Thursday 2 July 2015

ಮಹಿಳೆಯರಿಗೆ ಸಸಿ ವಿತರಣೆ

 ಮಹಿಳೆಯರಿಗೆ ಸಸಿ ವಿತರಣೆ
ಸಸಿ ಬೆಳಸುವ ಆಂದೋಲನಕ್ಕೆ ರೋಹಿಣಿ ಸಿಂಧೂರಿ ಚಾಲನೆ

ಮದ್ದೂರು: ರೈತ ಮಹಿಳೆಯರಿಗೆ/ ಶಾಲಾ ವಿದ್ಯಾರ್ಥಿನಿಯರಿಗೆ ಸಸಿಗಳನ್ನು ವಿತರಿಸುವ ಮೂಲಕ ಸಸಿಗಳನ್ನು ಬೆಳಸುವ ಆಂದೋಲನಕ್ಕೆ ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಗುರುವಾರ ತಾಲ್ಲೂಕಿನ ಸೋಮನಹಳ್ಳಿ ಸಸ್ಯಕ್ಷೇತ್ರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಸಿ ವಿತರಣಾ ಆಂದೋಲನದಲ್ಲಿ ರೈತರು/ರೈತ ಮಹಿಳೆಯರಿಗೆ ತೇಗ, ಓಕ್, ಶ್ರೀಗಂಧ, ರಕ್ತಚಂದನ ಸಸಿಗಳನ್ನು ವಿತರಿಸಿದರು.
ನಂತರ ಮಾತನಾಡಿದ ರೋಹಿಣಿ ಸಿಂಧೂರಿ, ರೈತರು, ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದುಕೊಳ್ಳಬೇಕು. ನೆಟ್ಟ ಸಸಿಗಳನ್ನು ಪೋಷಣೆ ಮಾಡುವುದರ ಜೊತೆಗೆ ಜತನದಿಂದ ರಕ್ಷಿಸಬೇಕು. ಆಗಷ್ಟೇ, ಆಂದೋಲನದ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.
ಅರಣ್ಯ ಇಲಾಖೆಯು ಪ್ರಸಕ್ತ ವರ್ಷ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2,500 ರೈತರ 2,275 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 5 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ಗೋಮಾಳದಲ್ಲಿ, ಕೆರೆ ಅಂಗಳಗಳಲ್ಲಿ, ರಸ್ತೆಬದಿ, ನಾಲಾಬದಿ, ಸರ್ಕಾರಿ ಮತ್ತು ಖಾಸಗಿ ಭೂಮಿಯಲ್ಲಿ ಜನರ ಸಹಭಾಗಿತ್ವದಲ್ಲಿ ಗಿಡ-ಮರಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.
ಮಕ್ಕಳಂತೆ ಆರೈಕೆ ಮಾಡಿ: ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳಸಿಕೊಳ್ಳಬೇಕು. ಸಸಿಗಳನ್ನು ಮಕ್ಕಳಂತೆ ಆರೈಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಫಲ ದೊರೆಯುತ್ತದೆ ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ದಿವ್ಯಾಶ್ರೀ ಹೇಳಿದರು.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲಲಿತಾ ಪ್ರಕಾಶ್ ಅವರು ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ನಾಗರಾಜು, ಡಿ.ಕೆ. ಸವಿತಾ ಮಧುಸೂದನ್, ಕೆ. ರವಿ, ಡಿ. ಶಿವಲಿಂಗಯ್ಯ, ಸುರೇಶ್ ಕಂಠಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಪಿ. ಸಂದರ್ಶ, ಉಪಾಧ್ಯಕ್ಷೆ ಮಂಜುಳಾ ಕೃಷ್ಣೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ರಾಮಲಿಂಗೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಇ.ಇ. ಗಂಗರಾಜಯ್ಯ, ವಲಯ ಅರಣ್ಯಾಧಿಕಾರಿ ಎಚ್.ಟಿ. ಮೋಹನ್‍ಕುಮಾರ್ ಹಾಜರಿದ್ದರು.
ಹೆಮ್ಮನಹಳ್ಳಿ: ಹೆಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಎರಡು ವಿದ್ಯಾರ್ಥಿಗಳಿಗೆ ಒಂದು ಸಸಿಯನ್ನು ದತ್ತು ನೀಡಲಾಯಿತು. ದತ್ತು ನೀಡಿದ ಗಿಡಗಳನ್ನು ಪೋಷಣೆ-ರಕ್ಷಣೆ ಜೊತೆಗೆ ಬೆಳಸುವುದಾಗಿ ವಿದ್ಯಾರ್ಥಿಗಳು ಭರವಸೆ ನೀಡಿದರು.

ಸಿಬೇಕೆ? ಈ ದಾಖಲೆಗಳನ್ನು ತನ್ನಿ:
ಸಾಮಾಜಿಕ ಅರಣ್ಯ ವಿಭಾಗದಿಂದ ಸಾರ್ವಜನಿಕರು/ರೈತರಿಗೆ ತೇಗ, ಸಿಲ್ವರ್, ಹೆಬ್ಬೇವು, ಶ್ರೀಗಂಧ, ರಕ್ತಚಂದನ, ಹೊನ್ನೆ ಇತ್ಯಾದಿ ಸಸಿಗಳನ್ನು ಆಯಾ ತಾಲ್ಲೂಕಿನಲ್ಲಿ ವಿತರಿಸಲಾಗುತ್ತಿದೆ. ಸಂಬಂಧಿಸಿ ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.
ಉದ್ಯೋಗ ಚೀಟಿ( ಜಾಬ್‍ಕಾರ್ಡ್, ಸಣ್ಣ ಹಿಡುವಳಿದಾರರ ಪತ್ರ, ಎಸ್‍ಸಿ/ಎಸ್‍ಟಿ ಜಾತಿ ಪ್ರಮಾಣಪತ್ರ, ಬಿ.ಪಿ.ಎಲ್ ಕಾರ್ಡ್, ಜಮೀನಿನ ಪಹಣಿ, ಗ್ರಾಮ ಸಭೆ ಅನುಮೋದನೆ ಪತ್ರ ಹಾಜರುಪಡಿಸಬೇಕು.
ಮಾಹಿತಿಗೆ ಕೆ.ಆರ್.ಪೇಟೆ (9448335390), ಮದ್ದೂರು (9538946537), ಮಳವಳ್ಳಿ (9538946531), ಮಂಡ್ಯ (9980257343), ನಾಗಮಂಗಲ (9449989593), ಪಾಂಡವಪುರ (9448335390) ಹಾಗೂ ಶ್ರೀರಂಗಪಟ್ಟಣ (9980257343) ಸಂಪರ್ಕಿಸಬಹುದು.
* * * * *







No comments:

Post a Comment