Tuesday 28 April 2015

ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಣೆಗೆ ಒಳಗಾಗಿ ಒಳ್ಳೆಯ ಶಿಕ್ಷಣ ಪಡೆದು ಈ ದೇಶದಲ್ಲಿ ಮಹಾನ್ ಜ್ಞಾನಿಯಾದ ಮಹಾ ಮಾನವತಾವಾದಿ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರಿಶಿಷ್ಟ ಜಾತಿ, ಪಂಗಡದ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಂಬೇಡ್ಕರ್ ಅವರ 124ನೇ ಜಯಂತ್ಯೋತ್ಸವ ಹಾಗೂ ಬಸವಣ್ಣ, ಬಾಬು ಜಗಜೀವನರಾಂ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲಾ, ದೇಶ ವಿದೇಶಗಳಿಗೆ ಹೋಗಿ ಜ್ಞಾನ ಸಂಪಾದನೆ ಮಾಡಿ ಅನಿಷ್ಠ ಪದ್ಧತಿ ವಿರುದ್ಧ ಹೋರಾಟ ಮಾಡಿದರು ಎಂದು ಬಣ್ಣಿಸಿದರು.
ಪ್ರತಿಯೊಂದು ಇಲಾಖೆಯೂ ಇಂದು ಖಾಸಗೀಕರಣಗೊಳ್ಳುತ್ತಿದೆ. ಇದರಿಂದ ಎಚ್ಚಗೊಳ್ಳುವುದು ಅಗತ್ಯವಿದೆ. ಎಚ್ಚರಗೊಳಿಸುವ ಶಕ್ತಿ ಶಿಕ್ಷಕರಲ್ಲಿದೆ. ಸಮಾಜದ ಯುವ ಪೀಳಿಗೆಗೆ ದೇಶದ ಸ್ಥಿತಿಗತಿಗಳನ್ನು ಅರ್ಥ ಮಾಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಹೋರಾಟ ನಡೆಸಿದರು. ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರು ದೇಶದ ಉಪ ಪ್ರಧಾನಿಯಾಗಿ ಆಹಾರ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು. ಇಂತಹ ಮಹನೀಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಲ್.ಜೆ. ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ, ಖಜಾಂಚಿ ಶಿವಣ್ಣ, ಜಿ.ಪಂ. ಸದಸ್ಯ ಶಿವಣ್ಣ, ಡಯಟ್ ಪ್ರಾಂಶುಪಾಲರಾದ ಭಾರತಿ, ನಾಗಮಂಗಲ ಬಿಇಓ ಅಂತರಾಜು, ಕಾಂಗ್ರೆಸ್ ಮುಖಂಡ ಆನಂದ್‍ಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

No comments:

Post a Comment