Wednesday 24 February 2016

ಅದಕ್ಷ ಮಂತ್ರಿಗಳನ್ನು ಕಿತ್ತು ಹಾಕಿ ದಕ್ಷರನ್ನು ನೇಮಿಸಿ -ಹೆಚ್.ವಿಶ್ವನಾಥ್

ಇದೇ ಮಂತ್ರಿಗಳನ್ನು ಮುಂದಿಟ್ಟುಕೊಂಡು ಹೋದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ : ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮುಖ್ಯಮಂತ್ರಿ ಬದಲಾವಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ
ತಕ್ಷಣವೇ ಅದಕ್ಷ ಮಂತ್ರಿಗಳನ್ನು ಕಿತ್ತು ಹಾಕಿ ದಕ್ಷರನ್ನು ನೇಮಿಸಿ
ಪಕ್ಷಗಳೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಪದ್ಧತಿ ಹೋಗುತ್ತಿರುವುದು ಆತಂಕಕಾರಿ
ಪಕ್ಷಗಳ ನಾಯಕರು ಕುಟುಂಬ ರಾಜಕಾರಣದ ವ್ಯಾಮೋಹ ಬಿಡಬೇಕು, ಕುಟುಂಬದರನ್ನು ಅಧಿಕಾರದಿಂದ ಹೊರಗಿಡಬೇಕು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿರುವ ಮಂತ್ರಿಗಳನ್ನು ತಕ್ಷಣವೇ ಬದಲಾಯಿಸದೇ ಅವರನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಗೆ ಹೋದರೆ ಆ ಚುನಾವಣೆಯಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಂಗ್ರೆಸ್ ನ ಮಾಜಿ ಸಾಂಸದ ಹೆಚ್.ವಿಶ್ವನಾಥ್ ಗಂಭೀರ ಎಚ್ಚರಿಕೆ ನೀಡಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ-ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವುದಕ್ಕೆ ಅದಕ್ಷ ಸಚಿವರು ಕೆಲಸ ಮಾಡದಿರುವುದೇ ಮುಖ್ಯ ಕಾರಣವಾಗಿದೆ. ಇಂತಹ ಸಚಿವರುಗಳು ಇಲಾಖೆಗೆ ಮುಖ್ಯಸ್ಥರಾಗಿದ್ದರೂ ಕೂಡ ತಮ್ಮ ಸ್ವಕ್ಷೇತ್ರವನ್ನೇ ರಾಜ್ಯ ಮಾಡಿಕೊಂಡು ಅಲ್ಲಿಗೆ ಸೀಮಿತವಾಗಿದ್ದಾರೆ. ಬೇರೆ ಕ್ಷೇತ್ರಗಳತ್ತ ಹೋಗುತ್ತಲೇ ಇಲ್ಲ, ಅಲ್ಲದೆ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ತಮ್ಮ ಕೆಲಸ, ಕಾರ್ಯಗಳು, ಸಾಧನೆಗಳು, ಇಲಾಕೆಯ ಯೋಜನೆಗಳ ಬಗ್ಗೆಯೂ ಜನರಿಗೆ ಹೇಳುವ ಕೆಲಸ ಮಾಡದೆ ಬಾಯಿ ಮುಚ್ಚಿಕೊಂಡಿದ್ದಾರೆ. ಸರ್ಕಾರದ ಬಹುಮುಖ್ಯವಾದ ಇಲಾಖೆಗಳೇ ನಿರ್ಜೀವವಾಗಿದೆ. ಇದನ್ನೆಲ್ಲಾ ರಾಜ್ಯದ ಜನರು ಗಮನಿಸುತ್ತಾ ಬರುತ್ತಿದ್ದಾರೆ.ಜಿ.ಪಂ-ತಾ.ಪಂ ಚುನಾವಣೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್ಚೆತ್ತುಕೊಳ್ಳಬೇಕು, ಕೆಲವು ಅಸಮರ್ಥ ಮಂತ್ರಿಗಳನ್ನು ಕೂಡಲೇ ಕಿತ್ತು ಹಾಕಿ ಅವರ ಸ್ಥಾನಕ್ಕೆ ಕೆಲಸ ಮಾಡುವ ಯುವಕರನ್ನು ನೇಮಕ ಮಾಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಗೆ ಆದ ಗತಿಯೂ ನಿಮಗೂ ಬರುತ್ತದೆ ಎಂದು ಎಚ್ಚರಿಸಿದರು.
ಇಂದು ಪಕ್ಷದಲ್ಲಿ ಯಾವುದೇ ಸಿದ್ಧಾಂತ ಉಳಿದಿಲ್ಲ. ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಜಾತಿ ಮತ್ತು ಹಣವನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಪಕ್ಷದಲ್ಲಿ ತತ್ವ, ಸಿದ್ದಾಂತ, ಕಾರ್ಯಕ್ರಗಳು, ಹಾಗೂ ದೇಶಕ್ಕಾಗಿ ಪಕ್ಷ ಮಾಡಿದ ತ್ಯಾಗದ ಬಗ್ಗೆ ಜನರಿಗೆ ಹೇಳುತ್ತಿಲ್ಲ, ಬದಲಾಗಿ ಜಾತಿ ಮತ್ತು ಹಣದ ಬಲವನ್ನು ನಂಬಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಪಕ್ಷದಿಂದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರಿಪಾಠ ನಿಂತು ಹೋಗಿದೆ. ಸಚಿವರು, ಶಾಸಕರು, ಮಾಜಿ ಚುನಾಯಿತ ಪ್ರತಿನಿಧಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳಿಗೆ ಪಕ್ಷದಿಂದ ಬಿ.ಫಾರಂ ನೀಡುವ ಸಂಸ್ಕøತಿಯೂ ನಿಂತು ಹೋಗಿದೆ. ಈಗ ಶಾಸಕರು, ಸಚಿವರಗಳೇ ಬಿ.ಫಾರಂಗಳನ್ನು ವಿತರಿಸುತ್ತಿದ್ದು, ಇದರಿಂದಾಗಿ ಈಗ ಪಕ್ಷಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇದನ್ನು ತಡೆಗಟ್ಟಲು ಚುನಾವಣಾ ಆಯೋಗದಿಂದ ಸಾಧ್ಯವಿಲ್ಲದ ಕಾರಣ ಸರ್ವ ಪಕ್ಷಗಳ ನಾಯಕರುಗಳು ಈ ಬಗ್ಗೆ ಪುನರ್ ಅವಲೋಕನ ಮಾಡಿಕೊಳ್ಳಬೇಕು, ಪಕ್ಷವನ್ನು ಅದರ ತತ್ವ, ಸಿದ್ಧಾಂತ, ಆದರ್ಶಗಳ ಮೇಲೆಯೇ ಉಳಿಸಿಕೊಳ್ಳಬೇಕು ಎಂದರು. ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲ್, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗಡೆ ಮುಂತಾದವರ ನಡುವಳಿಕೆಗಳೇ ಅವರ ಸರ್ಕಾರಗಳನ್ನು ತಿಂದು ಹಾಕಿವೆ.ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಡುವಳಿಕೆಯನ್ನು ಕೂಡಲೇ ಬದಲಾಯಿಸಿಕೊಳ್ಳಬೇಕು, ಯಾಕೆಂದರೆ ಜನ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ, ನಿಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಜನ ನಿಮ್ಮ ಬಗ್ಗೆಯೂ ಅಸಹ್ಯ ಪಡುತ್ತಾರೆ ಎಂದರು. ರಾಜಕಾರಣಿಗಳು ತಮ್ಮ ಮಕ್ಕಳು, ಸಂಬಂಧಿಕರು, ಅಳಿಯಂದಿರು ಮುಂತಾದವರ ವರ್ತನೆ ಮೇಲೆ ಕಣ್ಣಿಡಬೇಕು, ಅವರುಗಳನ್ನು ತಮ್ಮ ಕಚೇರಿ, ಕೆಲಸದ ಸ್ಥಳಗಳಿಗೆ ಬಿಟ್ಟುಕೊಳ್ಳಬಾರದು. ಅಧಿಕಾರ ದುರುಪಯೋಗವಾಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಜನರಿಂದ ತಿರಸ್ಕøತರಾಗಬೇಕಾಗುತ್ತದೆ, ಈ ಮಾತು ಮುಖ್ಯಮಂತ್ರಿಯಿಂದ ಹಿಡಿದು ನನ್ನ ತನಕವೂ ಅನ್ವಯಿಸುತ್ತದೆ ಎಂದು ಹೇಳಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಚಿವರ, ಮುಖ್ಯಮಂತ್ರಿಗಳ ಅಧಿಕಾರದಲ್ಲಿ ಸಂಬಂಧಿಕರ ಹಸ್ತಕ್ಷೇಪ, ಅಧಿಕಾರ ದುರ್ಬಳಕೆಯಂತಹ ನಡುವಳಿಕೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಈ ಕಾರಣದಿಂದಲೇ ಜನರು ಅಂತಹ ನಾಯಕರನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುತ್ತಿರುವುದು ಕಂಡು ಬರುತ್ತಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯಾದರೆ ಸಮಸ್ಯೆ ಬಗೆಹರಿಯುವುದಿಲ್ಲ: ಪಕ್ಷ ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದರಿಂದ ಪರಿಹಾರವಾಗುವುದಿಲ್ಲ, ನಿಜಲಿಂಗಪ್ಪ, ಬಂಗಾರಪ್ಪ ಸೇರಿದಂತೆ ಅನೇಕ ಮುಖ್ಯಮಂತ್ರಿಗಳನ್ನು ಬದಲಾಯಿಸಿದಾಗ ರಾಜ್ಯದಲ್ಲಿ ಪಕ್ಷ ದುರ್ಬಲವಾಗಿರುವುದು ಇತಿಹಾಸದಿಂದ ನೋಡಬಹುದು. ಸಿಎಂ ಬದಲಾವಣೆ ಎಲ್ಲದಕ್ಕೂ ಉತ್ತರವಲ್ಲ, ಸಿಎಂ ಬದಲಾವಣೆ ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಪಕ್ಷದ ಹೈಕಮಾಂಡ್ ದುರ್ಬಲವಾಗಿಲ್ಲ, ಹೆಬ್ಬಾಳು ಕ್ಷೇತ್ರದ ಚುನಾವಣೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
------------------------------------------
ನಾವು ಮಾನವ ಬಾಂಬ್ ಗಳಿದ್ದಂತೆ. ಯಾವಾಗ ಸಿಡಿಯುತ್ತೇವೆಯೋ ಗೊತ್ತಿಲ್ಲ ;ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮೈಸೂರು: ನಾವು ಕಾಂಗ್ರೆಸ್ ಪಕ್ಷದಲ್ಲಿ ಮಾನವ ಬಾಂಬ್ ಗಳಿದ್ದಂತೆ ಯಾವಾಗ ಸಿಡಿಯುತ್ತೇವೆಯೋ ಗೊತ್ತಿಲ್ಲ .. ಹೀಗೆಂದು ಹೇಳಿದವರು ಮಾಜಿ ಸಾಂಸದ ಹೆಚ್.ವಿಶ್ವನಾಥ್.
ಪಕ್ಷದ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ ಹಾಗೂ ತಮ್ಮಂತಹ ಕೆಲವು ನಾಯಕರು ಬಿಟ್ಟರೆ ಬೇರೆ ಯಾರು ನಾಯಕರು ಪಕ್ಷದ ವಾಸ್ತವ ಸಂಗತಿ ಬಗ್ಗೆ ಹೇಳುತ್ತಿಲ್ಲ,  ನಾವು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಿಂದಲೂ ಪಕ್ಷದಲ್ಲಿ ದುಡಿದುಕೊಂಡು ಬರುತ್ತಿದ್ದೇವೆ. ಪಕ್ಷದ ಸ್ಥಿತಿಗತಿಗಳು, ಎದುರಿಸುತ್ತಿರುವ ಸಮಸ್ಯೆಗಳು, ಹೋಗುತ್ತಿರುವ ದಿಕ್ಕಿನ ಬಗ್ಗೆ ಪಕ್ಷದಲ್ಲಿಯೇ ವಾಸ್ತವವಾಗಿ ಹೇಳುತ್ತೇವೆ, ನಾವೊಂತರ ಮಾನವ ಬಾಂಬ್ ಇದ್ದಂತೆ , ಯಾವಾಗ ಬೇಕಾದರೂ ಸಿಡಿಯುತ್ತೇವೆ, ನಮ್ಮ ಈ ಹೇಳಿಕೆಗಳು ಜನರಲ್ಲಿ ಚರ್ಚೆಯನ್ನುಂಟು ಮಾಡಬೇಕು,  ನಮ್ಮ ಹೇಳಿಕೆಗಳು ಜನರಲ್ಲಿ ಚರ್ಚೆಗೆ ಹಚ್ಚಬೇಕು, ನಮ್ಮ ಹೇಳಿಕೆಗಳಿಂದ ನನಗೇನು ಒಳ್ಳೆಯದಾಯಿತು, ಕೆಟ್ಟದಾಯಿತು ಎಂಬುದರ ಬಗ್ಗೆ ಯೋಚ್ನೆ ಇಲ್ಲ, ಆದರೆ ರಾಜ್ಯಕ್ಕೆ , ಪಕ್ಷಕ್ಕೆ ಒಳ್ಳೆಯದಾಗಬೇಕು ಎಂಬುದಷ್ಟೇ ಮುಖ್ಯವಾಗಿದೆ ಎಂದರು.
---------------------------------------------ಸಮಾಜವಾದದ ಹಿನ್ನಲೆಯ ಕೀರ್ತಿಯನ್ನು ಕಳೆದುಕೊಳ್ಳಬೇಡಿ
*ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ದಿ ಹೇಳಿದ ಮಾಜಿ ಸಾಂಸದ ಹೆಚ್.ವಿಶ್ವನಾಥ್
ಮೈಸೂರು: ಸಮಾಜವಾದಿ ಹಿನ್ನಲೆಯಿಂದ ಬಂದ ನೀವು ಆ ಕೀರ್ತಿಯನ್ನು ಕಳೆದುಕೊಳ್ಳಬೇಡಿ, ನಿಮ್ಮ ಸರಳತೆ, ಸಜ್ಜನಿಕೆಗಳ ಆಧಾರದ ಮೇಲೆ ನಿಮಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ ಎನ್ನುವುದನ್ನು ಮರೆಯಬೇಡಿ ಎಂದು ಮಾಜಿ ಸಾಂಸದ ಅಡಗೂರು ವಿಶ್ವನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬುದ್ಧಿವಾದ ಹೇಳಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಧ ಕೋಟಿರೂ ಗೂ ಅಧಿಕ ಮೌಲ್ಯದ ವಾಚಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜವಾದಿಯಾಗಿದ್ದ ನಿಮ್ಮ ಸರಳತೆ, ಸಜ್ಜನಿಕೆಯನ್ನು ಜನ ಸದಾ ಬಯಸುತ್ತಾರೆ. ನೀವು ಇಲ್ಲಿಯ ತನಕ ಪಾಲಿಸಿಕೊಂಡು ಬಂದಿರುವ ಸಮಾಜವಾದಿ ಮೌಲ್ಯಗಳನ್ನು ಕೈಬಿಡುತ್ತಿರುವುದು ಸರಿಯಲ್ಲ, ಆ ಮೌಲ್ಯಗಳಿಂದಲೇ ಜನ ನಿಮ್ಮನ್ನು ಗುರುತಿಸಿ, ನಾನಾ ವಿಧದ ಅಧಿಕಾರಗಳನ್ನು ನೀಡಿದ್ದಾರೆ ಎಂಬುದನ್ನು ಮರೆಯಬಾರದು, ಸರಳ, ಸಜ್ಜಿನಿಕೆ, ಬದ್ಧತೆಯಿಂದಲೇ ನೀವು ಯುವಕರಿಗೆ ಮಾರ್ಗದರ್ಶಕರಾಗಿರಬೇಕೆಯೇ ವಿನಃ ಆಡಂಬರದಿಂದಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಕಿವಿ ಹಿಂಡಿದರು.
ಕೂಡಲೇ ನೀವು ಧರಿಸಿದ್ದ ಅರ್ಧ ಕೋಟಿ ರೂ ಬೆಲೆ ಬಾಳುವ ವಾಚ್‍ನ್ನು ಸರ್ಕಾರದ ವಶಕ್ಕೆ ನೀಡಿ, ಮುಂದೆ ಬರುವ ಮುಖ್ಯಮಂತ್ರಿಗಳು ಕಟ್ಟಿಕೊಳ್ಳಲಿ, ವಿರೇಂದ್ರಪಾಟೀಲ್ ಹಾಗೂ ರಾಮಕೃಷ್ಣಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಗೆ ಉಡುಗೊರೆಯಾಗಿ ಬಂದಿದ್ದ ವಸ್ತುಗಳನ್ನು ಸರ್ಕಾರದ ವಶಕ್ಕೆ ನೀಡಿದ್ದರು. ಇದನ್ನೇ ನೀವು ಸಹ ಅನುಸರಿಸಿ ಎಂದು ಕಿವಿ ಮಾತು ಹೇಳಿದರು.
---------------------------------------------ಜೆಡಿಎಸ್ ನೊಂದಗಿನ ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು
ಮೈಸೂರು: ಅತಂತ್ರವಾಗಿರುವ ಮೈಸೂರು ಸೇರಿದಂತೆ ರಾಜ್ಯದ ಇತರೆ 10 ಜಿ.ಪಂಗಳಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಮಾಜಿ ಸಾಂಸದ ಹೆಚ್.ವಿಶ್ವನಾಥ್ ಹೇಳಿದರು.
ಜೆಡಿಎಸ್ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ, ಅದು ಬಿಜೆಪಿಗೆ ಬೆಂಬಲ ನೀಡುತ್ತಿರುವ ಪಕ್ಷವಾಗಿದೆ. ಹಾಗಾಗಿ ಆ ಪಕ್ಷದೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನ ಹೈಕಮಾಂಡ್ ಗೆ ಸೇರಿದ್ದು ಎಂದರು. 

No comments:

Post a Comment