Wednesday 1 April 2015

ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಮುಷ್ಕರ

ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಮುಷ್ಕರ

ಏ.6ರಂದು ಪೌರಕಾರ್ಮಿಕರಿಂದ ಪೊರಕೆ ಮೆರವಣಿಗೆ
ಮಂಡ್ಯ: ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುತ್ತಿಗೆ ಪೌರಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸುತ್ತಿರುವ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿರಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜ್, ಪೌರಕಾರ್ಮಿಕರ ಇಂದಿನ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರ ಕಛೇರಿಯ ಅಧಿಕಾರಿಗಳು ಹೊಣೆಯಾಗಿದ್ದು, 2012ರಲ್ಲಿ ಸ್ವೀಕೃತವಾದ ಗುತ್ತಿಗೆ ಟೆಂಡರ್‍ಗೆ 2015ರಲ್ಲಿ ಅನುಮೋದನೆ ಪಡೆಯಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಈ ಕುರಿತು ತನಿಖೆ ನಡೆಸಿ ಈ ರೀತಿಯ ಕಾನೂನು ಬಾಹಿರ ವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ ಅದನ್ನು ಬಿಟ್ಟು ಕಳೆದ 3 ತಿಂಗಳಿನಿಂದ ದುಡಿದ ಪೌರಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಎಂದು ಲೇವಡಿಯಾಡಿದರು.
ಈಗಾಗಲೇ ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ ಹಂತದಲ್ಲೇ ಸೂಕ್ತ ತೀರ್ಮಾನ ಕೈಗೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸಲು ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರಿಗೆ ಸೂಚನೆ ನೀಡಿದೆ.
ಆದರೆ ಸೂಚನೆಯನ್ವಯ ಕ್ರಮ ಕೈಗೊಂಡು ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವ ಬದಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಾ, ಕಾಲಹರಣ ಮಾಡುತ್ತಿದೆ. ಸ್ವಚ್ಛತೆ ಕೊರತೆಯಿಂದ ನಗರದಲ್ಲಿ ಕಾಲರಾ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದರೂ, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಲು ಸಿದ್ದವಿಲ್ಲದಿರುವುದು. ನಾಗರೀಕರ ಆರೋಗ್ಯದ ಬಗ್ಗೆ ಅದರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕ ಸಂಘದ ರಾಜ್ಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ನಾನ್ ಕ್ಲಿನಿಕಲ್ ಕಾರ್ಮಿಕರು, ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಕಾರ್ಮಿಕರು, ನಗರಸಭೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮೂಲತಃ ಒಂದೇ ಮಾದರಿಯ ವೃತ್ತಿಯನ್ನು ನಿರ್ವಹಿಸುತ್ತಾರಾದರೂ, ಸರ್ಕಾರ ನಾನ್ ಕ್ಲಿನಿಕಲ್ ಕಾರ್ಮಿಕ, ಹೌಸ್ ಕೀಪಿಂಗ್ ಎಂಬ ಬೇರೆ ಬೇರೆ ಹೆಸರುಗಳನ್ನು ಕೊಟ್ಟು ಕಾರ್ಮಿಕರ ನಡುವೆ ಅಂತರ ಸೃಷ್ಟಿಸಿದೆ. ಕಾರ್ಮಿಕರ ಸಮಸ್ಯೆಗಳಿಗೆ ಕಿವಿಗೊಡಬೇಕಾದ ಜನಪ್ರತಿನಿಧಿಗಳು ತಮ್ಮ ಅಧಿಕಾರ ಉಳಿವಿಗಾಗಿ ಬಣ ರಾಜಕೀಯ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತ ಕಾರ್ಮಿಕರನ್ನು ಪಾಳೇಗಾರಿ ಮನೋಭಾವದಿಂದ ನೋಡುತ್ತಿದೆ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು ಭೂ ಮಾಲೀಕರು ನೀಡಿದ ವೇಳೆಗೆ ಸಂಬಳ ಪಡೆಯುವಂತೆ ಇಲ್ಲಿಯೂ ಸಹ ಅದೇ ಮಾದರಿಯನ್ನು ಹೇರಲು ಹೊರಟಿದೆ. ಜಿಲ್ಲಾಡಳಿತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವವರೆಗೆ ಕೆಲಸಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಬರುವ ಏ.6ರಂದು ಜಿಲ್ಲಾಡಳಿತ ನಿಷ್ಕ್ರಿಯತೆಯನ್ನು ಖಂಡಿಸಿ ಜಿಲ್ಲಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಮಂಡ್ಯ ನಗರಸಭೆಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪೊರಕೆ ಮೆರವಣಿಗೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿ.ನಾಗರಾಜು, ಕೆ.ಮಂಜುನಾಥ್, ಪಳನಿಸ್ವಾಮಿ, ಲಿಂಗಮಯ್ಯ, ಸತ್ಯಮ್ಮ, ಬನ್ನಯ್ಯ, ಸುನಂದಮ್ಮ, ಸುಗುಣಮ್ಮ ಉಪಸ್ಥಿತರಿದ್ದರು. ದಸಂಸ ಮುಖಂಡ ವೆಂಕಟಗಿರಿಯಯ್ಯ, ಸಿಐಟಿಯುನ ಸಿ.ಕುಮಾರಿ ಕಾರ್ಮಿಕರನ್ನು ಬೆಂಬಲಿಸಿ ಮಾತನಾಡಿದರು. 

No comments:

Post a Comment