Monday 29 February 2016

ಜ್ಞಾನವನ್ನು ಯುವ ಪೀಳಿಗೆಗಳ ಅನುಕೂಲಕ್ಕೆ ಬಳಸಿ: ಮೋಹನ್ ಕುಮಾರ್
ಮೈಸೂರು, ಫೆಬ್ರವರಿ 29 . ಆಚರಿಸಲಾಗುತ್ತಿರುವ ಮಹಾನ್ ವ್ಯಕ್ತಿಗಳ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವೃದ್ಧಿಯಾಗುವ ಜ್ಞಾನವನ್ನು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಯುವ ಪೀಳಿಗೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಹೇಳಿದರು.
      ಇಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಯುವ ಪೀಳಿಗೆಗೆ ಒಳ್ಳೆಯ ಮಾರ್ಗದರ್ಶನದ ಅಗತ್ಯತೆ ಇದೆ. ಜ್ಞಾನವನ್ನು ಯುವ ಪೀಳಿಗೆಗಳ ಅನುಕೂಲಕ್ಕಾಗಿ  ಬಳಸಿಕೊಳ್ಳಬೇಕು. ಸದೃಡ ಸಮಾಜದ ನಿರ್ಮಾಣದ ಜವಾಬ್ದಾರಿ ಯುವಜನರ ಮೇಲಿದೆ. ಜ್ಞಾನ ಸಂಪಾದನೆಯಿಂದ ಸಮಾಜವನ್ನು ಸಿರಿಯಾದ ದಿಕ್ಕಿಗೆ ಸಾಗಿಸಲು ಸಾಧ್ಯ ಎಂದರು.
      ಇಂದಿಗೂ ಸಹ ಜಾತಿ ವ್ಯವಸ್ಥೆ ಸಮಾಜದಲ್ಲಿ ಜಾರಿಯಲ್ಲಿದೆ. ಮೊದಲಿಗೆ ಮನಸ್ಸಿನ ಪರಿವರ್ತನೆಯಾಗಬೇಕು. ಮನುಷ್ಯರು ದ್ವೇಷಭಾವನೆಗಳನ್ನು ಕೈಬಿಟ್ಟು ಶಾಂತಿ ಹಾಗೂ ಪ್ರೀತಿಯಿಂದ ಜೀವನವನ್ನು ಸಾಗಿಸಲು ಮುಂದಾಗಬೇಕು. ಅನೇಕ ಮಹಾನ್ ವಚನಕಾರು ರಚಿಸಿರುವ ವಚನಗಳನ್ನು ಅರ್ಥಿಸಿಕೊಂಡರೆ ಸಮಾಜದಲ್ಲಿರುವ ಪ್ರತಿಯೊಬ್ಬರು ಒಳ್ಳೆಯ ಜೀವನ ನಡೆಸಬಹುದು ಎಂದು ತಿಳಿಸಿದರು.
       ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿವೃತ್ತ ಉಪನಿರ್ದೇಶಕ ಮ.ಗು.ಸದಾನಂದಯ್ಯ ಅವರು ಸಿದ್ಧರಾಮೇಶ್ವರರು ಸಮಾಜ ಮತ್ತು ಧರ್ಮವನ್ನು ಒಟ್ಟಾಗಿ ಸರಿತೂಗಿಸಿಕೊಂಡು ಜ್ಞಾನವನ್ನು ಸಮಾನವಾಗಿ ಹಂಚಿದ ಮಹಾನ್ ಯೋಗಿಗಳಲ್ಲಿ ಯೋಗಿ. ವ್ಯಕ್ತಿಯ ಕುಲಕ್ಕೆ ಒತ್ತು ನೀಡದೆ ಗುಣಕ್ಕೆ ಮಹತ್ವ ನೀಡಿದ ದೊಡ್ಡ ಚೇತನ ಎಂದು ಹೇಳಿದರು.
     ಜಾತಿ ರಹಿತ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ, ಕಾಯಕವೇ ಸರ್ವಸ್ವ ಎಂದು ನಂಬಿ ಸ್ವತಃ ದುಡಿದು ಇತರರಿಗೂ ಉಪಕಾರ ಮಾಡಿದ, ಕೆರೆ, ಬಾವಿ, ಹೂದೋಟ, ಛತ್ರಗಳನ್ನು ನಿರ್ಮಿಸಿ, ನೂರಾರು ಸಾಮೂಹಿಕ ವಿವಾಹಗಳನ್ನು ನೆರವೇರಿಸಿದ ಯೋಗಿ ಸಿದ್ಧರಾಮೇಶ್ವರರ ಪ್ರಗತಿಪರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
     ಸಿದ್ಧರಾಮೇಶ್ವರರು ರಚಿಸಿರುವ 1900 ವಚನಗಳು ಸರ್ಕಾರದ ಬಳಿಯಿದೆ. ಪ್ರತಿಯೊಬ್ಬರು ಅವರ ವಚನದಲ್ಲಿರುವ ಪದಗಳ ಅರ್ಥವನ್ನು ಸಂಪೂರ್ಣವಾಗಿ ಅರಿತು ತಮ್ಮ ಜೀವನದಲ್ಲಿ ಅಳವಡಿಕೊಂಡರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.    
      ಚಿತ್ರದುರ್ಗ-ಬಾಗಲಕೋಟೆಯ ಜಗದ್ಗುರು ಸಿದ್ಧರಾಮೇಶ್ವರ ಭೋವಿ ಗುರುಪೀಠದ ಶ್ರೀ ಶ್ರೀ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿ ದಿವ್ಯಸಾನಿಧ್ಯ ವಹಿಸಿದರು.
 ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆನಂದ್, ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಮಲ್ಲಯ್ಯ, ಮುಖಂಡರಾದ ಎಂ.ಜಿ.ರಾಮಕೃಷ್ಣಪ್ಪ, ಡಿ.ಸಿದ್ದರಾಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
     ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಶ್ರೀ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಂಗವಾಗಿ ಆಯೋಜಿಸಲಾದ ಮೆರವಣಿಗೆಗೆ ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಎಲ್. ಭೈರಪ್ಪ ಚಾಲನೆ ನೀಡಿದರು.




           
ಮಾರ್ಚ್ 14 ರಿಂದ ದೊಡ್ಡ ಜಾತ್ರೆ
ಮೈಸೂರು,ಫೆ.29. ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದೊಡ್ಡ ಜಾತ್ರಾ ಮಹೋತ್ಸವ ದಿನಾಂಕ 14-03-2016 ರಿಂದ 25-03-2016 ರವರೆಗೆ ನಡೆಯಲಿದೆ. ದೊಡ್ಡ ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದಿನಾಂಕ 21-03-2016 ರಂದು ಬೆಳಿಗ್ಗೆ 6-08 ರಿಂದ 6-30 ಘಂಟೆಯೊಳಗೆ ಗೌತಮ ಪಂಚಮಹಾರಥೋತ್ಸವ ಹಾಗೂ ದಿನಾಂಕ 23-03-2016 ರಂದು ಸಂಜೆ 7 ಗಂಟೆಗೆ ಕಪಿಲಾ ನದಿಯಲ್ಲಿ ಶ್ರೀಯವರ ತೆಪ್ಪೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಫೆ.29(ಕ.ವಾ.)- ಜಿಲ್ಲಾಧಿಕಾರಿಗಳ ಕಚೇರಿಗೆ ಭೂಸ್ವಾಧೀನ ಹಾಗೂ ಇತರೆ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಗುತ್ತಿಗೆ ಆಧರದ ಮೇಲೆ ಒಬ್ಬ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು  ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳಲಾಗುವುದು.
ಆಯ್ಕೆಯಾದವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958 ರ ನಿಯಮ 313(ಬಿ) ಪ್ರಕಾರ ಮಾಸಿಕ ಸಂಚಿತ ವೇತನ ನೀಡಲಾಗುವುದು.
    ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವವರು ಸ್ವವಿವರಗಳೂಳ್ಳ ಅರ್ಜಿಯನ್ನು ಅಪೇಕ್ಷಿಸಿರುವ ಸಂಭಾವನೆಯ ವಿವರದೊಂದಿಗೆ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು ಇಲ್ಲಿಗೆ  ದಿನಾಂಕ 11-03-2016 ರೊಳಗಾಗಿ ಸಲ್ಲಿಸುವುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಆಕಾಶವಾಣಿಯಲ್ಲಿ ಆರೋಗ್ಯ ಇಲಾಖೆಯ ಬಗ್ಗೆ ಮಾಹಿತಿ
ಮೈಸೂರು,ಫೆ.29. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವತಿಯಿಂದ ಆರೋಗ್ಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಸೌಲಭ್ಯಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ದಿನಾಂಕ 29.02.2016 ರಿಂದ 12.03.2016 ವರೆಗೆ ಪ್ರತಿ ದಿನ ಸಾಯಂಕಾಲ 5 ಗಂಟೆಗೆ ಆಕಾಶವಾಣಿ (100.6 ಕಂಪನಾಕ)ಯಲ್ಲಿ ಆರೋಗ್ಯ ಭಾಗ್ಯ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸಲಿದ್ದು, ದಿನಾಂಕ 05.03.2016ರ ಸಂಜೆ 5 ಗಂಟೆಗೆ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದುಳುಜ್ವರದ ಬಗ್ಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ||ಚಿದಂಬರ.ಎಸ್, ಅವರು ತಿಳಿಸಿಕೊಡಲಿದ್ದಾರೆ.  ಸಾರ್ವಜನಿಕರು ಉಪಯುಕ್ತ ಮಾಹಿತಿ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಡಾಕ್ ಅದಾಲತ್
ಮೈಸೂರು,ಫೆ.29. ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆಗಳ ಸುಧಾರಣೆಗಾಗಿ ಸಲಹೆ ಸ್ವಾಗತಿಸಲು ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರು ದಿನಾಂಕ 21.03.2016 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ  “ಡಾಕ್ ಅದಾಲತ್” ಅಯೋಜಿಸಿರುತ್ತಾರೆ.
    ಗ್ರಾಹಕರು ತಮ್ಮ ದೂರು ಮತ್ತು ಕುಂದುಕೊರತೆಗಳನ್ನು ಲಿಖಿತ ಮೂಲಕವಾಗಿ ಯಾವುದೇ ಅಂಚೆ ಕಛೇರಿಯಿಂದ ಕಳುಹಿಸಬಹುದು. ಈ ಸಂಬಂಧದಲ್ಲಿ ಪತ್ರಗಳನ್ನು   ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ ಸ್ವೀಕರಿಸುವ ಕೊನೆಯ ದಿನಾಂಕ 10.03.2016 ಯಾಗಿರುತ್ತದೆ ಎಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಣಬೆ ಖಾದ್ಯಗಳ ಪ್ರಾತ್ಯಕ್ಷಿಕೆ
ಮೈಸೂರು,ಫೆ.29-ತೋಟಗಾರಿಕೆ ಇಲಾಖೆ ವತಿಯಿಂದ ದಿನಾಂಕ 04-03-2016 ರಂದು ಬೆಳಿಗ್ಗೆ 10-30 ಗಂಟೆಗೆ ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಣಬೆ ಬೇಸಾಯದಲ್ಲಿ ಕೊಯ್ಲೋತ್ತರ ತಂತ್ರಜ್ಞಾನದ ಜೊತೆಗೆ ವಿಶೇಷವಾಗಿ ಅಣಬೆಯಿಂದ ತಯಾರಿಸಹುದಾದ ಅಣಬೆ ಪಲಾವ್, ಮಂಚೂರಿ, ಸಲಾಡ್, ಉಪ್ಪಿನಕಾಯಿ ಮತ್ತು ಸೂಪ್ ಖಾದ್ಯಗಳನ್ನು ಕಾರ್ಯಕ್ರಮದಲ್ಲೇ ನುರಿತ ಬಾಣಸಿಗರಿಂದ ಪ್ರಾಯೋಗಿಕವಾಗಿ ತಯಾರಿಸುವ ಬಗ್ಗೆ ಶಿಕ್ಷಣಾರ್ಥಿಗಳಿಗೆ ತಿಳಿಸಲಾಗುವುದು.
     ಆಸಕ್ತರು ರೂ 100/- ಶುಲ್ಕ ಪಾವತಿಸಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ಹೆಸರು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9740596111 ಯನ್ನು ಸಂಪರ್ಕಿಸುವುದು.
ಮಾರ್ಚ್ ಮಾಹೆ ಪಡಿತರ ಬಿಡುಗಡೆ
     ಮೈಸೂರು,ಅ.01.ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ಮಾರ್ಚ್ 2016 ರ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ ಉಚಿತವಾಗಿ 4 ಕೆ.ಜಿ. ಅಕ್ಕಿ,  1 ಕೆ.ಜಿ. ಗೋಧಿ ನೀಡಲಾಗುವುದು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 1 ಲೀಟರ್ ತಾಳೆ ಎಣ್ಣೆ  ರೂ. 25/-, 1 ಕೆ.ಜಿ. ಅಯೋಡೈಸ್ಡ್ ಉಪ್ಪು  ರೂ. 2/- ರಂತೆ ತಲಾ 1 ಕೆ.ಜಿ. ಸಕ್ಕರೆ ರೂ. 13-50 ದರದಲ್ಲಿ ನೀಡಲಾಗುವುದು.
     ಎಪಿಎಲ್ ಪಡಿತರ ಕಾರ್ಡು ಏಕಸದಸ್ಯರಿಗೆ 3 ಕೆ.ಜಿ. ಅಕ್ಕಿ ,(ರೂ. 15=00 ಪ್ರತಿ ಕೆ.ಜಿ.ಗೆ) 2 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ಎರಡು ಅಥವಾ ಹೆಚ್ಚಿನ ಕುಟುಂಬ ಸದಸ್ಯರಿಗೆ 5 ಕೆ.ಜಿ. ಅಕ್ಕಿ,(ರೂ. 15=00 ಪ್ರತಿ ಕೆ.ಜಿ.ಗೆ) ಹಾಗೂ 5 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ನೀಡಲಾಗುವುದು.
     ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ/ತಾಲ್ಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422107 ಅಥವಾ ಬೆಂಗಳೂರಿನ ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದೆಂದು ತಿಳಿಸಿದ್ದಾರೆ                                                                

No comments:

Post a Comment