Saturday 20 February 2016

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 22 ರಂದು 10ನೇ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು.
     ಈ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಲು  ವಾಹನದ ವ್ಯವಸ್ಥೆ ಮಾಡಲಾಗಿದ್ದು, ವಾಹನವು ಅಂದು ಬೆಳಿಗ್ಗೆ 9 ಗಂಟೆಗೆ ವಾರ್ತಾಭವನದಿಂದ ಹೊರಡಲಿದೆ. ಬೆಳಿಗ್ಗೆ 8-30ಕ್ಕೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.
     ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.

ಪ್ರವಾಸ ಕಾರ್ಯಕ್ರಮ
       ಮೈಸೂರು,ಫೆ.20.-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 22 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
       ಅವರು ಅಂದು  ಬೆಳಿಗ್ಗೆ 10-15ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಟಿ.ನರಸೀಪುರ ಹೆಲಿಪ್ಯಾಡ್‍ಗೆ ಆಗಮಿಸಿ. ಟಿ.ನರಸೀಪುರದಲ್ಲಿ ಕುಂಭಮೇಳ ಆಚರಣಾ ಸಮಿತಿಯವರು ಆಯೋಜಿಸಿರುವ 10ನೇ ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಗಂಟೆಗೆ ಟಿ.ನರಸೀಪುರ ಹೆಲಿಪ್ಯಾಡ್‍ನಿಂದ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.

ಸರ್ವಜ್ಞ ಸಾರ್ವಕಾಲಿಕ ಕವಿ: ಪ್ರೊ: ನಾಗಣ್ಣ
    ಮೈಸೂರು,ಫೆ.20-ಸರ್ವಜ್ಞನ ವಚನಗಳು ಸಮಕಾಲೀನವೂ ಹೌದು, ಸಾರ್ವಕಾಲಿಕವೂ ಹೌದು ಎಂದು ಪ್ರೊ. ನಾಗಣ್ಣ ಅಭಿಪ್ರಾಯಪಟ್ಟರು.
    ಜಿಲ್ಲಾಡಳಿತದ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಇಂದು ಆಯೋಜಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸರ್ವಜ್ಞ ಕವಿಯ ವಚನಗಳ ಪ್ರತಿ ಮಾತು ಮಾಣಿಕ್ಯದಂತಿದೆ. ಜನಮಾನಸದಲ್ಲಿ  ಅವು ಉಳಿದುಕೊಂಡು ಬಂದಿವೆ ಎಂದು ಹೇಳಿದರು.
     ಶೇಕ್ಸಪಿಯರ್ ನಾಟಕದ ನುಡಿಗಟ್ಟುಗಳಂತೆ ಸರ್ವಜ್ಞನ ವಚನಗಳ ನುಡಿಗಟ್ಟುಗಳು ಸಹ ಉಳಿದುಕೊಂಡುಬಂದಿವೆ. ಆದರೆ ಇತ್ತೀಚೆಗೆ ಅವುಗಳ ಮರೆಯಲು ಆರಂಭಿಸಿದ್ದಾರೆ.ಆದ್ದರಿಂದ ಇಂದಿನ ಮಕ್ಕಳು ಸರ್ವಜ್ಞನ ವಚನಗಳನ್ನು ಕಲಿಯುವಂತೆ ಪ್ರೇರಣೆ ನೀಡಬೇಕು ಎಂದು ಅವರು ನುಡಿದರು.
    ಸರ್ವಜ್ಞನ ಕಾಲಘಟ್ಟದ ಸಾಹಿತಿಗಳು, ತಮ್ಮ ಸಾಹಿತ್ಯ ಕೃತಿಗಳಿಗೆ ರಾಮಾಯಣ, ಮಹಾಭಾರತ ಕಾವ್ಯಗಳನ್ನು ಆಧರಿಸಿದ್ದರೆ. ಸರ್ವಜ್ಞ ಅವುಗಳನ್ನು ಪಕ್ಕಕ್ಕಿಟ್ಟು, ತಮ್ಮ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ತನ್ಮೂಲಕ ಸಾಮಾನ್ಯರಿಗೂ ಅರ್ಥವಾಗುವ ಸಾಹಿತ್ಯ ನೀಡಿದರು ಎಂದು ಹೇಳಿದರು.
    ಸರ್ವಜ್ಞರ ಕಾಲದ ಬಗ್ಗೆ ಜಿಜ್ಞಾಸೆ ಇದೆ. ಕೆಲವರು 16 ನೇ ಶತಮಾನದ ಕವಿ ಎಂದರೆ ಮತ್ತೆ ಕೆಲವರು 18 ನೇ ಶತಮಾನವನ್ನು ಸರ್ವಜ್ಞನ ಕಾಲ ಎಂದು ಗುರುತಿಸುತ್ತಾರೆ. ಈ ಕುರಿತು ವಿವಾದ ಏನೇ ಇದ್ದರೂ ಆತನ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
    ಡಾ.ಎಲ್.ಬಸವರಾಜು ಅವರು ಗುರುತಿಸಿರುವಂತೆ ಸರ್ವಜ್ಞನ ಮೂಲ ವಚನಗಳು 950. ಆದರೆ ಕ್ರಮೇಣ ಇತರರು ಸಹ ಸರ್ವಜ್ಞನ ಹೆಸರಿನಲ್ಲಿ ವಚನಗಳನ್ನು ಸೇರಿಸಿ, ಈಗ ಆ ಸಂಖ್ಯೆ 1800 ಅನ್ನು ದಾಟಿದೆ ಎಂದು ನಾಗಣ್ಣ ಹೇಳಿದರು.
     ಇದಕ್ಕೂ ಮುನ್ನ ಸರ್ವಜ್ಞನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಉಪಸ್ಥಿತರಿದ್ದರು.
ಫೆಬ್ರವರಿ 21 ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ
 ಮೈಸೂರು,ಫೆ.20.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ 21 ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಚೆಲುವಾಂಬ ಆಸ್ಪತ್ರೆಯಲ್ಲಿ ಚಾಲನೆ ನೀಡುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃತಿ ಆಹ್ವಾನ
     ಮೈಸೂರು,ಫೆ.20-ಕರ್ನಾಟಕ ಜಾನಪದ ಅಕಾಡೆಮಿಯು 01-01-2015 ರಿಂದ 31-12-2015 ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ ಕನಿಷ್ಠ 150 ಪುಟಗಳ ಮಿತಿಯಲ್ಲಿರುವ, ಜಾನಪದ ಗದ್ಯ, ಪದ್ಯ ವಿಚಾರ-ವಿಮರ್ಶೆ, ಸಂಶೋಧನೆ ಹಾಗೂ ಸಂಕೀರ್ಣ ಈ ನಾಲ್ಕು ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿಯಲ್ಲಿ ಜಾನಪದ ಕೃತಿಗಳನ್ನು 2015ನೇ ಸಾಲಿನ ಪುಸ್ತಕ ಬಹುಮಾನ ನೀಡಲು ಕೃತಿಗಳನ್ನು ಆಹ್ವಾನಿಸಿದೆ.
    ಲೇಖಕರು/ಪ್ರಕಾಶಕರು/ಸಂಪಾದಕರು ಜಾನಪದಕ್ಕೆ ಸಂಬಂಧಿಸಿದ 4 ಕೃತಿಗಳನ್ನು ದ್ವಿಪ್ರತಿ ಬಿಲ್ಲಿನೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಫೆಬ್ರವರಿ 29 ರೊಳಗೆ ಖುದ್ದಾಗಿ ಅಥವಾ ಕೋರಿಯರ್ ಅಂಚೆ ಮೂಲಕ ಸಲ್ಲಿಸಬಹುದು.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22215509 ನ್ನು ಸಂಪರ್ಕಿಸಬಹುದು.

ಕನ್ನಡ ಪುಸ್ತಕ ಮಾರಾಟ ಮೇಳ: ಮಳಿಗೆಗೆ ಅರ್ಜಿ ಆಹ್ವಾನ
      ಮೈಸೂರು,ಫೆ.20-ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ಒಟ್ಟು 5 ದಿನಗಳ ಕಾಲ ‘ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015’ನ್ನು ಹಮ್ಮಿಕೊಂಡಿದೆ. ಮೇಳದಲ್ಲಿ ಪ್ರಕಾಶನ ಸಂಸ್ಥೆಗಳು/ಪ್ರದರ್ಶಕರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ. 1,000/- ಬಾಡಿಗೆ ಹಾಗೂ 1,000/-ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಪ್ರತ್ಯೇಕವಾಗಿ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಅವರ ಹೆಸರಿನಲ್ಲಿ ಸಲ್ಲಿಸುವುದು.
        ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಪ್ರದರ್ಶಕರು ನಿಗದಿತ ಅರ್ಜಿ ನಮೂನೆಯನ್ನು ಆಯಾಯ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗಳಲ್ಲಿ ಅಥವಾ ಪ್ರಾಧಿಕಾರದ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿushಚಿಞಚಿಠಿಡಿಚಿಜhiಞಚಿಡಿಚಿ.ಛಿom ನಲ್ಲಿ ಅಥವಾ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ  ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಫೆಬ್ರವರಿ 22 ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ 080-22484516/22107704 ಸಂಪರ್ಕಿಸಬಹುದಾಗಿದೆ.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು,ಫೆ.20.ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತವು ಭೂ ಒಡೆತನ ಯೋಜನೆಯಡಿ ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಹೋಬಳಿ, ಚಿಕ್ಕನೇರಳೆ ಗ್ರಾಮದ ಗುಲಾಬ್ ಜಾನ್ ಕೋಂ ವಹಾಬ್ ಭೂ ಮಾಲೀಕರಿಂದ ಜಮೀನು ಖರೀದಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದಾದರು ತಂಟೆ ತಕರಾರು ಇದ್ದರೆ ಲಿಖಿತವಾಗಿ ಅಗತ್ಯ ದಾಖಲಾತಿಗಳೊಂದಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ನಂ. 1580, ನಾರಾಯಣಶಾಸ್ತ್ರೀ ರಸ್ತೆ, ಮೈಸೂರು ಇಲ್ಲಿಗೆ  ಫೆಬ್ರವರಿ 29 ರೊಳಗೆ ಸಲ್ಲಿಸುವಂತೆ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
        ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2430022ನ್ನು ಸಂಪರ್ಕಿಸುವುದು.
ಫೆ.21 ರಂದು ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಲು ಮರೆಯದಿರಿ
      ಮೈಸೂರು,ಫೆ.20.ಜಿಲ್ಲೆಯಾದ್ಯಂತ ಫೆಬ್ರವರಿ 21 ರಂದು ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕಾಗಿ ಪೋಲಿಯೋ ಲಸಿಕೆಯನ್ನು ಶೀತಲ ಸರಪಳಿಯಲ್ಲಿ ನಿರ್ವಹಿಸಿ, ಅತ್ಯಂತ ಸುರಕ್ಷಿತವಾಗಿ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು ಪೋಷಕರು ಹಾಗೂ ಸಮುದಾಯವು ಯಾವುದೇ ಆತಂಕವಿಲ್ಲದೇ, ವದಂತಿಗಳಿಗೆ ಕಿವಿಗೊಡದೇ ತಮ್ಮ ಐದು ವರ್ಷಕ್ಕೊಳಪಟ್ಟ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ದಿನಾಂಕ 21-02-2016 ರಂದು ತಪ್ಪದೇ ಕರೆದೊಯ್ದು ಲಸಿಕೆ ಪಡೆಯುವಂತೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಸವರಾಜ್ .ಬಿ. ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಗೋಪಿನಾಥ್ ಎಸ್ ಕೋರಿದ್ದಾರೆ.
      ಮೈಸೂರು ಜಿಲ್ಲೆಯಲ್ಲಿ 2ನೇ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತಾಲ್ಲೂಕು ಪ್ರದೇಶದಲ್ಲಿ 1277 ಲಸಿಕಾ ಕೇಂದ್ರಗಳಲ್ಲಿ 204573 ಮಕ್ಕಳಿಗೆ ಹಾಗೂ ಮೈಸೂರು ನಗರದಲ್ಲಿ 311 ಲಸಿಕಾ ಕೇಂದ್ರಗಳಲ್ಲಿ 105679 ಮಕ್ಕಳಿಗೆ ಅಂದರೆ ಜಿಲ್ಲೆಯಲ್ಲಿ ಒಟ್ಟು 1588 ಲಸಿಕಾ ಕೇಂದ್ರಗಳಲ್ಲಿ 310204 ಮಕ್ಕಳಿಗೆ ಪೋಲಿಯೋ ಹನಿ ನೀಡುವ ಗುರಿ ಹೊಂದಲಾಗಿದೆ.
 ಈ ಕಾರ್ಯಕ್ರಮಕ್ಕಾಗಿ 6352 ಜನ ಲಸಿಕೆ ನೀಡುವವರು ಹಾಗೂ 317 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ.  ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಬಸ್ ನಿಲ್ದಾಣದಲ್ಲಿ ಹಾಗೂ ರೈಲ್ವೆ ಸ್ಪೇಷನ್‍ಗಳಲ್ಲಿಯೂ 28 ಲಸಿಕಾ ಕೇಂದ್ರಗಳನ್ನು ತೆರೆದು ಸಂಚಾರದಲ್ಲಿರುವ ಮಕ್ಕಳಿಗೂ ಸಹ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
    ದುರ್ಗಮ ಪ್ರದೇಶದ ಹಳ್ಳಿಗಳ ಮೂಲೆ ಮೂಲೆಯಲ್ಲಿರುವ ಕುಗ್ರಾಮಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶದ ಹಾಡಿಗಳಲ್ಲಿಯೂ ಸಹ ಈ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ.
    ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಜನರು, ಪ್ರತಿನಿಧೀಗಳು, ಧಾರ್ಮಿಕ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿ ಮಕ್ಕಳಿಗೆ ಲಸಿಕೆ ಕೊಡಿಸಿ, ಪೋಲಿಯೋ ರೋಗ ನಿರ್ಮೂಲನಾ ಆಂದೋಲನಕ್ಕೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಅಂತರ್ಜಲ ಜನಜಾಗೃತಿ ಶಿಬಿರ
ಮೈಸೂರು,ಫೆ.20.ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಂತರ್ಜಲ ಜನಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ.
ಫೆಬ್ರವರಿ 22 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಹತ್ತಿರವಿರುವ ಮೈರಾಡದ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ತಾಲ್ಲೂಕು ಮಟ್ಟದ ಜಾಗೃತಿ ಶಿಬಿರವನ್ನು ಆಯೋಜಿಸಿದೆ.
 ಫೆಬ್ರವರಿ 24 ರಂದು ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣ, ಫೆಬ್ರವರಿ 26 ರಂದು ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣ ಹಾಗೂ ಫೆಬ್ರವರಿ 27 ರಂದು  ನಂಜನಗೂಡಿನ ಹೆಮ್ಮರಗಾಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment