Friday 6 November 2015

ಅಶಾಂತಿಯ ವಾತಾವರಣಕ್ಕೆ ಸಿಲುಕಿರುವ ಕನ್ನಡದ ಸಂಸ್ಕøತಿ: ನಲ್ಲೂರು
ಮಂಡ್ಯ: ಪ್ರಸ್ತುತ ಕನ್ನಡ ಸಾಹಿತ್ಯ ಹಾಗೂ ಸಂಸ್ಕøತಿ ಅಶಾಂತಿಯ ವಾತಾವರಣಕ್ಕೆ ಸಿಲುಕಿ ನಲುಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ.ಆರ್.ಕೆ.ನಲ್ಲೂರು ಪ್ರಸಾದ್ ವಿಷಾದಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಡಾ.ಜೀ.ಶಂಪ. ಸಾಹಿತ್ಯ ವೇದಿಕೆ ವತಿಯಿಂದ ನಡೆದ ಕನ್ನಡ ಹಬ್ಬ ಹಾಗೂ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ ಮತ್ತು ಗುಡ್ಡೆಬಾಡು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಶಾಂತಿ ಕದಡಲು ಪ್ರಮುಖವಾಗಿ ಇತ್ತೀಚೆಗೆ ಖ್ಯಾತ ಸಂಶೋಧಕ ಹಾಗೂ ಸಾಹಿತಿ ಡಾ.ಕಲ್ಬುರ್ಗಿ ಅಂತಹ ಮಹನೀಯರನ್ನು ಹತ್ಯೆ ಗೈದಿರುವುದು. ಕಲ್ಬುರ್ಗಿ ಹತ್ಯೆ ನಾಡಿನ ಸಂಸ್ಕøತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸತ್ಯವನ್ನು ನೇರವಾಗಿ ಹೇಳುತ್ತಿದ್ದ ಕಲ್ಬುರ್ಗಿ ಅವರ ಹತ್ಯೆ ನಿಜಕ್ಕೂ ಖಂಡನೀಯ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಒಂದಾಗಬೇಕು. ಶಾಂತಿ ಕದಡುವವರ ವಿರುದ್ಧ ಸಮರ ಸಾರಲು ಸಿದ್ಧರಾಗಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಎಷ್ಟು ಗಟ್ಟಿಯಾಗುತ್ತಿದೆಯೋ ಹಾಗೆಯೇ ಕನ್ನಡದ ಬೆಳವಣಿಗೆ ಮಾತ್ರ ದಿನೇ ದಿನೇ ಕುಗ್ಗುತ್ತಿದೆ. ಅಪಾಯದ ಅಂಚಿನಲ್ಲಿರುವ ಕನ್ನಡವನ್ನು ಉಳಿಸಬೇಕಾದ ಕೆಲಸ ನಮ್ಮದ್ದಾಗಿದೆ. ಇದರ ಜೊತೆಗೆ ಕೇವಲ ಕನ್ನಡ ಉಳಿಸಿ ಬೆಳೆಸುವಂತಹ ಕೆಲಸ ಕನ್ನಡ ಪರ ಸಂಘಟನೆಗಳದ್ದು ಮಾತ್ರವಲ್ಲ. ಎಲ್ಲಾ ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಂದಾಗಬೇಕೆಂದು ಸಲಹೆ ನೀಡಿದರು.
ಜೀ.ಶಂ.ಪರಮಶಿವಯ್ಯ ಒಬ್ಬ ದೈತ್ಯ ಜನಪದ ಶಕ್ತಿ. ಜನಪದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದ್ದು, ಇವರನ್ನು ಕನ್ನಡದ ಜಗತ್ತಿಗೆ ನೆನಪಿಸುವ ಜೀ.ಶಂ.ಪ. ಸಾಹಿತ್ಯ ವೇದಿಕೆಯ ಕೆಲಸ ಅನನ್ಯವಾಗಿದೆ ಎಂದ ಅವರು, ಜನಪದ ಸಾಂಸ್ಕøತಿಕ ಲೋಕದಲ್ಲಿ ಜೀ.ಶಂ.ಪ. ಇನ್ನು ಜೀವಂತವಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಕನ್ನಡದ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಶೇ.95ರಷ್ಟು ಜನ ಕನ್ನಡವನ್ನು ಮಾತನಾಡುವವರಿದ್ದು, ಬೇರೆ ರಾಜ್ಯದಲ್ಲಿ ಇದು ಕ್ಷೀಣಿಸಿದೆ. ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕನ್ನಡ ಭಾಷೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಜಿಲ್ಲೆಯಲ್ಲೂ ಕನ್ನಡ ಭಾಷೆಯನ್ನ ಮಾತನಾಡುವಂತಹ ನಿಟ್ಟಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಕನ್ನಡ ಭಾಷೆಯನ್ನು ಪಸರಿಸುವ ಕಾರ್ಯಕ್ಕೆ ಮುಂದಾಗಬೇಕೆಂದರು.
ಕನ್ನಡ ಭಾಷೆ ಇವತ್ತು ರಾಜ್ಯದಲ್ಲಿ ಕ್ಷೀಣಿಸಲು ಪರರಿಗಿಂತ ನಮ್ಮವರೇ ಕಾರಣವಾಗಿದ್ದಾರೆ. ಕನ್ನಡಿಗರ ಪರ ಭಾಷಾ ವ್ಯಾಮೋಹವೇ ಕನ್ನಡದ ತುಳಿತಕ್ಕೆ ಕಾರಣವಾಗಿದೆ. ಕನ್ನಡಿಗರು ಮೊದಲು ನಮ್ಮ ಭಾಷೆ ಬಗ್ಗೆ ವ್ಯಾಮೋಹ ಬೆಳೆಸಿಕೊಂಡರೆ ಅದು ಪರಕೀಯರಲ್ಲೂ ಕನ್ನಡದ ಬಗ್ಗೆ ಕುತೂಹಲ ಉಂಟಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಬೂಕಹಳ್ಳಿ ಮಂಜುನಾಥ್, ಮೈಸೂರು ಮಹಾರಾಜ ಕಾಲೇಜಿನ ಪ್ರೊ.ಕಮಲಾಜೈನ್, ವಿಶ್ವ ಒಕ್ಕಲಿಗ ವೇದಿಕೆ ರಾಜ್ಯಾಧ್ಯಕ್ಷ ರವಿಶಂಕರ್, ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಭೀಮಶಂಕರ್ ಪಾಟೀಲ್ ಅವರಿಗೆ ಕರ್ನಾಟಕ ಭೂಷಣ  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 28 ಮಂದಿಗೆ ಕನ್ನಡ ರತ್ನ ಹಾಗೂ ಕಾಯಕ ರತ್ನ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ನಿವೃತ್ತ ನಿರ್ದೇಶಕ ಕಾ.ತ.ಚಿಕ್ಕಣ್ಣ, ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಕ್ರಾಂತಿ ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರವಿ, ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

No comments:

Post a Comment