Wednesday 22 July 2015

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ರೈತ ಪಾಪೇಗೌಡ(75) ಸಾಲಭಾದೆಯಿಂದ ನಿನ್ನೆ ರಾತ್ರಿ ತಮ್ಮ ಜಮೀನಿನ ಬಳಿ ವಿಷ ಸೇವಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಸೊಳ್ಳೇಪುರ ಗ್ರಾಮದ ದಿ.ನಂಜೇಗೌಡರ ಮಗನಾದ ಪಾಪೇಗೌಡ ಅವರು ಎರಡೂವರೆ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು ಈ ಒಣ ಭೂಮಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಬಾಳೆ ಗಿಡ, ತೆಂಗು ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೋರ್‍ವೆಲ್‍ನಲ್ಲಿ ಅಂತರ್ಜಲ ಕುಸಿದು ಬೆಳೆಗಳಿಗೆ ನೀರು ದೊರೆಯದೇ ಒಣಗಿದ್ದರಿಂದಾಗಿ ಕೈಗೆ ಬಂದ ಫಸಲಿನ ಲಾಭವು ಸಿಗದೇ ಸಾಲಗಾರರ ಕಾಟ ಹೆಚ್ಚಾದಾಗ ಪಾಪೇಗೌಡರು ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ತಮ್ಮ ಜಮೀನಿನ ಬಳಿ ವಿಷ ಕುಡಿದು ಅಸ್ವಸ್ಥರಾಗಿ ಬಿದ್ದಿದ್ದ ಪಾಪೇಗೌಡರನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಚೆನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಇಂದು ಬೆಳಿಗ್ಗೆ ಪಾಪೇಗೌಡರು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಜೀವನದ ಅಂತಿಮಯಾತ್ರೆಯನ್ನು ಮುಗಿಸಿ ಮೃತರಾಗಿದ್ದಾರೆ. ಘಟನೆಯ ಬಗ್ಗೆ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲದ ಬಾಧೆಯಿಂದ ಮೃತರಾದ ರೈತ ಪಾಪೇಗೌಡರು ಕಿಕ್ಕೇರಿಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80ಸಾವಿರರೂ ಮತ್ತು ಕೈಸಾಲ ಒಂದು ಲಕ್ಷರೂಗಳನ್ನು ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವೃತ್ತ ಆರಕ್ಷಕ ನಿರೀಕ್ಷಕ ಡಿ.ಯೋಗೇಶ್, ತಹಶೀಲ್ದಾರ್ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ತಾ.ಪಂ ಮಾಜಿಅಧ್ಯಕ್ಷ ಕಿಕ್ಕೇರಿ ಸುರೇಶ್, ತಾಲೂಕು ಪಂಚಾಯಿತಿಯ ನೂತನ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ, ಕಾರ್ಯನಿರ್ವಹಣಾಧಿಕಾರಿ ಜಿ.ರಾಮಚಂದ್ರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಗಂಗೇನಹಳ್ಳಿ ರುಕ್ಮಾಂಗಧ, ಮುಖಂಡರಾದ ಕೋಡಿಮಾರನಹಳ್ಳಿ ದೇವರಾಜು, ಕಾಯಿ ಸುರೇಶ್, ಮತ್ತಿತರರು ಸೊಳ್ಳೇಪುರ ಗ್ರಾಮಕ್ಕೆ ಭೇಟಿ ನೀಡಿ ಪಾಪೇಗೌಡರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ.
ಯುವಕ ಆತ್ಮಹತ್ಯೆ: ತಾಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದಲ್ಲಿ ಕುಮಾರ್ ಅವರ ಮಗನಾದ ಶಂಕರ(28) ಜೀವನದಲ್ಲಿ ಜಿಗುಪ್ಸೆಗೊಂಡು ಬೇಸತ್ತು ತನ್ನ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಶಂಕರ ಪತ್ನಿ, ಪುತ್ರಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾನೆ. ಘಟನೆಯ ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

No comments:

Post a Comment