Wednesday 8 July 2015

ಸಾಮೂಹಿಕ ವಿವಾಹವನ್ನು ಪ್ರೋತ್ಸಹಿಸಿ: ಸಿ.ಶಿಖಾ

ಸಾಮೂಹಿಕ ವಿವಾಹವನ್ನು ಪ್ರೋತ್ಸಹಿಸಿ: ಸಿ.ಶಿಖಾ
 
 ಮೈಸೂರು,ಜು.08.ಮದುವೆ ಸಮಾರಂಭವನ್ನು ಆದ್ಧೂರಿಯಾಗಿ ಆಯೋಜಿಸಲು 5 ರಿಂದ 6 ಲಕ್ಷ  ಹಣ ಖರ್ಚು ಮಾಡುತಾರೆ ಬಡವರು ಸಹ ಅದ್ಧೂರಿ ಮದುವೆಯಿಂದ ಆಕರ್ಷಿತರಾಗಿ ತಮ್ಮ ಮಕ್ಕಳಿಗೂ ಸಹ ಅದ್ಧೂರಿಯಾಗಿ ಮದುವೆ ಮಾಡಲು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯುತ್ತಾರೆ. ಬಡವರು ಸಾಲ ಪಡೆದು ಮಕ್ಕಳ ಮದುವೆ ಮಾಡುವುದನ್ನು ತಪ್ಪಿಸಲು ಸಾಮೂಹಿಕ ಮದುವೆಯನ್ನು ಪ್ರೋತ್ಸಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದರು.
     ಅವರು ಇಂದು ಸರ್ಕಾರಿ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಕಂದಾಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ ಸಾಮೂಹಿಕ ವಿವಾಹವನ್ನು ಆಯೋಜಿಸಲು ಬೇಕಾಗುವ ಸಿದ್ಧತೆಗಳನ್ನು ಎಲ್ಲಾ ತಾಲ್ಲೂಕಿನ ತಹಶೀಲ್ದಾರ್‍ಗಳು ಮಾಡಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಇಲಾಖಾ ಸಮುದಾಯ ಭವನವನ್ನು ಉಚಿತವಾಗಿ ಪಡೆಯಬಹುದು. ಮುಜರಾಯಿ ಇಲಾಖೆಯಲ್ಲಿರುವ  ಪುರೋಹಿತರನ್ನು ಮದುವೆ ಮಾಡಿಸಲು ನಿಯೋಜಿಸಿಕೊಳ್ಳಬಹುದು. ಕಾರ್ಖನೆ ಮಾಲೀಕರ ಸಭೆ ಕರೆದು ಆಯೋಜಿಸುವ ಸಾಮೂಹಿಕ ಮದುವೆಗೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡಬಹುದು ಎಂದರು.
     ರೈತರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತದ ಬಳಿ ಬರುವುದು ತಪ್ಪಬೇಕು. ಅವರ ಸಮಸ್ಯಗಳು ತಾಲ್ಲೂಕು, ಹೋಬಳಿ ಮಟ್ಟದಲ್ಲಿಯೇ ಪರಿಹಾರವಾಗುವಂತಾಗಬೇಕು. ತಹಶೀಲ್ದಾರ್‍ಗಳು ತಾಲ್ಲೂಕು ಮಟ್ಟದಲ್ಲಿ ರೈತರ ಸಭೆಗಳನ್ನು ಆಯೋಜಿಸಬೇಕು. ಸಭೆಯಲ್ಲಿ ರೈತರಿಗೆ ಸರ್ಕಾರ ನೀಡುವ ಎಲ್ಲಾ ಯೋಜೆನೆಗಳ ಬಗ್ಗೆ ತಿಳಿಸಿ ಎಂದರು.
     ರೈತರು ಆತ್ಮಹತ್ಯೆ  ಅಥವಾ ಮರಣ ಹೊಂದಿದಾಗ ಅವರಿಗೆ  ಕಾನೂನು ರೀತ್ಯ ಪರಿಹಾರ ಹಣ ಒದಗಿಸುವುದು ಮಾತ್ರ ಕಂದಾಯ ಇಲಾಖೆ ಕೆಲಸವಲ್ಲ ಇದರ ಜೊತೆಗೆ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೆಚ್ಚಿನ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡಿ ಒತ್ತಡ ಏರಿ ಸಾಲ ವಸೂಲಾತಿ ಮಾಡುತ್ತಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ರೈತರ ಸಮಸ್ಯೆಯ ಮೂಲ ತಿಳಿದು ಪರಿಹರಿಸುವುದು ಮುಖ್ಯ ಎಂದರು.
    ರೈತ ಸಂಪರ್ಕ ಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಯದಲ್ಲಿ ರೈತರು ತಮ್ಮ ಸಮಸ್ಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
    ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು- ಸೋಮವಾರ, ಕಸಬಾ-ಮಂಗಳವಾರ, ಅಂತರಸಂತೆ-ಬುಧವಾರ, ಕಂದಲಿಕೆ-ಗುರುವಾರ,ಸರಗೂರು- ಶುಕ್ರವಾರ, ಹುಣಸೂರು ತಾಲ್ಲೂಕಿನ ಗಾವಡಗೆರೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಹನಗೂಡು-ಬುಧವಾರ, ಕಸಬಾ-ಗುರುವಾರ, ಬಿಳಿಕೆರೆ-ಶನಿವಾರ, ಕೆ.ಆರ್.ನಗರ ತಾಲ್ಲೂಕಿನ ಮಿರ್ಲೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಹೊಸಅಗ್ರಹಾರ-ಮಂಗಳವಾರ, ಚುಂಚನಕಟ್ಟೆ-ಬುದವಾರ, ಹೆಬ್ಬಾಳ್-ಗುರುವಾರ, ಕಸಬಾ-ಶುಕ್ರವಾರ, ಸಾಲಿಗ್ರಾಮ-ಶನಿವಾರ, ಮೈಸೂರು ತಾಲ್ಲೂಕಿನ ಜಯಪುರ ರೈತಸಂಪರ್ಕ ಕೇಂದ್ರದಲ್ಲಿ  ಅಧಿಕಾರಿಗಳು-ಸೋಮವಾರ, ವರುಣ-ಮಂಗಳವಾರ, ಇಲವಾಲ-ಬುಧವಾರ, ಕಸಬಾ-ಗುರುವಾರ, ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯಛತ್ರ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಬಿಳಿಗೆರೆ-ಮಂಗಳವಾರ, ದೊಡ್ಡಕವಲಂದೆ-ಬುಧವಾರ, ಹುಳ್ಳಹಳ್ಳಿ-ಗುರುವಾರ, ಕಸಬಾ-ಶುಕ್ರವಾರ, ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಮಂಗಳವಾರ, ಹಾರನಹಳ್ಳಿ-ಬುಧವಾರ, ಬೆಟ್ಟದಪುರ-ಶುಕ್ರವಾರ, ಕಸಬಾ-ಶನಿವಾರ, ಟಿ.ನರಸೀಪುರ ತಾಲ್ಲೂಕಿನ ಸೋಸಲೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು-ಸೋಮವಾರ, ಕಸಬಾ-ಮಂಗಳವಾರ, ಮೂಗೂರು-ಬುಧವಾರ, ಬನ್ನೂರು-ಗುರುವಾರ ಹಾಗೂ ತಲಕಾಡಿನಲ್ಲಿ ಶುಕ್ರವಾರ ಹಾಜರಿರುತ್ತಾರೆ.  ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಬಹುದಾಗಿದೆ ಎಂದರು.
    ತಾಲ್ಲೂಕು ಮಟ್ಟ ಹಾಗೂ ಹೋಬಳಿ ಕೇಂದ್ರಗಳಲ್ಲಿ ಸ್ಟೋರ್‍ಹೌಸ್‍ಗಳನ್ನು ಪ್ರಾರಂಭಿಸಲು ಅವಶ್ಯಕವಿರುವ ಭೂಮಿಯನ್ನು ಗುರುತಿಸಿ ತಹಶೀಲ್ದಾರ್ ಹಾಗೂ  ಕಂದಾಯ ನಿರೀಕ್ಷಕರು ವರದಿ ನೀಡಬೇಕು. ತಾಲ್ಲೂಕು ಮಟ್ಟದಲ್ಲಿ ನಿರ್ಮಿಸಲು 5 ಎಕರೆ ಭೂಮಿ ಹಾಗೂ ಹೋಬಳಿ ಮಟ್ಟದಲ್ಲಿ ನಿರ್ಮಿಸಲು 2 ಎಕರೆ ಭೂಮಿಯ ಅವಶ್ಯಕತೆಯಿರುತ್ತದೆ. ಸ್ಟೋರ್‍ಹೌಸ್‍ಗಳಲ್ಲಿ ರೈತರು ತಾವು ಬೆಳದಂತಹ ಬೆಳೆಗಳನ್ನು ಸಂಗ್ರಹಿಸಿ ಉತ್ತಮ ಬೆಲೆ ದೊರೆತ ಸಂದರ್ಭದಲ್ಲಿ ಮಾರಾಟ ಮಾಡಬಹುದು ಎಂದರು.
     ತಾಲ್ಲೂಕು ಮಟ್ಟದಲ್ಲೂ ಹಾಪ್‍ಕಾಮ್ಸ್: ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ತಾಲ್ಲೂಕು ಮಟ್ಟದಲ್ಲಿಯೂ ಹಾಪ್‍ಕಾಮ್ಸ್ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದಾಗ ತೋಟಗಾರಿಕ ಇಲಾಖೆ ಉಪನಿರ್ದೇಶಕರು ಮಾರಾಟ ಮಳಿಗೆಗಳ ವ್ಯವಸ್ಥೆ ಮಾಡಿಕೊಟ್ಟಲ್ಲಿ ಹಾಪ್‍ಕಾಮ್ಸ್‍ನ್ನು ತಾಲ್ಲೂಕು ಮಟ್ಟದಲ್ಲಿಯೂ ಪ್ರಾರಂಭಿಸಲಾಗುವುದು ಎಂದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅರ್ಚನಾ, ಮೈಸೂರು ಉಪವಿಭಾಗಾಧಿಕಾರಿ ಸೈಯಿದಾ ಆಯಿಷ್, ಹುಣಸೂರು ಉಪವಿಭಾಗಾಧಿಕಾರಿ ಜಗದೀಶ್, ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಜುಲೈ 22 ರಂದು ಜಿ.ಪಂ. ಸಾಮಾನ್ಯ ಸಭೆ
     ಮೈಸೂರು,ಜು.08.ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜೂನ್ 30 ರಂದು ಕರೆಯಲಾಗಿದ್ದ ಸಾಮಾನ್ಯ ಸಭೆ ಕೋರಂ ಅಭಾವದಿಂದ ಮುಂದೂಡಲ್ಪಟ್ಟ ಸಾಮಾನ್ಯ ಸಭೆ ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .
    ಜುಲೈ 10 ರಂದು ಸಿನಿಮಾ ಸಮಯದಲ್ಲಿ ಹರಿವು ಚಿತ್ರ ಪ್ರದರ್ಶನ
       ಮೈಸೂರು,ಜು.08.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ, ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಜುಲೈ 10 ರಂದು ಶುಕ್ರವಾರ ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಅವಿನಾಶ ವಿ. ಶೆಟ್ಟಿ ನಿರ್ಮಿಸಿರುವ ಹರಿವು ಚಲನಚಿತ್ರ ಪ್ರದರ್ಶಿಸಲಾಗುವುದು. ಈ ಚಿತ್ರವನ್ನು ಮನ್‍ಸೂರ್ ನಿರ್ದೇಶಿಸಿದ್ದು  ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಇದಾಗಿರುತ್ತದೆ.  
    ಇದಕ್ಕೂ ಮುನ್ನ ಸಂಜೆ 5-30 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ನಾಡೋಜ ದೇ.ಜವರೇಗೌಡ ಕುರಿತ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಕೋರಿದ್ದಾರೆ. (ಛಾಯಾಚಿತ್ರ ಲಗತ್ತಿಸಿದೆ).
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
   ಮೈಸೂರು,ಜು.08.ಮೈಸೂರು ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2015ರ ಜುಲೈ ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಮೈಸೂರು ತಾಲ್ಲೂಕಿನಲ್ಲಿ ಜುಲೈ 14  ರಂದು ಗುಂಗ್ರಾಲ್ ಛತ್ರ, ಜುಲೈ 22 ರಂದು ಸೋಮೇಶ್ವರಪುರ, ಹುಣಸೂರು ತಾಲ್ಲೂಕಿನಲ್ಲಿ ಜುಲೈ 9  ರಂದು ಹನಗೂಡು, ಜುಲೈ 17 ರಂದು ಮರದೂರು, ಜುಲೈ 23 ರಂದು ಕರ್ಣಕುಪ್ಪೆ, ಕೆ.ಆರ್.ನಗರ ತಾಲ್ಲೂಕಿನಲ್ಲಿ ಜುಲೈ 10 ರಂದು ಕರ್ಪೂರಹಳ್ಳಿ, ಜುಲೈ 25 ರಂದು ಲಾಳದೇವನಹಳ್ಳಿ, ಜುಲೈ 31 ರಂದು ಮಾವತ್ತೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜುಲೈ 13 ರಂದು ಭುವನಹಳ್ಳಿ, ಜುಲೈ 21  ರಂದು  ದೊಡ್ಡಕಮರವಳ್ಳಿ, ಜುಲೈ 29 ರಂದು ಹುಣಸವಾಡಿ, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಜುಲೈ 15 ರಂದು ಹಂಚಿಪುರ, ಜುಲೈ 20 ರಂದು ಸಾಗರೆ, ಜುಲೈ 24 ರಂದು ಜಿ.ಬಿ. ಸರಗೂರು, ಜುಲೈ 30 ರಂದು ಕೆ. ಬೆಳ್ತೂರು, ನಂಜನಗೂಡು ತಾಲ್ಲೂಕಿನಲ್ಲಿ ಜುಲೈ 16 ರಂದು ತಾಯೂರು, ಜುಲೈ 28 ರಂದು ನವಿಲೂರು, ಹಾಗೂ ತಿ.ನರಸೀಪುರ ತಾಲ್ಲೂಕಿನಲ್ಲಿ ಜುಲೈ 27 ರಂದು ಕೊತ್ತೇಗಾಲ ಗ್ರಾಮದಲ್ಲಿ ವಾಹನ ಸಂಚರಿಸಲಿದೆ  ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತÀ ವ್ಯಕ್ತಿ ಶವÀ ಪತ್ತೆಗಾಗಿ ಮನವಿ
ಮೈಸೂರು,ಜು.08.ಬೆಳಗೋಳ-ಸಾಗರಕಟ್ಟೆ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ  ಕಿ.ಮಿ. ನಂ. 10/700-800 ರಲ್ಲಿ ಜುಲೈ 8 ರಂದು ಸುಮಾರು 35 ವರ್ಷ ವಯೋಮಿತಿಯ  ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ವ್ಯಕ್ತಿಯು 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ದುಂಡು ಮುಖ, ತಲೆಯಲ್ಲಿ ಸುಮಾರು 3  ಇಂಚು ಉದ್ದದ ಕಪ್ಪು ಕೂದಲು, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ಬಲ ಮೊಣಕೈಯಲ್ಲಿ ಕಮಲದ ಆಕೃತಿ ಹಸಿರು ಹಜ್ಜೆ ಗುರುತು ಇರುತ್ತದೆ. ನೀಲಿ ಟೀ ಶರ್ಟ್, ನೀಲಿ ಪ್ಯಾಂಟ್, ಕೆಂಪು ಸ್ಯಾಂಡೋ ಬನಿಯನ್ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

No comments:

Post a Comment