Sunday 28 June 2015

ಮೈಲಾರಪಟ್ಟಣ
ಸಮಾಜದ ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾದರೆ ಪ್ರತಿ ಮಗುವಿನ ಸಾಮಥ್ರ್ಯ, ಆಸಕ್ತಿ ಮತ್ತು ಸ್ವಭಾವಕ್ಕನುಗುಣವಾಗಿ ಚಾರಿತ್ರ್ಯ ನಿರ್ಮಾಣಮಾಡುವ ಶಿಕ್ಷಣ ನೀಡಬೇಕು ಎಂದು ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೈಲಾರಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಎಂಶ್ರೀ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವ, ಸ್ವಾಭಿಮಾನಯುತ ಬದುಕನ್ನು ನಿರ್ವಹಿಸುವ, ಸ್ವಸಾಮಥ್ರ್ಯದಿಂದ ಜೀವಿಸುವ ಶಿಕ್ಷಣ ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿದೆ. ಅದಕ್ಕಾಗಿ ಮಕ್ಕಳು ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಸದಾ ಜಾಗೃತರಾಗಿದ್ದು ಒಳ್ಳೆಯ ಕೆಲಸವನ್ನು ಮಾಡುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಗುರಿಯೆಡೆಗೆ ಸಾಗಿ ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿ ಸಮುದಾಯವು ದೇಶದ ಚಿತ್ರಣವನ್ನು ಬದಲಿಸಲು ಸಮರ್ಥರಾಗಿರುತ್ತಾರೆ. ಆದ್ದರಿಂದ ಯುವಜನತೆ ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇರಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತೆ ಶಿಕ್ಷಣ ಸಹಕರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜು ಮಾತನಾಡುತ್ತಾ ಪ್ರಾಥಮಿಕ ಹಂತದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯತ್ತನ್ನು ನಿರ್ಧರಿಸುವ ಬಹು ಮುಖ್ಯವಾದ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ಸಾಮಾಜಿಕ ಜೀವನದ ಅರಿವು ಮೂಡಿಸಿಕೊಳ್ಳುವ ಮೂಲಕ ಸಮಾಜದ ಪ್ರಗತಿಗೆ ತನ್ಮೂಲಕ ದೇಶದ ಅಭ್ಯುದಯಕ್ಕೆ ಶ್ರಮಿಸುವ ಮನಸ್ಸನ್ನು ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಶಿಕ್ಷಣದ ಗುರಿಯನ್ನು ತಲುಪಲು ಸಾಧಯವಾಗುತ್ತದೆ ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ಟಿ.ಕೃಷ್ಣ ಹಾಗೂ ಶಿಕ್ಷಕ ಹೆಚ್.ವಿ.ಮಂಜೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. 2014-15ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಾನಿಗಳಾದ ಸೋಮಶೇಖರ್ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಫೈಲ್‍ಗಳನ್ನು ಪಿ.ರಮೇಶ್ ವಿತರಿಸಿದರು. ಶಾಲಾ ಹಿರಿಯ ಶಿಕ್ಷಕ ಎಂ.ಎನ್.ಮಂಜುನಾಥ್,  ಬಿಎಂಶ್ರೀ ಹಿರಿಯ ವಿದ್ಯಾರ್ಥಿ ಸಂಘದ ರಾಜಣ್ಣ, ನಿಂಗಣ್ಣ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಸಿ.ಮೋಹನ್‍ಕುಮಾರ್, ಶಾಲಾ ಕಾಲೇಜಿನ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

No comments:

Post a Comment