Wednesday 3 December 2014

ದೇವರ ಮಕ್ಕಳಾದ ವಿಕಚೇತನಲರಿಗೆ ಸಮಾಜದ ಅನುಕಂಪ ಬೇಕಾಗಿಲ್ಲ.ನ್ಯಾಯಾಧೀಶರಾದ ಎಸ್.ಗೋಪಾಲಪ್ಪ.

ಕೃಷ್ಣರಾಜಪೇಟೆ. ದೇವರ ಮಕ್ಕಳಾದ ವಿಕಚೇತನರಿಗೆ ಸಮಾಜದ ಅನುಕಂಪ ಬೇಕಾಗಿಲ್ಲ. ಬದಲಿಗೆ ಸಮಾಜವು ಅವರಲ್ಲಿ ಸುಪ್ತವಾಗಿರುವ ಬುದ್ಧಿವಂತಿಕೆ ಹಾಗೂ ದೈಹಿಕ ಸಾಮಥ್ರ್ಯಕ್ಕೆ ಅನುಗುಣವಾಗಿ ಸಾಧನೆ ಮಾಡಿ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಹೇಳಿದರು.
ಅವರು ಇಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ತಾಲೂಕಿನಲ್ಲಿ 3ಸಾವಿರಕ್ಕೂ ಹೆಚ್ಚು ವಿಕಲಚೇತನರಿದ್ದಾರೆ. ಸರ್ಕಾರವು ಅಗತ್ಯವಾದ ಮಾಶಾಸನ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯಲು ಪ್ರೋತ್ಸಾಹವನ್ನು ನೀಡಿ ಅಗತ್ಯವಾದ ಮಾರ್ಗದರ್ಶನವನ್ನು ಮಾಡುತ್ತಿದೆ. ಸಮಾಜವು ವಿಕಲಚೇನತರ ಬಗ್ಗೆ ತೋರಿಕೆಯ ಅನುಕಂಪವನ್ನು ವ್ಯಕ್ತಪಡಿಸದೇ, ವಿಕಲಚೇತನರನ್ನು ಹೀಯಾಳಿಸಿ ಮಾನಸಿಕವಾಗಿ ಆಘಾತವನ್ನುಂಟು ಮಾಡದೇ ಸಮಾಜದಲ್ಲಿ ಎಲ್ಲರೊಡನೆ ಒಂದಾಗಿ ಕೂಡಿ ಬಾಳಲು, ತಮ್ಮಲ್ಲಿ ಅವ್ಯಕ್ತವಾಗಿರುವ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಮತ್ತು ದಿನಪತ್ರಿಕೆಗಳು ಬೆಳಕು ಚೆಲ್ಲಿ ಜಾಗೃತಗೊಳಿಸುವ ಕೆಲಸ ಮಾಡಬೇಕು ಎಂದು ಗೋಪಾಲಪ್ಪ ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿರಿಯ ಶ್ರೇಣಿ ನ್ಯಾಯಾಧೀಶ ನಾವು ವಿಕಲಚೇತನರಾಗಿ ಹುಟ್ಟಬೇಕೆಂದು ಯಾರೂ ಅರ್ಜಿಯನ್ನು ಹಾಕಿಕೊಂಡು ಹುಟ್ಟುವುದಿಲ್ಲ. ಆಕಸ್ಮಿಕವಾಗಿ ಜನನ ಪ್ರಮಾಣದಲ್ಲಿ ಆದ ತೊಂದರೆ, ಅಪಘಾತದಲ್ಲಿ ಆದ ಆಕಸ್ಮಿಕ ಘಟನೆಯಿಂದ ವಿಕಲಚೇತನರಾಗುವ ಸಂದರ್ಭ ಬಂದೊದಗುತ್ತದೆ. ಇಂತಹ ಸಮಯದಲ್ಲಿ ಧೃತಿಗೆಡದೇ ಆತ್ಮವಿಶ್ವಾಸದಿಂದ ಜೀವನ ನಡೆಸಿ ಗುರಿ ಮುಟ್ಟುವ ಕಡೆಗೆ ವಿಕಲಚೇತನರು ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು. ಸಂವಿಧಾನಬದ್ಧವಾಗಿ ಸರ್ಕಾರವು ನೀಡುತ್ತಿರುವ ಸವಲತ್ತುಗಳನ್ನು ವಿಕಲಚೇತನರು ಕೇಳಿ ಪಡೆಯಬೇಕು, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ವಿಕಲಚೇತನರಾದ ನಾಡಿನ ಶ್ರೇಷ್ಠ ಭರತನಾಟ್ಯ ಪಟು ಸುಧಾಚಂದ್ರನ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಮಾಲತಿಹೊಳ್ಳ ಅವರಂತೆ ಶ್ರೇಷ್ಠ ಸಾಧಕರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಅಧಿಕಾರಿ ಹೆಚ್.ಜೆ.ದೇವಕುಮಾರ್, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ವಕೀಲರಾದ ಎನ್.ಮಂಜುನಾಥ್, ಕೆ.ಆರ್.ಮಹೇಶ್, ಪಾಂಡು, ಎನ್.ಆರ್.ರವಿಶಂಕರ್, ಅಪರ ಸಕಾರಿ ಅಭಿಯೋಜಕ ರವೀಂದ್ರ, ಎಸ್.ಡಿ.ಸರೋಜಮ್ಮ, ಬಿ.ಆರ್.ಪಲ್ಲವಿ, ಎಲ್.ಕೆ.ಕಾಳೇಗೌಡ, ಸಿ.ಎನ್.ಮೋಹನ್, ಕೃಷ್ಣಕುಮಾರ್, ಎಂ.ಎಲ್.ಸುರೇಶ್, ಬಂಡಿಹೊಳೆ ಗಣೇಶ್, ನಿರಂಜನ ಮತ್ತಿತರರು ಭಾಗವಹಿಸಿದ್ದರು.
ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಸ್ವಾಗತಿಸಿದರು, ಡಿ.ಆರ್.ಮೋಹನ್ ವಂದಿಸಿದರು, ಕೆರೆಮೇಗಳಕೊಪ್ಪಲು ಶಂಕರೇಗೌಡ ಕಾರ್ಯಕ್ರಮ ನಿರೂಪಿಸಿದರು. ಲಲಿತ ಪ್ರಾರ್ಥಿಸಿದರು.

No comments:

Post a Comment