Thursday 25 December 2014

ಕೃಷ್ಣರಾಜಪೇಟೆ. ತಾಲೂಕಿನ ಇತಿಹಾಸ ಪ್ರಸಿದ್ಧವಾದ ಹೇಮಗಿರಿ ದನಗಳ ಜಾತ್ರೆಯ ಕಾಲದ ವಿವಿಧ ಸುಂಕಗಳ ಹರಾಜನ್ನು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಡಿಸೆಂಬರ್-27ರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ಬಿಡ್ಡುದಾರರು ಕಛೇರಿಯಲ್ಲಿ ಮಾಹಿತಿಯನ್ನು ಪಡೆದು ಮಂಗಡ ಠೇವಣಿ ಹಣವನ್ನು ಪಾವತಿ ಮಾಡಿ ಹರಾಜು ಬಿಡ್ಡಿನಲ್ಲಿ ಭಾಗವಹಿಸಬಹುದು ಎಂದು ತಹಶೀಲ್ದಾರ್ ಹೆಚ್.ಎಲ್.ಶಿವರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದ ತಮ್ಮ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೇಮಗಿರಿ ಜಾತ್ರೆಯ ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
2015ರ ಜನವರಿ 26ರಂದು ಹೇಮಗಿರಿಯ ಆರಾಧ್ಯದೈವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ರಥೋತ್ಸವವು ಜರುಗಲಿದ್ದು ಜಾತ್ರೆಯ ಅಂಗವಾಗಿ ನಡೆಯಲಿರುವ ರಾಜ್ಯದಲ್ಲಿಯೇ ಪ್ರಸಿದ್ಧವಾದ ಹೇಮಗಿರಿ ದನಗಳ ಜಾತ್ರೆಯು ಜನವರಿ 20ರಿಂದ ಆರಂಭವಾಗಲಿದೆ. ಜಾತ್ರೆಯ ಅವಧಿಯಲ್ಲಿ ಮಾತ್ರ ದನಗಳಿಗೆ ಜಾತ್ರೆಯ ಮಾಳಕ್ಕೆ ಪ್ರವೇಶ ನೀಡಲಾಗುವುದು. ಅಲ್ಲದೇ ರಾಸುಗಳಿಗೆ ನೀರು ಮತ್ತು ನೆರಳಿನ ಸೌಲಭ್ಯ, ಜಾತ್ರೆಯ ಮಾಳಕ್ಕೆ ವಿದ್ಯುತ್ ಸೌಲಭ್ಯ ನೀಡಲಾಗುವುದು. ಜಾತ್ರಾ ಕಾಲದ ವಿವಿಧ ಬಾಬುಗಳ ಸುಂಕವನ್ನು ಹರಾಜು ಮೂಲಕ ವಿಲೇ ಮಾಡಲಾಗುವುದು, ದನಗಳ ಸುಂಕ, ಎತ್ತಿನಗಾಡಿಗಳ ಸುಂಕ, ತೆಂಗಿನಕಾಯಿ ಸುಂಕ, ಅಂಗಡಿ ಮುಂಗಟ್ಟುಗಳ ಸುಂಕ, ಗೊಬ್ಬರದ ಸುಂಕ ಸೇರಿದಂತೆ ವಿವಿಧ ಸುಂಕಗಳ ಹರಾಜು ಬಗ್ಗೆ ಕಛೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದು. ಜಾತ್ರೆಯಲ್ಲಿ ಭಾಗವಹಿಸುವ ಅತ್ಯುತ್ತಮವಾದ ರಾಸುಗಳನ್ನು ಗುರ್ತಿಸಿ ಬಹುಮಾನ ನೀಡಲಾಗುವುದು ಎಂದು ತಹಶೀಲ್ದಾರ್ ಶಿವರಾಂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಡಿಹೊಳೆ ಗ್ರಾ.ಪಂ ಅಧ್ಯಕ್ಷ ಮಂಜೇಗೌಡ, ಪಿಡಿಓ ಶಿರೀನ್‍ತಾಜ್, ತಾ.ಪಂ ಸದಸ್ಯೆ ಭಾರತಿಅಶೋಕ್, ಪಾರುಪತ್ತೇಗಾರ್ ರಂಗರಾಜ್, ಉಪತಹಶೀಲ್ದಾರ್ ಗೋಪಾಲಕೃಷ್ಣ, ರಾಜಶ್ವನಿರೀಕ್ಷಕ ಬಸವರಾಜು, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮರಿಸಿದ್ಧೇಗೌಡ, ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಪುನೀತ್, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

No comments:

Post a Comment