Monday 28 July 2014

ಕೆ.ಆರ್.ಪೇಟೆ-ಕೋಮು ಸೌಹಾರ್ಧತೆಗೆ ತಾಲೂಕು ಮಾದರಿ-ಕೆ.ಗೌಸ್ ಖಾನ್.

ಕೃಷ್ಣರಾಜಪೇಟೆ. ಹಿಂದೂ ಮತ್ತು ಮುಸ್ಲಿಂ ಬಂಧುಗಳು ತಾಲೂಕಿನಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದು ಕೋಮು ಸೌಹಾರ್ಧತೆಗೆ ತಾಲೂಕು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಪುರಸಭೆಯ ಅಧ್ಯಕ್ಷ ಕೆ.ಗೌಸ್‍ಖಾನ್ ಹೇಳಿದರು.
ಅವರು ಇಂದು ಪಟ್ಟಣದ ವೃತ್ತ ಆರಕ್ಷಕ ನಿರೀಕ್ಷಕರ ಕಚೇರಿಯಲ್ಲಿ ಪವಿತ್ರ ರಂಜಾನ್ ಹಬ್ಬದ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಮುಸ್ಲಿಂ ಸಮೂದಾಯದ ಮುಖಂಡರು ಹಾಗೂ ಮುಖಂಡರ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಮತ್ತು ಹಿಂಧೂಗಳು ಪರಸ್ಪರ ಅಣ್ಣ-ತಮ್ಮಂದಿರಂತೆ ಬದುಕು ನಡೆಸುತ್ತಿದ್ದಾರೆ. ತಾಲೂಕಿನ ಇತಿಹಾಸದಲ್ಲಿ ಈವರೆಗೆ ಒಂದೇ ಒಂದು ಕೋಮು ಗಲಭೆ ನಡೆದ ಉದಾಹರಣೆಯಿಲ್ಲ. ಮುಸ್ಲಿಂ ಬಂಧುಗಳು ಶ್ರದ್ಧಾ ಭಕ್ತಿಯಿಂದ ಉಪವಾಸವ್ರತ ನಡೆಸಿ ಆಚರಿಸುತ್ತಿರುವ ರಂಜಾನ್ ಹಬ್ಬದ ಸಂಭ್ರಮದಲ್ಲಿ ಹಿಂದೂ ಭಾಂದವರು ಭಾಗವಹಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವರಲ್ಲದೇ ಹಬ್ಬದ ಊಟದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಅಂತೆಯೇ ಹಿಂದೂಗಳು ಆಚರಿಸುವ ದೀಪಾವಳಿ, ಗೌರಿ-ಗಣಪತಿ, ವಿಜಯದಶಮಿ ಹಬ್ಬದಲ್ಲಿ ಮುಸ್ಲಿಂ ಬಂಧುಗಳು ಹಿಂಧೂ ಬಾಂಧವರ ಮನೆಗೆ ತೆರಳಿ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುವರು. ಆದ್ದರಿಂದ ಸಮೂದಾಯದ ಮುಖಂಡರು ವದಂತಿಗಳು ಹಾಗೂ ಗಾಳಿಸುದ್ದಿಗೆ ಕಿವಿಗೊಡದೆ ಸಂತೋಷದಿಂದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯ ನೇತೃತ್ವ ವಹಿಸಿದ್ದ ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಮಾತನಾಡಿ ತಾಲೂಕು ಕೋಮುಸೌಹಾರ್ಧತೆಗೆ ಹೆಸರುವಾಸಿಯಾಗಿದೆ, ಈ ಸಂಪ್ರದಾಯವನ್ನು ಈ ಭಾರಿಯೂ ಮುಂದುವರೆಸಿಕೊಂಡು ಹೋಗುವ ಮೂಲಕ ತಾಲೂಕಿನ ಕೀರ್ತಿಯನ್ನು ಬೆಳಗಬೇಕು. ವದಂತಿಗಳಿಗೆ ಕಿವಿಗೊಡಬಾರದು ಕಾನೂನು ಸುವ್ಯವಸ್ಥೆಯ ಪಾಲನೆಗೆ ಪೋಲಿಸರು ಸದಾ ನಿಮ್ಮೊಂದಿಗಿದ್ದು ಸಹಕಾರ ನೀಡಲಿದ್ದಾರೆ ಆದ್ದರಿಂದ ಸಂತೋಷದಿಂದ ಶಾಂತಿಯುತವಾಗಿ ರಂಜಾನ್ ಹಬ್ಬವನ್ನು ಆಚರಿಸಿ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ನಗರಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಫೀಜುಲ್ಲಾಶರೀಫ್, ಪುರಸಭೆ ಸದಸ್ಯೆ ತಂಜೀಮಾಕೌಸರ್, ಕೆ.ಪುರುಷೋತ್ತಮ್, ಕೆ.ವಿನೋದ್‍ಕುಮಾರ್, ಡಿ.ಪ್ರೇಮಕುಮಾರ್, ಪುರಸಭೆ ಮಾಜಿಅಧ್ಯಕ್ಷರಾದ ಕೆ.ಎಚ್.ರಾಮಕೃಷ್ಣ, ಕೆ.ಸಿ.ವಾಸು, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಹಾಫಿಜ್ ಅಹಮದ್, ನವೀದ್‍ಅಹಮದ್, ನಜೀರ್ ಅಹಮದ್, ರಫೀಕ್ ಅಹಮದ್, ಶಬೀರ್ ಅಹಮದ್, ಸೈಯ್ಯದ್ ಅಕ್ಬರ್, ರಿಯಾಜ್‍ಪಾಶ, ಸೈಯ್ಯದ್ ಆಬೀದ್, ಮುಜೀಬ್ ಅಹಮದ್, ಅಶ್ರಫ್‍ಪಾಶ, ನಾಜಾ, ಸಯೀದ್, ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತೊಗಟವೀರ ಸಮಾಜದ ಮುಖಂಡ ಹಂಸರಮೇಶ್ ಮತ್ತಿತರರು ಭಾಗವಹಿಸಿದ್ದರು.

No comments:

Post a Comment