Monday 10 November 2014

ಕೃಷ್ಣರಾಜಪೇಟೆ. ಮಾನವರಾದ ನಾವುಗಳು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಮಧ್ಯದಲ್ಲಿಯೇ ಜೀವನ ನಡೆಸುವುದರಿಂದ ಕಡ್ಡಾಯವಾಗಿ ಕಾನೂನನ್ನು ಪಾಲಿಸಿ ಗೌರವಿಸಿ ಜೀವನ ನಡೆಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸತ್ಯವನ್ನು ಅರಿಯಬೇಕು ಎಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸ್ವಾರ್ಥ, ಮೋಸ, ವಂಚನೆ ತುಂಭಿ ತುಳುಕುತ್ತಿದ್ದು ಜನಸಾಮಾನ್ಯರಲ್ಲಿ ಪ್ರಾಮಾಣಿಕತೆಯು ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೌಲ್ಯಗಳನ್ನು ಉಳಿಸಿ ನ್ಯಾಯವನ್ನು ಎತ್ತಿಹಿಡಿಯಲು ನ್ಯಾಯವಾಧಿಗಳು ಬದ್ಧತೆಯಿಂದ ವಾದವನ್ನು ಮಂಡಿಸಬೇಕು. ನೊಂದು ನ್ಯಾಯಾಲಯದ ಮೊರೆ ಹೋಗಿರುವ ಬಡ ಕಕ್ಷೀದಾರನಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿ ಮಾತು ಹೇಳಿದ ಕುಮಾರ್ ಬಡವರು ಶ್ರೀಮಂತರು ಎಂಬ ಬೇಧ-ಭಾವವಿಲ್ಲದಂತೆ ಎಲ್ಲ ವರ್ಗಗಳ ಜನರು ನ್ಯಾಯಾಲಯಕ್ಕೆ ಬಂದು ನ್ಯಾಯವನ್ನು ಪಡೆಯಬಹುದು. ಆದರೆ ಹಠ ಮತ್ತು ಪ್ರತಿಷ್ಠೆಗೆ ಕಟ್ಟು ಬಿದ್ದು ಸಣ್ಣ-ಪುಟ್ಟ ಕಾರಣಗಳಿಗೆ ನ್ಯಾಯಾಲಯದ ಮೆಟ್ಟಿಲನ್ನು ಹತ್ತಬಾರದು. ಗ್ರಾಮಗಳಲ್ಲಿಯೇ ಸಣ್ಣ-ಪುಟ್ಟ ವಿಚಾರಗಳನ್ನು ರಾಜಿ ಸಂಧಾನದ ಮೂಲಕ ತಮ್ಮ-ತಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಮಾತನಾಡಿ ಭಾರತ ದೇಶದ ನ್ಯಾಯಾಲಯ ಹಾಗೂ ನೆಲದ ಕಾನೂನಿನ ಬಗ್ಗೆ ನಮ್ಮಜನರಿಗೆ ಇಂದಿಗೂ ಪೂಜ್ಯವಾದ ಗೌರವ ಭಾವನೆಯಿದೆ. ನ್ಯಾಯಾಲಯಗಳು ತಪ್ಪು ಮಾಡಿರುವ ವ್ಯಕ್ತಿಯೂ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ನ್ಯಾಯವನ್ನು ಎತ್ತಿಹಿಡಿದು ತಪ್ಪು ಮಾಡಿದರಿಗೆ ಉಗ್ರವಾದ ಶಿಕ್ಷೆಯನ್ನು ನೀಡುತ್ತಿರುವುದರಿಂದಾಗಿ ಜನರು ಕಾನೂನನ್ನು ಗೌರವಿಸಿ ಕಾನೂನಿಗೆ ಹೆದರಿಕೊಂಡು ಜೀವನ ನಡೆಸುತ್ತಿದ್ದಾರೆ. ಸಮಾಜದಲ್ಲಿ ಮೌಲ್ಯಗಳ ಉಳಿವಿಗಾಗಿ ಹಾಗೂ ನ್ಯಾಯವನ್ನು ಉಳಿಸಲು ನ್ಯಾಯಾಂಗ ಇಲಾಖೆಯು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಜನಸಾಮಾನ್ಯರು ಸಾದ್ಯವಾದಷ್ಟೂ ಕಾನೂನಿನ ಪರಿಮಿತಿಯೊಳಗೆ ಜೀವನ ನಡೆಸಬೇಕು. ದ್ವೇಶ-ಅಸೂಯೆಯನ್ನು ಬದಿಗಿಟ್ಟು ನಾವೆಲ್ಲರೂ ಒಂದು ಎಂಬ ಸ್ನೇಹ-ಸಹಬಾಳ್ವೆಯಿಂದ ಜೀವನ ನಡೆಸಬೇಕು. ಯುವ ವಕೀಲರು ಕಾನೂನಿನ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದು ಸಮರ್ಥವಾಗಿ ವಾದವನ್ನು ಮಂಡಿಸುವ ಮೂಲಕ ಬಡಜನರಿಗೆ ನ್ಯಾಯವನ್ನು ದೊರಕಿಸಿಕೊಡಬೇಕು. ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ಕೆ.ಆರ್.ಮಹೇಶ್, ಹಿರಿಯ ವಕೀಲರಾದ ಹೆಚ್.ರವಿ, ಬಂಡಿಹೊಳೆ ಗಣೇಶ್, ಎಸ್.ಡಿ.ಸರೋಜಮ್ಮ, ಆರ್.ಕೆ.ರಾಜೇಗೌಡ, ಡಿ.ಆರ್.ಮೋಹನ್, ಕೃಷ್ಣಕುಮಾರ್, ಸೋಮೇಗೌಡ. ಕೆ.ರಾಮೇಗೌಡ, ಕೆ.ಎನ್.ನಾಗರಾಜು, ಬಿ.ಆರ್.ಪಲ್ಲವಿ, ವಿ.ಕೆ.ಸ್ವರೂಪ, ಕೌಶಿಕ್, ಎಂ.ಎನ್.ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No comments:

Post a Comment