Friday 31 July 2015

ಮೈಸೂರು ಸುದ್ದಿಗಳು

.ಎಸ್.ಟಿ.ಸಿ: ವಿವಿಧ ಪ್ರವಾಸ
     ಮೈಸೂರು೩೧-ಮೈಸೂರು ವಿಭಾಗದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಆಗಸ್ಟ್ 13 ರಂದು ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು ಶೃಂಗೇರಿ, ಕೊಲ್ಲೂರು, ಕಟೀಲು, ಮುರುಡೇಶ್ವರ, ಆಗಸ್ಟ್ 15 ರಂದು ಜೋಗ ಜಲಪಾತ ಮತ್ತು ಸಿಗಂಧೂರು ಆಗಸ್ಟ್ 7ರಂದು ಮಂತ್ರಾಲಯ ಟಿ.ಬಿ.ಡ್ಯಾಂ, ಹಂಪಿ, ಪ್ರತಿ ಭಾನುವಾರ ಮಡಿಕೇರಿ ಮತ್ತು ಶಿಂಷ, ತಲಕಾಡು, ಸೋಮನಾಥಪುರಕ್ಕೆ ಪ್ರವಾಸ ಹಮ್ಮಿಕೊಂಡಿದೆ.
     ಶೈಕ್ಷಣಿಕ, ಮದುವೆ, ಸಮಾರಂಭ ಇತರೆ ಪ್ರವಾಸಗಳಿಗೆ ಕೂಡ ಹವಾನಿಯಂತ್ರಿತ ಬಸ್ಸುಗಳು ಒಪ್ಪಂದದ ಮೇರೆಗೆ ಲಭ್ಯವಿದೆ. ಆಂಧ್ರ ಮತ್ತು ತಮಿಳುನಾಡು ಟ್ಯಾಕ್ಸ್ ಮನ್ನಾ ಸಹ ಇರುತ್ತದೆ. ಹೆಚ್ಚಿನ ವಿವರಗಳಿಗೆ ಮೈಸೂರು ಸಾರಿಗೆ ವಿಭಾಗದ ಅಧಿಕಾರಿಗಳು ದೂರವಾಣಿ ಸಂಖ್ಯೆ 0821-2423652, 8970650116 ನ್ನು ಸಂಪರ್ಕಿಸಬಹುದು.

ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರು ಪಾವತಿ ಅರ್ಜಿ ಆಹ್ವಾನ
      ಮೈಸೂರು,ಜು.31.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2015-16ನೇ ಸಾಲಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸುವ ಯೋಜನೆ  ಹಮ್ಮಿಕೊಂಡಿದೆ.
    ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಥಮ ಪಿ.ಯು.ಸಿ.ಯಿಂದ ಸ್ನಾತಕೋತ್ತರ ಪದವಿಯಲ್ಲಿ ವೃತ್ತಿಪರ ಕೋರ್ಸ್ ಒಳಗೊಂಡಂತೆ ವ್ಯಾಸಾಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳ ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿಸಲಾಗುವುದು. ಜಿಮ್ನಾಸ್ಟಿಕ್ಸ್ ಮತ್ತು ಈಜು ಕ್ರೀಡಾಪಟುಗಳಿಗೆ 5ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ಕ್ರೀಡಾಪಟುಗಳು ಅರ್ಹರಿರುತ್ತಾರೆ.
ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ದಿನಾಂಕ 31-09-2015 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179 ನ್ನು ಸಂಪರ್ಕಿಸುವುದು.

ಸ್ವಾತಂತ್ರ್ಯ ದಿನಾಚರಣೆ: ನೌಕರರ ಹಾಜರಾತಿ ಕಡ್ಡಾಯ
      ಮೈಸೂರು,ಜು.31.ಮೈಸೂರು ನಗರದ ಓವೆಲ್ ಮೈದಾನದಲ್ಲಿ  ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮೈಸೂರು ನಗರದಲ್ಲಿರುವ ಮಂಡಳಿ, ನಿಗಮ ಸ್ವಯತ್ತ ಸಂಸ್ಥೆಗಳು ಸೇರಿದಂತೆ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ  ಸಿ.ಶಿಖಾ ಸೂಚಿಸಿದ್ದಾರೆ.
    ಅಂದು ಬೆಳಿಗ್ಗೆ 8 ಗಂಟೆಗೆ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣಾ ನಡೆಸಿ ನಂತರ ಬೆಳಿಗ್ಗೆ 9 ಗಂಟೆಗೆ ಓವಲ್ ಮೈದಾನದಲ್ಲಿ ನಡೆಯುವ ಮುಖ್ಯ ಸಮಾರಂಭಕ್ಕೆ ತಪ್ಪದೇ ಹಾಜರಾಗುವುದು. ಸಮಾರಂಭ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರ ತಾತ್ಕಾಲಿಕ ಕಚೇರಿ ತೆರೆಯಲಾಗುತ್ತಿದ್ದು, ಅಧಿಕಾರಿ, ನೌಕರರು ಕಾರ್ಯಕ್ರಮಕ್ಕೆ ಹಾಜರಾದ ಬಗ್ಗೆ À ಹಾಜರಾತಿಯಲ್ಲಿ ಸಹಿ ಮಾಡುವುದು.
    ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಕಚೇರಿ ಆದೇಶ ಹೊರಡಿಸಿ ಅವರ ಹಾಜರಾತಿಯನ್ನು ಗಮನಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾದ ಸಿಬ್ಬಂದಿ ಸಹಿಯೊಂದಿಗೆ ಹಾಜರಾತಿ ಪಟ್ಟಿಯನ್ನು ಕಾರ್ಯಕ್ರಮ ಮುಗಿದ ಬಳಿಕ ಅಧ್ಯಕ್ಷರ ತಾತ್ಕಾಲಿಕ ಕಚೇರಿಗೆ ತಲುಪಿಸುವಂತೆ ತಿಳಿಸಿದ್ದಾರೆ.
    ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ವಿದ್ಯುತ್ ದೀಪಾಲಂಕಾರ ಮಾಡುವಂತೆ ಮನವಿ
       ಸ್ವಾತಂತ್ರ್ಯ ದಿನಾಚರಣೆ ಮುನ್ನ ದಿನವಾದ ಆಗಸ್ಟ್ 14 ಮತ್ತು ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15 ರಂದು ಮೈಸೂರು ನಗರದ ಸರ್ಕಾರಿ ಕಛೇರಿಗಳು, ಅಂಗಡಿ ಮುಂಗಟ್ಟು ಮತ್ತಿತರ ಉದ್ದಿಮೆಗಳ ಕಟ್ಟಡಗಳಿಗೆ ಸ್ವಯಂ ಸ್ಫೂರ್ತಿಯಿಂದ ವಿದ್ಯುತ್ ದೀಪಾಲಂಕಾರ ಮಾಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧ
   ಕಾಗದ ಹಾಗೂ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಳಸಿದ ಸಂದರ್ಭದಲ್ಲಿ ಪ್ರದರ್ಶನ ಮತ್ತು ಹಾರಾಟ ಸೂಕ್ತ ರೀತಿಯಲ್ಲಿ ಮಾಡದೆ ಇದ್ದರೆ ರಾಷ್ಟ್ರಧ್ವಜಕ್ಕೆ ಅಗೌರವ ಹಾಗೂ ಅಪಮಾನವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರ ಧ್ವಜವನ್ನು ಬಳಸದೆ ಬಟ್ಟೆಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜವನ್ನು ಬಳಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
     ವ್ಯಾಪಾರಸ್ಥರು ಸಹ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜ ಮಾರಾಟ ಮಾಡಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 2 ರಂದು ವಿದ್ಯುತ್ ದೀಪಾಲಂಕಾರ ರದ್ದು
      ಮೈಸೂರು,ಜು.31.ಮಾಜಿ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಂ ಅವರ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 7 ದಿನಗಳ ಶೋಕಾಚರಣೆ ಇರುತ್ತದೆ.  ಆಗಸ್ಟ್ 2 ಭಾನುವಾರದಂದು ಮೈಸೂರು ಅರಮನೆಯಲ್ಲಿ ಸಂಜೆ 7 ರಿಂದ 7-45 ರವರೆಗೆ ನಡೆಯಬೇಕಾಗಿದ್ದ ವಿದ್ಯುತ್ ದೀಪಾಲಂಕಾರವನ್ನು ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment