Saturday 28 November 2015

  ಮಹನೀಯರ ತತ್ವ ಸಿದ್ದಾಂತ ಕಡೆಗಣನೆ ಸರಿಯಲ್ಲ-ಪುಟ್ಟಸ್ವಾಮಿ

ಮಂಡ್ಯ:ನಾವು ವರ್ಷದಲ್ಲಿಬುದ್ಧ,ಬಸವ,ಗಾಂಧಿ,ಅಂಬೇಡ್ಕರ್,ವಾಲ್ಮೀಕಿ,ಕನಕದಾಸ ಮುಂತಾದವರ ಜಯಂತಿಗಳನ್ನು ಆಚರಿಸುತ್ತೇವೆ.ಇದು ಕೇವಲ ತೋರಿಕೆಗಾಗಿ ಆಗಿರದೇ ಅವರ ತತ್ವ ಸಿದ್ದಾಂತಗಳನ್ನು ಅನುಸರಿಸುವ ನಿಟ್ಟಿನಲ್ಲಿ ಆಚರಿಸಬೇಕು.ಕೇವಲ ನೆಪ ಮಾತ್ರಕ್ಕೆ ಆಚರಣೆ ಮಾಡಿ ಮಹನೀಯರ ತತ್ವ ಸಿದ್ದಾಂತಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹೆಚ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
     ಅವರು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
    ಕನಕದಾಸರು ಭಕ್ತಿ ಪಂಥಕ್ಕೆ ಮಾತ್ರ ಸೀಮಿತವಾಗಿರಲಿಲ್ಲ.ಅವರುಜಾತೀಯತೆ,ಮೂಢನಂಬಿಕೆ,ಕಂದಾಚಾರ,
ವರ್ಗಬೇಧ ಮುಂತಾದುವುಗಳನ್ನು ಕಂಡು ಅವುಗಳ ಬಗ್ಗೆ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದರು.ಅವರು ನೀಡಿದ ಜೀವನ ಸಂದೇಶಗಳು ಇಂದಿಗೂ ಸಹ ನಮ್ಮ ಸಮಾಜಕ್ಕೆ ಮಾರ್ಗದರ್ಶಕವಾಗಿವೆ.ಇಂತಹ ಸಂದೇಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ.ಅವರ ಸಂದೇಶಗಳು ಒಂದು ಜಾತಿ,ಧರ್ಮ,ವರ್ಗಕ್ಕೆ ಮೀಸಲಾಗಿರಲಿಲ್ಲ.ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ.ಆದರೆ ಇಂದು ಕನಕನನ್ನು ಒಂದು ಜಾತಿಗೆ ಸೀಮಿತವಾಗಿ ನೋಡುವ ಮನೋಭಾವ ರೂಪುಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕನಕ ‘ನಾನು’ ಎಂಬ ಅಹಂಕಾರ ತೊಲಗಿದರೆ ಮಾತ್ರ ನಾವು ಮುಕ್ತಿ ಸಾಧನೆ ಪಡೆಯಲು ಸಾಧ್ಯ ಎಂಬುದನ್ನು ಗುರುಗಳ ಎದುರಿಗೆ ಪ್ರತಿಪಾದಿಸಿದರು.ಆದರೆ ಇಂದು ನಾವು ‘ನಾನು ನನ್ನಿಂದ’ ಎಂಬ ಧೋರಣೆಯಲ್ಲಿ ಮುಳುಗಿದ್ದೇವೆ ಇದು ಸರಿಯಲ್ಲ ಎಂದು ಅವರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಮಾತನಾಡಿ  ಕನಕದಾಸರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಸಂದೇಶ ಸಾರುವ ನೂರಾರು ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು.ಅವರ ಸಂದೇಶಗಳು ಇಂದಿಗೂ ಪ್ರಸ್ತುತ.ಸರ್ವಧರ್ಮೀಯರು ಕನಕನನ್ನು ಆದರಿಸಬೇಕು,ಗೌರವಿಸಬೇಕು ಎಂದು ತಿಳಿಸಿದರು.
     ಉಪನ್ಯಾಸಕ ನಾಗರಾಜು ಕನಕನನ್ನು ಕುರಿತು ಮಾತನಾಡಿದರು.ವಿದ್ಯಾರ್ಥಿನಿ ಬಿ.ಎಲ್.ತೇಜಸ್ವಿನಿ ಕನಕದಾಸರ ಜೀವನ ಚರಿತ್ರೆ ಮತ್ತು ಜೀವನದ ಪ್ರಮುಖ ಘಟನೆಗಳನ್ನು ಕುರಿತು ಸವಿಸ್ತಾರವಾಗಿ ವಿವರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಮತ್ತೋರ್ವ ವಿದ್ಯಾರ್ಥಿನಿ ಪೂರ್ಣಶ್ರೀ ಕನಕದಾಸರ ಕುರಿತಾದ ಲೇಖನವೊಂದನ್ನು ಸಭೆಯ ಮುಂದಿಟ್ಟರು.
     ಸಮಾರಂಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ,ಉಪನ್ಯಾಸಕರಾದ ಹೊಳಲು ಶ್ರೀಧರ್,ವಿಶ್ವನಾಥ್, ವೈ.ಸುರೇಶ್, ಮಂಜುನಾಥ್,ರೂಪಶ್ರೀ,ಚೇತನಾ,ಲತಾ ಉಪಸ್ಥಿತರಿದರು.

No comments:

Post a Comment