ, ವೈಯಕ್ತಿಕ ಶೌಚಾಲಯದ ಸುತ್ತ 50 ಸಾವಿರ ಗಿಡ ನೆಡುವಿಕೆ, 5 ಸಾವಿರ ಇಂಗು ಗುಂಡಿ ನಿರ್ಮಾಣ, ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ 90 ಮಾನವ ಉದ್ಯೋಗ ದಿನಗಳ ಸೃಜನೆ ಸೇರಿದಂತೆ ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಜಾರಿಗೆ ಪ್ರಥಮ ಆದ್ಯತೆ ನೀಡಿದ್ದು, ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ”
- ರೋಹಿಣಿ ಸಿಂಧೂರಿ, ಸಿಇಒ, ಜಿಲ್ಲಾ ಪಂಚಾಯತ್, ಮಂಡ್ಯ

No comments:

Post a Comment