Thursday 26 November 2015

ಕನ್ನಡದ ಚಿತ್ರ ರಂಗದ ಇತಿಹಾಸ ಬಿಂಬಿಸುವ
ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು,ನ.26.-ಕನ್ನಡ ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಮೈಸೂರು ನಗರದ ಕಲಾಮಂದಿರದಲ್ಲಿ ಇದೇ 28 ರಂದು ಶನಿವಾರ ಸಂಜೆ 5-30 ಕ್ಕೆ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಸತಿಸುಲೋಚನಾ ಚಿತ್ರದಿಂದ ಆರಂಭಗೊಂಡು ಅಮೃತ ಮಹೋತ್ಸವ ಪೂರೈಸಿರುವ ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ           ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಶ್ರೀಮತಿ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು, ಎಸ್.ಕೃಷ್ಣಪ್ರಸಾದ್(ಕೊಳಲು),          ಸಿ ವಿಶ್ವನಾಥ್( ಮ್ಯಾಂಡೋಲೀನ್), ವಿ.ವಿ.ಆನಂದ್ (ಗಿಟಾರ್), ಪ್ರಸನ್ನ ಕುಮಾರ್ (ಕೀಬೋರ್ಡ್) ಮೋಹನ್ (ರಿದಂಸ್ಯಾಟ್) ಇಂದುಶೇಖರ್ ಮತ್ತು ಜಗದೀಶ್ (ತಬಲ), ಕಿರಣ್ ಕುಮಾರ್ (ಡೋಲಕ್) ವಾದ್ಯ ಸಹಕಾರ ನೀಡುವರು.
     ಟಿ.ಎಸ್.ಅಶ್ವಿನಿ, ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ಗಾನ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ. ಎನ್. ವೈಷ್ಣವಿ ಕಾರ್ಯಕ್ರಮ ನಿರೂಪಿಸುವರು.
      ಪ್ರವೇಶ ಉಚಿತವಾಗಿದ್ದು, ಸರ್ವಜನಿಕರು ಕಾರ್ಯಕ್ರಮಕ್ಕೆ ಅಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ



ನವೆಂಬರ್ 30 ರಂದು ಸಾಮಾನ್ಯ ಕೌನ್ಸಿಲ್ ಸಭೆ
      ಮೈಸೂರು,ನ.26.ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆ ನವೆಂಬರ್ 30 ರಂದು ಸಂಜೆ 4 ಗಂಟೆಗೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಪ್ರಭಾರ ಕೌನ್ಸಿಲ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಜಿಸ್ಟೀರಿಯಲ್ ವಿಚಾರಣೆ ಮುಂದೂಡಿಕೆ
      ಮೈಸೂರು,ನ.26.ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ದಿನಾಂಕ 10-11-2015 ರಂದು ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ದಿನಾಂಕ 26-11-2015 ರಂದು ನಡೆಯಬೇಕಿದ್ದ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದ್ದು,  ಮೆಜಿಸ್ಟೀರಿಯಲ್ ವಿಚಾರಣೆ ದಿನಾಂಕ  30-11-2015 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
   ಭಾರತ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ವೇಳಾಪಟ್ಟಿ ಹೊರಡಿಸಿದ್ದು, ಈ ಸಂಬಂಧ ತುರ್ತು ಸಿದ್ದತೆಗಳನ್ನು ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದೆ. ದಿನಾಂಕ 26-11-2015 ರಂದು ವಿಚಾರಣೆಗೆ ಹಾಜರಾಗಲು ತಿಳಿವಳಿಕೆ ನೀಡಲಾಗಿದ್ದ ಸಾರ್ವಜನಿಕರು ದಿನಾಂಕ 30-11-2015 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ : ಬಹುಮಾನ ಪ್ರಕಟ
      ಮೈಸೂರು,ನ.26.-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ದಿನಾಂಕ 7-11-2015 ರಂದು ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.
     ಸದರಿ ಪ್ರಬಂಧ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕಿನ ತಾಂಡವಪುರದ ಸರ್ಕಾರಿ ಪ್ರೌಢಶಾಲೆಯ ಪ್ರೇಮ ಪ್ರಥಮ ಬಹುಮಾನ, ಮೈಸೂರು ತಾಲ್ಲೂಕು ದೊಡ್ಡಕಾನ್ಯ ಸರ್ಕಾರಿ ಪ್ರೌಢಶಾಲೆಯ ಪಲ್ಲವಿ ಪಿ. ದ್ವಿತೀಯ ಬಹುಮಾನ, ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ರೋಜ ಬಿ. ತೃತೀಯ ಬಹುಮಾನ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಜಶೇಖರಮೂರ್ತಿ ಹಾಗೂ ಹೊಸಹುಂಡಿ ಸರ್ಕಾರಿ ಪ್ರೌಢಶಾಲೆಯ ಉಮಾ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ ಎಂದು ಡಯಟ್ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                     

No comments:

Post a Comment