Tuesday 7 July 2015

 ಸಂಸ್ಥೆಗಳು/ ಗ್ರಾಪಂಗಳಿಗೆ ಸೂಚನೆ
ಗ್ರಂಥಾಲಯ ಕರ ಪಾವತಿಸಿ: ರೋಹಿಣಿ ಸಿಂಧೂರಿ
ಮಂಡ್ಯ: ಜಿಲ್ಲೆಯಲ್ಲಿ, ಸ್ಥಳೀಯ ಸಂಸ್ಥೆಗಳಾದ ಪುರಸಭೆ/ ಪಟ್ಟಣ ಪಂಚಾಯಿತಿಗಳು ಹಾಗೂ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಕರವನ್ನು ತತ್‍ಕ್ಷಣವೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಜಮಾ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಗ್ರಂಥಾಲಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಂದ ಗ್ರಂಥಾಲಯ ಕರವಾಗಿ ಸಂಗ್ರಹಿಸಿರುವ ಶೇ 6ರಷ್ಟು ಹಣವನ್ನು ಈ ಎಲ್ಲಾ ಸಂಸ್ಥೆಗಳು ಜರೂರಾಗಿ ಭರಿಸಬೇಕು ಎಂದು ಹೇಳಿದರು.
ಸ್ಥಳೀಯ ಲೆಕ್ಕ ಪರಿಶೋಧನೆ ವರ್ತುಲ ವರದಿ ಅನ್ವಯ 2013-14ನೇ ಸಾಲಿನವರೆಗೆ ಜಿಲ್ಲೆಯ ಸ್ಥಳಿಯ ಸಂಸ್ಥೆಗಳಾದ ಪುರಸಭೆ/ ಪಟ್ಟಣ ಪಂಚಾಯತ್‍ಗಳು ಒಟ್ಟು ರೂ 68,06,049 ಗ್ರಂಥಾಲಯ ಕರ ಬಾಕಿ ಉಳಿಸಿಕೊಂಡಿವೆ. ನಾಗಮಂಗಲ ರೂ. 20,43,267; ಮದ್ದೂರು ರೂ. 11,42,216, ಪಾಂಡವಪುರ ರೂ. 4,78,439; ಶ್ರೀರಂಗಪಟ್ಟಣ ರೂ. 8,09,299; ಕೆ.ಆರ್.ಪೇಟೆ ರೂ. 7,10,317; ಮಳವಳ್ಳಿ ರೂ. 16,22,511É ಬಾಕಿ ಉಳಿಸಿಕೊಂಡಿವೆ ಎಂದರು.
ಹಾಗೇ ಜಿಲ್ಲೆಯ 234 ಗ್ರಾಮ ಪಂಚಾಯಿತ್‍ಗಳೂ ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಕರವೂ ದೊಡ್ಡದಿದ್ದು ಎಲ್ಲಾ ಪಂಚಾಯತ್‍ಗಳು ಪಾವತಿಸಬೇಕು. ಬಾಕಿ ಹಣವನ್ನು ಸಕಾಲದಲ್ಲಿ ಬಟಾವಡೆ ಮಾಡದಿದ್ದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಂಥಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಕಟ್ಟಡ ಬಾಡಿಗೆ, ವಿದ್ಯುಚ್ಛಕ್ತಿ, ದೂರವಾಣಿ, ನೀರಿನ, ಪುಸಕ್ತಗಳ ಮತ್ತು ವಾರ್ತಾ ಪ್ರತಿಕೆಗಳ ಬಿಲ್ಲುಗಳನ್ನು ಗ್ರಂಥಾಲಯ ಕರದಿಂದ ಪಾವತಿ ಮಾಡಬೇಕಿರುವುದರಿಂದ ಬಾಕಿ ಹಣವನ್ನು ಪಾವತಿಸಬೇಕು ಎಂದರು.
ಸದಸ್ಯತ್ವ ನೋಂದಣಿ ಅಭಿಯಾನ:
ಗ್ರಾಮೀಣ ಯುವಜನರಲ್ಲಿ ವಾಚನ ಆಭಿರುಚಿ ಹೆಚ್ಚಿಸುವುದು ಹಾಗೂ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇದೇ 24 ರಿಂದ 31ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಕೆ.ಎಸ್. ಲತಾಮಣಿ ಹೇಳಿದರು.
ಜುಲೈ 24ರದು ಮಳವಳ್ಳಿ, ಜು. 25ರಂದು ಮದ್ದೂರು, ಜು. 27ರಂದು ಮಂಡ್ಯ, ಜು. 28ರಂದು ನಾಗಮಂಗಲ, ಜು. 29ರಂದು ಕೆ.ಆರ್.ಪೇಟೆ, ಜು. 30ರಂದು ಪಾಂಡವಪುರ ಹಾಗೂ ಜು. 31ರಂದು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

No comments:

Post a Comment