Saturday 27 June 2015

ಕೆ.ಆರ್.ಪೇಟೆ,ಜೂ.27. ಸಾಲದ ಬಾದೆಯಿಂದ ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಗಳಿಗೆ ತಲಾ 10ಲಕ್ಷ ರೂಗಳನ್ನು ನೀಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಮತ್ತು ಕರವೇ ಕಾರ್ಯಕರ್ತರು  ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದಾಧ್ಯಂತ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬನ್ನು ಸರಬರಾಜು ಮಾಡಿ ವರ್ಷಗಳು ಕಳೆಯುತ್ತಿದ್ದರೂ ಜಡ್ಡುಗಟ್ಟಿ ಕುಳಿತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣವನ್ನು ನೀಡದೇ ಶೋಷಣೆ ಮಾಡುತ್ತಿರುವುದರಿಂದ ಸಾಲದ ಭಾದೆಯಿಂದ ಬೇಸತ್ತು ರೈತರು ಆತ್ಮಹತ್ಯೆಗೆ ಶರಣಗುತ್ತಿದ್ದಾರೆ. ಕೂಡಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ರೈತರಿಗೆ ನ್ಯಾಯಬದ್ಧವಾಗಿ ಬರಬೇಕಾದ ಬಾಕಿ ಹಣವನ್ನು ಕೊಡಿಸಿಕೊಡುವ ಧಿಟ್ಟತನವನ್ನು ರಾಜ್ಯ ಸರ್ಕಾರವು ಪ್ರದರ್ಶನ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ರಾಜ್ಯ ಉಪಾಧ್ಯಕ್ಷ ಕೆ.ಆರ್.ಜಯರಾಮ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಘಟಕದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ, ಕಾರಿಗನಹಳ್ಳಿ ಪುಟ್ಟೇಗೌಡ, ಬೂಕನಕೆರೆ ನಾಗರಾಜು, ಕುಮಾರ್,  ಮುದ್ದುಕುಮಾರ್, ಚೌಡೇನಹಳ್ಳಿ ನಾರಾಯಣಸ್ವಾಮಿ,  ನಗರೂರುಕುಮಾರ್,  ಬಂಡಿಹೊಳೆ ನಾಗರಾಜು, ಎಲ್.ಬಿ.ಜಗದೀಶ್, ಕರವೇ ತಾಲೂಕು ಘಟಕದ ಅಧ್ಯಕ್ಷ ಎ.ಸಿ.ಕಾಂತರಾಜು, ಸಮೀರ್, ನಂದನ್, ಬೋರೇಗೌಡ ಮತ್ತಿತರರು ಭಾಗವಹಿಸಿದ್ದರು.
======================
ಕೆ.ಆರ್.ಪೇಟೆ,ಜೂ.27- ರಾಜ್ಯಾದ್ಯಂತ 1ಲಕ್ಷ ಸಸಿಗಳನ್ನು ನೆಡುವ “ವೃಕ್ಷ ಸಂರಕ್ಷಣಾ ಪೃಥ್ವಿಯೋಗ” ಆಂದೋಲನಕ್ಕೆ ನಾಡಿನ ಖ್ಯಾತ ಚಿಂತಕ, ಅಂಕಣಕಾರ ಹಾಗೂ ಯುವಬ್ರಿಗೇಡ್ ರಾಜ್ಯ ಸಂಚಾಲಕರಾದ ಚಕ್ರವರ್ತಿಸೂಲಿಬೆಲೆ ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತೆಂಗು ಮತ್ತು ಆಲದ ಸಸಿಯನ್ನು ನೆಡುವ ಮೂಲಕ ಚಾಲನೆ ನೀಡಿದರು.
ಮಾನವನು ದುರಾಸೆಯಿಂದ ಪರಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ನಡೆಸಿ ಮರಗಳನ್ನು ಕಡಿದು, ಕಾಡನ್ನು ನಾಶಮಾಡಿ ಕಾಂಕ್ರೀಟ್ ಕಾಡನ್ನು ನಿರ್ಮಿಸುತ್ತಿದ್ದಾನೆ. ಪರಿಣಾಮ ನಮಗೆ ಅಗತ್ಯವಾಗಿ ಬೇಕಾದ ಗಾಳಿ, ನೀರು, ಆಹಾರ ಪದಾರ್ಥಗಳು ಕಲುಷಿತವಾಗಿ ಹಲವಾರು ರೋಗರುಜಿನಗಳಿಗೆ ಮನುಷ್ಯನು ತುತ್ತಾಗಿ ತನ್ನ ಜೀವಿತವನ್ನು ಅರ್ಧ ಆಯಸ್ಸಿಗೇ ಕಳೆದುಕೊಳ್ಳುತ್ತಿದ್ದಾನೆ. ಪರಿಸರದ ಜೊತೆ ನಾವು ಇದೇ ರೀತಿಯಲ್ಲಿ ಚೆಲ್ಲಾಟವಾಡುತ್ತಾ ದೌರ್ಜನ್ಯವನ್ನು ನಡೆಸುತ್ತಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಆದ್ದರಿಂದ ನಾಡಿನಾಧ್ಯಂತ ಯುವ ಬ್ರಿಗೇಡ್ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ ಜನಾಂದೋಲನವನ್ನು ಮಾಡುತ್ತಿದೆ.
ಒಂದು ಮರವು ತನ್ನ ಜೀವಿತಾವಧಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ವಾತಾರಣವನ್ನು ಶುದ್ಧಮಾಡುವ ಜೊತೆಗೆ 1ಕೋಟಿ ರೂಪಾಯಿ ಮೌಲ್ಯದ ಆಮ್ಲಜನಕವನ್ನು ಮಾನವನಿಗೆ ಕೊಡುಗೆಯಾಗಿ ನೀಡುತ್ತಿದೆ. ಪಶು-ಪಕ್ಷಿಗಳು ಗೂಡಿ ಕಟ್ಟಿ ಸಂತಾನೋತ್ಪತ್ತಿ ಮಾಡಲು ಆಶ್ರಯ ನೀಡುತ್ತಿದೆ. ಬಿಸಿಲಿನಿಂದ ಆಯಾಸಗೊಂಡು ಬಂದ ಮಾನವನಿಗೆ ತನ್ನ ನೆರಳಿನಲ್ಲಿ ರಕ್ಷಣೆ ನೀಡಿ ಸಾಕಿ ಸಲಹುತ್ತಿದೆ. ಆದರೆ ಪರಿಸರದ ಬಗ್ಗೆ ಕೃತಜ್ಞತೆಯಿಲ್ಲದ ಮಾನವರಾದ ನಾವು ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ನಮ್ಮ ಅಂತ್ಯವನ್ನು ನಾವೇ ತಂದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ಸೂಲಿಬೆಲೆ ವಿಷಾಧಿಸಿದರು.
ತಾಲೂಕಿನ ಹಾದನೂರು, ಗವೀಮಠ, ಭಾರತೀಫುರ, ಅಘಲಯ, ಸಂತೇಬಾಚಹಳ್ಳಿ, ಹೊಸಹೊಳಲು, ತೆಂಡೇಕೆರೆ, ಬೂಕನಕೆರೆ, ಹರಿಯಾಲದಮ್ಮ ದೇವಸ್ಥಾನ, ತ್ರಿವೇಣಿ ಸಂಗಮ, ಕಿಕ್ಕೇರಿ, ಮಾದಾಪುರ, ಹೊಸಹೊಳಲು ಗ್ರಾಮದ ಸಾರ್ವಜನಿಕ ಸ್ಥಳಗಳು ಮತ್ತು ಶಾಲಾ ಆವರಣದಲ್ಲಿ ವಿಶ್ವಗುರು ಅರಳಿಮರ ಸೇರಿದಂತೆ ವಿವಿಧ ಜಾತಿಯ ಕಾಡು ಮರಗಳನ್ನು ನೆಟ್ಟು ನೀರೆರೆಯಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ ಮತ್ತು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಸಮಾಜ ಸೇವಕ ಗೋಪಾಲಕೃಷ್ಣ ಅವಧಾನಿಗಳು,  ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ನಿತ್ಯಾನಂದ ವಿವೇಕವಂಶಿ, ರೋಹಿತ್, ನಂದಿ ಮೆಡಿಕಲ್ಸ್ ಸತೀಶ್, ಕೆ.ಟಿ. ನಟರಾಜ್, ನಾಗೇಂದ್ರ, ವಿಕ್ರಮ್ ಸೂರ್ಯವಂಶಿ ಮತ್ತಿತರರು ಭಾಗವಹಿಸಿದ್ದರು.

No comments:

Post a Comment