Tuesday 23 February 2016

ಕೆ.ಆರ್.ಪೇಟೆ.ಸುದ್ದಿ

ಕೃಷ್ಣರಾಜಪೇಟೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮತ್ತೊಮ್ಮೆ ತನ್ನ ಚಕ್ರಾಧಿಪತ್ಯವನ್ನು ಸಾಭೀತುಪಡಿಸಿದರೆ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜನರಿಂದ ತಿರಸ್ಕರಿಸಲ್ಪಟ್ಟು ಹೀನಾಯ ಸೋಲಿನೊಂದಿಗೆ ಮೂಲೆ ಗುಂಪಾಗಿದ್ದಾರೆ. ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಮಾಜಿಸ್ಪೀಕರ್ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಧೂಳೀಪಟವಾಗಿದೆ.
ತಾಲೂಕು ಪಂಚಾಯಿತಿಯ 24 ಸ್ಥಾನಗಳಲ್ಲಿ ಜೆಡಿಎಸ್ 15 ಸ್ಥಾನಗಳೊಂದಿಗೆ ಬಹುಮತವನ್ನು ಪಡೆದರೆ ಕೇವಲ 8 ಸ್ಥಾನವನ್ನು ಮಾತ್ರ ಕಾಂಗ್ರೇಸ್ ಗಳಿಸಲು ಸಾಧ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವಿಗೆ ಗೌರವ ನೀಡಿರುವ ಹುಟ್ಟೂರು ಬೂಕನಕೆರೆಯ ಮತದಾರರು ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಕಣದಲ್ಲಿದ್ದ ಏಕೈಕ ಬಿಜೆಪಿ ಅಭ್ಯರ್ಥಿಗೆ ವಿಜಯಮಾಲೆಯನ್ನು ತೊಡಿಸಿ ಕಮಲವನ್ನು ಅರಳಿಸುವ ಮೂಲಕ ಮಾಜಿ ಮುಖ್ಯಮಂತ್ರಿಗಳ ಮನವಿಯನ್ನು ಪುರಸ್ಕರಿಸಿ ಗೌರವ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯ 6ಕ್ಷೇತ್ರಗಳ ಪೈಕಿ 5ಕ್ಷೇತ್ರಗಳಲ್ಲಿ ಜೆಡಿಎಸ್ ಭರ್ಜರಿ ಗೆಲುವು ದಾಖಲಿಸಿದ್ದು ಕಿಕ್ಕೇರಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೇಸ್ ಅಭ್ಯರ್ಥಿ ಕೋಡಿಮಾರನಹಳ್ಳಿ ದೇವರಾಜು ಅವರನ್ನು ಗೆಲ್ಲಿಸಿ ವಿಜಯಮಾಲೆ ತೊಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಂದು ಪ್ರಚಾರ ಮಾಡಿ ಹೋಗಿದ್ದಕ್ಕೆ ಗೌರವ ನೀಡಿದ್ದಾರೆ.
ಹಣಬಲವೋ ಜನ ಬಲವೋ ಎಂಬ ಅಲೆಯನ್ನೇ ನಿರ್ಮಾಣ ಮಾಡಿದ್ದ ಹಿರಿಕಳಲೆ ಜಿ.ಪಂ ಕ್ಷೇತ್ರದಲ್ಲಿ ಬರಿಗಾಲಿನಲ್ಲಿ ನಡೆಯುವ ಬಡವನಾದ ಕೃಷಿ ಕೂಲಿಕಾರ್ಮಿಕ ರಾಮದಾಸ್ ತಮ್ಮ ಪ್ರತಿಸ್ಪರ್ಧಿ ಮಾಕವಳ್ಳಿ ಸಣ್ಣಯ್ಯ ವಿರುದ್ಧ 3ಸಾವಿರ ಭಾರೀ ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಅಕ್ಕಿಹೆಬ್ಬಾಳು ಜಿ.ಪಂ ಕ್ಷೇತ್ರದಲ್ಲಿ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಸಹಕಾರ ಕ್ಷೇತ್ರದ ದಿಗ್ಗಜ ಬಿ.ಎಲ್.ದೇವರಾಜು ತಮ್ಮ ಸಮೀಪ ಪ್ರತಿಸ್ಪರ್ಧಿ ತಾ.ಪಂ ಮಾಜಿಸದಸ್ಯ ರಾಮೇಗೌಡರನ್ನು 2ಸಾವಿರ ಮತಗಳ ಅಂತರದಲ್ಲಿ ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ. ಬೂಕನಕೆರೆ ಜಿ.ಪಂ ಕ್ಷೇತ್ರದ ಕಾಂಗ್ರೇಸ್ ಕೋಟೆಯನ್ನು ಭೇಧಿಸಿರುವ ಗಾಯಿತ್ರ ಇದೇ ಪ್ರಥಮ ಭಾರಿಗೆ ಜೆಡಿಎಸ್ ಪಕ್ಷಕ್ಕೆ ಗೆಲುವನ್ನು ತಂದುಕೊಡುವ ಮೂಲಕ ತಮ್ಮ ಊರಿನವರೇ ಆದ ಕಾಂಗ್ರೇಸ್ ಅಭ್ಯರ್ಥಿ ರತ್ನಮ್ಮ ಅವರನ್ನು 133 ಅಲ್ಪ ಮತಗಳ ಅಚಿತರದಿಂದ ಪರಾಭವಗೊಳಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಶೀಳನೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮನ್‍ಮುಲ್ ನಿರ್ದೇಶಕ ಎಸ್.ಅಂಬರೀಶ್ ಅವರಿಗೆ ಸೋಲಿನ ರುಚಿಯನ್ನು ತೋರಿಸಿದ ಉಧ್ಯಮಿ ಹೆಚ್.ಟಿ.ಮಂಜು ಸ್ವಪಕ್ಷೀಯರ ಭಾರೀ ವಿರೋಧದ ನಡುವೆಯೂ 2200 ಮತಗಳ ಅಂತರದಿಂದ ಇದೇ ಪ್ರಥಮ ಭಾರಿಗೆ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ ತಮ್ಮನ್ನು ನಂಬಿ ಸ್ಪರ್ಧೆಗೆ ಅವಕಾಶ ನೀಡಿದ ಪಕ್ಷದ ವರಿಷ್ಠರಿಗೆ ಕೃತಜ್ಞತೆಯನ್ನು ಸಮರ್ಪಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಖುದ್ದು ಪ್ರಚಾರ ಮಾಡಿ ತಮ್ಮ ಶಿಷ್ಯನನ್ನು ಗೆಲ್ಲಿಸಿಕೊಡಿ ಎಂಬ ಮನವಿಯನ್ನು ಪುರಸ್ಕರಿಸಿರುವ ಕಿಕ್ಕೇರಿ ಜಿ.ಪಂ ಕ್ಷೇತ್ರದ ಮತದಾರರು ಹಸ್ತಕ್ಕೆ ಮತನೀಡುವ ಮೂಲಕ ಹೋರಾಟಗಾರನಾದ ಯುವಕ ಯು.ಧನಂಜಯ’ಅವರಿಗೆ ಸೋಲಿನ ಕಹಿಯನ್ನು ಉಣಿಸಿದ್ದಾರೆ. ಮುಖ್ಯಮಂತ್ರಿಗಳ ಬಲಗೈ ಭಂಟರಾದ ಕೋಡಿಮಾರನಹಳ್ಳಿ ದೇವರಾಜು ಅವರಿಂದ ಕೇವಲ 440 ಮತಗಳ ಅಂತರದ ವೀರೋಚಿತ ಸೋಲನ್ನು ಒಪ್ಪಿಕೊಂಡಿರುವ ಧನಂಜಯ ಅವರ ಸೋಲಿನಿಂದ ಕಾಂಗ್ರೇಸ್ ತಾಲೂಕಿನಲ್ಲಿ ಮರ್ಯಾದೆ ಉಳಿಸಿಕೊಂಡಿದೆ. ಸಂತೇಬಾಚಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿ ಕುಸುಮ ಮಂಜುನಾಥ್ ಅವರನ್ನು ಪರಾಭವಗೊಳಿಸಿ ಹ್ಯಾಟ್ರಿಕ್ ಅವಧಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಜೆ.ಪ್ರೇಮಕುಮಾರಿ ಕೇವಲ 670 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಭಾರೀ ನಿರೀಕ್ಷೆಯನ್ನು ಹುಟ್ಟಿಸಿದ್ದ ಈ ಕ್ಷೇತ್ರದ ಸೋಲಿನೊಂದಿಗೆ ಮಾಜಿಸ್ಪೀಕರ್ ತವರಾದ ಸಂತೇಬಾಚಹಳ್ಳಿ ಹೋಬಳಿಯು ಮತ್ತೊಮ್ಮೆ ಜೆಡಿಎಸ್ ಭದ್ರಕೋಟೆಯಾಗಿ ಹೊರಹೊಮ್ಮಿದೆ. ಸಂತೇಬಾಚಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಾ ಕಣದಲ್ಲಿದ್ದ ಬಿಲ್ಲೇನಹಳ್ಳಿ ದಿನೇಶ್ 1200 ಭಾರೀ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಟೀಕಾಕಾರರು ಮತ್ತು ವಿರೋಧೀಗಳ ಬಾಯಿ ಮುಚ್ಚಿಸಿದ್ದಾರೆ. ಸಮಾಜಸೇವಕರಾಗಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ದಿನೇಶ್ ಶ್ರೀ ಬಿಲ್ಲೇನಹಳ್ಳಿ ಗವಿರಂಗನಾಥಸ್ವಾಮಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ತೋರಿಸುವ ಮೂಲಕ ಭಕ್ತರು ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದುದು ವರದಾನವಾಗಿ ಪರಿಣಮಿಸಿದೆ. ಇನ್ನು ಮಾಕವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಚಂದ್ರಕಲಾ ಕೇವಲ 47 ಮತಗಳ ಅಂತರದಿಂದ ಕಾಂಗ್ರೇಸ್ ಅಭ್ಯರ್ಥಿ ಪ್ರಭಾವತಿ ಅವರನ್ನು ಪರಾಭವಗೊಳಿಸಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯಿತಿಯ 24 ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಧಿಕ 15 ಸ್ಥಾನಗಳನ್ನು ಗೆಲ್ಲುವ ಮೂಲಕ ತಾಲೂಕು ಪಂಚಾಯಿತಿಯ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಇತಿಹಾಸವನ್ನು ನಿರ್ಮಿಸಿದೆ. ಕಾಂಗ್ರೇಸ್ ಕೇವಲ 8ಸ್ಥಾನಗಳಿಗೆ ತೃಪ್ತಿಪಟ್ಟರೆ ಬಿಜೆಪಿ ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ತಾಲೂಕಿನಲ್ಲಿ ಕಮಲವು ಅರಳಲು ಸಹಾಯ ಹಸ್ತವನ್ನು ಚಾಚಿದೆ. ನಿರೀಕ್ಷೆಗೂ ಮೀರಿ ಜೆಡಿಎಸ್ ಪಕ್ಷದ ಪರವಾಗಿ ಮತ ನೀಡಿ ಪಕ್ಷದ ಅಭ್ಯರ್ಥಿಗಳನ್ನು ಹರಸಿ ಆಶೀರ್ವದಿಸಿದ ಮತದಾರ ಪ್ರಭುಗಳಿಗೆ ಕೃತಜ್ಞತೆ ಅರ್ಪಿಸಿರುವ ಶಾಸಕ ನಾರಾಯಣಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ತಾಲೂಕು ಜಾದಳ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸದೇ ತಾಲೂಕಿನ ಅಭಿವೃದ್ಧಿಗೆ ಬದ್ಧರಾಗಿ ದುಡಿಯುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ವಿಜಯೋತ್ಸವ: ನಿರೀಕ್ಷೆಗೂ ಮೀರಿ 5 ಜಿ.ಪಂ ಕ್ಷೇತ್ರಗಳು ಹಾಗೂ 15 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿಗಳು ಶಾಸಕ ನಾರಾಯಣಗೌಡ ಮತ್ತು ಮಾಜಿಶಾಸಕ ಬಿ.ಪ್ರಕಾಶ್ ಅವರ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು. ಯಾವುದೇ ಗಲಾಟೆ ಗದ್ದಲಗಳಿಲ್ಲದೇ ಚುನಾವಣೆಯು ಶಾಂತಿಯುತವಾಗಿ ನಡೆದುದ್ದೇ ಅಲ್ಲದೇ ಶಾಂತವಾಗಿ ಮತಎಣಿಕಾ ಪ್ರಕ್ರಿಯೆಯೂ ಮುಗಿಯಿತು. ಸರ್ಕಲ್ ಇನ್ಸ್‍ಪೆಕ್ಟರ್‍ಗಳಾದ ಡಿ.ಯೋಗೇಶ್, ಕೆ.ರಾಜೇಂದ್ರ ಮತ್ತು ಸಬ್‍ಇನ್ಸ್‍ಪೆಕ್ಟರ್ ಹೆಚ್.ಎನ್.ವಿನಯ್, ಟಿ.ಎಂ.ಪುನೀತ್, ಯಶ್ವಂತ್‍ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿ.ಪಂ ಕ್ಷೇತ್ರದ ಚುನಾವಣಾಧಿಕಾರಿ ಎನ್.ಡಿ.ಪ್ರಕಾಶ್, ತಾ.ಪಂ ಕ್ಷೇತ್ರದ ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಕೆ.ರತ್ನಾ ಮತ್ತು ಡಾ.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಚುನಾವಣೆ ನಡೆಸಿಕೊಟ


  ಕೆ.ಆರ್.ಪೇಟೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಜೆಡಿಎಸ್ ಅಭ್ಯರ್ಥಿಗಳು ಶಾಸಕ ನಾರಾಯಣಗೌಡ ಮತ್ತು ಮಾಜಿ ಶಾಸಕ ಬಿ.ಪ್ರಕಾಶ್ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.

No comments:

Post a Comment