Wednesday 8 July 2015

ಮೈಸೂರು, ಜು.8- ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದೆಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ತಿಳಿಸಿದರು.
ನಗರದ ಪತ್ರಕರ್ತರಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಕಟ್ಟಡವು ಬ್ರಿಟೀಷರ ಕಾಲದಲ್ಲಿ ಅಂದಿನ ಮಹಾರಾಜರು ಲಂಡನ್ ಕಟ್ಟಡಗಳ ಶೈಲಿಯಲ್ಲಿ ಬಹು ಆಕರ್ಷಕವಾಗಿ ನಿರ್ಮಿಸಿದ್ದಾರೆ. ಈ ಕಟ್ಟವು ಇಂದಿಗೂ ಯಾವುದೇ ಅಪಾಯಕ್ಕೆ ಒಳಗಾಗದೆ ಅದರ ಭದ್ರತೆ ಹಾಗೂ ಪಾರಂಪರಿಕತೆಯನ್ನು ಉಳಿಸಿಕೊಂಡಿದೆ ಎಂದರು.
ಇದು ನೋಡಲು ಸುಂದರವಾಗಿದ್ದು ನಗರದ ಮಧ್ಯಭಾಗದಲ್ಲಿ ಜನಾಕರ್ಷಣೀಯ ಕೇಂದ್ರವೂ ಆಗಿದೆ ಎಂದವರು ಹೇಳಿದರು.
125 ವರ್ಷಗಳ ಹಳೇಯದಾದ ಈ ಕಟ್ಟಡ ತನ್ನ ವಾಸ್ತು ವಿನ್ಯಾಸ ಶೈಲಿಯಲ್ಲಿ ಗಟ್ಟಿಯಾಗಿದ್ದು, ಇನ್ನು ಹೆಚ್ಚಿನ ಕಾಲ ಬಾಳಿಕೆ ಬರಲಿದೆ. ಈ ಕಟ್ಟಡದಲ್ಲಿ ಹಲವಾರು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನತೆಗೆ ಹತ್ತಿರದ ಸ್ಥಳವಾಗಿದೆ ಎಂದ ಅವರು ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿನ ಜಿಲ್ಲಾಡಳಿತ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದರು.
ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸ್ಥಳಾಂತರ ಮಾಡಬಾರದೆಂದು ಮನವಿ ಮಾಡುತ್ತೇನೆ ಎಂದರು.
ಪಾರಂಪರಿಕ ಕಟ್ಟಡದಲ್ಲಿನ ಕಚೇರಿಗಳನ್ನು ಸ್ಥಳಾಂತರ ಮಾಡಬೇಕಾದರೆ ಅದಕ್ಕೆ ತನ್ನದೇ ಆದ ಕಾನೂನು ಕಟ್ಟಳೆಯನ್ನು ಅನುಸರಿಸಬೇಕು. ಕೇಂದ್ರ ಸರಕಾರದ ಅನುಮತಿ ಪಡೆದು ನಿರ್ಧಾರ ಕೈಗೊಳ್ಳಬೇಕು. ಆದರೆ ಇಲ್ಲಿನ ಜಿಲ್ಲಾಧಿಕಾರಿ ಶಿಖಾ ಪಾರಂಪರಿಕ ಕಟ್ಟಡಗಳ ಕಾಯ್ದೆಯನ್ನೇ ಮರೆಮಾಚಿ ಜಿಲ್ಲಾಧಿಕಾಗಳ ಕಚೇರಿ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ಮೈಸೂರು ನಗರ ಲಂಡನ್ ಮಾದರಿಯಲ್ಲಿದೆ. ಅಂದಿನ ಮಹಾರಾಜರು ಲಂಡನ್ ನಗರದಲ್ಲಿನ ಕಟ್ಟಡಗಳ ಮಾದರಿಯಲ್ಲಿಯೇ ಮೈಸೂರು ನಗರವನ್ನು ನಿರ್ಮಿಸಬೇಕೆಂದು ಪಣತೊಟ್ಟು ಇಲ್ಲಿನ ಎಲ್ಲಾ ಪಾರಂಪರಿಕ ಕಟ್ಟಡಗಳು, ಉದ್ಯಾನವನಗಳನ್ನು ನಿರ್ಮಸಿದ್ದಾರೆಂದು ಅವರು ಹೇಳಿದರು.
ಎಸ್. ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಆಯೋಗ ರಚಿಸಿದ್ದರು. ಇದರ ಕೇಂದ್ರ ಕಚೇರಿ ಮೈಸೂರಿನಲ್ಲೇ ಕಾರ್ಯ ನಿರ್ವಹಿಸುತ್ತಿದೆ ಎಂದವರು ತಿಳಿಸಿ, ಆ ಸಂಸ್ಥೆ ಈ ಬಗ್ಗೆ ಯಾವುದೇ ಚಕಾರವೆತ್ತಿಲ್ಲ. ಇದು ವಿಷಾದದ ಸಂಗತಿ ಎಂದರು.
ಜಿಲ್ಲಾಡಳಿತ ಕಚೇರಿ ಸ್ಥಳಾಂತರ ಬಗ್ಗೆ ಸಾರ್ವಜನಿಕರಲ್ಲಿ ಜಗೃತಿ ಮೂಡಿಸಿ ಸಂಘ ಸಂಸ್ಥೆಗಳವರು ಇದನ್ನು ಇಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ  ಹೋರಾಡಬೇಕಾದ ಅವಶ್ಯಕತೆ ಇದೆ ಎಂದು ವಿಶ್ವನಾಥ್ ಕರೆ ನೀಡಿದರು.

ಮೈಸೂರು, ಜು. 8- ದಕ್ಷಿಣ ಕರ್ನಾಟಕ ಅಂಚೆ ವಲಯದಲ್ಲಿ ಡಿಜಿಟಲ್ ಇಂಡಿಯಾ ಸಪ್ತಾಹವನ್ನು ಜು. 1ರಿಂದ 7ರ ವರೆಗೆ ಆಯೋಜಿಸಲಾಗಿತ್ತು. ಈ ಸಪ್ತಹಾದಲ್ಲಿ ಸಾರ್ವಜನಿಕರಿಗೆ ಅನುಕೂಲವಾದ ಹಲವಾರು ಯೋಜನೆಗಳನ್ನು ಅಳವಡಿಲಾಗಿದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರಕುಮಾರ್ ತಿಳಿಸಿದರು.
ಯಾದವಗಿರಿಯಲ್ಲಿರುವ ಅಂಚೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹತ್ವಾಂಕಾಂಕ್ಷೆ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಂತರ ಜಾಲವನ್ನು ವಿಸ್ತರಿಸಿದ್ದು, ಕೋರ್ ಬ್ಯಾಂಕಿಂಗ್ ಮತ್ತು ಗ್ರಾಮೀಣ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೊಸ ಆಯಾಮಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ಮೈಸೂರು ಅಂಚೆ ವಿಭಾಗದಲ್ಲಿ ಅಂತರಜಾಲದ ಮುಖೇನ ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆಯ ಎಲ್ಲ ವಹಿವಾಟುಗಳನ್ನು ಸುಲಲಿತವಾಗಿ ಮ್ಯಕಾಮಿಶ್ ಎಂಬ ವ್ಯವಸ್ಥೆಯ ಮೂಲಕ ನಿರ್ವಹಿಸುವ ಸೌಲಭ್ಯವನ್ನು ಪ್ರಪ್ರಥಮವಾಗಿ ಪ್ರಯೋಗಿಸಿ ಕಾರ್ಯಗತಗೊಳಿಸಲಾಗಿದೆ ಎಂದರು.
ಈ ವ್ಯವಸ್ಥೆಯಿಂದ ಅಂಚೆ ವಿಮೆಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸಬಹುದಾಗಿದೆ ಎಂದವರು ತಿಳಿಸಿದರು.
ಕೋರ್ ಬ್ಯಾಂಕಿಗ್ ವ್ಯವಸ್ಥೆಯನ್ನು ಮೈಸೂರಿನ  ಮುಖ್ಯ ಅಂಚೆ ಕಚೇರಿ, ಸರಸ್ವತಿಪುರಂ, ಕುವೆಂಪುನಗರ, ಯಾದವಗಿರಿ, ಬನ್ನಿಮಂಟಪ, ಮೈಸೂರು ವಿವಿ ಹಾಗೂ ಜೆಪಿ ನಗರ ಉಪ ಅಂಚೆ ಕಚೇರಿಗಳಲ್ಲಿ ವಿಸ್ತರಿಸಲಾಗುವುದೆಂದರು.
ಮೈಸೂರು ಸೌತ್ ಮತ್ತು ಇಟ್ಟಿಗೆಗೂಡು ಉಪ ಅಂಚೆ ಕಚೇರಿಯಡಿ ಬರುವ ಎಲ್ಲಾ ಶಾಖೆಗಳನ್ನು ಆಧುನೀಕ ಜಾಲದ ಮೂಲಕ ಬೆಸೆಯುವ ಮತ್ತೊಂದು ಪ್ರಮುಖ ಯೋಜನೆ ಆಗಿದೆ ಹಾಗೂ ಮುಖ್ಯ ಅಂಚೆ ಕಚೇರಿಗಳಲ್ಲಿ ಎಟಿಎಂ ವ್ಯವಸ್ಥೆಯಲ್ಲಿ ಅಳವಡಿಸಲಾಗುವುದೆಂದರು.
ಅಂಚೆ ಇಲಾಖೆ ಅಧಿಕಾರಿಗಳಾದ ಡಿ. ಶಿವಣ್ಣ, ಚಂದ್ರಕಾಂತಕಾಮತ್ ಉಪಸ್ಥಿತರಿದ್ದರು.

No comments:

Post a Comment